ಗದಗ ಕೊಲೆ ಪ್ರಕರಣ; ತಂದೆ, ಮಲತಾಯಿ ಕೊಲೆಗೆ ಸುಪಾರಿ ನೀಡಿದ ವಿನಾಯಕ ಬಾಕಳೆ, ನಾಲ್ವರ ಹತ್ಯೆ ಕೇಸ್ನ 5 ಕುತೂಹಲಕಾರಿ ಅಂಶಗಳು
Apr 23, 2024 02:44 PM IST
ಗದಗದಲ್ಲಿ ಕೊಲೆಗೀಡಾದ ಕಾರ್ತಿಕ್ ಬಾಕಳೆ, ಕೊಪ್ಪಳದ ಪರಶುರಾಮ ಹಾದಿಮನಿ, ಆಕಾಂಕ್ಷಾ, ಲಕ್ಷ್ಮಿ.
ಕರ್ನಾಟಕದ ಗಮನಸೆಳೆದ ಗದಗ ಬೆಟಗೇರಿ ನಗರಸಭಾ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಬಾಕಳೆ ಸೇರಿ 4 ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ. ಈ ಗದಗ ಕೊಲೆ ಪ್ರಕರಣದಲ್ಲಿ ತಂದೆ, ಮಲತಾಯಿ ಕೊಲೆಗೆ ಸುಪಾರಿ ನೀಡಿದ್ದು ವಿನಾಯಕ ಬಾಕಳೆ ಎಂಬುದು ಬಹಿರಂಗವಾಗಿದೆ. ನಾಲ್ವರ ಹತ್ಯೆ ಕೇಸ್ನ 5 ಕುತೂಹಲಕಾರಿ ಅಂಶಗಳು ಹೀಗಿವೆ.
ಗದಗ: ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಸೇರಿ ನಾಲ್ವರ ಹತ್ಯೆ ಪ್ರಕರಣದ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ತಂದೆ-ತಾಯಿ ಕೊಲೆಗೆ ಸುಪಾರಿ ಕೊಟ್ಟ ಬಾಕಳೆ ದಂಪತಿಯ ಹಿರಿ ಮಗ ವಿನಾಯಕ ಬಾಕಳೆ ಸೇರಿ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಪೈಕಿ ವಿನಾಯಕ ಬಾಕಳೆ (31) ಪ್ರಮುಖ ಆರೋಪಿ. ಉಳಿದವರು ಈತನಿಂದ ಸುಪಾರಿ ಪಡೆದವರು. ಅವರನ್ನು ಗದಗ ರಾಜೀವ ಗಾಂಧಿ ನಗರದ ಫಿರೋಜ್ ನಿಸಾರ್ ಅಹ್ಮದ್ ಖಾಜಿ(29), ಹುಡ್ಕೋ ಕಾಲನಿಯ ಜಿಶಾನ್ ಮೆಹಬೂಬಅಲಿ ಖಾಜಿ(24), ಮಹಾರಾಷ್ಟ್ರ ಮೀರಜ್ನ ಸಾಹಿಲ್ ಅಷ್ಪಾಕ್ ಖಾಜಿ(19), ಸೋಹೆಲ್ ಅಷ್ಪಾಕ್ ಖಾಜಿ(19), ಸುಲ್ತಾನ್ ಜಿಲಾನಿ ಶೇಖ್ (23), ಮಹೇಶ ಜಗನ್ನಾಥ ಸಾಳಂಕೆ (21), ವಹೀದ್ ಲಿಯಾಕತ್ ಬೇಪಾರಿ(21) ಎಂದು ಗುರುತಿಸಲಾಗಿದೆ.
