ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Election 2024: ಕಾಂಗ್ರೆಸ್ ಬೆಂಗಳೂರು ನಗರವನ್ನ ಹಾಳು ಮಾಡಿದೆ; ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಕಿಡಿ

Lok Sabha Election 2024: ಕಾಂಗ್ರೆಸ್ ಬೆಂಗಳೂರು ನಗರವನ್ನ ಹಾಳು ಮಾಡಿದೆ; ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ ಕಿಡಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಲೋಕಸಭೆ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಸರ್ಕಾರದ ಆಡಳಿತವನ್ನ ಟೀಕಿಸಿದ್ದಾರೆ.

ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಟೀಕಿಸಿದರು.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು (ಏಪ್ರಿಲ್ 20, ಶನಿವಾರ) ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರಿನಲ್ಲಿ ಅಬ್ಬರದ ಪ್ರಚಾರದ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಮೊದಲು ಚಿಕ್ಕಬಳ್ಳಾಪುರದಲ್ಲಿ ಡಾ ಕೆ ಸುಧಾಕರ್ ಪರ ಪ್ರಚಾರ ಮಾಡಿ, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಕೇಸರಿ ಅಭ್ಯರ್ಥಿಗಳ ಪರ ಮತಯಾಚಿಸಿದರು.

ಈ ವೇಳೆ ನೆರದಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಡಿಜಿಟಲ್ ಕ್ರಾಂತಿಯಲ್ಲಿ ಬೆಂಗಳೂರು ಪಾತ್ರ ದೊಡ್ಡದಿದೆ. ಆದರೆ ಕಾಂಗ್ರೆಸ್ ಬೆಂಗಳೂರು ನಗರವನ್ನು ಹಾಳು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರನ್ನು ಗ್ರೀನ್ ಹೌಸ್ ಸೆಂಟರ್, ಫಾರ್ಮಾ ಹಬ್, ಎಲೆಕ್ಟ್ರಾನಿಕ್ಸ್ ಹಬ್, ಎಲೆಕ್ಟ್ರಿಕಲ್ ವೆಹಿಕಲ್ ಹಬ್, ಸೆಮಿಕಂಡಕ್ಟರ್ ಹಬ್ ಹಾಗೂ ಜಾಗತಿಕ ನಾವೀನ್ಯತೆ ಕೇಂದ್ರವನ್ನಾಗಿ ಮಾಡುವುದಾಗಿ ಮೋದಿ ಹೇಳುತ್ತಾರೆ. ಆದರೆ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟದ ಜನರು ಮೋದಿಯನ್ನೇ ತೆಗೆಯುತ್ತೇವೆ ಎನ್ನುತ್ತಿದ್ದಾರೆ ಎಂದು ಹೇಳಿದರು.

5ಜಿ ನಂತರ ಈಗ 6ಜಿ ಆರಂಭಿಸುತ್ತೇವೆ ಎನ್ನುವುದು ಮೋದಿ ಗ್ಯಾರಂಟಿ, ಎಐ ತರುತ್ತೇವೆ ಎಂಬುದು ಮೋದಿ ಗ್ಯಾರಂಟಿ, ಆದರೆ ಮೋದಿಯನ್ನೇ ತೆಗೆಯುತ್ತೇವೆ ಎಂದು ಹೇಳುತ್ತಾರೆ. ಚಂದ್ರಯಾನ ನಂತರ ನಾವು ಈಗ ಗಗನಯಾನದಿಂದ ಇಡೀ ಭಾರತ ಹೆಮ್ಮೆಪಡುವಂತೆ ಮಾಡುತ್ತೇವೆ ಎಂಬುದು ಮೋದಿಯವರ ಗ್ಯಾರಂಟಿ. ಆದರೆ ಅವರು ಮಾತ್ರ ಮೋದಿಯನ್ನು ತೆಗೆದುಹಾಕುವುದಾಗಿ ಹೇಳುತ್ತರೆ ಎಂದು ಪುನರುಚ್ಚರಿಸಿದರು.

