Basavaraj Bommai: ಕರ್ನಾಟಕ ಚುನಾವಣೆಯ ಸೋಲು ಪ್ರಧಾನಿ ಮೋದಿಯವರ ಸೋಲಲ್ಲ, ಅವರು ಕೇವಲ ಪ್ರಚಾರಕ್ಕೆ ಬಂದಿದ್ದರು; ಹಂಗಾಮಿ ಸಿಎಂ ಬೊಮ್ಮಾಯಿ
May 14, 2023 05:41 PM IST
ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇಡೀ ದೇಶದಲ್ಲಿ ಕಾಂಗ್ರೆಸ್ ಸೋತಿದೆ. ಕರ್ನಾಟಕದಲ್ಲಿನ ಸೋಲು ಪ್ರಧಾನಿಯವರ ಅವರ ಸೋಲಲ್ಲ. ಅವರು ಪ್ರಚಾರಕ್ಕೆ ಬಂದಿದ್ದರಷ್ಟೇ ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election) ಭಾರತೀಯ ಜನತಾ ಪಾರ್ಟಿ (Bharatiya Janata Party) ಹೀನಾಯ ಸೋಲು ಕಂಡಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕೇವಲ 66ರಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi), ಚುನಾವಣಾ ಚಾಣಕ್ಯ ಹಾಗೂ ಕೇಂದ್ರ ಗೃಹ ಅಮಿತ್ ಶಾ (Amit Shah), ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಸೇರಿದಂತೆ ಘಟಾನುಘಟಿಗಳೇ ಬಂದು ಕರ್ನಾಟಕದಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ, ಸಮಾರಂಭಗಳ ಮೂಲಕ ಅಬ್ಬರದ ಪ್ರಚಾರ ಮಾಡಿದ್ದರು. ಆದರೆ ಈ ನಾಯಕರು ರಾಜ್ಯದಲ್ಲಿ ಕಮಲ ಅರಳಿಸುವಲ್ಲಿ ವಿಫಲವಾಗಿದ್ದಾರೆ.
ಕರ್ನಾಟಕ ಚುನಾವಣಾ ಫಲಿತಾಂಶದ (Karnataka Election Result) ಬಗ್ಗೆ ಇಂದು (ಮೇ 14, ಭಾನುವಾರ) ಮಾಧ್ಯಮಗಳೊಂದಿಗೆ ಮಾತನಾಡಿರುವ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಇದು ಮೋದಿಯವರ ಸೋಲಲ್ಲ. ಮೋದಿಯವರು ಕೇವಲ ಇಲ್ಲಿ ಪ್ರಚಾರಕ್ಕೆ ಬಂದಿದ್ದರು ಎಂದು ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಎಲ್ಲರು ಸೇರಿ, ಬಹಳ ದೀರ್ಘವಾಗಿ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಫಲಿತಾಂಶದ ಬಗ್ಗೆ ಬೇರೆ ಬೇರೆ ಕಡೆಯಿಂದ ಇನ್ನಷ್ಟು ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ. ಒಟ್ಟಾರೆ ಫಲಿತಾಂಶದ ಬಗ್ಗೆ ಹಾಗೂ ವಿಧಾನಸಭೆ ಕ್ಷೇತ್ರವಾರು ಪರಾಮರ್ಶೆ ಮಾಡಬೇಕಿದೆ ಎಂದಿದ್ದಾರೆ.
ನಮ್ಮ ಬಿಜೆಪಿ ಅಧ್ಯಕ್ಷರು ಇನ್ನು ಮೂರು ನಾಲ್ಕು ದಿನಗಳೊಳಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುತ್ತಿದ್ದಾರೆ. ಮರುದಿನ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದು ಚರ್ಚೆ ಮಾಡಲಿದ್ದು, ಅಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ, ಯಾವ ರೀತಿ ಒಗ್ಗಟ್ಡಾಗಿ ಪಕ್ಷ ಬಲವರ್ಧನೆ ಮಾಡಬೇಕೆಂದು ಚರ್ಚೆ ಮಾಡುತ್ತೇವೆ. ನಮಗೆ ಪಕ್ಷ ಸಂಘಟನೆಗೆ ವಿಶ್ರಮ ಇರುವುದಿಲ್ಲ. ಲೋಕಸಭೆ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ
ಬಿಜೆಪಿಯ ಸೋಲು ಮೋದಿಯ ಸೋಲು ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಹಂಗಾಮಿ ಸಿಎಂ, ಕಾಂಗ್ರೆಸ್ನ ನಾಯಕತ್ವ ಇಡೀ ದೇಶದಲ್ಲಿ ಸೋತಿದೆ. ಮೋದಿಯವರು ರಾಷ್ಟ್ರೀಯ ನಾಯಕರು. ಇಲ್ಲಿ ಮೋದಿಯವರು ಪ್ರಚಾರಕ್ಕಷ್ಟೇ ಬಂದಿದ್ದರು. ಇದು ಅವರ ಸೋಲು ಅನ್ನುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರಿಗೂ ಶುಭಾಶಯ ಕೋರಿದ ಬೊಮ್ಮಾಯಿಯವರು, ನಗುತ್ತಲೇ ಅವರಿಬ್ಬರಿಗೂ ಆಲ್ ದಿ ಬೆಸ್ಟ್ ಎಂದಿದ್ದಾರೆ.
ಈ ವೇಳೆ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ಭರವಸೆಗಳ ಜಾರಿ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಮೊದಲು ಕಾಂಗ್ರೆಸ್ನವರು ಸರ್ಕಾರ ಮಾಡಲಿ. ಆ ನಂತರ ಕ್ಯಾಬಿನೆಟ್ ಕರೆದು ಏನು ಮಾಡುತ್ತಾರೆ ಎಂದು ನೋಡೋಣ ಎಂದು ಹೇಳಿದ್ದಾರೆ.