Sandalwood News: ವಾಮನ ಚಿತ್ರದ 2ನೇ ಹಾಡು ರಿಲೀಸ್ ಮಾಡಿ ಸ್ನೇಹಿತ ಧನ್ವೀರ್ಗೆ ಶುಭ ಹಾರೈಸಿದ ಅಭಿಷೇಕ್ ಅಂಬರೀಶ್
Aug 08, 2023 12:35 PM IST
ಧನ್ವೀರ್ ಅಭಿನಯದ ವಾಮನ ಚಿತ್ರದ ಹಾಡು ರಿಲೀಸ್ ಮಾಡಿದ ಅಭಿಷೇಕ್ ಅಂಬರೀಶ್
ಒಂದೇ ಒಂದು ಫೋನ್ ಕಾಲ್ಗೆ ಇಲ್ಲಿಗೆ ಬಂದು ಮುದ್ದು ರಾಕ್ಷಸಿ ಹಾಡನ್ನು ಅಭಿಷೇಕ್ ಅಂಬರೀಶ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು, ಭೂಷಣ್ ಮಾಸ್ಟರ್ ಕೊರಿಯೋಗ್ರಫಿಗೆ ಹೆಜ್ಜೆ ಹಾಕಿದ್ದೇನೆ ಎಂದು ಧನ್ವೀರ್ ಗೌಡ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಬಜಾರ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟನೆಯ ಬಹುನಿರೀಕ್ಷಿತ 'ವಾಮನ' ಸಿನಿಮಾದ 2ನೇ ಹಾಡು ರಿಲೀಸ್ ಆಗಿದೆ. ಇತ್ತೀಚೆಗೆಷ್ಟೇ ಬಿಡುಗಡೆ ಆಗಿದ್ದ ವಾ ವಾ ವಾ ವಾಮನ.. ಮಾಸ್ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ವಾಮನ ಅಂಗಳದಿಂದ ಮುದ್ದು ರಾಕ್ಷಸಿ... ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಈ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ದನಿಯಾಗಿದ್ದಾರೆ.
ಚೇತನ್ ಗೌಡ ನಿರ್ಮಾಣದ ಸಿನಿಮಾ
ಮುದ್ದು ರಾಕ್ಷಸಿ ಹಾಡಿಗೆ ಧನ್ವೀರ್ ಹಾಗೂ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ವಾಮನ ಚಿತ್ರವನ್ನು ಚೇತನ್ ಗೌಡ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ಚಿತ್ರವನ್ನು ಯುವ ನಿರ್ದೇಶಕ ಶಂಕರ್ ರಾಮನ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮಂತ್ರಿಮಾಲ್ನಲ್ಲಿ ಮುದ್ದು ರಾಕ್ಷಸಿ ಮೆಲೋಡಿ ಹಾಡನ್ನು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ರಿಲೀಸ್ ಮಾಡಿ ಗೆಳೆಯನ ಚಿತ್ರಕ್ಕೆ ಸಾಥ್ ಶುಭ ಹಾರೈಸಿದ್ದಾರೆ.
ಹಾಡು ರಿಲೀಸ್ ನಂತರ ಮಾತನಾಡಿದ ಅಭಿಷೇಕ್ ಅಂಬರೀಷ್, ''ನಾನು ಈಗಷ್ಟೇ ಮುದ್ದು ರಾಕ್ಷಸಿ ಹಾಡು ನೋಡಿದೆ. ಒಂದು ಸಾಂಗ್ ಹಿಟ್ ಆಗಬೇಕು ಅಂದರೆ ಅದರ ಕ್ರೆಡಿಟ್ ಹೀರೋಗೂ ಅಲ್ಲ, ಹೀರೋಯಿನ್ಗೂ ಅಲ್ಲ. ಮ್ಯೂಸಿಕ್ ಡೈರೆಕ್ಟರ್, ಸಾಹಿತ್ಯ ಬರೆದವರಿಗೆ ಸೇರಬೇಕು, ಏಕೆಂದರೆ ಹಾಡಿನ ಹಿಂದೆ ಅವರ ಶ್ರಮ ಹೆಚ್ಚಾಗಿರುತ್ತದೆ. ಗೆಳೆಯ ಧನ್ವೀರ್ ಇಷ್ಟು ಚೆನ್ನಾಗಿ ರೋಮ್ಯಾನ್ಸ್ ಮಾಡ್ತಾನೆ ಎಂದು ಗೊತ್ತಿರಲಿಲ್ಲ. ಬೈ ಟು ಲವ್ ಸಿನಿಮಾದಲ್ಲಿ ಸ್ವಲ್ಪ ನೋಡಿದ್ದೆವು. ಈಗ ವಾಮನ ಮುಖಾಂತರ ಕಂಪ್ಲೀಟ್ ಕಮರ್ಷಿಯಲ್ ಪ್ಯಾಕೇಜ್, ಕ್ಯೂಟ್ ಲವರ್ ಬಾಯ್ ರೀತಿ ಕಾಣಿಸುತ್ತಿದ್ದಾನೆ'' ಎಂದು ಸ್ನೇಹಿತನನ್ನು ಹೊಗಳಿದರು.