ಕಾಂಗ್ರೆಸ್ ಅಭಿವೃದ್ಧಿಯ ವಿರೋಧಿ

ಕಾಂಗ್ರೆಸ್ ಯುವ ಜನರ ವಿರೋಧಿಯಾಗಿದೆಯ ಯಾಕೆಂದರೆ ಅದು ಹೂಡಿಕೆ ಅವಕಾಶ ನೀಡದೆ ವಿರೋಧ ವ್ಯಕ್ತಪಡಿಸುತ್ತದೆ. ಉದ್ಯಮಶೀಲತೆಯ ವಿರೋಧಿ, ಖಾಸಗಿ ವಲಯದ ವಿರೋಧಿ, ತೆರಿಗೆದಾರರ ವಿರೋಧಿ ಹಾಗೂ ಸಂಪತ್ತಿನ ಸೃಷ್ಟಿಕರ್ತನ ವಿರೋಧಿ ಎಂದು ವಾಗ್ದಾಳಿ ನಡೆಸಿದರು.

ವಿಶ್ವವು ಭಾರತದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಲು ಬಯಸುತ್ತದೆ. ಹೂಡಿಕೆದಾರರು ದೇಶದಲ್ಲಿ ದಾಖಲೆ ಹೂಡಿಕೆ ಮಾಡಲು ಬಯಸುತ್ತಾರೆ. ಭಾರತವು ದಾಖಲೆಯ ರಫ್ತುಗಳನ್ನು ಮಾಡುತ್ತಿದೆ. ಉತ್ಪಾದನೆಯಲ್ಲೂ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಕಳೆದ 10 ವರ್ಷಗಳಲ್ಲಿ ದೊಡ ಬದಲಾವಣೆಯೇ ಆಗಿದೆ. ಈ ಬದಲಾವಣೆಗೆ ಕಾರಣವೇನು? ಈ ಬದಲಾವಣೆಗೆ ಕಾರಣ ನಿಮ್ಮ ಮತ ಎಂದಿದ್ದಾರೆ.

2014 ರ ಮೊದಲು ನಿಮ್ಮ ವಾರ್ಷಿಕ ಆದಾಯದ ಕೇವಲ 2 ಲಕ್ಷ ರೂಪಾಯಿಗೆ ನೀವು ಆದಾಯ ತೆರಿಗೆ ಪಾವತಿಸಬೇಕಾಗಿತ್ತು. ಆದರೆ ಈಗ ನಿಮ್ಮ ಆದಾಯದ 7 ಲಕ್ಷ ರೂಪಾಯಿ ವರೆಗೆ ರಿಯಾಯಿತಿಯನ್ನು ಪಡೆಯುತ್ತಿದ್ದೀರಿ. ಈ ಹಿಂದೆ ವಿವಿಧ ರೀತಿಯ ಪರೋಕ್ಷ ತೆರಿಗೆಗಳು ನಿಮ್ಮ ಶಾಪಿಂಗ್ ಮತ್ತು ರೆಸ್ಟೋರೆಂಟ್ ಬಿಲ್‌ಗಳನ್ನು ಹೆಚ್ಚಿಸಿದ್ದವು. ಜಿಎಸ್‌ಟಿ ಜಾರಿಯಾದ ನಂತರ ಪರೋಕ್ಷ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಇದರಿಂದ ನಿಮ್ಮ ಸಾವಿರಾರು ಕೋಟಿ ರೂಪಾಯಿ ಹಣ ಉಳಿತಾಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

ಇದಕ್ಕೂ ಮುನ್ನ ಬೆಂಗಳೂರಿನ ನನ್ನ ಸಹೋದರ ಸಹೋದರಿಯರಿಗೆ ನಮಸ್ಕಾರಗಳು.. ತಾಯಿ ಭುವನೇಶ್ವರಿ, ತಾಯಿ ಅಣ್ಣಮ್ಮ, ದೇವಿ ಬನಶಂಕರಿ, ಶ್ರೀ ದೊಡ್ಡ ಗಣಪತಿಗೆ ನನ್ನ ಪ್ರಣಾಮಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು.

IPL_Entry_Point