AR Rahman: ಎ ಆರ್ ರೆಹಮಾನ್ ವಿರುದ್ಧ ಚೆನ್ನೈ ಕಮಿಷನರ್ಗೆ ದೂರು, ಕಾನ್ಸರ್ಟ್ಗೆ ಕೊಟ್ಟ ಮುಂಗಡ ಹಣ ವಾಪಸ್ ಕೊಟ್ಟಿಲ್ಲ ಎಂಬ ಆರೋಪ
Sep 27, 2023 06:13 PM IST
ಎ ಆರ್ ರೆಹಮಾನ್
ಸೆಲೆಬ್ರಿಟಿ ಮ್ಯೂಸಿಕ್ ಕಂಪೋಸರ್ ಎ ಆರ್ ರೆಹಮಾನ್ ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ಗೆ ದ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ದೂರು ನೀಡಿದೆ. 2018ರಲ್ಲಿ ಕಾನ್ಸರ್ಟ್ ನಡೆಸಲೆಂದು ಸ್ವೀಕರಿಸಿದ್ದ ಮುಂಗಡ ಹಣ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚೆನ್ನೈ: ಐದು ವರ್ಷಗಳ ಗೊಂದಲದ ಬಳಿಕ ಸೆಲೆಬ್ರಿಟಿ ಮ್ಯೂಸಿಕ್ ಕಂಪೋಸರ್ ಎ ಆರ್ ರೆಹಮಾನ್ (AR Rahman) ವಿರುದ್ಧ ಚೆನ್ನೈ ಪೊಲೀಸ್ ಕಮಿಷನರ್ಗೆ ದ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ (The Association of Surgeons of India) ದೂರು ನೀಡಿದೆ.
ಬಾಲಿವುಡ್ನ ಜನಪ್ರಿಯ ಮ್ಯೂಸಿಕ್ ಕಂಪೋಸರ್ ಎಆರ್ ರೆಹಮಾನ್ ಅವರು 2018ರಲ್ಲಿ ಮ್ಯೂಸಿಕ್ ಕಾನ್ಸರ್ಟ್ಗೆ ನಡೆಸುವುದಕ್ಕೆ ಒಪ್ಪಿಕೊಂಡು 29.50 ಲಕ್ಷ ರೂಪಾಯಿ ಮುಂಗಡ ಹಣ ಪಡೆದುಕೊಂಡಿದ್ದರು.
ಆದರೆ, ಅಂದು ಈ ಕಾನ್ಸೆರ್ಟ್ ನಡೆಸುವುದಕ್ಕೆ ತಮಿಳುನಾಡು ಸರ್ಕಾರ ಅನುಮತಿ ನೀಡಿರಲಿಲ್ಲ. ಹೀಗಾಗಿ ಕಾನ್ಸರ್ಟ್ ನಡೆದಿರಲಿಲ್ಲ. ಈ ವಿಚಾರವನ್ನು ರೆಹಮಾನ್ ಅವರ ಗಮನಕ್ಕೆ ತಂದರೂ, ಅವರು ಸರಿಯಾಗಿ ಸ್ಪಂದಿಸಿಲ್ಲ, ಮುಂಗಡ ಪಡೆದ ಹಣವನ್ನು ವಾಪಸ್ ಕೊಟ್ಟಿಲ್ಲ ಎಂಬುದು ದೂರಿನ ಸಾರ.
ಎ ಆರ್ ರೆಹಮಾನ್ ವಿರುದ್ಧದ ದೂರು ಏನು
ದ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ 2018ರಲ್ಲಿ ಸಂಘದ ವಾರ್ಷಿಕೋತ್ಸವದಲ್ಲಿ ಕಾನ್ಸರ್ಟ್ ಆಯೋಜಿಸಲು ತೀರ್ಮಾನಿಸಿತ್ತು. ಅದರಂತೆ, ಎ ಆರ್ ರೆಹಮಾನ್ ಅವರನ್ನು ಸಂಪರ್ಕಿಸಿ ಕಾನ್ಸರ್ಟ್ ಕುರಿತು ಮಾತುಕತೆ ನಡೆಸಿ ಮುಂಗಡ ಹಣವಾಗಿ 29.50 ಲಕ್ಷ ರೂಪಾಯಿಯನ್ನು ಅಸೋಸಿಯೇಷನ್ ಪ್ರತಿನಿಧಿಗಳು ನೀಡಿದ್ದರು.
