Sudeep: ಬೊಮ್ಮಾಯಿಗೆ ಸುದೀಪ್ ಬೆಂಬಲ.. ಕಿಚ್ಚನ ಸಿನಿಮಾ, ಜಾಹೀರಾತು ತಡೆ ಕೋರಿ ಚುನಾವಣಾ ಆಯೋಗಕ್ಕೆ ಶಿವಮೊಗ್ಗ ವಕೀಲ ಮನವಿ
Apr 06, 2023 06:27 AM IST
ಸ್ಯಾಂಡಲ್ವುಡ್ ನಟ ಸುದೀಪ್
- ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಂದರ್ಭದಲ್ಲಿ ನಟ ಸುದೀಪ್ ಅವರ ಯಾವುದೇ ಸಿನಿಮಾಗಳ ಬಿಡುಗಡೆ, ಸಿನಿಮಾ ಪ್ರಸಾರ ಹಾಗೂ ಜಾಹೀರಾತುಗಳ ಪ್ರಸಾರವನ್ನು ತಡೆ ಹಿಡಿಯುವಂತೆ ಶಿವಮೊಗ್ಗ ವಕೀಲ ಕೆ.ಪಿ. ಶ್ರೀಪಾಲ್ ಎನ್ನುವವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಕಿಚ್ಚ ಸುದೀಪ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳಿಗೆ ಕೊನೆಗೂ ತೆರೆ ಬಿದ್ದಿದೆ. ಆದರೆ ಸುದೀಪ್ ಭಾರತೀಯ ಜನಜಾ ಪಕ್ಷ ಸೇರದಿದ್ದರೂ ಆ ಪಾರ್ಟಿ ಪರ ಪ್ರಚಾರ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಬುಧವಾರ ಮಧ್ಯಾಹ್ನ ನಡೆದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಈ ವಿಚಾರವನ್ನು ಸ್ಪಷ್ಟಪಡಿಸಿದ್ಧಾರೆ.
ಈ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಪಣ ತೊಟಿರುವ ಬಿಜೆಪಿ, ಚುನಾವಣೆ ಪ್ರಚಾರಕ್ಕಾಗಿ ಖ್ಯಾತ ನಟ ಸುದೀಪ್ ಅವರನ್ನು ಸ್ಟಾರ್ ಪ್ರಚಾರಕನನ್ನಾಗಿ ಕರೆ ತಂದಿದೆ. ಆದರೆ ಇದೀಗ ಕಿಚ್ಚನ ನಿರ್ಧಾರ ಅವರ ಸಿನಿಮಾ ಹಾಗೂ ಜಾಹೀರಾತುಗಳ ಪ್ರಸಾರಕ್ಕೆ ತಡೆ ತಂದೊಡ್ಡುವ ಸಾಧ್ಯತೆ ಇದೆ. ನಿನ್ನೆ (ಏ.5) ಸುದೀಪ್, ತಾವು ಸಿಎಂ ಬೊಮ್ಮಾಯಿ ಅವರ ಪರ ನಿಲ್ಲುತ್ತೇನೆ ಎಂದು ಹೇಳಿದ್ದರು. ಇದು ಕೆಲವು ಅಭಿಮಾನಿಗಳಿಗೆ ಖುಷಿ ನೀಡಿದ್ದರೂ, ಇನ್ನೂ ಕೆಲವರು ದಯವಿಟ್ಟು ರಾಜಕೀಯದಿಂದ ದೂರ ಇರಿ ಎಂದು ಮನವಿ ಮಾಡಿದ್ದರು. ಇದೀಗ ಶಿವಮೊಗ್ಗ ವಕೀಲರೊಬ್ಬರು ಕಿಚ್ಚನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಂದರ್ಭದಲ್ಲಿ ನಟ ಸುದೀಪ್ ಅವರ ಯಾವುದೇ ಸಿನಿಮಾಗಳ ಬಿಡುಗಡೆ, ಸಿನಿಮಾ ಪ್ರಸಾರ ಹಾಗೂ ಜಾಹೀರಾತುಗಳ ಪ್ರಸಾರವನ್ನು ತಡೆ ಹಿಡಿಯುವಂತೆ ಶಿವಮೊಗ್ಗ ವಕೀಲ ಕೆ.ಪಿ. ಶ್ರೀಪಾಲ್ ಎನ್ನುವವರು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಸುದೀಪ್ಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರು ಬಿಜೆಪಿ ಪರ ಪ್ರಚಾರ ಮಾಡಲು ಮುಂದಾಗಿರುವುದರಿಂದ ಅವರ ಸಿನಿಮಾ ಹಾಗೂ ಜಾಹೀರಾತುಗಳು ಮತದಾರರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಆದ್ದರಿಂದ ಈ ರೀತಿ ಮನವಿ ಮಾಡಲಾಗಿದೆ.
