Bengaluru News: ಮಹಾ ಮೈತ್ರಿಕೂಟಕ್ಕೆ I-N-D-I-A ಎಂಬ ಹೊಸ ಹೆಸರು, ಇಂಡಿಯಾ ಎಂದರೆ ಇಂಡಿಯನ್ ನ್ಯಾಷನಲ್.... ಹೊಸ ಹೆಸರಿಗೆ ತಕರಾರೂ ಇದೆ
Jul 18, 2023 03:59 PM IST
I-N-D-I-A ಇಂಡಿಯಾ ಎಂದರೆ ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈಯನ್ಸ್.
- Opposition Coalition Name: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ವಿರೋಧ ಪಕ್ಷಗಳು I-N-D-I-A ಎಂಬ ಹೊಸ ಹೆಸರಿನ ಮೂಲಕ ಒಟ್ಟಾಗುವ ಸೂಚನೆ ಇದೆ. ಇಂಡಿಯಾ ಎಂದರೆ ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈಯನ್ಸ್. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಮುಂಬರುವ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಪಕ್ಷವನ್ನು ಮಣಿಸಲು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳು ರಣತಂತ್ರ ರೂಪಿಸುತ್ತಿವೆ. ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಈ ಮಿತ್ರಪಕ್ಷಗಳ ಮೈತ್ರಿಕೂಟಕ್ಕೆ "ಇಂಡಿಯಾ" ಎಂದು ಹೆಸರಿಡಲಾಗಿದೆ. ಈ ಹೆಸರಿನ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಇಂಡಿಯಾ ಎಂದರೆ ( I-N-D-I-A)ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈಯನ್ಸ್ನ ಸಂಕ್ಷಿಪ್ತ ರೂಪ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಮೊದಲ ದಿನದ ಸಭೆಯ ಅನೌಪಚಾರಿಕವಾಗಿತ್ತು. ಒಂದಿಷ್ಟು ಚರ್ಚೆ, ಭರ್ಜರಿ ಊಟವಿತ್ತು. ಆದರೆ, ಇಂದು ಮಹಾಮೈತ್ರಿಕೂಟದ ಸಭೆಯಲ್ಲಿ ಮೈತ್ರಿಕೂಟಕ್ಕೆ ಸೂಕ್ತ ಹೆಸರು ಆಯ್ಕೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಎನ್ಡಿಟಿವಿ ವರದಿ ತಿಳಿಸಿದೆ. ನಿನ್ನೆ ನಡೆದ ಔತಣಕೂಟದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಈ ಮೈತ್ರಿಕೂಟಕ್ಕೆ ಹೊಸ ಹೆಸರು ಇಡುವಂತೆ ಸೂಚಿಸಲಾಗಿದೆ. ಇಂದು ನಡೆಯುವ ಸಭೆಯಲ್ಲಿ ಈ ಕುರಿತು ಚರ್ಚಿಸಿ ಒಮ್ಮತಕ್ಕೆ ಬರುವ ಪ್ರಯತ್ನ ನಡೆಸಲಾಗುತ್ತಿದೆ.
ಇಂಡಿಯಾ ಅಕ್ಷರಗಳನ್ನು ಹಂಚಿಕೊಂಡ ಮೈತ್ರಿಕೂಟ
ಸಭೆಯಲ್ಲಿ I-N-D-I-A ಅಥವಾ ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್ಕ್ಲೂಸಿವ್ ಅಲೈಯನ್ಸ್ ಪದಗಳ ಸಂಕ್ಷಿಪ್ತ ರೂಪವನ್ನು ವಿರೋಧ ಪಕ್ಷದ ಹೆಸರಾಗಿ ಇಡಲು ಸೂಚಿಸಲಾಗಿದೆ. ಆದರೆ, ಎಡ ಪಕ್ಷಗಳು ಅಲೈಯೆನ್ಸ್ ಅನ್ನು ಫ್ರಂಟ್ ಎಂದು ಬದಲಾಯಿಸಬೇಕು ಎಂದು ಬಯಸುತ್ತಿವೆ. ಕೆಲವು ಪಕ್ಷಗಳು ಇಂಡಿಯಾದಲ್ಲಿ ಇರುವ ಎನ್ಡಿಎ ಎಂಬ ಅಕ್ಷರದ ಕುರಿತು ತಕರಾರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಇಂಡಿಯಾ ಪದದಲ್ಲಿ ಇರುವ ಐದು ಅಕ್ಷರಗಳು ಮೈತ್ರಿಕೂಟದ ಸಭೆಯಲ್ಲಿ ಹೊಸ ಚರ್ಚೆಗೆ ನಾಂದಿಯಾಗಿದೆ.
ಮೈತ್ರಿಕೂಟಕ್ಕೆ ಸೋನಿಯಾ ಅಧ್ಯಕ್ಷೆ
ವರದಿಗಳ ಪ್ರಕಾರ ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಈ ಮೈತ್ರಿಕೂಟದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಈ ಮಹಾಘಟಬಂಧನ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಚಾಲಕರಾಗಲಿದ್ದಾರೆ.
ಇಷ್ಟು ಮಾತ್ರವಲ್ಲದೆ ಎರಡು ಉಪ ಸಮಿತಿಗಳ ರಚನೆಯೂ ಆಗಲಿದೆ. ಮೊದಲ ಸಮಿತಿಯು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಮತ್ತು ಸಂವಹನ ಅಂಶಗಳನ್ನು ಅಂತಿಮಗೊಳಿಸಲು ಬಳಕೆಯಾಗಲಿದೆ. ಇನ್ನೊಂದು ಸಮಿತಿಯು ರಾಲಿ, ಸಮಾವೇಶ, ಕಾರ್ಯಕ್ರಮಗಳನ್ನು ಯೋಜಿಸಲು ಬಳಕೆಯಾಗಲಿದೆ.
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಲು ತಂತ್ರಗಾರಿಕೆ ಹೆಣೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸಭೆ ನಡೆಯುತ್ತಿದೆ. ಈ ಸಭೆಯು ಹೆಸರಿಡುವುದಕ್ಕೆ ಸೀಮಿತವಾಗಲಿದೆಯೇ, ಇನ್ನೂ ಏನಾದರೂ ಮಹತ್ವದ ಬೆಳವಣಿಗೆ ನಡೆಯಲಿದೆಯೇ ಎಂದು ಕಾದು ನೋಡಬೇಕಿದೆ.
ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಎಂಎಂ, ಶಿವಸೇನೆ (ಯುಬಿಟಿ), ಎಎಪಿ, ಆರ್ಜೆಡಿ, ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್ಸಿಪಿ, ಫಾರ್ವಾರ್ಡ್ ಬ್ಲಾಕ್, ಐಯುಎಂಎಲ್, ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮನಿ), ಆಪ್ನಾ ದಳ, ತಮಿಳುನಾಡು ಎಂಎಂಂಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬೆಂಗಳೂರು ಸಭೆಯಲ್ಲಿದ್ದಾರೆ. ಸೋನಿಯಾ ಗಾಂಧಿ, ಕಾಂಗ್ರೆಸ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜೆಎಂಎಂ ನಾಯಕ ಮತ್ತು ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಮುಖ್ಯಮಂತ್ರಿಗಳಾದ ಉದ್ಧವ್ ಠಾಕ್ರೆ ಮತ್ತು ಲಾಲು ಪ್ರಸಾದ್ ಮುಂತಾದವರು ಸಭೆಯಲ್ಲಿದ್ದಾರೆ.