ಕನ್ನಡ ಸುದ್ದಿ  /  Karnataka  /  Leopard In Bangalore: People Are Saying That There Are Not One But 4 Leopards In Bangalore; Leopards Are Also Found In Mysore, Mandya, Chamarajanagara

Leopard in Bangalore: ಬೆಂಗಳೂರಲ್ಲಿ ಒಂದಲ್ಲ 4 ಚಿರತೆಗಳಿವೆ ಎನ್ನುತ್ತಿದ್ದಾರೆ ಜನ; ಮೈಸೂರು, ಮಂಡ್ಯ, ಚಾಮರಾಜನಗರಗಳಲ್ಲಿ ಕೂಡ ಚಿರತೆ ಕಾಟ

Leopard in Bangalore: ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯ ತುರಹಳ್ಳಿ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆದರೆ ಈ ಪ್ರದೇಶದಲ್ಲಿ ಒಟ್ಟು ನಾಲ್ಕು ಚಿರತೆಗಳು ಕಾಣಿಸಿಕೊಂಡಿರುವ ಕಾರಣ ಕಳವಳ ಹೆಚ್ಚಾಗಿದೆ. ಇದೇ ರೀತಿ, ಮೈಸೂರು, ಮಂಡ್ಯ, ಚಾಮರಾಜನಗರಗಳಲ್ಲೂ ಚಿರತೆ ಕಾಟ ಕಂಡುಬಂದಿದೆ.

ಚಿರತೆ (ಸಾಂದರ್ಭಿಕ ಚಿತ್ರ)
ಚಿರತೆ (ಸಾಂದರ್ಭಿಕ ಚಿತ್ರ) (HT_PRINT)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಜೆಪಿನಗರ ಸಮೀಪದ ತುರಹಳ್ಳಿಯಲ್ಲಿ ಜಿಂಕೆಯೊಂದನ್ನು ಚಿರತೆ ಬೇಟೆಯಾಡಿದೆ. ಈ ವಿದ್ಯಮಾನ ಜನವಸತಿ ಸಮೀಪವೇ ನಡೆದಿರುವ ಕಾರಣ ಜನರ ಕಳವಳಗೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ಅದೇ ಪ್ರದೇಶದಲ್ಲಿ ನಾಲ್ಕು ಚಿರತೆಗಳು ಕಾಣಿಸಿಕೊಂಡಿದೆ ಎಂದು ಜನರ ಹೇಳುತ್ತಿರುವ ಕಾರಣ, ಸ್ಥಳೀಯರ ಆತಂಕ ಹೆಚ್ಚಾಗಿದೆ. ಇನ್ನೊಂದೆಡೆ, ಮಂಡ್ಯ ಪ್ರತ್ಯಕ್ಷಗೊಂಡಿದ್ದ ಚಿರತೆ ಜನರ ಕಣ್ಣಿಗೆ ಮತ್ತೆ ಬಿದ್ದಿಲ್ಲ. ಮೈಸೂರಿನಲ್ಲಿ ಚಿರತೆ ದಾಳಿಗೆ ಎರಡು ಜೀವ ಹೋಗಿದೆ. ಈಗ ಮೈಸೂರಿನಲ್ಲಿ ಚಿರತೆ ಸೆರೆಗೆ ಬೋನ್​ಗಳನ್ನು ಇರಿಸಲಾಗಿದೆ. ಚಾಮರಾಜನಗರದಲ್ಲೂ ಚಿರತೆ ಕಾಣಿಸಿಕೊಂಡಿದೆ ಹೀಗೆ ನಾಲ್ಕು ಜಿಲ್ಲೆಗಳ ಜನರು ಆತಂಕಗೊಂಡಿದ್ದಾರೆ.

ಬೆಂಗಳೂರಿನ ತುರಹಳ್ಳಿ ಅರಣ್ಯ ಪ್ರದೇಶದ ಬಳಿ ಚಿರಿತೆ ಪ್ರತ್ಯಕ್ಷವಾಗಿದ್ದಲ್ಲದೆ, ಜಿಂಕೆಯನ್ನು ಬೇಟೆಯಾಡಿದ್ದನ್ನು ಕಂಡ ಜನರು ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸುತ್ತಿದ್ದಾರೆ. ಅರಣ್ಯ ಇಲಾಖೆಯು ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಆದರೂ, ಏನೂ ಪ್ರಯೋಜನವಾಗಿಲ್ಲ. ಇದು ಕಳವಳವನ್ನು ಹೆಚ್ಚಿಸಿದ್ದು, ಶಾಲಾ-ಕಾಲೇಜು, ಕೆಲಸ ಕಾರ್ಯಗಳಿಗೆ ತೆರಳುವವರು ಆತಂಕಿತರಾಗಿಯೇ ಹೋಗುತ್ತಿದ್ದಾರೆ. ವಾಕಿಂಗ್​, ಜಾಗಿಂಗ್​ಗೆ ತುರಹಳ್ಳಿ ಅರಣ್ಯದ ಕಡೆಗೆ ಸುಳಿಯುತ್ತಿಲ್ಲ. ಈ ನಡುವೆ ಒಂದಲ್ಲ ನಾಲ್ಕು ಚಿರತೆಗಳಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಇದು ಆತಂಕ ಮತ್ತು ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.

