Dharwad News: ಧಾರವಾಡ ಕಲಘಟಗಿ ಸಮೀಪ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಕ್ಕೆ ಮನೆ ಬೆಂಕಿಗಾಹುತಿ, ಮನೆ ಮಂದಿ ಅಪಾಯದಿಂದ ಪಾರು
Oct 19, 2023 08:59 AM IST
ಧಾರವಾಡ ಕಲಘಟಗಿ ಸಮೀಪ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಕ್ಕೆ ಮನೆ ಬೆಂಕಿಗಾಹುತಿ
ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ಬಸಯ್ಯ ಹಿರೇಮಠ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟು ಹೋಗಿದೆ. ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟವಾಗಿರುವ ಘಟನೆ ಹಾವೇರಿಯಲ್ಲೂ ನಡೆದಿದೆ. ಇದರ ವಿವರ ಇಲ್ಲಿದೆ.
ಧಾರವಾಡ: ಮನೆಯಲ್ಲಿ ಚಾರ್ಜ್ಗೆ ಇಡಲಾಗಿದ್ದ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಪೋಟವಾಗಿ ಮನೆ ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಕ್ರಾಸ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಕಲಘಟಗಿ ತಾಲೂಕಿನ ಬಿ.ಗುಡಿಹಾಳ ಗ್ರಾಮದ ಬಸಯ್ಯ ಹಿರೇಮಠ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಸ್ಫೋಟಗೊಂಡು ಮನೆ ಸಂಪೂರ್ಣ ಸುಟ್ಟು ಹೋಗಿದೆ. ಸ್ಫೋಟಗೊಂಡ ರಭಸಕ್ಕೆ ಮನೆಯ ಎಲ್ಲ ಸಾಮಾಗ್ರಿಗಳು ಹಾಗೂ ವಸ್ತ್ರಾಭರಣಗಳು ಸುಟ್ಟು ಕರಕಲ ಆಗಿವೆ. ಘಟನೆಯಲ್ಲಿ ಅಂದಾಜು ಮೂರರಿಂದ ನಾಲ್ಕು ಲಕ್ಷ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ.
ದುರಂತ ಹೇಗೆ ಸಂಭವಿಸಿತು
ಮನೆಯ ಒಳಗಡೆ ಎಲೆಕ್ಟ್ರಿಕ್ ಬೈಕ್ ಚಾರ್ಜ್ ಇಡಲಾಗಿತ್ತು ಎನ್ನಲಾಗಿದೆ. ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಅನಾಹುತ ಸಂಭವಿಸಿದೆ. ಕಟ್ಟಿಗೆಯ ಮಡಿಗೆ ಮನೆಯ ಸಂಪೂರ್ಣ ಸುಟ್ಟು ಗೋಡೆಗಳು ಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.
ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರು
ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಕುಟುಂಬದ ಸದಸ್ಯರು ಸುರಕ್ಷಿತವಾಗಿದ್ದಾರೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಕ್ಷಣ ಮಾತ್ರದಲ್ಲಿ ಆರಂಭಗೊಂಡ ಬೆಂಕಿ ಕೆನ್ನಾಲಗಿ ಪೂರ್ತಿ ಮನೆಯನ್ನು ಆವರಿಸಿತು. ಬೆಂಕಿ ರೌದ್ರಾವರಾತರಕ್ಕೆ ಜನರು ಬೆಂಕಿ ನಂದಿಸಲೂ ಸಮಯ ಸಿಗಲಿಲ್ಲ.
