Adipurush Controversy: 'ಆದಿಪುರುಷ್' ಟೀಸರ್ ವಿವಾದ..ಸೆನ್ಸಾರ್ ಮಂಡಳಿಗೆ ನೊಟೀಸ್ ಜಾರಿ ಮಾಡಿದ ನ್ಯಾಯಾಲಯ
Jan 15, 2023 06:19 AM IST
'ಆದಿಪುರುಷ್' ಚಿತ್ರದ ದೃಶ್ಯ
- ಸೆನ್ಸಾರ್ ಬೋರ್ಡ್ನ ಅನುಮತಿ ಪಡೆದು ಬಿಡುಗಡೆ ಮಾಡಿರುವ ಚಿತ್ರದ ಟೀಸರ್ನಲ್ಲಿ ಸೀತೆಯ ಉಡುಪು ಆಕ್ಷೇಪಾರ್ಹವಾಗಿದೆ. ಅಲ್ಲದೆ, ಶ್ರೀರಾಮ ಹಾಗೂ ಸೀತೆಯನ್ನು ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಚಿತ್ರಿಸಿ, ತೋರಿಸಲಾಗಿದೆ. ಇದರ ಜೊತೆಗೆ ರಾವಣನ ಪಾತ್ರವನ್ನು ಸಂಪೂರ್ಣವಾಗಿ ವಿರುದ್ಧವಾಗಿ ಚಿತ್ರಿಸಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ.
ಎಲ್ಲಾ ಸರಿ ಇದ್ದಿದ್ದರೆ ಈ ವೇಳೆಗಾಗಲೇ ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ತೆರೆ ಕಾಣಬೇಕಿತ್ತು. 2023 ಸಂಕ್ರಾಂತಿಗೆ ಸಿನಿಮಾ ತೆರೆ ಕಾಣಲಿದೆ ಎಂದು ಸಿನಿಮಾ ಈ ಮೊದಲು ಹೇಳಿತ್ತಾದರೂ, ಚಿತ್ರದ ಟೀಸರ್ ವಿವಾದಕ್ಕೆ ಸಿಲುಕಿದ್ದರಿಂದ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ನಡುವೆ ಅಲಹಾಬಾದ್ ನ್ಯಾಯಾಲಯವು 'ಆದಿಪುರುಷ್' ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿಗೆ ನೊಟೀಸ್ ಜಾರಿ ಮಾಡಿದೆ.
'ಆದಿಪುರುಷ್' ಸಿನಿಮಾ ಟೀಸರ್ ಬಿಡುಗಡೆ ಆದಾಗಿನಿಂದ ಕೆಲವೇ ಕೆಲವರು ಮಾತ್ರ ಅದನ್ನು ಮೆಚ್ಚಿದ್ದರೆ ಉಳಿದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರಲ್ಲೂ ರಾಮ, ಸೀತೆ, ರಾವಣ ಹಾಗೂ ಇನ್ನಿತರ ಪಾತ್ರಗಳನ್ನು ತೋರಿಸಿದ್ದ ರೀತಿಗೆ ಎಲ್ಲರೂ ಗರಂ ಆಗಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆ ನಡೆದಿತ್ತು. ಚಿತ್ರವನ್ನು ಬಹಿಷ್ಕಾರ ಮಾಡಬೇಕೆಂದು ಹಲವು ಹಿಂದೂ ಸಂಘಟನೆಗಳು ಅಭಿಯಾನ ನಡೆಸಿದ್ದವು. ಇಷ್ಟಾದರೂ ಚಿತ್ರದ ನಿರ್ದೇಶಕ ಓಂರೌತ್ ಮಾತ್ರ, ತಪ್ಪು ಒಪ್ಪಿಕೊಂಡಿರಲಿಲ್ಲ. ವಿವಾದ ಹೆಚ್ಚಾಗುತ್ತಿದ್ದಂತೆ ಚಿತ್ರತಂಡಕ್ಕೆ ಮನವರಿಕೆಯಾಗಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಬದಲಾವಣೆ, ರೀ ಶೂಟಿಂಗ್ ಮಾಡುವ ಉದ್ದೇಶದಿಂದ ಇದೀಗ ಮತ್ತೆ ಸಿನಿಮಾ ರಿಲೀಸ್ ದಿನಾಂಕವನ್ನು ಜೂನ್ 16ಕ್ಕೆ ಮುಂದೂಡಲಾಗಿದೆ.