ಜನರಲ್ಲಿ ಆತಂಕ ಹುಟ್ಟಿಸಿದ ಚಿರತೆ ಸೆರೆಗೆ ಒತ್ತಡ ಹೆಚ್ಚಾದ ಕಾರಣ ಅರಣ್ಯ ಇಲಾಖೆ ಸಿಬ್ಬಂದಿ ಅಖಾಡಕ್ಕಿಳಿದಿದ್ದಾರೆ. ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ ಸಿಬ್ಬಂದಿ ತುರಹಳ್ಳಿ ಕಾಡಿಗೆ ನೇರವಾಗಿ ಪ್ರವೇಶ ಮಾಡಿದ್ದಾರೆ. ಚಿರತೆಯ ಹೆಜ್ಜೆ ಜಾಡು ಹಿಡಿದು ಕಾಡಿನ ಸುತ್ತಮುತ್ತ ಶೋಧ ಕಾರ್ಯ ನಡೆಸುತ್ತಿದ್ದಾರೆ. ನಾಲ್ಕು ಚಿರತೆಗಳು ಇವೆಯಾ ಎಂಬುದು ಕೂಡ ದೃಢಪಟ್ಟಿಲ್ಲ. ಸರ್ಕಾರ ಇದನ್ನು ದೃಢೀಕರಿಸಿಲ್ಲ.

ಮೈಸೂರು ಟಿ.ನರಸೀಪುರದಲ್ಲಿ 4 ಕಡೆ ಬೋನು!

ಮೈಸೂರು ಜಿಲ್ಲೆಯಲ್ಲಿ ವಿಶೇಷವಾಗಿ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಭಯ ತೀವ್ರವಾಗಿದೆ. ಜಿಲ್ಲೆಯಲ್ಲಿ ಇಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದಾಋಎ. ಹೀಗಾಗಿ ಟಿ.ನರಸೀಪುರ ನಂತರ ಇದೀಗ ಮೈಸೂರು ತಾಲೂಕಿನಲ್ಲೂ ಚಿರತೆ ಭೀತಿ ಉಂಟಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ 4 ಕಡೆಗಳಲ್ಲಿ ಬೋನ್​ಗಳನ್ನು ಇಟ್ಟಿದ್ದಾರೆ. ಸಜ್ಜೇ ಹುಂಡಿ, ಮಾರಶೆಟ್ಟಹಳ್ಳಿ, ಕೂಡನಹಳ್ಳಿ, ತುಗರಿ ಮಾದಯ್ಯನ ಹಳ್ಳಿಯಲ್ಲಿ ಚಿರತೆ ಪತ್ತೆಯಾದ ಕಾರಣ ಈ ನಾಲ್ಕೂ ಗ್ರಾಮಗಳ ಕಾಡಂಚಿನ ಜಮೀನುಗಳಲ್ಲಿ ಬೋನುಗಳನ್ನು ಇರಿಸಲಾಗಿದೆ ಎಂದು ಡೆಪ್ಯೂಟಿ ಆರ್‌ಎಫ್‌ಒ ಮಾಹಿತಿ ನೀಡಿರುವುದಾಗಿ ಟಿವಿ9 ಕನ್ನಡ ವರದಿ ಮಾಡಿದೆ.

ಮಂಡ್ಯ ಜಿಲ್ಲೆಯಲ್ಲಿ ಪತ್ತೆಯಾಗಿದ್ದ ಚಿರತೆ ಎಲ್ಲಿ ಹೋಯ್ತು?

ಮಂಡ್ಯದ ಮಳವಳ್ಳಿ ತಾಲೂಕಿನ ಮನೆ ಮುಂದೆ ಮಲಗಿದ್ದ ಶ್ವಾನದ ಮೇಲೆ ದಾಳಿ ನಡೆಸಿದ್ದ ಚಿರತೆ ಒಂದು ತಿಂಗಳು ಕಳೆದರೂ ಮತ್ತೆ ಯಾರ ಕಣ್ಣಿಗೂ ಬಿದ್ದಿಲ್ಲ. ಮಳವಳ್ಳಿ ತಾಲೂಕಿನ ದನಗೂರು ಫಾರ್ಮ್ ಹೌಸ್​ನಲ್ಲಿ ಶ್ವಾನದ ಮೇಲಿನ ಚಿರತೆ ದಾಳಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವೈರಲ್‌ ಆಗಿತ್ತು. ಈ ದಾಳಿ 15 ದಿನ ಹಿಂದೆ ಆಗಿತ್ತು. ನಾಯಿಗೆ ಪ್ರಾಣಾಪಾಯ ಉಂಟಾಗಿರಲಿಲ್ಲ.

ಈ ಸಾಕು ನಾಯಿಯ ಮಾಲೀಕ ಮಿಥುನ್‌ ಅವರು ಚಿರತೆ ದಾಳಿ ಕುರಿತು ಅರಣ್ಯಾಧಿಕಾರಿಗೆ ದೂರು ನೀಡಿದ್ದರು. ಆದರೆ, ಈ ದೂರನ್ನು ಅರಣ್ಯಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಚಿರತೆಯು ನಾಯಿ ಮೇಲೆ ದಾಳಿ ನಡೆಸಿದ ಕಾರಣ ನೆಪ ಮಾತ್ರಕ್ಕೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.

IPL_Entry_Point