Congress Updates: 20 ಲೋಕಸಭಾ ಸ್ಥಾನ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸಲು ಕರ್ನಾಟಕ ಸಚಿವ ಸಂಪುಟ ದೆಹಲಿಗೆ ಶಿಫ್ಟ್
Aug 02, 2023 09:21 PM IST
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಿದರು. ಪಕ್ಷದ ಮುಖಂಡರಾದ ಕೆಸಿ ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಕೂಡ ಉಪಸ್ಥಿತರಿದ್ದರು.
Congress Updates: ಈ ಸಲ 20 ಲೋಕಸಭಾ ಸ್ಥಾನ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಇದಕ್ಕಾಗಿ ಇಡೀ ಸಚಿವ ಸಂಪುಟ ದೆಹಲಿಗೆ ಶಿಫ್ಟ್ ಆಗಿದೆ. ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರಿಗೆ ವರಿಷ್ಠರ ಪಾಠ ಆಗುತ್ತಿದ್ದು, ಭಿನ್ನಮತ ಹತ್ತಿಕ್ಕಲು ಸಮನ್ವಯ ಸಮಿತಿ ರಚನೆ ಕುರಿತು ಚರ್ಚೆ ನಡೆದಿದೆ. ಈ ವಿದ್ಯಮಾನ ವಿವರಿಸಿದ್ದಾರೆ ಎಚ್.ಮಾರುತಿ.
ಮುಂಬರುವ ಲೋಕಸಭಾ ಚುನಾವಣೆ (lok sabha election 2024)ಯಲ್ಲಿ 18-20 ಸ್ಥಾನಗಳನ್ನು ಗೆಲ್ಲಲು ಅನುಸರಿಸಬೇಕಾದ ಕಾರ್ಯತಂತ್ರಗಳು, ಪಕ್ಷದಲ್ಲಿ ಚಿಗುರೊಡೆಯಲು ಹವಣಿಸುತ್ತಿರುವ ಅಸಮಾಧಾನವನ್ನು ಹತ್ತಿಕ್ಕುವುದು ಸೇರಿದಂತೆ ಹಲವು ವಿಷಯಗಳನ್ನು ಕುರಿತು ದೆಹಲಿಯಲ್ಲಿ ರಾಜ್ಯ ನಾಯಕರೊಂದಿಗೆ ಕಾಂಗ್ರೆಸ್ (Congress) ವರಿಷ್ಠರು ಚರ್ಚೆ ಆರಂಭಿಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಲು ಇಡೀ ಸಚಿವ ಸಂಪುಟ ದೆಹಲಿಗೆ ಶಿಫ್ಟ್ ಆಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ ಸೇರಿದಂತೆ 25ಕ್ಕೂ ಹೆಚ್ಚು ಸಚಿವರು ಭಾಗವಹಿಸಿದ್ದಾರೆ.
ಇವರಲ್ಲದೆ ಪಕ್ಷದ ಮುಖಂಡರಾದ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ಎಐಸಿಸಿ ಪದಾಧಿಕಾರಿಗಳೀಗೂ ಆಹ್ವಾನ ನೀಡಲಾಗಿದೆ. ಶಾಸಕರೂ ಅಲ್ಲದ ಕೆ.ಆರ್.ರಮೇಶ್ ಕುಮಾರ್, ಬಿ.ಎಲ್.ಶಂಕರ್, ಶಾಸಕರಾದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ಬಿ.ಕೆ.ಹರಿಪ್ರಸಾದ್, ಆರ್.ವಿ.ದೇಶಪಾಂಡೆ ಅವರಿಗೂ ಆಹ್ವಾನವಿದ್ದು ಸುಮಾರು 50 ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಹೈಕಮಾಂಡ್ ಪರವಾಗಿ ಕೆ.ಸಿ.ವೇಣುಗೋಪಾಲ್, ರಣದೀಪ್ ಸಂಗ್ ಸೂರ್ಜೇವಾಲಾ ಭಾಗವಹಿಸಿದ್ದಾರೆ.
ಲೋಕಸಭೆ ಗೆಲುವು ಪ್ರಮುಖ ಅಜೆಂಡಾ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ 18-20 ಸ್ಥಾನಗಳನ್ನು ಗೆಲ್ಲುವುದೇ ಪ್ರಮುಖ ಅಜೆಂಡಾ ಎಂದು ಸಭೆಯಲ್ಲಿ ಭಾಗವಹಿಸಿರುವ ಸಚಿವರೊಬ್ಬರು ತಿಳಿಸಿದ್ದಾರೆ ಅವಶ್ಯಕತೆ ಬಿದ್ದಲ್ಲಿ ಲೋಕಸಭಾ ಚುನಾವಣೆ ಕಣಕ್ಕಿಳಿಯಲು ಸಿದ್ದರಾಗಿರುವಂತೆ ಹಲವು ಸಚಿವರಿಗೆ ಮೌಖಿಕ ಸೂಚನೆ ನೀಡಲಾಗಿದೆ. ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೈಕಮಾಂಡ್ ಸೂಚಿಸಿದರೆ ಬೆಳಗಾವಿಯಿಂದ ಕಣಕ್ಕಿಳಿಯಲು ಸಿದ್ಧ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೂ ಸಿದ್ಧರಾಗಿರಲು ಸೂಚನೆ ನೀಡಿದ್ದು, ಬೆಂಗಳೂರು ಉತ್ತರ ಅಥವಾ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ.