ಬೆಂಕಿ ನಂದಿಸಿದ ಅಗ್ನಿಶಾಮಕ ದಳ
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಎ.ವಿ. ಮಾನೆ, ಉಮೇಶ ತೆಂಬದ, ಎಚ್.ಡಿ. ರಜಪೂತ, ಅಶೋಕ ಲಮಾಣಿ, ಸಂಜೀವ ಲಮಾಣಿ, ಮನೋಜ ಎನ್., ಶಾದಿಕ್ ಪಾಷಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಥಳಕ್ಕೆ ಭೇಟಿ
ಘಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಹಶೀಲ್ದಾರ್ ಯಲ್ಲಪ್ಪ ಗೊನೆನ್ನವರ್ ಹಾಗೂ ಕಲಘಟಗಿ ಪೊಲೀಸ ಸಿಪಿಐ ಶ್ರೀಶೈಲ್ ಕೌಜಲಗಿ ಸೇರಿದಂತೆ ಅಗ್ನಿಶಾಮಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಸಚಿವ ಸಂತೋಷ್ ಲಾಡ್ ಸರಕಾರದಿಂದ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ನೀಡಿದರು.
ಮಂಡ್ಯದಲ್ಲೂ ನಡೆದಿತ್ತು ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಪೋಟ
ಮನೆಯಲ್ಲಿ ಎಲೆಕ್ಟ್ರಿಕ್ ಚಾರ್ಜ್ ಹಾಕಿದ್ದ ಬೈಕ್ವೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಗೃಹ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿದ್ದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳೆಗೆರೆಹಳ್ಳಿಯಲ್ಲಿ ಸಂಭವಿಸಿತ್ತು.
ವಳೆಗೆರೆಹಳ್ಳಿಯ ಮುತ್ತುರಾಜ್ ಎಂಬುವವರ ಮನೆಯ ಒಳ ಭಾಗದಲ್ಲಿ ಬೈಕ್ ಚಾರ್ಜ್ ಹಾಕಿದ್ದ ವೇಳೆ ಈ ಘಟನೆ ಜರುಗಿತ್ತು. ಬೈಕ್ ಚಾರ್ಜ್ ಹಾಕಿದ್ದ ವೇಳೆ ಇದಕ್ಕಿದ್ದ ಹಾಗೆ ಸ್ಫೋಟಗೊಂಡಿದ್ದರಿಂದ್ದ ಮನೆಯ ಒಳಗಡೆ ಇದ್ದ ಜನರು ಹೊರಗಡೆ ಓಡಿ ಬಂದು ಪ್ರಾಣಾಪಾಯದಿಂದ ಪಾರಾಗಿದ್ದರು.
ಹಾವೇರಿಯಲ್ಲಿ ಕೂಡ ಚಾರ್ಜ್ ಹಾಕಿದ ವೇಳೆ ಸುಟ್ಟು ಕರಕಲಾದ ಎಲೆಕ್ಟ್ರಿಕ್ ಸ್ಕೂಟರ್
ಹಾವೇರಿ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಿವೃತ್ತ ಶಿಕ್ಷಕರೊಬ್ಬರು ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಎಲೆಕ್ರ್ಟಿಕ್ ವಾಹನವನ್ನು ಚಾರ್ಜಿಂಗ್ ಹಾಕಿದ ವೇಳೆ ಸುಟ್ಟು ಕರಕಲಾಗಿದೆ.
ನಿವೃತ್ತ ಶಿಕ್ಷಕ ಗಿರೀಶ್ ಪಾಟೀಲ್ ಅವರು ರಾತ್ರಿ ವೇಳೆ ತಮ್ಮ ಮನೆ ಮುಂದೆ ನಿಲ್ಲಿಸಿದ ವಿದ್ಯತ್ ಚಾಲಿತ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ ಹಾಕಿಮನೆಯೊಳಗೆ ಕುಳಿತಿರುತ್ತಾರೆ.
ಚಾರ್ಜಿಂಗ್ ಹಾಕಿದ ಒಂದು ಗಂಟೆಯ ಬಳಿಕ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗ ಉರಿದಿದೆ. ಈ ದೃಶ್ಯವನ್ನು ಕಂಡ ಸ್ಥಳಿಯರು ಕೆಲಕಾಲ ಆಂತಕಕ್ಕೆ ಒಳಗಾದರು.