'ಆದಿಪುರುಷ್' ವಿವಾದಕ್ಕೆ ಸಂಬಂಧಿಸಿದ್ದಂತೆ ಕುಲದೀಪ್ ತಿವಾರಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಸಿನಿಮಾದಲ್ಲಿ ರಾಮಾಯಣದ ಪಾತ್ರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಅಲಹಾಬಾದ್ ನ್ಯಾಯಾಲಯ, ಸೆನ್ಸಾರ್ ಬೋರ್ಡ್ಗೆ ನೊಟೀಸ್ ನೀಡಿದ್ದು, ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಸೆನ್ಸಾರ್ ಬೋರ್ಡ್ನ ಅನುಮತಿ ಪಡೆದು ಬಿಡುಗಡೆ ಮಾಡಿರುವ ಚಿತ್ರದ ಟೀಸರ್ನಲ್ಲಿ ಸೀತೆಯ ಉಡುಪು ಆಕ್ಷೇಪಾರ್ಹವಾಗಿದೆ. ಅಲ್ಲದೆ, ಶ್ರೀರಾಮ ಹಾಗೂ ಸೀತೆಯನ್ನು ಧಾರ್ಮಿಕ ನಂಬಿಕೆಗೆ ವಿರುದ್ಧವಾಗಿ ಚಿತ್ರಿಸಿ, ತೋರಿಸಲಾಗಿದೆ. ಇದರ ಜೊತೆಗೆ ರಾವಣನ ಪಾತ್ರವನ್ನು ಸಂಪೂರ್ಣವಾಗಿ ವಿರುದ್ಧವಾಗಿ ಚಿತ್ರಿಸಲಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಫೆಬ್ರವರಿ 21 ಕ್ಕೆ ಮುಂದೂಡಿದೆ.
ಪ್ರಭಾಸ್, ಸೈಫ್ ಅಲಿ ಖಾನ್ ಸೇರಿ ಐವರ ವಿರುದ್ಧ ದಾಖಲಾಗಿತ್ತು ಕೇಸ್
ಇತ್ತೀಚೆಗೆ ನಟ ಪ್ರಭಾಸ್, ಸೈಫ್ ಅಲಿ ಖಾನ್, ನಿರ್ದೇಶಕ ಓಂ ರಾವತ್ ಸೇರಿದಂತೆ ಐವರ ವಿರುದ್ಧ ಕೇಸ್ ದಾಖಲಾಗಿತ್ತು. ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನ ಆಧಾರದ ಮೇರೆಗೆ 'ಆದಿಪುರುಷ್' ಚಿತ್ರತಂಡದ ವಿರುದ್ಧ ಕೇಸ್ ದಾಖಲಿಸಲಾಗಿತ್ತು. ಹಿಂದೂಗಳ ಭಾವನೆಗೆ ಧಕ್ಕೆ ಬರುವಂತೆ ಚಿತ್ರದಲ್ಲಿ ಎಲ್ಲಾ ಪಾತ್ರಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಕಾರಣದಿಂದ ಐವರ ವಿರುದ್ಧ ಕೇಸ್ ದಾಖಲಿಸಿದ್ದು ಅಕ್ಟೋಬರ್ 27 ರಂದು ವಿಚಾರಣೆ ನಡೆದಿತ್ತು.
ಟೀಸರ್ ವಿರುದ್ಧ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ ಅಸಮಾಧಾನ
ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ 'ಆದಿಪುರುಷ್' ಚಿತ್ರವನ್ನು ನಿಷೇಧಿಸಬೇಕು ಎಂದು ಹೇಳಿದ್ದರು. ಪೌರಾಣಿಕ ಕಥೆಗಳ ಬಗ್ಗೆ ಸಿನಿಮಾ ಮಾಡುವುದು ತಪ್ಪಲ್ಲ, ಆದರೆ ವಿವಾದ ಸೃಷ್ಟಿಸುವ ಉದ್ದೇಶದಿಂದ ಪೌರಾಣಿಕ ಕಥೆಗಳನ್ನು ತಿರುಚುವುದು ಅಕ್ಷಮ್ಯ ಅಪರಾಧ. ಚಿತ್ರದಲ್ಲಿನ ಪಾತ್ರಗಳು ರಾಮಾಯಣಕ್ಕಿಂತ ಭಿನ್ನವಾಗಿ ಕಾಣುತ್ತವೆ. ಅದನ್ನು ನೋಡುತ್ತಿದ್ದರೆ ಅದು ರಾಮಾಯಣವೇ ಅಲ್ಲ ಎಂದೆನಿಸುತ್ತಿದೆ. ಆದ್ದರಿಂದ ಈ ಚಿತ್ರವನ್ನು ನಿಷೇಧಿಸಲೇಬೇಕು ಎಂದ ಸತ್ಯೇಂದ್ರನಾಥ್, 'ಆದಿಪುರುಷ್' ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.