ಇದನ್ನೂ ಓದಿ| ಎಆರ್ ರೆಹಮಾನ್ ಕಾನ್ಸರ್ಟ್ ವಿವಾದ; ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ
ಆದರೆ ನಿಗದಿಯಾದ ಪ್ರಕಾರ, ಕಾನ್ಸರ್ಟ್ ನಡೆಸುವುದಕ್ಕೆ ಅಂದಿನ ತಮಿಳುನಾಡು ಸರ್ಕಾರ ಅನುಮತಿ ನೀಡಿರಲಿಲ್ಲ. ಈ ವಿಚಾರವನ್ನು ಎ ಆರ್ ರೆಹಮಾನ್ ಅವರ ಗಮನಕ್ಕೆ ಅಸೋಸಿಯೇಷನ್ ಪ್ರತಿನಿಧಿಗಳು ತಂದಿದ್ದರು. ಮುಂಗಡವಾಗಿ ಕೊಟ್ಟ 29.50 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಕೋರಿದ್ದರು.
ಅನೇಕ ಸಲ ಅನುಸರಣೆ ಮಾಡಿದ ಬಳಿಕ ಎ ಆರ್ ರೆಹಮಾನ್ ಅವರು ಚೆಕ್ ನೀಡಿದ್ದರು. ಆದರೆ ಈ ಚೆಕ್ ಬೌನ್ಸ್ ಆಗಿದ್ದು, ಅಸೋಸಿಯೇಷನ್ಗೆ ಹಣ ಸಿಕ್ಕಿರಲಿಲ್ಲ. ಚೆಕ್ ಬೌನ್ಸ್ ಆಗಿರುವ ವಿಚಾರವನ್ನು ಎ ಆರ್ ರೆಹಮಾನ್ ಮತ್ತು ಅವರ ಮ್ಯಾನೇಜರ್ ಸೆಂಥಿಲ್ ಗಮನಕ್ಕೆ ಅಸೋಸಿಯೇಷನ್ ಪ್ರತಿನಿಧಿಗಳು ತಂದಿದ್ದರು. ಆದರೆ ಅವರು ಸ್ಪಂದಿಸಿಲ್ಲ. ಐದು ವರ್ಷಗಳ ಅನುಸರಣೆ ಬಳಿಕ ದೂರು ನೀಡುತ್ತಿರುವುದಾಗಿ ಅಸೋಸಿಯೇಷನ್ ತಿಳಿಸಿದೆ.
ಇದನ್ನೂ ಓದಿ| ಎಆರ್ ರೆಹಮಾನ್ ಚೆನ್ನೈ ಕಾನ್ಸರ್ಟ್ ಅವ್ಯವಸ್ಥೆ; ಇಬ್ಬರು ಐಪಿಎಸ್ ಅಧಿಕಾರಿಗಳ ಎತ್ತಂಗಡಿ
ಕಳೆದ 5 ವರ್ಷಗಳಿಂದ ರೂ. 29 ಲಕ್ಷ 50 ಸಾವಿರ ವಾಪಸ್ ಬಂದಿಲ್ಲ ಎಂದು ದ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಸಂಘಟನಾ ಕಾರ್ಯದರ್ಶಿ ವಿನಾಯಕ್ ಸೆಂಥಿಲ್ ಪೊಲೀಸ್ ಕಮಿಷನರ್ ಕಚೇರಿಗೆ ಇಂದು ದೂರು ಸಲ್ಲಿಸಿದ್ದಾರೆ. ಈ ದೂರಿನಲ್ಲಿ ಎ.ಆರ್.ರಘುಮಾನ್ ಹಾಗೂ ಸೆಂಥಿಲ್ ವೇಲನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ. ಈ ದೂರಿನ ಅನ್ವಯ ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು HT ಕನ್ನಡದ ಸೋದರ ತಾಣ HT ತಮಿಳ್ ವರದಿ ಮಾಡಿದೆ.