ಸುದೀಪ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ಆಪ್ತರು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುದೀಪ್ ಬಹಳ ಆಪ್ತರು. ಸುದೀಪ್ ನನ್ನನ್ನು ಮಾಮ ಎಂದು ಕರೆಯುತ್ತಾರೆ, ನಾನು ಅವರನ್ನು ದೀಪು ಎಂದೇ ಕರೆಯುವುದು ಎಂದು ಬೊಮ್ಮಾಯಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹಾಗೇ ಸುದೀಪ್ ತಂದೆ ಸಂಜೀವ್ ಹಾಗೂ ಬಸವರಾಜ ಬೊಮ್ಮಾಯಿ ಬಹಳ ಆತ್ಮೀಯರು. ಬಾಲ್ಯದಿಂದಲೂ ಸುದೀಪ್ ಹಾಗೂ ಬೊಮ್ಮಾಯಿ ಇಬ್ಬರಿಗೂ ಪರಿಚಯ. ಇಬ್ಬರ ನಡುವೆ ಉತ್ತಮ ಒಡನಾಟವಿದೆ. ಹಾಗಾಗಿ ಸುದೀಪ್ ಬಿಜೆಪಿ ಸೇರುವುದು ಖಚಿತ ಎನ್ನಲಾಗಿತ್ತು. ಆದರೆ ಸುದೀಪ್ ಬಿಜೆಪಿ ಸೇರುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಬೆದರಿಕೆ ಪತ್ರ ಬರೆದವರ ವಿರುದ್ಧ ಗುಡುಗಿದ ಸುದೀಪ್
ಸುದೀಪ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ವೈರಲ್ ಆದಾಗಿನಿಂದ ಅವರಿಗೆ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಪತ್ರ ಬಂದಿತ್ತು. ಕಿಚ್ಚನ ಹೆಸರಿಗೆ 2 ಪತ್ರಗಳು ಬಂದಿದ್ದು ಆ ಪತ್ರಗಳಲ್ಲಿ ಕಿಚ್ಚನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗಿತ್ತು. ಜೊತೆಗೆ ಬೆದರಿಕೆ ಕೂಡಾ ಒಡ್ಡಿದ್ಧಾರೆ. ನಿಮ್ಮ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುವುದಾಗಿ ಪತ್ರದಲ್ಲಿ ಬರೆಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಂಬಂಧ ಸುದೀಪ್ ಅವರ ಆಪ್ತ, ನಿರ್ಮಾಪಕ ಜಾಕ್ ಮಂಜು, ಸುದೀಪ್ ಪರವಾಗಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ಧಾರೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದು ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಬೆದರಿಕೆ ಒಡ್ಡಿದವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ನಾನು ಯಾವುದಕ್ಕೂ ಹೆದರುವುದಿಲ್ಲ ಎಂದ ಕಿಚ್ಚ
ಬೆದರಿಕೆ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿದ ಕಿಚ್ಚ, ಇದು ನಮ್ಮ ಚಿತ್ರರಂಗದಲ್ಲಿ ಇರುವವರ ಕೆಲಸ. ಅದು ಯಾರು ಅಂತಲೂ ನನಗೆ ಗೊತ್ತು. ಆದರೆ, ಅದನ್ನ ಇವತ್ತು ಮಾತನಾಡಲು ಹೋಗಲ್ಲ. ಯಾಕಂದ್ರೆ, ಅದು ಯಾವ ದಾರಿಯಲ್ಲಿ ಬರಬೇಕೋ ಆ ದಾರಿಯಲ್ಲಿಯೇ ಬರಲಿ, ನಾನು ಯಾವುದಕ್ಕೂ ಹೆದರೋನಲ್ಲ, ಅದಂತೂ ಸತ್ಯ ಎಂದಿದ್ದರು.