ಒಟ್ಟಾರೆ 18-20 ಸ್ಥಾನಗಳನ್ನು ಗೆಲ್ಲಲೇಬೇಕು ಎಂದು ಹೈಕಮಾಂಡ್ ಸರಕಾರ ರಚನೆಯ ಸಂದರ್ಭದಲ್ಲೇ ಸಿಎಂ ಡಿಸಿಎಂ ಅವರಿಗೆ ಸೂಚನೆ ನೀಡಿದೆ. ಅದರ ಮುಂದುವರಿದ ಭಾಗವಾಗಿ ಈ ಸಭೆ ನಡೆಯುತ್ತಿದೆ. ಗೆಲ್ಲಲು ಅನುಸರಿಸಬೇಕಾದ ತಂತ್ರಗಳು ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್, ಯಾವುದೇ ಹಂತದಲ್ಲಿ ಭಿನ್ನಾಭಿಪ್ರಾಯ ಉಂಟಾಗದಂತೆ ಎಚ್ಚರ ವಹಿಸುವುದು ಸೇರಿದಂತೆ ಅನೇಕ ಮಾರ್ಗೋಪಾಯಗಳನ್ನು ಕುರಿತು ಚರ್ಚೆ ನಡೆಯಲಿದೆ. ವಿಶೇಷವಾಗಿ ಮೀಸಲು ಕ್ಷೇತ್ರಗಳತ್ತ ನಿರ್ಲಕ್ಷ್ಯ ತಾಳದಂತೆ ಈ ಕ್ಷೇತ್ರಗಳಲ್ಲಿ ಅನುಸರಿಸಬೇಕಾದ ತಂತ್ರಗಳನ್ನು ಕುರಿತು ವರಿಷ್ಠರು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಭಿನ್ನಮತಕ್ಕೆ ಮುಲಾಮು!
ಐದು ಗ್ಯಾರಂಟಿಗಳಿಗೆ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿದ್ದು, ಇದೇ ಹವಾ ಮುಂದುವರಸಿಕೊಂಡು ಹೋದರೆ ಹೆಚ್ಚಿನ ಸ್ಥಾನ ನೀಡಲು ಸಹಾಯವಾಗುತ್ತದೆ. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಚಿವ ಸ್ಥಾನ ಸಿಗದಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವರ ಜತೆಗೆ ಮತ್ತಷ್ಟು ಶಾಸಕರು ಸೇರುವ ಲಕ್ಷಣಗಳಿವೆ. ಮೇಲಾಗಿ ಮೂಲ ವಲಸಿಗ ಎಂಬ ಬಣಗಳು ಹುಟ್ಟಿಕೊಂಡರೆ ಚುನಾವಣೆಯಲ್ಲಿ ತೊಂದರೆ ಉಂಟಾಗಲಿದೆ. ಆದ್ದರಿಂದ ಈ ಭಿನ್ನಮತವನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಮುಲಾಮು ಹುಡುಕುವ ಸಾಧ್ಯತೆಗಳಿವೆ ಎಂದು ಮೂಲಗಳು ಖಚಿತಪಡಿಸಿವೆ.
ಸಮನ್ವಯ ಸಮಿತಿ ರಚನೆ ಸಾಧ್ಯತೆ ಪರಿಶೀಲನೆ
ಸಚಿವರ ಅಸಹಕಾರ ಧೋರಣೆ ಕುರಿತು 30 ಕ್ಕೂ ಹೆಚ್ಚು ಶಾಸಕರು ಬರದಿರುವ ಪತ್ರವೂ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಇಂತಹ ಸಂಗತಿಗಳನ್ನು ದೆಹಲಿವರೆಗೂ ತರಲೇಬಾರದು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಮಟ್ಟದಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ವರಿಷ್ಠರು ಕಿವಿ ಮಾತು ಹೇಳಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಳಮಟ್ಟದಲ್ಲಿ ಕೆಲಸ ಮಾಡುವುದು ಶಾಸಕರು. ಅವರ ಬೇಡಿಕೆಗಳಿಗೆ ಕಿಮ್ಮತ್ತು ಇಲ್ಲವಾದಲ್ಲಿ ಅವರು ಕೆಲಸ ಮಾಡುವುದಾದರೂ ಹೇಗೆ? ಆದ್ದರಿಂದ ಶಾಸಕರ ಬೇಡಿಕೆಗಳನ್ನು ಕಡೆಗಣಿಸಬಾರದು ಎಂದು ಹೈಕಮಾಂಡ್ ತಾಕಿತು ಮಾಡಲಿದೆ.
