ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆರಂಭ, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವು ನಟನಟಿಯರು ಭಾಗಿ, ನೇರ ಪ್ರಸಾರ ಇಲ್ಲಿ ನೋಡಿ
Oct 17, 2023 01:24 PM IST
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಗಮನ
- National Film Awards 2023: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದೆಹಲಿಯ ವಿಜ್ಞಾನ ಭವನದಲ್ಲಿ ಆರಂಭವಾಗಿದೆ. ರಕ್ಷಿತ್ ಶೆಟ್ಟಿ, ಆಲಿಯಾ ಭಟ್, ಕೃತಿ ಸನೋನ್ ಸೇರಿದಂತೆ ಪ್ರಮುಖ ನಟನಟಿಯರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ನೋಡಲು ಇಲ್ಲಿ ಲಿಂಕ್ ನೀಡಲಾಗಿದೆ.
ಬೆಂಗಳೂರು: ಇಂದು ಅಂದರೆ ಅಕ್ಟೋಬರ್ 17ರಂದು ಮಧ್ಯಾಹ್ನ 1.30 ಗಂಟೆಯ ಬಳಿಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಆಲಿಯಾ ಭಟ್, ಕೃತಿ ಸನೋನ್ ಸೇರಿದಂತೆ ಹಲವು ನಟ ನಟಿಯರು ತಮ್ಮ ಕುಟುಂಬದ ಜತೆ ಈಗಾಗಲೇ ಸಭಾಂಗಣಕ್ಕೆ ಆಗಮಿಸಿದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಾರ್ಲಿ 777 ಸಿನಿಮಾಕ್ಕೆ ದೊರಕಿರುವ ಪ್ರಶಸ್ತಿ ಪಡೆಯಲು ರಕ್ಷಿತ್ ಶೆಟ್ಟಿ ಆಗಮಿಸುವ ಸೂಚನೆಯಿದೆ. ಈ ಕಾರ್ಯಕ್ರಮದ ನೇರ ಪ್ರಸಾರ ನೋಡಲು ಬಯಸುವವರಿಗೆ ಇಲ್ಲೊಂದಿಷ್ಟು ವಿವರ ನೀಡಲಾಗಿದೆ.
ಆನ್ಲೈನ್ನಲ್ಲಿ ಕಾರ್ಯಕ್ರಮ ವೀಕ್ಷಿಸಿ
ಇಂದು ಮಧ್ಯಾಹ್ನ 1.30 ಗಂಟೆಗೆ ಡಿಡಿ ನ್ಯಾಷನಲ್ ಚಾನೆಲ್ನಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮದ ನೇರ ಪ್ರಸಾರ ಇರುತ್ತದೆ. ಈಗ ಟೀವಿ ನೋಡಲಾಗದು, ಮೊಬೈಲ್ನಲ್ಲಿಯೇ ನೋಡ್ಕೋತಿವಿ ಅನ್ನುವವರು ಯೂಟ್ಯೂಬ್ ಚಾನೆಲ್ನಲ್ಲಿ ನೇರ ಪ್ರಸಾರ ನೋಡಬಹುದು. ಯೂಟ್ಯೂಬ್ ನೇರ ಪ್ರಸಾರ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಈ ಕುರಿತು ಎಕ್ಸ್ನಲ್ಲಿ ಡಿಡಿ ನ್ಯಾಷನಲ್ ಪೋಸ್ಟ್ ಮಾಡಿದೆ. 69ನೇ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮ ನೇರ ಪ್ರಸಾರ ನೋಡಲು ಡಿಡಿ ನ್ಯಾಷನಲ್ ನೋಡಿ ಎಂದು ಟ್ವೀಟ್ ಮಾಡಲಾಗಿದೆ.