ಪ್ರಕಾಶ್ ಬಾಕಳೆ ಅವರ ಮನೆಗೆ ಏಪ್ರಿಲ್ 18ರ ತಡರಾತ್ರಿ ನುಗ್ಗಿದ್ದ ದುಷ್ಕರ್ಮಿಗಳು ನಾಲ್ವರನ್ನು ಹತ್ಯೆ ಮಾಡಿ ಹೋಗಿದ್ದರು. ಪ್ರಕಾಶ್ ಬಾಕಳೆ ಮತ್ತು ಸುನಂದಾ ಬಾಕಳೆ ದಂಪತಿಯ ಪುತ್ರ ಕಾರ್ತಿಕ್ ಬಾಕಳೆ, ಸಂಬಂಧಿಕರಾದ ಪರಶುರಾಮ ಹಾದಿಮನಿ, ಅವರ ಪತ್ನಿ ಲಕ್ಷ್ಮಿ ಹಾದಿಮನಿ, ಪುತ್ರಿ ಆಕಾಂಕ್ಷಾ ಹಾದಿಮನಿ ಮೃತರು. ಹತ್ಯೆ ಪ್ರಕರಣ ನಡೆದ 48 ಗಂಟೆಗಳ ಒಳಗೆಯೇ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾರೆ.
ಗದಗ ನಾಲ್ವರ ಹತ್ಯೆ ಪ್ರಕರಣ; ಇದುವರೆಗೆ ಏನೇನು ನಡೆಯಿತು ಇಲ್ಲಿದೆ ಅಂಶಗಳು
1) ಗದಗ ನಾಲ್ವರ ಹತ್ಯೆ ಪ್ರಕರಣ ಯಾವಾಗ ನಡೆಯಿತು?
ಗದಗ ಬೆಟಗೇರಿಯ ಚನ್ನಮ್ಮ ವೃತ್ತದ ಬಳಿ ಇರುವ ದಾಸರ ಓಣಿಯಲ್ಲಿ ಗುರುವಾರ (ಏಪ್ರಿಲ್ 18) - ಶುಕ್ರವಾರ (ಏಪ್ರಿಲ್ 19) ಮಧ್ಯರಾತ್ರಿ ಬಳಿಕ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಅವರ ಪುತ್ರ ಕಾರ್ತಿಕ್ (27), ಸಂಬಂಧಿಕರಾದ ಕೊಪ್ಪಳದ ಪರುಶುರಾಮ ಹಾದಿಮನಿ (55), ಲಕ್ಷ್ಮಿ ಹಾದಿಮನಿ(45) ಮತ್ತು ಆಕಾಂಕ್ಷ (17) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು.
2) ನಾಲ್ವರ ಹತ್ಯೆ ಮಾಡಿದ ದುಷ್ಕರ್ಮಿಗಳು ಯಾರು?
ಸುನಂದಾ ಬಾಕಳೆ ಅವರ ಪತಿ ಪ್ರಕಾಶ ಬಾಕಳೆ ಕೂಡ ಈ ಹಿಂದೆ ಬೆಟಗೇರಿ ನಗರಸಭೆ ಉಪಾಧ್ಯಕ್ಷರಾಗಿದ್ದರು. ಅವರು ನೀಡಿದ ಆರಂಭಿಕ ಮಾಹಿತಿ ಪ್ರಕಾರ, ದುಷ್ಕರ್ಮಿಗಳು ತಡರಾತ್ರಿ ಬಂದು ಬಾಗಿಲು ಬಡಿದಿದ್ದರು. ಬಾಗಿಲು ತೆರೆಯದೇ ನೆರೆಮನೆಯವರಿಗೆ ಫೋನ್ ಮಾಡಿ, ಬಳಿಕ ಮಗ ಕಾರ್ತಿಕನಿಗೆ ಫೋನ್ ಮಾಡಿದ್ದರು. ಆತ ಮತ್ತು ಸಂಬಂಧಿಕರು ಫೋನ್ ತೆಗೆಯದ ಕಾರಣ ಕೊನೆಗೆ ಪೊಲೀಸರಿಗೆ ತಿಳಿಸಿದ್ದರು. ಆಗ ನಾಲ್ವರು ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ, ಪ್ರಕಾಶ ಬಾಕಳೆಯವರ ಪುತ್ರ ವಿನಾಯಕ ಬಾಕಳೆಯಿಂದ ಸುಪಾರಿ ಪಡೆದವರು ಈ ಕೃತ್ಯ ನಡೆಸಿದ್ದು ದೃಢವಾಗಿದೆ.