ಸಚಿವರು ಮತ್ತು ಶಾಸಕರ ನಡುವೆ ಸಮನ್ವಯತೆ ಸಾಧಿಸಲು ಸಮನ್ವಯ ಸಮಿತಿ ರಚನೆ ಮಾಡಿದರೆ ಹೇಗೆ ಎಂಬ ಚಿಂತನೆಯೂ ವರಿಷ್ಠರ ಮನಸ್ಸಿನಲ್ಲಿದೆ. 135 ಸ್ಥಾಗಳನ್ನು ಗೆದ್ದು ಸರಕಾರ ರಚಿಸಿ ಸಮನ್ವಯ ಸಮಿತಿ ರಚಿಸಿದರೆ ಕೆಟ್ಟ ಸಂದೇಶ ಹೋಗಬಹುದು. ಸಮ್ಮಿಶ್ರ ಸರಕಾರಗಳಲ್ಲಿ ಮಾತ್ರ ಸಮನ್ವಯ ಸಮಿತಿಯ ಅವಶ್ಯಕತೆ ಉಂಟಾಗುತ್ತದೆ. ಆದ್ದರಿಂದ ಇನ್ನು ಮುಂದೆ ಬೆಂಗಳೂರು ಮಟ್ಟದಲ್ಲಿಯೇ ಶಾಸಕರನ್ನು ಸಂಬಾಳಿಸಿಕೊಂಡು ಹೋಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುವ ಸಾಧ್ಯತೆಗಳಿವೆ.
ಬಿಜೆಪಿ ನಿಯಂತ್ರಣವೇ ಸವಾಲು
ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಬಿಜೆಪಿ ಸುಮ್ಮನೆ ಕೂರುವ ಪಕ್ಷವಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕಲು ಪ್ರತಿತಂತ್ರಗಳನ್ನು ಅನುಸರಿಸಲಿದೆ. ವಿಶೇಷವಾಗಿ ಕೋಮುವಾದದ ಹೆಸರಿನಲ್ಲಿ ಸಮಾಜವನ್ನು ಒಡೆದು ಹಿಂದೂ ಸಮುದಾಯದ ಒಲವು ಸಂಪಾದಿಸುವ ನಿಟ್ಟಿನಲ್ಲಿ ಈಗಾಗಲೇ ಹೆಜ್ಜೆ ಇಟ್ಟಿದೆ. ಉಡುಪಿಯ ಕಾಲೇಜೊಂದರಲ್ಲಿ ಮೊಬೈಲ್ ಕ್ಯಾಮೆರಾ ಶೂಟಿಂಗ್ ಪ್ರಕರಣ ಕುರಿತು ಈಗಾಗಲೇ ಹುಯಿಲೆಬ್ಬಿಸಿದೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಮತ್ತು ಬೆಳಕಿಗೆ ಬರುವುದಕ್ಕೂ ಮುನ್ನವೇ ಹತ್ತಿಕ್ಕಲು ಸರಕಾರಕ್ಕೆ ಸೂಚನೆ ನೀಡಲಿದ್ದಾರೆ. ಒಂದು ವೇಳೆ ಕೋಮುಗಲಭೆಗಳು ಸಂಭವಿಸಿದರೆ ಅದರ ಲಾಭವಾಗುವುದು ಬಿಜೆಪಿಗೆ ಎನ್ನುವುದನ್ನು ಮನಗಾಣಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಕೋಮುಗಲಭೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಗೃಹ ಸಚಿವರಿಗೆ ವಿಶೇಷ ಸೂಚನೆ ನೀಡಬಹುದು ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ರಾಜ್ಯ ವಿಧಾನಸಭೆಯ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ 20ಕ್ಕೂ ಹೆಚ್ಚು ಪಕ್ಷಗಳ ಇಂಡಿಯಾ ಎಂಬ ಒಕ್ಕೂಟ ರಚಿಸಿದೆ. ಈ ಕೂಟವನ್ನು ಹೊಸದಾಗಿ ಹಲವು ಪಕ್ಷಗಳು ಸೇರಿರುವುದು ಕಾಂಗ್ರೆಸ್ ಉತ್ಸಾಹವನು ಹೆಚ್ಚಿಸಿದೆ. ಇಡೀ ದಕ್ಷಿಣ ಭಾರತದಲ್ಲಿ 1000ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಿದ್ದು ಬಿಜೆಪಿಗೆ ಕರ್ನಾಟಕ ಮಾತ್ರ ಆಶಾಕಿರಣವಾಗಿದೆ. ಇಲ್ಲಿಯೂ ಕಮಲ ಪಡೆಯನ್ನು 25 ಸ್ಥಾನಗಳಿಂದ ಒಂದಂಕಿಗೆ ಇಳಿಸಬೇಕು ಎನ್ನುವುದು ಕಾಂಗ್ರೆಸ್ ತಂತ್ರವಾಗಿದ್ದು, ಸಕ್ಸಸ್ ಆಗಲಿದೆಯೇ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ.