Raj b Shetty: ನಾಳೆ ಸುರಿಯಲಿದೆ ಸ್ವಾತಿ ಮುತ್ತಿನ ಮಳೆ ಹನಿ; ಗೆಳೆಯ ರಾಜ್ ಬಿ ಶೆಟ್ಟಿಗೆ ಶಿಲ್ಪಾ ಶೆಟ್ಟಿ ಡೈಲಾಗ್ ಹೇಳಿದ ರಕ್ಷಿತ್ ಶೆಟ್ಟಿ
Nov 23, 2023 11:50 AM IST
ಸ್ವಾತಿ ಮುತ್ತಿನ ಮಳೆ ಹನಿಯೇ ಕನ್ನಡ ಸಿನಿಮಾ
- November 24 Kannada Movie Release: ನಾಳೆ ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಕನ್ನಡ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಂದರ್ಭದಲ್ಲಿ ಗೆಳೆಯ ರಾಜ್ ಬಿ ಶೆಟ್ಟಿಗೆ ರಕ್ಷಿತ್ ಶೆಟ್ಟಿ ಶುಭ ಹಾರೈಸಿದ್ದಾರೆ.
ಬೆಂಗಳೂರು: ನಾಳೆ ಕರ್ನಾಟಕದ ಚಿತ್ರಮಂದಿರಗಳಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ, ಬ್ಯಾಡ್ ಮ್ಯಾನರ್ಸ್, ಶುಗರ್ ಫ್ಯಾಕ್ಟರಿ ಮುಂತಾದ ಸಿನಿಮಾಗಳು ಬಿಡುಗಡೆಯಾಗಲಿವೆ. ಮೋಹಕ ತಾರೆ ರಮ್ಯಾ ನಟಿಸಬೇಕಿದ್ದ, ರಮ್ಯಾ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಮತ್ತು ಸಿರಿ ರವಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕುರಿತಾಗಿ ರಕ್ಷಿತ್ ಶೆಟ್ಟಿ ಬರೆದ ಡೈಲಾಗ್ ಕೂಡ ಈಗ ಜನಪ್ರಿಯವಾಗಿದೆ.
ಶಿಲ್ಪಾ ಶೆಟ್ಟಿಯವರು ಆರಂಭಿಸಿದ ಸೋ ಬ್ಯೂಟಿ ಫುಲ್, ಸೋ ಎಲಿಗೆಂಟ್, ಜಸ್ಟ್ ಲುಕ್ಕಿಂಗ್ ವಾಹ್ ಎಂಬ ಡೈಲಾಗ್ ಈಗ ಸಾಕಷ್ಟು ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ರೀಲ್ಸ್ಗಳಲ್ಲಿ ಈ ಡೈಲಾಗ್ ಆಧರಿತ ವಿಡಿಯೋಗಳ ರಾಶಿಯೇ ಬರುತ್ತಿದೆ. ಇದೇ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಅವರು ಗೆಳೆಯ ರಕ್ಷಿತ್ ಶೆಟ್ಟಿಯ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟ್ರೈಲರ್ಗೆ ಸೋ ಮೂಡಿ ಸೋ ಬ್ಯೂಟಿಫುಲ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ರಕ್ಷಿತ್ ಶೆಟ್ಟಿಯವರು ರಾಜ್ ಬಿ ಶೆಟ್ಟಿ ನಟನೆಯ ಸ್ವಾತಿ ಮುತ್ತಿನ ಮಳೆ ಹನಿಯೇ ಟ್ರೈಲರ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸೋ ಮೂಡಿ ಸೋ ಬ್ಯೂಟಿಫುಲ್ ಎಂದು ಬರೆದಿದ್ದಾರೆ. ಜತೆಗೆ, ರಾಜ್ ಬಿ ಶೆಟ್ಟಿ ಯೂ ಆರ್ ದಿ ಮ್ಯಾನ್ ಎಂದು ಬರೆದಿದ್ದಾರೆ.
ನಾಳೆ ಸ್ವಾತಿ ಮುತ್ತಿನ ಮಳೆ ಹನಿಯೇ ಬಿಡುಗಡೆ
ನಾಳೆ ಅಂದರೆ ನವೆಂಬರ್ 24ರಂದು ನಾಳೆ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ತಮ್ಮ ಕೆ.ಆರ್.ಜಿ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ರೇಖಾ ಕೂಡ್ಲಿಗಿ, ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ತುಮ್ಮಿನಾಡು, ಸ್ನೇಹಾ ಶರ್ಮ, ಗೋಪಾಲಕೃಷ್ಣ ದೇಶಪಾಂಡೆ ಸೇರಿ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಿದ್ದಾರೆ.
ಸ್ವಾತಿ ಮುತ್ತಿನ ಮಳೆ ಹನಿಯೇ ಟ್ರೈಲರ್
ಇತ್ತೀಚೆಗೆ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಸಾವಿನ ಕಥೆಯಲ್ಲೂ ಪ್ರೀತಿ ಚಿಗುರಬಹುದೆಂಬುದನ್ನು ಟ್ರೇಲರ್ನಲ್ಲಿ ಸೂಚ್ಯವಾಗಿ ಹೇಳಿದ್ದಾರೆ ರಾಜ್ ಬಿ ಶೆಟ್ಟಿ. ಈ ಟ್ರೈಲರ್ ವಿಮರ್ಶೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಹಾಡುಗಳು ಕೂಡ ಹಿಟ್ ಆಗಿವೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಊಟಿ, ಮೈಸೂರು, ಕುದುರೆಮುಖ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಇದು ರಾಜ್ ಬಿ ಶೆಟ್ಟಿ ನಿರ್ದೇಶನದ ಮೂರನೆಯ ಚಿತ್ರವಾಗಿದ್ದು, ಹಿಂದಿನ ಎರಡು ಚಿತ್ರಗಳಿಗಿಂತ ವಿಷಯ ಮತ್ತು ಮೇಕಿಂಗ್ನಲ್ಲಿ ಅತ್ಯಂತ ವಿಭಿನ್ನವಾಗಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನೇತೃತ್ವದ ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡುತ್ತಿದೆ.