3) ವಿನಾಯಕ ಬಾಕಳೆ ಯಾರ ಕೊಲೆಗೆ ಸುಪಾರಿ ನೀಡಿದ್ದು
ಪ್ರಕಾಶ ಬಾಕಳೆ ಅವರ ಮೊದಲ ಪತ್ನಿಯ ಮಗ ಈ ವಿನಾಯಕ ಬಾಕಳೆ. ಈತ ಫಿರೋಜ್ ಗ್ಯಾಂಗ್ಗೆ ಅಪ್ಪ ಪ್ರಕಾಶ ಬಾಕಳೆ ಮತ್ತು ಮಲತಾಯಿ ಸುನಂದಾ ಅವರ ಕೊಲೆ ಮಾಡುವಂತೆ ಸುಪಾರಿ ನೀಡಿದ್ದ. ಪ್ರಕಾಶ ಬಾಕಳೆಯ ಅರಿವಿಗೆ ಬಾರದಂತೆ ಆಸ್ತಿ ಮಾರಾಟ ಮಾಡಿದ್ದ ವಿನಾಯಕ ಬಾಕಳೆ. ಹೀಗಾಗಿ ಆಸ್ತಿ ವಿಚಾರವಾಗಿ ಪ್ರಕಾಶ ಬಾಕಳೆ ಜೊತೆಗೆ ವಿನಾಯಕ ಬಾಕಳೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಕೊಲೆಗೆ ಸುಪಾರಿ ನೀಡಿದ್ದ ಎಂದು ಗದಗ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ತಿಳಿಸಿದ್ದಾಗಿ ಕನ್ನಡಪ್ರಭ ವರದಿ ಮಾಡಿದೆ.
4) ವಿನಾಯಕ ಬಾಕಳೆ ನೀಡಿದ ಸುಪಾರಿ ಮೊತ್ತ ಎಷ್ಟು
ವ್ಯವಹಾರದಲ್ಲಿ ಉಂಟಾದ ವೈಮನಸ್ಸಿನ ಕಾರಣ ವಿನಾಯಕ ಬಾಕಳೆ ತನ್ನ ತಂದೆ ಪ್ರಕಾಶ್ ಬಾಕಳೆಯ ಅರಿವಿಗೆ ಬಾರದಂತೆ ಆಸ್ತಿ ಮಾರಾಟ ಮಾಡಿದ್ದ. ಇದನ್ನು ಪ್ರಕಾಶ್ ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ಪದೇಪದೆ ಜಗಳವಾಗುತ್ತಿದ್ದ ಕಾರಣ, ಫಿರೋಜ್ ಗ್ಯಾಂಗ್ ಅನ್ನು ಸಂಪರ್ಕಿಸಿದ ವಿನಾಯಕ, 65 ಲಕ್ಷ ರೂಪಾಯಿಗೆ ಜೋಡಿ ಕೊಲೆ (ಪ್ರಕಾಶ್ ಬಾಕಳೆ ಮತ್ತು ಸುನಂದಾ ಬಾಕಳೆ) ನಡೆಸುವುದಕ್ಕೆ ಸುಪಾರಿ ನೀಡಿದ್ದ. ಮಾತುಕತೆ ಭಾಗವಾಗಿ 2 ಲಕ್ಷ ರೂಪಾಯಿ ಮುಂಗಡ ನೀಡಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.
