Karnataka Election 2023: ಸುದೀಪ್ ದರ್ಶನ್ ಬಿಜೆಪಿ, ರಮ್ಯಾ ಕಾಂಗ್ರೆಸ್ , ಜೆಡಿಎಸ್ ನಿಖಿಲ್ ಕುಮಾರಸ್ವಾಮಿ ಪರ ಧ್ರುವ ಸರ್ಜಾ ಪ್ರಚಾರ?
Apr 25, 2023 05:43 PM IST
ನಿಖಿಲ್ ಪರ ಧ್ರುವ ಸರ್ಜಾ ಪ್ರಚಾರ
- ನಟ, ನಿಖಿಲ್ ಕುಮಾರಸ್ವಾಮಿ ರಾಮನಗರದ ಮೂಲಕ ಸ್ಪರ್ಧಿಸುತ್ತಿದ್ದು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ತಮ್ಮ ಪರವಾಗಿ ಪ್ರಚಾರ ಮಾಡಲು ಧ್ರುವ ಸರ್ಜಾ ಅವರ ಮನ ಓಲೈಸಿದ್ದು ಧ್ರುವ ಕೂಡಾ ಒಪ್ಪಿದ್ಧಾರಂತೆ.
ಚುನಾವಣೆ ಹತ್ತಿರ ಬರುತ್ತಿದೆ. ಬಿಸಿಲು ಮಳೆ ಎನ್ನದೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಡನೆ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ಧಾರೆ. ಹೇಗಾದರೂ ಮಾಡಿ ಈ ಬಾರಿ ಅಧಿಕಾರಕ್ಕೆ ಏರಬೇಕೆಂಬ ಹಠದಲ್ಲಿದ್ಧಾರೆ. ಆದ್ದರಿಂದ ಈ ಬಾರಿ ಕೂಡಾ ತಮಗೆ ಬೆಂಬಲ ನೀಡಲು ಸ್ಟಾರ್ ನಟ-ನಟಿಯರ ಸಹಾಯ ಕೇಳುತ್ತಿದ್ದಾರೆ.
ಒಂದೆಡೆ ಹಾವೇರಿಯ ಶಿಗ್ಗಾಂವಿಯಲ್ಲಿ ಕಿಚ್ಚ ಸುದೀಪ್ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕೆ ನಿಂತಿದ್ಧಾರೆ. ಮತ್ತೊಂದೆಡೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಟ ದರ್ಶನ್ ತಮ್ಮ ಸ್ನೇಹಿತ ಇಂಡುವಾಳು ಸಚ್ಚಿದಾನಂದ ಪರ ಪ್ರಚಾರ ಮಾಡುತ್ತಿದ್ದಾರೆ. ಶ್ರುತಿ, ಮಾಳವಿಕಾ ಅವಿನಾಶ್ ಹಾಗೂ ಇನ್ನಿತರರು ಬಿಜೆಪಿ ಪರ ನಿಂತಿದ್ದಾರೆ. ರಮ್ಯಾ, ಉಮಾಶ್ರೀ, ಸಾಧುಕೋಕಿಲ ಕಾಂಗ್ರೆಸ್ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಇನ್ನು ಜೆಡಿಎಸ್ ಪರವಾಗಿ ಯಾವ ನಟ ಅಥವಾ ನಟಿ ಪ್ರಚಾರಕ್ಕೆ ಇಳಿಯುತ್ತಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಿಖಿಲ್ ಪರ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಟ, ನಿಖಿಲ್ ಕುಮಾರಸ್ವಾಮಿ ರಾಮನಗರದ ಮೂಲಕ ಸ್ಪರ್ಧಿಸುತ್ತಿದ್ದು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ತಮ್ಮ ಪರವಾಗಿ ಪ್ರಚಾರ ಮಾಡಲು ಧ್ರುವ ಸರ್ಜಾ ಅವರ ಮನ ಓಲೈಸಿದ್ದು ಧ್ರುವ ಕೂಡಾ ಒಪ್ಪಿದ್ಧಾರಂತೆ. ನಿಖಿಲ್ ಮಾತ್ರವಲ್ಲ ಜೆಡಿಎಸ್ನ ಇತರ ಅಭ್ಯರ್ಥಿಗಳು ಕೂಡಾ ತಮ್ಮ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವಂತೆ ಮನವಿ ಮಾಡಿದ್ದಾರಂತೆ. ಧ್ರುವ ಸದ್ಯಕ್ಕೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು ಏಪ್ರಿಲ್ 28ರಿಂದ ಎಲೆಕ್ಷನ್ ಕ್ಯಾಂಪೇನ್ನಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ದೊರೆತಿದೆ.
ಕೆಡಿ ಚಿತ್ರದಲ್ಲಿ ಧ್ರುವ ಸರ್ಜಾ ಬ್ಯುಸಿ
ಸದ್ಯಕ್ಕೆ ಧ್ರುವ ಸರ್ಜಾ ಕೆಡಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಇದು ಧ್ರುವ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ. 70-80ರ ಕಾಲ ಘಟ್ಟದ ಭೂಗತ ಜಗತ್ತಿನ ಹಿನ್ನೆಲೆಯುಳ್ಳ ಈ ಚಿತ್ರ, ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.
ಕೆಡಿ ಚಿತ್ರಕ್ಕಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತ: ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ''ಧ್ರುವ ಸರ್ಜಾ 23 ದಿನಗಳಲ್ಲಿ 18 ಕಿಲೋ ತೂಕ ಇಳಿಸಿಕೊಂಡು ಕೆ.ಡಿ ವಾರ್ ಫೀಲ್ಡ್ಗೆ ಎಂಟ್ರಿ ಕೊಡಲು ರೆಡಿ ಆಗಿದ್ದಾರೆ'' ಎಂದು ಪ್ರೇಮ್ ಬರೆದುಕೊಂಡಿದ್ದರು. ಪೊಗರು ಚಿತ್ರದಲ್ಲಿ ಕೂಡಾ ಧ್ರುವ ಈ ಸಾಹಸ ಮಾಡಿದ್ದರು. ಇದೀಗ ಮತ್ತೊಮ್ಮೆ ಅವರು ಕೆಡಿ ಚಿತ್ರಕ್ಕೆ ತೂಕ ಇಳಿಸಿಕೊಂಡಿರುವುದು ಅವರ ಡೆಡಿಕೇಷನ್ ಎಷ್ಟಿದೆ ಅನ್ನೋದು ತಿಳಿಯುತ್ತದೆ.