ಕನ್ನಡ ಸುದ್ದಿ  /  Sports  /  Kapil Dev Warns Selectors On Hardik Captaincy

Kapil Dev: ಸರಣಿ ಸೋತರೆ ನಾಯಕತ್ವದಿಂದ ಕೆಳಗಿಳಿಸಬಾರದು; ಹಾರ್ದಿಕ್‌ ಕುರಿತು ಆಯ್ಕೆಗಾರರಿಗೆ ಕಪಿಲ್ ದೇವ್ ಎಚ್ಚರಿಕೆ

ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಕಪಿಲ್ ದೇವ್, ಭಾರತದ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಟೀಂ ಇಂಡಿಯಾ ನಾಯಕತ್ವಕ್ಕೆ ಹಾರ್ದಿಕ್‌ ಪಾಂಡ್ಯ ಬಿಸಿಸಿಐನ ದೀರ್ಘಾವಧಿಯ ಆಯ್ಕೆಯಾಗಿದ್ದರೆ, ಅವರ ಸಣ್ಣ ಪುಟ್ಟ ತಪ್ಪುಗಳ ಹೊರತಾಗಿಯೂ ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ಕಪಿಲ್ ದೇವ್, ಹಾರ್ದಿಕ್ ಪಾಂಡ್ಯ
ಕಪಿಲ್ ದೇವ್, ಹಾರ್ದಿಕ್ ಪಾಂಡ್ಯ (PTI/Getty)

ಭಾರತ ಕ್ರಿಕೆಟ್‌ನಲ್ಲಿ ನಾಯಕತ್ವದ ವಿಚಾರ ಆಗಾಗ ಚರ್ಚೆಗೆ ಬರುತ್ತದೆ. ಇತಿಹಾಸದಲ್ಲೇ ಮೊದಲ ಬಾರಿಗೆ, ಎರಡು ಭಾರತೀಯ ತಂಡಗಳು ಇಬ್ಬರು ವಿಭಿನ್ನ ಆಟಗಾರರಿಂದ ಮುನ್ನಡೆಸಲ್ಪಟ್ಟಿವೆ. ರೋಹಿತ್ ಶರ್ಮಾ ಇನ್ನೂ ಏಕದಿನ ಮತ್ತು ಟೆಸ್ಟ್ ತಂಡಗಳನ್ನು ಮುನ್ನಡೆಸುತ್ತಿದ್ದರೆ, ಹಾರ್ದಿಕ್ ಪಾಂಡ್ಯ ಟಿ20 ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಟಿ20 ತಂಡದ ಜವಾಬ್ದಾರಿಯನ್ನು ಹಾರ್ದಿಕ್‌ಗೆ ನೀಡುವ ನಿರ್ಧಾರವನ್ನು ಭಾರತದ ದೀರ್ಘಾವಧಿಯ ಯೋಜನೆಗಳನ್ನು ಪರಿಗಣಿಸಿ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದು 2023ರ ವಿಶ್ವಕಪ್ ಬಳಿಕ ಅಧಿಕೃತವಾಗಲಿದೆ ಎಂಬ ಬಗ್ಗೆಯೂ ಮಾಹಿತಿ ಲಭಿಸಿದೆ.

ರೋಹಿತ್ ಶರ್ಮಾ ಸೀಮಿತ್‌ ಓವರ್‌ಗಳ ಕ್ರಿಕೆಟ್‌ನಿಂದ ಹಿಂದೆ ಸರಿದು ಟೆಸ್ಟ್‌ ಪಂದ್ಯಗಳತ್ತ ಗಮನ ಹರಿಸುವ ಸಾಧ್ಯತೆಯಿದ್ದು, ಹೀಗಾಗಿ ಹಾರ್ದಿಕ್ ಪಾಂಡ್ಯ ಇವರ ಉತ್ತರಾಧಿಕಾರಿಯಾಗುವ ನಿರೀಕ್ಷೆಯಿದೆ.

ಹಾರ್ದಿಕ್ ಪಾಂಡ್ಯ, ಇದುವರೆಗೆ ಭಾರತ ತಂಡದ ನಾಯಕತ್ವದಲ್ಲಿ ಯಶಸ್ವಿಯಾಗಿದ್ದಾರೆ. ಐರ್ಲೆಂಡ್, ನ್ಯೂಜಿಲೆಂಡ್ ಮತ್ತು ಇತ್ತೀಚೆಗೆ ಶ್ರೀಲಂಕಾ ವಿರುದ್ಧ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ರೋಹಿತ್ ಮತ್ತು ವಿರಾಟ್ ಕೊಹ್ಲಿ ಭಾರತದ ಟಿ20 ತಂಡದಿಂದ ಹೊರಗುಳಿದಿರುವುದರಿಂದ, ಹಾರ್ದಿಕ್ ಅವರು 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಾರೆ ಎಂದು ಹೇಳಲಾಗಿದೆ.

ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಕಪಿಲ್ ದೇವ್, ಭಾರತದ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಟೀಂ ಇಂಡಿಯಾ ನಾಯಕತ್ವಕ್ಕೆ ಹಾರ್ದಿಕ್‌ ಪಾಂಡ್ಯ ಬಿಸಿಸಿಐನ ದೀರ್ಘಾವಧಿಯ ಆಯ್ಕೆಯಾಗಿದ್ದರೆ, ಅವರ ಸಣ್ಣ ಪುಟ್ಟ ತಪ್ಪುಗಳ ಹೊರತಾಗಿಯೂ ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

“ನನ್ನ ಪ್ರಕಾರ, ಜಗತ್ತು ಏನು ಹೇಳುತ್ತದೆ ಎಂಬುದರ ಬಗ್ಗೆ ಯಾರೂ ಕಿವಿಗೊಡಬಾರದು. ನೀವು ನಿಮ್ಮ ತಂಡ ಮತ್ತು ನಿಮ್ಮ ಆಲೋಚನೆಯತ್ತ ಗಮನಕೊಡಿ. ಹಾರ್ದಿಕ್ ಪಾಂಡ್ಯ ಒಂದು ಸರಣಿಯನ್ನು ಕಳೆದುಕೊಂಡರೆ, ನಾವು ನಿಮ್ಮನ್ನು ತೆಗೆದುಹಾಕುತ್ತೇವೆ ಎಂದು ಅವರು(ಬಿಸಿಸಿಐ) ಹೇಳಬಾರದು. ನೀವು ಯಾರನ್ನಾದರೂ ನಾಯಕನನ್ನಾಗಿ ಮಾಡಿದರೆ, ಅವರು ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನೀವು ಅವರಿಗೆ ಸಾಕಷ್ಟು ಅವಕಾಶ ನೀಡಬೇಕು. ಅವರು ತಪ್ಪುಗಳನ್ನು ಮಾಡಬಹುದು. ನೀವು ಆ ದೋಷವನ್ನು ಮಾತ್ರ ನೋಡುವುದಿಲ್ಲ. ಆತ ತಂಡವನ್ನು ಮುನ್ನಡೆಸಲು ಮತ್ತು ತಂಡದ ಭವಿಷ್ಯವನ್ನು ರೂಪಿಸಲು ಸಿದ್ಧರಾಗಿದ್ದಾರೆಯೇ ಎಂಬುದರ ಮೇಲೆ ಗಮನ ಹರಿಸಿ. ನೀವು ಒಂದರ ಬಳಿಕ ಒಂದರಂತೆ ಸರಣಿಯ ಮೇಲೆ ಏನೂ ನಿರ್ಧರಿಸಬೇಡಿ” ಎಂದು ಕಪಿಲ್ ಗಲ್ಫ್ ನ್ಯೂಸ್‌ಗೆ ತಿಳಿಸಿದ್ದಾರೆ.

ಕಳೆದ ವರ್ಷ ಭಾರತೀಯ ಕ್ರಿಕೆಟ್‌ ಹಲವು ನಾಯಕರನ್ನು ಕಂಡಿದೆ. ರಿಷಬ್ ಪಂತ್, ಶಿಖರ್ ಧವನ್, ಕೆ ಎಲ್ ರಾಹುಲ್ ಸೇರಿದಂತೆ ಒಟ್ಟು ಏಳು ಕ್ರಿಕೆಟಿಗರು ನಾಯಕನ ಪಾತ್ರವನ್ನು ಸಾಂದರ್ಭಿಕವಾಗಿ ನಿರ್ವಹಿಸಿದ್ದಾರೆ. ಇದರಲ್ಲಿ ಹಾರ್ದಿಕ್‌ ಹೆಚ್ಚು ಯಶಸ್ಸನ್ನು ಗಳಿಸಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತವು ಇಲ್ಲಿಯವರೆಗೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋತಿದೆ. ಹಾರ್ದಿಕ್ ತಮ್ಮ ಮೊದಲ ಋತುವಿನಲ್ಲೇ ಗುಜರಾತ್ ಟೈಟಾನ್ಸ್ ಅನ್ನು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವತ್ತ ಹೇಗೆ ಮುನ್ನಡೆಸಿದರು ಎಂಬುದರ ಮೂಲಕ, ಹಾರ್ದಿಕ್ ಅವರ ನಾಯಕತ್ವದ ಪರಾಕ್ರಮವನ್ನು ಲೆಕ್ಕಹಾಕಬಹುದು.

ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಅವರ ಪಾಲುದಾರಿಕೆ ತುಂಬಾ ಪ್ರಮುಖವಾದುದು. ಹಾರ್ದಿಕ್ 37 ಎಸೆತಗಳಲ್ಲಿ 40 ರನ್ ಗಳಿಸಿ, ತಂಡಕ್ಕೆ ಆಸರೆಯಾದರು. ಅವರಿಬ್ಬರ 113 ರನ್‌ಗಳ ಅಮೂಲ್ಯ ಜೊತೆಯಾಟ, ಭಾರತದ 160 ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.