5) ಸುಪಾರಿ ಕಿಲ್ಲರ್ಗಳ ಟಾರ್ಗೆಟ್ ತಪ್ಪಿದ್ದು ಹೇಗೆ
ಸುನಂದಾ ಮತ್ತು ಪ್ರಕಾಶ್ ದಂಪತಿ ಮನೆಯಲ್ಲಿ ಏಪ್ರಿಲ್ 17ರಂದು ಕಾರ್ತಿಕ್ ಬಾಕಳೆಯ ವಿವಾಹ ನಿಶ್ಚಿತಾರ್ಥ ನಡೆಯಿತು. ಅದಕ್ಕೆ ಬಂದಿದ್ದ ಪ್ರಕಾಶ್ ಸಂಬಂಧಿ ಕೊಪ್ಪಳದ ಪರಶುರಾಮ ಹಾದಿಮನಿ, ಅವರ ಪತ್ನಿ ಲಕ್ಷ್ಮಿ ಹಾದಿಮನಿ, ಪುತ್ರಿ ಆಕಾಂಕ್ಷಾ ಹಾದಿಮನಿ ಮತ್ತೊಂದು ದಿನ ಅಲ್ಲೇ ಉಳಿದಿದ್ದರು. ಏಪ್ರಿಲ್ 18 ರ ರಾತ್ರಿ ಪ್ರಕಾಶ್ ಮತ್ತು ಸುನಂದಾ ಕೆಳಗಿನ ಮನೆಯಲ್ಲಿ ಮಲಗಿದ್ದರೆ, ಮೊದಲ ಮಹಡಿಯಲ್ಲಿ ಪುತ್ರ ಕಾರ್ತಿಕ್ ಬಾಕಳೆ ಮತ್ತು ಕೊಪ್ಪಳದ ಹೋಟೆಲ್ ಉದ್ಯಮಿ ಪರಶುರಾಮ ಹಾದಿಮನಿ, ಅವರ ಪತ್ನಿ ಲಕ್ಷ್ಮಿ ಹಾದಿಮನಿ, ಪುತ್ರಿ ಆಕಾಂಕ್ಷಾ ಮಲಗಿದ್ದರು. ದುಷ್ಕರ್ಮಿಗಳು ಕಾರ್ತಿಕ್ ಬಾಕಳೆಯನ್ನು ಗುರುತಿಸಿದ್ದು, ಅಲ್ಲೇ ಮಲಗಿದ್ದ ಪರಶುರಾಮ ಹಾದಿಮನಿ, ಲಕ್ಷ್ಮಿ ಅವರನ್ನೇ ಪ್ರಕಾಶ್ ಮತ್ತು ಸುನಂದಾ ಎಂದು ಭಾವಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಗದಗ ಬೆಟಗೇರಿ ಪೊಲೀಸರಿಗೆ ಪಾರಿತೋಷಕ
ಗದಗ ಬೆಟಗೇರಿಯಲ್ಲಿ 4 ಜನರ ಹತ್ಯೆ ನಡೆದ 72 ಗಂಟೆ ಒಳಗೆ ಎಲ್ಲ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಸಾಧನೆಯನ್ನು ಡಿಜಿ, ಐಜಿಪಿ ಅಲೋಕ್ ಮೋಹನ್ ಶ್ಲಾಘಿಸಿದ್ದಾರೆ. ಈ ಪ್ರಕರಣದ ಪೊಲೀಸ್ ತನಿಖಾ ತಂಡದ ಸಿಬ್ಬಂದಿಗೆ 5 ಲಕ್ಷ ರೂಪಾಯಿ ಇನಾಮು ಘೋಷಿಸಿದ್ದಾರೆ.
ಕರ್ನಾಟಕದ ಮತ್ತಷ್ಟುತಾಜಾ ಸುದ್ದಿ,ಕ್ರೈಮ್ ಸುದ್ದಿ,ಬೆಂಗಳೂರು ನಗರ ಸುದ್ದಿ,ರಾಜಕೀಯ ವಿಶ್ಲೇಷಣೆ ಓದಿ.