ಎಆರ್ ರೆಹಮಾನ್ ಕಾನ್ಸರ್ಟ್ ವಿವಾದ; ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ
Sep 14, 2023 07:25 AM IST
ಎಆರ್ ರೆಹಮಾನ್ ಚೆನ್ನೈ ಕಾನ್ಸರ್ಟ್ ಅವ್ಯವಸ್ಥೆ, ತನಿಖೆಗೆ ಆದೇಶಿಸಿದ ಸರ್ಕಾರ
ಹೆಚ್ಚು ಹಣ ನೀಡಿ ಟಿಕೆಟ್ ಬುಕ್ ಮಾಡಿದ್ದ ಜನರು ವೇದಿಕೆ ಬಳಿ ಹೋಗಲಾಗದೆ ವಾಪಸ್ ಬಂದರು. ವೃದ್ಧರು, ಮಹಿಳೆಯರು, ಮಕ್ಕಳು ಜನರ ನಡುವೆ ಸಿಲುಕಿ ಹೊರ ಹೋಗಲಾರದೆ, ಅಲ್ಲಿ ಇರಲಾರದೆ ಸಮಸ್ಯೆ ಅನುಭವಿಸಿದರು. ಕಾರ್ಯಕ್ರಮದ ಸ್ಥಳದಿಂದ ಬಹಳ ದೂರದವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು.
ಭಾನುವಾರ ಚೆನ್ನೈನಲ್ಲಿ ನಡೆದ ಎಆರ್ ರೆಹಮಾನ್ ಕಾನ್ಸರ್ಟ್ ಅವ್ಯವಸ್ಥೆಗೆ ಸಂಬಂಧಿಸಿದಂತೆ ಸರ್ಕಾರ ಇಬ್ಬರು ಐಪಿಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ಕ್ರಮ ಕೈಗೊಂಡಿತ್ತು. ಇದೀಗ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವಾಗಿದ್ದ ಆರೋಪಗಳು ಕೇಳಿಬಂದ ಹಿನ್ನೆಲೆ ತಮಿಳುನಾಡು ಸರ್ಕಾರ ತನಿಖೆಗೆ ಸೂಚಿಸಿದೆ.
ಮುರುಕ್ಕುಂ ನೆಂಜಂ ಸಂಗೀತ ಕಾರ್ಯಕ್ರಮ
ಮುರುಕ್ಕುಂ ನೆಂಜಂ ಎಂಬ ಹೆಸರಿನಡಿ ಭಾನುವಾರ ಚೆನ್ನೈನ ಈಸ್ಟ್ ಬೀಚ್ ರೋಡ್ ಬಳಿ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬಹಳ ದಿನಗಳ ಮುನ್ನವೇ ಕಾರ್ಯಕ್ರಮವನ್ನು ಅನೌನ್ಸ್ ಮಾಡಿದ್ದರಿಂದ ಜನರು ರೆಹಮಾನ್ ಸಂಗೀತವನ್ನು ಲೈವ್ನಲ್ಲಿ ಕೇಳುವ ಉದ್ದೇಶದಿಂದ 500 ರಿಂದ 50 ಸಾವಿರ ರೂಪಾಯಿ ಹಣ ತೆತ್ತು ಟಿಕೆಟ್ ಪಡೆದಿದ್ದರು. ಆದರೆ ಕಾರ್ಯಕ್ರಮದ ಆಯೋಜಕರು ಹಣದ ಆಸೆಯಿಂದ 10 ಸಾವಿರ ಜನರು ಸೇರಬಹುದಾದ ಮೈದಾನದಲ್ಲಿ ಅದಕ್ಕಿಂತಲೂ ಹೆಚ್ಚು ಜನರಿಗೆ ಪಾಸ್ ಮಾರಾಟ ಮಾಡಿದ್ದರಿಂದ ಸ್ಥಳದಲ್ಲಿ ಜನಜಂಗುಳಿ ಹೆಚ್ಚಾಗಿತ್ತು.
ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಆರೋಪ
ಹೆಚ್ಚು ಹಣ ನೀಡಿ ಟಿಕೆಟ್ ಬುಕ್ ಮಾಡಿದ್ದ ಜನರು ವೇದಿಕೆ ಬಳಿ ಹೋಗಲಾಗದೆ ವಾಪಸ್ ಬಂದರು. ವೃದ್ಧರು, ಮಹಿಳೆಯರು, ಮಕ್ಕಳು ಜನರ ನಡುವೆ ಸಿಲುಕಿ ಹೊರ ಹೋಗಲಾರದೆ, ಅಲ್ಲಿ ಇರಲಾರದೆ ಸಮಸ್ಯೆ ಅನುಭವಿಸಿದರು. ಕಾರ್ಯಕ್ರಮದ ಸ್ಥಳದಿಂದ ಬಹಳ ದೂರದವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು. ಆತ್ಮೀಯರೊಬ್ಬರ ಮದುವೆ ಆರತಕ್ಷತೆ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರ ಕಾರು ಕೂಡಾ ಟ್ರಾಫಿಕ್ನಲ್ಲಿ ಸಿಲುಕಿತ್ತು. ಕೆಲವರು ಜನಜಂಗುಳಿಯಲ್ಲಿ ಪಾಸ್ ಇಲ್ಲದೆ ಒಳಗೆ ಬಂದಿದ್ದಾರೆ ಎಂದರೆ ಇನ್ನೂ ಕೆಲವರು ನಕಲಿ ಪಾಸ್ ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದಿಷ್ಟೇ ಅಲ್ಲದೆ ಜನದಟ್ಟಣೆಯಲ್ಲಿ ಕೆಲವು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯವಾಗಿದೆ ಎಂಬ ಮಾತುಗಳೂ ಕೇಳಿಬಂದಿದೆ.
ತನಿಖೆಗೆ ಆದೇಶಿಸಿದ ಸರ್ಕಾರ
ವಿಚಾರ ತಿಳಿದ ಸ್ಟಾಲಿನ್ ಸರ್ಕಾರ ಚೆನ್ನೈ ತಂಬರಮ್ನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಆಯುಕ್ತೆ ದೀಪಾ ಸತ್ಯನ್, ಪೂರ್ವ, ಚೆನ್ನೈ ಮೆಟ್ರೋಪಾಲಿಟನ್ ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತ ದಿಶಾ ಮಿತ್ತಲ್ ಅವರನ್ನು ವರ್ಗಾಯಿಸಿತ್ತು. ಇದೀಗ ಸರ್ಕಾರ ತನಿಖೆಗೆ ಆದೇಶಿಸಿದೆ. ಕಾರ್ಯಕ್ರಮದ ಬಗ್ಗೆ ಜನರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕುತ್ತಿದ್ದಂತೆ ಎಆರ್ ರೆಹಮಾನ್ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದರು. ಟಿಕೆಟ್ ಪಡೆದವರು ಮಾಹಿತಿಯೊಂದಿಗೆ ನಮ್ಮ ತಂಡವನ್ನು ಸಂಪರ್ಕಿಸಿ ಅವರು ನಿಮಗೆ ಪ್ರತಿಕ್ರಿಯಿಸುತ್ತಾರೆ ಎಂದು ಟ್ವೀಟ್ ಮಾಡಿದ್ದರು.
ಕೆಲವರು ಎಆರ್ ರೆಹಮಾನ್ ವಿರುದ್ಧ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಅವರದ್ದು ತಪ್ಪೇನು ಇಲ್ಲ, ಸಂಗೀತದ ಮೂಲಕ ಜನರನ್ನು ರಂಜಿಸುವುದು ಅವರ ಕೆಲಸವಾಗಿತ್ತು. ಈ ಅವ್ಯವಸ್ಥೆ ಬಗ್ಗೆ ಅವರಿಗೆ ತಿಳಿದದ್ದು ಕಾರ್ಯಕ್ರಮ ಮುಗಿದ ಬಳಿಕವೇ ಎಂದು ನೆಟಿಜನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.