Cabinet Decisions: ನಗರ ಸ್ಥಳೀಯ ಸಂಸ್ಥೆ ಪಟ್ಟಣಗಳಲ್ಲಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆಗೆ ಸಂಪುಟ ತೀರ್ಮಾನ, 9 ಪ್ರಸ್ತಾವನೆಗೆ ಒಪ್ಪಿಗೆ
Nov 16, 2023 10:49 PM IST
ಕರ್ನಾಟಕ ವಿಧಾನಸೌಧ (ಸಾಂಕೇತಿಕ ಚಿತ್ರ)
ಬಿಬಿಎಂಪಿ ಹೊರತುಪಡಿಸಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಣಗಳಲ್ಲಿ 188 ಇಂದಿರಾ ಕ್ಯಾಂಟೀನ್ ಸ್ಥಾಪನೆ, ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಪ್ರತ್ಯೇಕ ಶಾಸನ ರಚನೆ ಸೇರಿ ಹಲವು ಪ್ರಸ್ತಾವನೆಗಳನ್ನು
ಸಚಿವ ಸಂಪುಟ ಅನುಮೋದಿಸಿದೆ. ಈ ಕುರಿತ ವಿವರ ನೀಡಿದ್ದಾರೆ ಎಚ್.ಮಾರುತಿ.
ಬೃಹತ್ ಬೆಂಗಳೂರು ಮಹಾನಗ ಪಾಲಿಕೆ (BBMP) ಹೊರತುಪಡಿಸಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಪಟ್ಟಣಗಳಲ್ಲಿ ಎರಡನೇ ಹಂತದ188 ಇಂದಿರಾ ಕ್ಯಾಂಟೀನ್ (Indira Canteen) ಮತ್ತು ಅಡುಗೆ ಕೋಣೆಗಳನ್ನು ನಿರ್ಮಿಸಲು ಕರ್ನಾಟಕದ ಸಚಿವ ಸಂಪುಟ ಸಭೆ ಅನುಮೋದನೆ (Karnataka Cabinet Decisions) ನೀಡಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ( CM Siddaramaiah) ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಿದ್ದರಾಮಯ್ಯ ಸಚಿವ ಸಂಪುಟದ 9 ನಿರ್ಣಯಗಳು
1. 87 ಲಕ್ಷಕ್ಕೆ ಅಡುಗೆ ಕೋಣೆ ಸಹಿತ ಇಂದಿರಾ ಕ್ಯಾಂಟೀನ್ ಮತ್ತು 48 ಲಕ್ಷ ರೂ.ಗಳಿಗೆ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತದೆ. ಒಟ್ಟು 165 ಅಡುಗೆ ಕೋಣೆ ಸಹಿತ ಇಂದಿರಾ ಕ್ಯಾಂಟೀನ್ ಮತ್ತು 23 ಇಂದಿರಾ ಕ್ಯಾಂಟೀನ್ ಸೇರಿ ಒಟ್ಟು 188 ಇಂದಿರಾ ಕ್ಯಾಂಟೀನ್ ಗಳನ್ನು ನಿರ್ಮಿಸಲಾಗುತ್ತದೆ. ಮೊದಲನೇ ಹಂತದಲ್ಲಿ ನಿರ್ಮಿಸಲಾದ ಪ್ರೀ ಕಾಸ್ಟ್ ಮಾದರಿಯಲ್ಲಿಯೇ ನಿರ್ಮಿಸಲು ನಿರ್ಧರಿಸಲಾಗಿದೆ.
2. ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಒಂದು ಪ್ರತ್ಯೇಕ ಶಾಸನ ರಚಿಸುವ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ ವಿಧೇಯಕ-2023ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಈ ವಿಧೇಯಕ ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿದೆ.
3. 2023-24ನೇ ಸಾಲಿನಲ್ಲಿ ದೈಹಿಕ ವಿಕಲ ಚೇತನರಿಗೆ ರೂ.36 ಕೋಟಿ ರೂ. ಗಳ ಅಂದಾಜು ಮೊತ್ತದಲ್ಲಿ 4000 ದ್ವಿಚಕ್ರ ವಾಹನ ಖರೀದಿಸಲು ಅನುಮತಿ ನೀಡಲಾಗಿದೆ. ವಾರ್ಷಿಕ ವರಮಾನ 2 ಲಕ್ಷ ರೂ.ಗಳಿಗಿಂತ ಕಡಿಮೆ ಇರುವ 20ರಿಂದ 60 ವರ್ಷ ವಯೋಮಾನದ ದೈಹಿಕ ವಿಕಲ ಚೇತನರಿಗೆ ಉದ್ಯೋಗ ಕೈಗೊಳ್ಳಲು ಉದ್ಯೋಗಕ್ಕೆ ತೆರಳಲು ಮತ್ತು ಉನ್ನತ ಶಿಕ್ಷಣಕ್ಕೆ ಕಾಲೇಜಿಗೆ ಹೋಗಲು ಅನುಕೂಲ ಕಲ್ಪಿಸುವ ಯೋಜನೆ ಇದಾಗಿದೆ.
