Cabinet Decisions: ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆ ರದ್ದು; ಸಿದ್ದರಾಮಯ್ಯ ಸಚಿವ ಸಂಪುಟದ ಇತರೆ ತೀರ್ಮಾನಗಳ ವಿವರ
Jun 15, 2023 05:32 PM IST
ಕಾನೂನು ಸಚಿವ ಎಚ್.ಕೆ.ಪಾಟೀಲ್
Cabinet Decisions: ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಿಸಿ ಜಾರಿಗೆ ತಂದಿದ್ದ ಪಠ್ಯಪುಸ್ತಕ, ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಇಂದು (ಜೂ.15) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ (BJP Govt) ಜಾರಿಗೊಳಿಸಿದ್ದ ಮತಾಂತರ ನಿಷೇಧ ಕಾಯ್ದೆ (Anti Conversion Law) ಮತ್ತು ಎಪಿಎಂಸಿ ಕಾಯ್ದೆ (APMC Act) ಯನ್ನು ರದ್ದುಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ (Minister H K Patil) ಗುರುವಾರ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಚಿವ ಎಚ್.ಕೆ.ಪಾಟೀಲ್, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ರದ್ದುಪಡಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಘೋಷಿಸಿದರು.
ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯಹಕ್ಕು ಸಂರಕ್ಷಣ ವಿಧೇಯಕ-2023ಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ಕಾಯ್ದೆಗೆ ಹಿಂದಿನ ಸರ್ಕಾರ 2020-22ರಲ್ಲಿ ತಂದಿದ್ದ ತಿದ್ದುಪಡಿಯನ್ನು ರದ್ದು ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಚಾಲ್ತಿಯಲ್ಲಿರುವ ಎಪಿಎಂಸಿ ಕಾಯ್ದೆ ರೈತ ಪರವಾಗಿ ಇಲ್ಲದ ಕಾರಣ ರದ್ದು
ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗಾಗಲಿ, ವರ್ತಕರಿಗಾಗಲಿ ಅನುಕೂಲವಾಗಲಿಲ್ಲ. ರೈತರಿಗೂ ಅವರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿಲ್ಲ. ಎಪಿಎಂಸಿ ಆದಾಯ ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿದೆ. ಹೀಗಾಗಿ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ಕಾಯ್ದೆಯನ್ನು ರದ್ದು ಪಡಿಸಿ ಮೂಲ ಕಾಯ್ದೆಯನ್ನು ಸುಧಾರಿತ ರೂಪದಲ್ಲಿ ತಿದ್ದುಪಡಿ ತಂದು ಜುಲೈ ಅಧವೇಶನದಲ್ಲಿ ಮಂಡಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ್ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುತ್ತ ತಿಳಿಸಿದರು.
ಸುಧಾರಿತ ಎಪಿಎಂಸಿ ಕಾಯ್ದೆಯಲ್ಲಿ ನಾಲ್ಕು ಪ್ರಮುಖ ಬದಲಾವಣೆ ಮಾಡಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ, ಮಾರುಕಟ್ಟೆಯ ಪ್ರಾಂಗಣದಲ್ಲಿ ನಡೆಯುವ ವಹಿವಾಟಿಗೆ ವಿಧಿಸುವ ಶುಲ್ಕವನ್ನೇ ಎಪಿಎಂಸಿ ವ್ಯಾಪ್ತಿಯಲ್ಲಿ ನಡೆಯುವ ವಹಿವಾಟಿಗೂ ಅನ್ವಯವಾಗಲಿದೆ ಎಂದು ಸಚಿವ ಶಿವಾನಂದ ಪಾಟೀಲ್ ವಿವರಿಸಿದರು.
