Bengaluru News: ಇಂದಿನಿಂದ ಬೆಂಗಳೂರಿನಲ್ಲಿ ಮಹಾಘಟಬಂಧನ್ ಸಭೆ, 26 ಪಕ್ಷಗಳ ಘಟಾನುಘಟಿ ಮುಖಂಡರು ಭಾಗಿ, ಸಭೆಯ 10 ಪ್ರಮುಖ ಅಪ್ಡೇಟ್
Jul 17, 2023 09:06 AM IST
ಬೆಂಗಳೂರಿನಲ್ಲಿ ಕಾಂಗ್ರೆಸ್ನ ಸೋನಿಯಾ ಗಾಂಧಿ ನೇತೃತ್ವದಲ್ಲಿ ಜುಲೈ 17 ಮತ್ತು ಜುಲೈ 18ರಂದು ಎರಡು ದಿನಗಳ ಕಾಲ ಮಹಾಘಟಬಂಧನ್ ಸಭೆಗೆ ಸ್ವಾಗತ ಕೋರುವ ಫ್ಲೆಕ್ಸ್ಗಳು
Opposition mega meet in Bengaluru today: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ವಿರುದ್ಧ ತಂತ್ರಗಾರಿಕೆ ಹೆಣೆಯಲು ಬೆಂಗಳೂರಿನಲ್ಲಿ ಕಾಂಗ್ರೆಸ್ನ ಸೋನಿಯಾ ಗಾಂಧಿ ನೇತೃತ್ವದಲ್ಲಿ ಜುಲೈ 17 ಮತ್ತು ಜುಲೈ 18ರಂದು ಎರಡು ದಿನಗಳ ಕಾಲ ಮಹಾಘಟಬಂಧನ್ ಸಭೆ ಆಯೋಜಿಸಲಾಗಿದೆ.
ಬೆಂಗಳೂರು: ಉದ್ಯಾನನಗರಿಯ ಏರ್ಪೋರ್ಟ್ ರಸ್ತೆ ಸೇರಿದಂತೆ ವಿವಿಧೆಡೆ ಸೋನಿಯಾ ಗಾಂಧಿ, ನಿತೀಶ್ ಕುಮಾರ್, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೈತ್ರಿಕೂಟದ ನಾಯಕರ ಫೋಟೊಗಳು ರಾರಾಜಿಸುತ್ತಿವೆ. ಬೆಂಗಳೂರಿನಲ್ಲಿ ಜುಲೈ 17 ಮತ್ತು ಜುಲೈ 18ರಂದು ಎರಡು ದಿನಗಳ ಕಾಲ ಮೈತ್ರಿಕೂಟದ ಮಹಾಘಟಬಂಧನ್ ಸಭೆ ಆಯೋಜಿಸಲಾಗಿದೆ. ಬಿಜೆಪಿ ಸರಕಾರದ ವಿರುದ್ಧ ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯನ್ನು ಸದೃಢಪಡಿಸುವಂತಹ ಉದ್ದೇಶದಿಂದ ಎರಡು ದಿನ ಈ ಸಭೆ ನಡೆಯಲಿದೆ. ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಲು ತಂತ್ರಗಾರಿಕೆ ಹೆಣೆಯುವ ಉದ್ದೇಶದಿಂದ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ಇದೇ ಸಮಯದಲ್ಲಿ ಎಚ್ಡಿ ಕುಮಾರಸ್ವಾಮಿಯವರು ಎನ್ಡಿಎಗೆ ಬೆಂಬಲ ಸೂಚಿಸುವ ಸುದ್ದಿಯೂ ಬಂದಿದೆ. ಬೆಂಗಳೂರು ಮಹಾಘಟಬಂಧನ್ ಸಭೆಯ ಕುರಿತು 10 ಪ್ರಮುಖ ಅಪ್ಡೇಟ್ಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಮೈತ್ರಿಕೂಟದ ಸಭೆ- 10 ಪ್ರಮುಖ ಅಪ್ಡೇಟ್ಗಳು
ಬೆಂಗಳೂರಿನಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಸಭೆಯಲ್ಲಿ 26 ವಿರೋಧ ಪಕ್ಷದ ನಾಯಕರು ಪಾಲ್ಗೊಳ್ಳಲಿದ್ದಾರೆ. ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ಸಭೆಯಲ್ಲಿ ಈ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.