4. 2023-24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ 2.50 ಮೆಟ್ರಿಕ್ ಟನ್ ಭತ್ತ, 8.50 ಲಕ್ಷ ಮೆಟ್ರಿಕ್ ಟನ್ ರಾಗಿ 3.00 ಲಕ್ಷ ಟನ್ ಬಿಳಿ ಜೋಳವನ್ನು ಖರೀದಿಸಿ ಸಂಗ್ರಹಿಸಲು ಅಗತ್ಯವಾಗಿರುವ 8 ಲಕ್ಷ ಗೋಣಿಚೀಲಗಳನ್ನು 76 ಕೋಟಿ ರೂ.ಗಳಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ. ಪ್ರತಿ ಗೋಣೀಚೀಲಕ್ಕೆ 95 ರೂ ನಿಗಧಿಪಡಿಸಲಾಗಿದೆ.
5. ರಾಷ್ಟ್ರೀಯ ಹಸಿರು ಮಂಡಲಿ(ಎನ್ ಜಿಟಿ) ಪರಿಸರ ಪರಿಹಾರ ನಿಧಿಯ ಅಡಿಯಲ್ಲಿ ಎನ್ ಜಿ ಟಿ ನಿಯಮಗಳನ್ನು ಅನುಷ್ಠಾನಗೊಳಸಲು 2ನೇ ಹಂತದಲ್ಲಿ 1 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 17 ಆದ್ಯತೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಳಚರಂಡಿ ವ್ಯವಸ್ಥೆ ನಿರ್ಮಾಣ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯ ಯೋಜನಾ ವೆಚ್ಚ 750 ಕೋಟಿ ರೂ.ಗಳಾಗಿರುತ್ತವೆ.
6. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 44 ಕೋಟಿ ರೂ.ಗಳ ವೆಚ್ಚದಲ್ಲಿ ನಂಜನಗೂಡು ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮಗಳಲ್ಲಿ ಅಭಿವೃದ್ದಿ ಕಾಮಗಾರಿ, ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಭೂ ಸ್ವಾಧೀನ ಮಾಡಲು ಸಂಪಟ ಅನುಮೋದನೆ ನೀಡಿದೆ.
7. ಗದಗ-ಬೆಟಗೇರಿ ನಗರಸಭೆಗೆ ಅಮೃತ-2 ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜುಯೋಜನೆಯನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಲಾಗಿದೆ. ಗದಗ-ಬೆಟಗೇರಿ ಅವಳಿ ನಗರಗಳ ಗದಗ ನಗರದ 34ಎಕರೆ ಪ್ರದೇಶದಲ್ಲಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ.ಕೇಂದ್ರವನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಸಚಿವ ಸಂಪುಟ ಅನುಮತಿ ನೀಡಿದೆ.
8. ಗಣಿಗಾರಿಕೆಗಳಲ್ಲಿ ನಡೆದಿರುವ ಅಕ್ರಮಗಳ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯಲ್ಲಿ ಸೃಷ್ಟಿಯಾಗಿರುವ ವಿಶೇಷ ತನಿಖಾ ತಂಡದ ಅವಧಿಯನ್ನು 30-06-2024ರವರೆಗೆ ವಿಸ್ತರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಪ್ರಕರಣದಲ್ಲಿ 17 ಕ್ರಿಮಿನಲ್ ಪ್ರಕರಣಗಳ ತನಿಖೆ ಬಾಕಿ ಇದೆ. ಮಂಗಳೂರು ಕಾರವಾರ ಮೊದಲಾದ ಬಂದರುಗಳಿಗೆ ಸಂಬಂಧಿಸಿದ 172 ಪ್ರಕರಣಗಳ ಪ್ರಾಥಮಿಕ ತನಿಖೆ ಬಾಕಿ ಇದೆ.
9. ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯ ಎಲ್ಲಾ ಸಗಟು ಗೋದಾಮುಗಳಿಗೆ ಸಿಸಿಟಿವಿ ಅಳವಡಿಸಲು 12.24 ಕೋಟಿ ರೂ ಬಿಡುಗಡೆಗೆ ಅನುಮತಿ ನೀಡಲಾಗಿದೆ.