ಸಾರಿಗೆ ನಿಗಮಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳ ಅಂಗೀಕಾರ
ಸಾರಿಗೆ ನಿಗಮಗಳಿಂದ ವಾಹನ ತೆರಿಗೆ ಬಾಕಿ 79.85 ಕೋಟಿ ರೂಪಾಯಿ ಇದ್ದು, ಅದಕ್ಕೆ ವಿನಾಯಿತಿ ನೀಡಿದ ಸಚಿವ ಸಂಪುಟ. ಈ ಹಣವನ್ನು ಸರ್ಕಾರವೇ ತುಂಬಿಕೊಡಲಿದೆ. ಅಲ್ಲದೆ, 10 ಡಬ್ಬಲ್ ಡೆಕ್ಕರ್ ಬಸ್ ಖರೀದಿಗೆ 28.13 ಕೋಟಿ ರೂ. ನೀಡಲು ಒಪ್ಪಿಗೆ ಸೂಚಿಸಿದೆ. ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನವನ್ನು ಶೇ.15ರಷ್ಟು ಹೆಚ್ಚಿಸಲು ಘಟನೋತ್ತರ ಅನುಮೋದನೆಯನ್ನೂ ಸಚಿವ ಸಂಪುಟ ನೀಡಿದೆ.
ಸಚಿವ ಸಂಪುಟದ ಇತರೆ ತೀರ್ಮಾನಗಳು
- ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಖಾಲಿ ಇರುವ ಮೂರು ಸದಸ್ಯರ ಹುದ್ದೆಗಳನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಅನುಮತಿ ನೀಡಿದ್ದಾರೆ.
- ರಾಜ್ಯ ಹೈಕೋರ್ಟ್ನ ಆಡಳಿತ ವೆಚ್ಚ ಮಿತಿಗೆ ಸಂಬಂಧಿಸಿ ಹಣಕಾಸು ಅಧಿಕಾರ ಹೆಚ್ಚಳ ಮಾಡಲು ಮತ್ತು ಹೆಚ್ಚಿನ ಅಧಿಕಾರಿಗಳ ನಿಯೋಜನೆಗೆ ಸಂಪುಟ ಒಪ್ಪಿಗೆ.
- ಡಾ.ಮೈತ್ರಿ ಎಂಬುವವರು ಕೆಎಎಸ್ ಜೂನಿಯರ್ ಹುದ್ದೆಗೆ ಮನವಿ ಮಾಡಿದ್ದು, 2011ರ ಕೆಎಎಸ್ ನೇಮಕಾತಿಗೆ ಸಂಬಂಧಿಸಿ ಕಾನೂನು ಇಲಾಖೆಗೆ ವರ್ಗಾವಣೆ ಮಾಡಲು ಒಪ್ಪಿಗೆ.
- ಬೆಂಗಳೂರು ಟೆಕ್ ಸಮ್ಮಿಟ್ ನಡೆಸಲು 17.9 ಕೋಟಿ ರೂಪಾಯಿ ಅನುದಾನ ನೀಡುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ
- ವೃಷಭಾವತಿ ನದಿಯ ನೀರನ್ನು 70 ಕೆರೆಗಳಿಗೆ ತುಂಬಿಸುವ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟದ ಸಮ್ಮತಿ. 1081 ಕೋಟಿ ರೂ. ವೆಚ್ಚದಲ್ಲಿ 243 ಎಂಎಲ್ಡಿ ನೀರನ್ನು ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ ಕೆರೆಗಳ ಭರ್ತಿ ಮಾಡಲು ರೂಪಿಸಿದ ಯೋಜನೆಗೂ ಅನುಮೋದನೆ.
- ಸಂಸದೀಯ ವ್ಯವಹಾರಗಳ ಇಲಾಖೆಯ ಅನರ್ಹತೆ ಕಾಯ್ದೆ ತಿದ್ದುಪಡಿ ಮಾಡಲು ಒಪ್ಪಿಗೆ
- ನೈಸರ್ಗಿಕ ವಿಕೋಪ ನಿರ್ವಹಣೆ ಸಂಬಂಧ ನಿರ್ದೇಶನ ನೀಡಲು ಸಚಿವ ಸಂಪುಟ ಉಪ ಸಮಿತಿ ರಚನೆಗೆ ಅನುಮತಿ