Kalaburagi News: ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್ಪಿನ್ ರುದ್ರಗೌಡ ಪಾಟೀಲ್ಗೆ ರಾಜಾತಿಥ್ಯ ಆರೋಪ; ತನಿಖೆಗೆ ಪ್ರಿಯಾಂಕ್ ಖರ್ಗೆ ಆದೇಶ
Dec 20, 2023 10:10 PM IST
ಸಚಿವ ಪ್ರಿಯಾಂಕ್ ಖರ್ಗೆ (ಎಡಚಿತ್ರ), ಪಿಎಸ್ಐ ಮತ್ತು ಕೆಇಎ ಪರೀಕ್ಷೆ ಅಕ್ರಮದ ಮುಖ್ಯ ಆರೋಪಿ ರುದ್ರಗೌಡ ಪಾಟೀಲ (ಬಲಚಿತ್ರ)
ಪರೀಕ್ಷೆ ಅಕ್ರಮದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ಗೆ ಜೈಲಿನಲ್ಲಿ ರಾಜಾತಿಥ್ಯ ನಿಷೇಧಿತ ವಸ್ತುಗಳ ಸರಬರಾಜು ಪ್ರಕರಣ ಬೆಳಕಿಗೆ ಬಂದಿದೆ. ಒಂದೇ ದಿನದಲ್ಲಿ ತನಿಖಾ ವರದಿ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ, ಆರ್.ಡಿ.ಪಾಟೀಲ್ ಸೇರಿ 12 ಜನರ ವಿರುದ್ಧ ಕೋಕಾ ಕಾಯ್ದೆ ಪ್ರಕರಣ ದಾಖಲಾಗಿದೆ.
ಕಲಬುರಗಿ: ಪಿಎಸ್ಐ ಮತ್ತು ಕೆಇಎ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಆಗಿರುವ ರುದ್ರಗೌಡ ಪಾಟೀಲ್ ಸೇರಿ ಇತರ ಕೊಲೆ, ಸುಲಿಗೆ, ದರೋಡೆಕೋರರಿಗೆ ನಗರದ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇನ್ನೊಂದೆಡೆ ಕೆಇಎ ಪರೀಕ್ಷೆ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಪ್ರಕರಣ ಬಿಗಿಗೊಳಿಸಲು ಕೋಕಾ ಕಾಯ್ದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಆರ್ ಡಿ ಪಾಟೀಲ್, ಬಚ್ಚನ್, ಜಾನ್ ಎಂಬ ಕುಖ್ಯಾತರಿಂದ ಹಿಡಿದು 800ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಇವರೆಲ್ಲರಿಗೂ ಲಿಕ್ಕರ್, ಗುಟ್ಕಾ, ಸಿಗರೇಟ್ ಅಷ್ಟೇ ಅಲ್ಲ ಗಾಂಜಾ ಕೂಡ ಸರಬರಾಜು ಆಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಜೈಲಿನ ಭದ್ರತಾ ಸಿಬ್ಬಂದಿಯ ಅನುಮತಿ ಇಲ್ಲದೆ ಒಂದು ವಸ್ತು ಕೂಡ ಒಳಗಡೆ ಹೋಗುವುದಿಲ್ಲ. ಆದರೆ, ಇಲ್ಲಿ ನಿಷೇಧಿತ ವಸ್ತುಗಳು ಸರಬರಾಜು ಆಗುತ್ತಿರುವುದಕ್ಕೆ ಸಿಬ್ಬಂದಿಯೇ ಹಣದಾಸೆಗೆ ಒಳಗಾಗಿ ಷಾಮೀಲಾಗಿದ್ದಾರೆ ಎಂಬ ಆರೋಪ ಕೇಳಿದೆ.