ಕನ್ನಡಕ್ಕೂ ಪ್ರಶಸ್ತಿಯ ಗರಿ
ಕನ್ನಡ ಸೇರಿ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದ 777 ಚಾರ್ಲಿ ಸಿನಿಮಾಕ್ಕೆ ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಲಭಿಸಿದೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಹೊರತುಪಡಿಸಿದರೆ, ಫೀಚರ್ ಸಿನಿಮಾ ವಿಭಾಗದಲ್ಲಿ ಕನ್ನಡಕ್ಕೆ ಪ್ರಶಸ್ತಿಗಳು ಬಂದಿಲ್ಲ.ನಟ ಅನಿರುದ್ಧ ಜತ್ಕರ್ ನಿರ್ದೇಶನದ ಬಾಳೇ ಬಂಗಾರ ಸಾಕ್ಷ್ಯಚಿತ್ರಕ್ಕೆ ವಿಶೇಷ ಮೆನ್ಷನ್ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಕನ್ನಡದ ಹಿರಿಯ ನಟಿ ಭಾರತೀ ವಿಷ್ಣುವರ್ಧನ್ ಅವರ ಜೀವನಯಾನವನ್ನು ಈ ಸಾಕ್ಷ್ಯಚಿತ್ರದಲ್ಲಿ ಅಳಿಯ ಕಮ್ ನಿರ್ದೇಶಕ ಅನಿರುದ್ಧ ಸೆರೆಹಿಡಿದಿದ್ದರು. ರಾಷ್ಟ್ರಪ್ರಶಸ್ತಿಗೂ ಮುನ್ನ ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಈ ಸಾಕ್ಷ್ಯ ಚಿತ್ರಕ್ಕೆ ಲಭಿಸಿತ್ತು. ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಜೇಕಬ್ ವರ್ಗೀಸ್ ಸಹ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅತ್ಯುತ್ತಮ ಅನ್ವೇಷಣಾ ಸಿನಿಮಾ ವಿಭಾಗದಲ್ಲಿ ಆಯುಷ್ಮಾನ್ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಇದು ನಿರ್ಮಾಣವಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವವ ವಿವರ
ಮಿಮಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಕೃತಿ ಸನನ್ ಅವರು ಈಗಾಗಲೇ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ. ಅಲ್ಲೂ ಅರ್ಜುನ್ಗೆ ಪುಷ್ಪ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ. ಅವರೂ ಸಮಾರಂಭಕ್ಕೆ ಆಗಮಿಸಿದ್ದಾರೆ. ಅಂದಹಾಗೆ ಇವರು ತನ್ನ ಪತ್ನಿ ಸ್ನೇಹಾ ರೆಡ್ಡಿ ಜತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತೆಲುಗು ನಟರೊಬ್ಬರು ಪಡೆಯುತ್ತಿದ್ದಾರೆ.
ಈ ಕಾರ್ಯಕ್ರಮಕ್ಕೆ ಹೋಗಲೆಂದು ಇಂದು ಬೆಳಗ್ಗೆಯೂ ಮುಂಬೈನಲ್ಲಿ ಆಲಿಯಾ ಭಟ್ ಮತ್ತು ಅವರ ಪತಿ ರಣಬೀರ್ ಕಪೂರ್ ವಿಮಾನ ಹತ್ತಿದ್ದಾರೆ. ಕೃತಿ ಸನನ್ ರೀತಿ ಆಲಿಯಾ ಭಟ್ಗೆ ಅವರ ಗಂಗುಬಾಯಿ ಕಾಥಿಯವಾಡಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ.
ಶೇರ್ಶಾ ಚಿತ್ರದ ನಿರ್ಮಾಪಕರಾದ ಕರಣ್ ಜೋಹರ್ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರು ಧರ್ಮ ಪ್ರೊಡಕ್ಷನ್ ಸಿಇಒ ಅಪೂರ್ವ ಮೆಹ್ತಾ ಜತೆ ಆಗಮಿಸಿದ್ದಾರೆ. ಈ ಚಿತ್ರದ ನಟಿ ಕಿಯಾರ ಅಡ್ವಾಣಿ ಮತ್ತು ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರಿಗೆ ಸ್ಪೆಷಲ್ ಜ್ಯೂರಿ ಅವಾರ್ಡ್ ದೊರಕಿದೆ.