ಸ್ನೇಹಿತನಿಗೆ ಧನ್ಯವಾದ ಅರ್ಪಿಸಿದ ಧನ್ವೀರ್
ಧನ್ವೀರ್ ಗೌಡ ಮಾತನಾಡಿ, ''ಒಂದೇ ಒಂದು ಫೋನ್ ಕಾಲ್ಗೆ ಇಲ್ಲಿಗೆ ಬಂದು ಮುದ್ದು ರಾಕ್ಷಸಿ.. ಹಾಡನ್ನು ಅಭಿಷೇಕ್ ಅಂಬರೀಶ್ ರಿಲೀಸ್ ಮಾಡಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದಗಳು. ಭೂಷಣ್ ಮಾಸ್ಟರ್ ಕೊರಿಯೋಗ್ರಫಿಗೆ ಹೆಜ್ಜೆ ಹಾಕಿದ್ದೇನೆ ಎಂದರು. ನಿರ್ಮಾಪಕ ಚೇತನ್ ಗೌಡ ಮಾತನಾಡಿ, ಎಲ್ಲರಿಗೂ ಧನ್ಯವಾದ, ಈ ಸಮಾರಂಭವನ್ನು ಇಷ್ಟು ಯಶಸ್ವಿಯಾಗಿ ನಡೆಸಿಕೊಟ್ಟಿದ್ದೀರ. ನಮ್ಮ ಸಿನಿಮಾವನ್ನು ನೋಡಿ, ಕನ್ನಡ ಚಿತ್ರಗಳನ್ನು ಬೆಳೆಸಿ'' ಎಂದು ಮನವಿ ಮಾಡಿದರು. ನಿರ್ದೇಶಕ ಶಂಕರ್ ರಾಮನ್ ಮಾತನಾಡಿ, ''ಮೊದಲ ಹಾಡಿಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಅಜನೀಶ್ ಲೋಕನಾಥ್ ಸಂಗೀತ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಜಯ್ ಪ್ರಕಾಶ್ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ಕೂಡಿಸಿದ್ದು, ಭೂಷಣ್ ಮಾಸ್ಟರ್ ಕೊರಿಯೋಗ್ರಫ್ ಮಾಡಿದ್ದಾರೆ. ಮನೆಗೆ ಹೋಗ್ತಾ ನೀವು ಮುದ್ದು ಮುದ್ದು ರಾಕ್ಷಸಿ ಹಾಡುತ್ತಾ ಹೋಗಿ'' ಎಂದರು.
'ವಾಮನ' ಚಿತ್ರದಲ್ಲಿ ಧನ್ವೀರ್, ರೀಷ್ಮಾ ನಾಣಯ್ಯ ಜೊತೆಗೆ ತಾರಾ, ಸಂಪತ್, ಅಚ್ಯುತ್ ಕುಮಾರ್, ಅವಿನಾಶ್, ಆದಿತ್ಯ ಮೆನನ್, ಶಿವರಾಜ್ ಕೆಆರ್ ಪೇಟೆ, ಕಾಕ್ರೋಚ್ ಸುಧಿ, ಭೂಷಣ್ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಮಹೇಂದ್ರ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಅರ್ಜುನ್ ರಾಜ್, ವಿಕ್ರಮ್ ಮೋರ್ ಮತ್ತು ಜಾಲಿ ಬಾಸ್ಟಿನ್ ಆಕ್ಷನ್, ನವೀನ್ ಕಲಾ ನಿರ್ದೇಶನ ವಾಮನ ಸಿನಿಮಾಗೆ ಇದೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.