- ಭಾಗವಹಿಸುವ ಪಕ್ಷಗಳು: ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಜೆಎಂಎಂ, ಶಿವಸೇನೆ (ಯುಬಿಟಿ), ಎಎಪಿ, ಆರ್ಜೆಡಿ, ಎಂಡಿಎಂಕೆ, ಕೆಡಿಎಂಕೆ, ವಿಸಿಕೆ, ಆರ್ಸಿಪಿ, ಫಾರ್ವಾರ್ಡ್ ಬ್ಲಾಕ್, ಐಯುಎಂಎಲ್, ಕೇರಳ ಕಾಂಗ್ರೆಸ್ (ಜೋಸೆಫ್) ಮತ್ತು ಕೇರಳ ಕಾಂಗ್ರೆಸ್ (ಮನಿ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ವಿರೋಧ ಪಕ್ಷದ ಈ ಎರಡನೇ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು ಮಾತ್ರವಲ್ಲದೆ ಆಪ್ನಾ ದಳ, ತಮಿಳುನಾಡು ಎಂಎಂಂಕೆ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.
- ಭಾಗವಹಿಸುವ ನಾಯಕರು: ಸೋನಿಯಾ ಗಾಂಧಿ, ಕಾಂಗ್ರೆಸ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್, ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಜೆಎಂಎಂ ನಾಯಕ ಮತ್ತು ಜಾರ್ಖಾಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಝ್ರಿವಲ್, ಮಾಜಿ ಮುಖ್ಯಮಂತ್ರಿಗಳಾದ ಉದ್ಧವ್ ಠಾಕ್ರೆ ಮತ್ತು ಲಾಲು ಪ್ರಸಾದ್ ಯಾದವ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ.
- ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೇಲ್ನಲ್ಲಿ ಸಭೆ ನಡೆಯಲಿದೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೋಜನಕೂಟ ಏರ್ಪಡಿಸಿದ್ದಾರೆ.
- ಬೆಂಗಳೂರಿನ ಮೈತ್ರಿಕೂಟದ ಸಭೆಯು ಸಂಜೆ 6 ಗಂಟೆಯಿಂದ ಆರಂಭವಾಗಲಿದೆ. ಕಾಂಗ್ರೆಸ್ ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬೆಂಗಳೂರಿನ ವಿವಿಧೆಡೆ ಇಂದು ಸಂಜೆ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆಯಿದೆ.
- ಮಹಾಘಟಬಂಧನ್ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸೀಟುಗಳನ್ನು ಗೆಲ್ಲುವುದು ಮತ್ತು ಒಬ್ಬ ಸೂಕ್ತ ನಾಯಕನನ್ನು ಪ್ರಧಾನ ಮಂತ್ರಿ ಹುದ್ದೆಗೆ ಆಯ್ಕೆ ಮಾಡುವುದು ಈ ಸಭೆಯ ಪ್ರಮುಖಾಂಶ ಎನ್ನಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಒಂದು ಉಪಸಮಿತಿ ರಚಿಸುವುದು ಇತ್ಯಾದಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ.
- - ವಿವಿಧ ರಾಲಿಗಳನ್ನು ಕೈಗೊಳ್ಳಲು, ಸಭೆಗಳನ್ನು ನಡೆಸಲು, ಚುನಾವಣಾ ಕಾರ್ಯಕ್ರಮಗಳನ್ನು ನಡೆಸಲು ಒಂದು ಉಪಸಮಿತಿ ರಚಿಸುವ ಕುರಿತೂ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.
- ವಿವಿಧ ರಾಜ್ಯಗಳಿಗೆ ತಕ್ಕಂತೆ ಸೀಟು ಹಂಚಿಕೆ ಕುರಿತೂ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.
- ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ದೇಶಾದ್ಯಂತ ಗೆಲುವು ಪಡೆಯಲು ಸೂಕ್ತವಾದ ಯೋಜನೆ ರೂಪಿಸುವ ಕುರಿತು ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಯಿದೆ.
- ವಿರೋಧ ಪಕ್ಷಗಳ ಮುಖಂಡರು ಇವಿಎಂ ವಿಷಯದ ಕುರಿತೂ ಚರ್ಚಿಸಲಿದ್ದಾರೆ. ಜತೆಗೆ, ಚುನಾವಣಾ ಆಯೋಗಕ್ಕೆ ಸುಧಾರಣೆಗಳ ಕುರಿತು ಸಲಹೆ ನೀಡುವ ನಿರೀಕ್ಷೆಯಿದೆ.
- ಜುಲೈ 18ರಂದು ದೆಹಲಿಯಲ್ಲಿ ಎನ್ಡಿಎ ಸಭೆ ನಡೆಸಲಿದೆ. ಅಂದು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸಭೆಯಲ್ಲಿ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ.
ಪಟನಾದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆದಿತ್ತು. ಬೆಂಗಳೂರಿನಲ್ಲಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಮನ್ವಯ ಸಭೆ ನಡೆಯಲಿದೆ. ಇಂದು ಸೋನಿಯಾ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದು, ಪರ್ಯಾಯ ರಾಜಕೀಯ ರಂಗ ಸಭೆಯಲ್ಲಿ ಸಕ್ರಿಯವಾಗಿ ಎರಡು ದಿನಗಳ ಕಾಲ ಭಾಗವಹಿಸಲಿದ್ದಾರೆ.