ತನಿಖಾ ವರದಿ ಸಲ್ಲಿಕೆಗೆ ಸೂಚನೆ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ವಿವಿಧ ಪ್ರಕರಣದಲ್ಲಿ ಬಂಧನಕ್ಕೊಳಗಾದವರಿಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಅರೋಪದ ಕುರಿತು ನಾಳೆಯೊಳಗೆ ಸಮಗ್ರ ವರದಿ ಸಲ್ಲಿಸವಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನ ಕುಮಾರ ಮತ್ತು ಎಸ್.ಪಿ. ಅಡ್ಡೂರು ಶ್ರೀನುವಾಸಲು ಅವರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಖಡಕ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅರಂಭವಾಗುತ್ತಿದ್ದಂತೆ, ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ ಅವರನ್ನು ಜೈಲಿನಲ್ಲಿ ಏನು ನಡೀತಾ ಇದೆ. ಅಕ್ರಮವಾಗಿ ಗುಟಕಾ ಪೂರೈಸಲಾಗುತ್ತಿದೆಯಂತೆ ಎಂದು ಪ್ರಶ್ನಿಸಿದರು. ಇದೆಲ್ಲದಕ್ಕು ಕಡಿವಾಣ ಹಾಕಬೇಕು. ಯಾವುದೇ ಅಕ್ರಮ ಚಟುವಟಿಕೆಗಳಿಗೆ ಜೈಲು ಅಡ್ಡಾ ಆಗಬಾರದು. ಅಲ್ಲಿನ ಸಿಸಿಟಿವಿ ಫೂಟೇಜ್ ತರಿಸಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಕೆಇಎ ಪರೀಕ್ಷೆ ಅಕ್ರಮದ 12 ಆರೋಪಿಗಳ ವಿರುದ್ಧ ಕೋಕಾ ಕೇಸ್: ಕೆಇಎ ಪರೀಕ್ಷೆ ಅಕ್ರಮದ ಕಿಂಗ್ ಪಿನ್ ಅಗಿರುವ ಆರ್ .ಡಿ.ಪಾಟೀಲ್ ಸೇರಿದಂತೆ 12 ಜನ ಅರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪರೀಕ್ಷಾ ಅಕ್ರಮದ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ಕೈಗೆತ್ತಿಕೊಂಡಿದ್ದು, ಈ ಪ್ರಕರಣದಲ್ಲಿ ಬಂಧಿಸಿದ್ದರೂ ಸಹ ಪದೇ ಪದೇ ಜಾಮೀನು ಮೇಲೆ ಹೊರಗಡೆ ಬರುತ್ತಿರುವ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರು ಇದೀಗ ಕೋಕಾ ಕಾಯ್ದೆ ಅಸ್ತ್ರ ಬಳಸಿಕೊಂಡು ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪ್ರಮುಖ ಆರೋಪಿ ಆರ್ ಡಿ. ಪಾಟೀಲ್, ಸಂತೋಷ್ ಕೊಟ್ಟಳ್ಳಿ, ಶಿವಕುಮಾರ್, ಸಿದ್ರಾಮ ಕೋಳಿ, ರವಿಕುಮಾರ್, ರುದ್ರಗೌಡ, ರಹೀಂ ಚೌದರಿ, ಸಾಗರ್, ಬಸಣ್ಣ ಪೂಜಾರಿ, ಚಂದ್ರಕಾಂತ್ ಬುರಕಲ್, ಶಶಿಧರ್ ಜಮಾದಾರ್, ಬಸವರಾಜ ಎಳವಾದ ವಿರುದ್ಧ ಕೋಕಾ ಕಾಯ್ದೆ ಜಾರಿ ಮಾಡಲಾಗಿದೆ. ಈ ಮೂಲಕ ಸಿಐಡಿ ಈಗ ಆರ್.ಡಿ.ಪಾಟೀಲ್ ವಿರುದ್ಧದ ಕೇಸ್ಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.
ಸರ್ಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಗಳ ನಕಲಿ ಕೇಸ್ನಲ್ಲಿ ಸಿಕ್ಕಿಬಿದ್ದಿರುವ ಆರ್.ಡಿ.ಪಾಟೀಲ್ ವಿರುದ್ಧ ಇರುವ ಎಲ್ಲಾ ಕೇಸ್ ಗಳ ಮಾಹಿತಿ ಸಂಗ್ರಹಿಸಿ ಕೋಕಾ ಕಾಯಿದೆ ಜಾರಿ ಮಾಡಲಾಗಿದೆ. ಗುಂಪು ಕಟ್ಟಿಕೊಂಡು ಪದೇ ಪದೇ ಒಂದೇ ರೀತಿಯ ಅಪರಾಧಗಳನ್ನು ಮಾಡುವವರ ವಿರುದ್ಧ ಕೋಕಾ ಕಾಯಿದೆ ಜಾರಿ ಮಾಡಲಾಗುತ್ತದೆ. ಕೋಕಾ ಜಾರಿಯಿಂದಾಗಿ ಆರೋಪಿಗೆ ಜಾಮೀನು ಸಿಗುವುದು ಮತ್ತಷ್ಟು ಕಷ್ಟವಾಗಿದೆ. ಜೈಲಿನಿಂದ ಹೊರಬಂದು ಪದೇ ಪದೇ ಪರೀಕ್ಷಾ ಅಕ್ರಮಗಳಲ್ಲಿ ಈ ಆರೋಪಿ ಅರ್. ಡಿ.ಪಾಟೀಲ್ ಭಾಗಿಯಾಗಿದ್ದನು.
ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಜೈಲಿಗೆ ಹೋಗಿ ಬಂದಿದ್ದ. ನಂತರವೂ ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಯಲ್ಲಿ ಅಕ್ರಮ ಎಸಗಿ ಆರ್.ಡಿ.ಪಾಟೀಲ್ ಮತ್ತೆ ಜೈಲು ಸೇರಿದ್ದಾನೆ. ಹೀಗಾಗಿ ಈ ಬಾರಿ ಯಾವುದೇ ಕಾರಣಕ್ಕೂ ಜೈಲಿನಿಂದ ಬಿಡುಗಡೆ ಆಗಬಾರದು ಎಂಬ ಕಾರಣಕ್ಕೆ ಸಿಐಡಿ ಕೋಕಾ ಜಾರಿ ಮಾಡಿದೆ. ಈ ಬಗ್ಗೆ ವರದಿ ಸಿದ್ದಗೊಳಿಸಿ ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)