ಕನ್ನಡವೇ ಬಾರದ ಅಂಚೆ ಕಚೇರಿ ಸಿಬ್ಬಂದಿಗೆ ವಿಳಾಸ ಅರ್ಥ ಮಾಡಿಸುವುದು ಹೇಗೆ: ಪೋಸ್ಟ್ ಆಫೀಸ್ನಲ್ಲೂ ಕನ್ನಡಿಗರ ಕೊರತೆ; ಮಧು ವೈಎನ್ ಬರಹ
Feb 16, 2024 11:02 PM IST
ಕನ್ನಡವೇ ಬಾರದ ಅಂಚೆ ಕಚೇರಿ ಸಿಬ್ಬಂದಿಗೆ ವಿಳಾಸ ಅರ್ಥ ಮಾಡಿಸುವುದು ಹೇಗೆ: ಪೋಸ್ಟ್ ಆಫೀಸ್ನಲ್ಲೂ ಕನ್ನಡಿಗರ ಕೊರತೆ; ಮಧು ವೈಎನ್ ಬರಹ
- ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿಯವರ ಹಾವಳಿ ಇಂದು ನಿನ್ನೆಯದಲ್ಲ. ಬಹುತೇಕ ಬ್ಯಾಂಕ್ಗಳಲ್ಲಿ ಹಿಂದಿಯವರಿದ್ದು, ವ್ಯವಹರಿಸುವುದು ಕಷ್ಟಸಾಧ್ಯವಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಪೋಸ್ಟ್ ಆಫೀಸ್ಗಳಲ್ಲೂ ಕನ್ನಡಿಗರ ಕೊರತೆ ಕಾಡುತ್ತಿದೆ. ಈ ಕುರಿತು ಲೇಖಕ ಮಧು ವೈಎನ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ವ್ಯವಹಾರಿಕ ಭಾಷೆ ಕನ್ನಡ. ಆದರೆ ಇಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಮಾತನಾಡುವವರ ಸಂಖ್ಯೆ ಕಡಿಮೆ. ಇದಕ್ಕೆ ಕಾರಣ ಬಹುತೇಕರು ಉತ್ತರ ಭಾರತ ಮೂಲದವರಾಗಿರುತ್ತಾರೆ. ಅವರಿಗೆ ಕನ್ನಡ ಓದುವುದು, ಬರೆಯುವುದು, ಮಾತನಾಡುವುದು ಯಾವುದೂ ತಿಳಿದಿರುವುದಿಲ್ಲ. ಇದರಿಂದ ನಾವು ಪಾಡು ಪಡಬೇಕಾಗುತ್ತದೆ. ಈಗಾಗಲೇ ಹಲವರು ಕನ್ನಡ ವ್ಯವಹಾರಿಕ ಭಾಷೆಯಾದ ಕಾರಣ ಕನ್ನಡ ಕಲಿತು ಮಾತನಾಡಬೇಕು ಎಂಬ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರೂ ಕೆಲವೆಡೆ ಇನ್ನೂ ಕನ್ನಡ ಮಾತನಾಡುವವರು ಸಿಗುತ್ತಿಲ್ಲ. ಬ್ಯಾಂಕ್ ಆಯ್ತು, ಈಗ ಪೋಸ್ಟ್ ಆಫೀಸ್ನಲ್ಲೂ ಹಿಂದಿಯವರ ಹಾವಳಿ ಶುರುವಾಗಿದೆ. ಈ ಬಗ್ಗೆ ಲೇಖಕ ಮಧು ವೈಎನ್ ಫೇಸ್ಬುಕ್ನಲ್ಲಿ ಪೋಸ್ಟ್ವೊಂದನ್ನು ಪ್ರಕಟಿಸಿದ್ದಾರೆ.
ಮಧು ವೈಎನ್ ಪೋಸ್ಟ್
ಮೊನ್ನೆ ತನಕ ಪೋಸ್ಟಾಫೀಸಿನಲ್ಲಿ ಕನ್ನಡದವರು ಇದ್ದರು. ಇಂದು ಹಿಂದಿ ಹುಡುಗ ಬಂದು ಕೂತಿದ್ದಾನೆ. ಟ್ರೈನಿ ಬೇರೆ. ಕೆಲವು ಓದುಗರು ಕನ್ನಡದಲ್ಲಿ ವಿಳಾಸ ಹಂಚಿಕೊಂಡಿದ್ದರು, ಅದನ್ನು ಹಾಗೇ ಬರ್ಕೊಂಡು ಹೋಗಿದ್ದೀನಿ. ಆತ ಪಕ್ಕದ ಕನ್ನಡ ಸಹೋದ್ಯೋಗಿಯಿಂದ ಓದಿಸಿ ಅರ್ಥ ಮಾಡಿಕೊಳ್ಳಬೇಕು. ಕೆಲವನ್ನು ಇಂಗ್ಲೀಷಿನಲ್ಲಿ ಬರೆದಿದ್ದೇನೆ. ಅದೂ ಸಹ ಆತನಿಗೆ ಅರ್ಥವಾಗುತ್ತಿಲ್ಲ. ಯಾಕಂದರೆ ನಮ್ಮ ರಾಜ್ಯದ ಊರುಗಳ ಹೆಸರು ಉಚ್ಚಾರಣೆ ಆತನಿಗೆ ಪರಿಚಯವಿಲ್ಲ. ಇದೇನು ಇದೇನು ಅಂತ ನನ್ನೇ ಕೇಳ್ತಾನೆ ಪ್ರತಿಯೊಂದಕ್ಕೂ. ಕನ್ನಡದಲ್ಲಿ ವ್ಯವಹಾರ ಪಕ್ಷಗಳ, ಸಿದ್ಧಾಂತಗಳ ನಡುವಿನ ಘರ್ಷಣೆಯಲ್ಲ. ದೈನಂದಿನ ಬದುಕಿನ ಅಗತ್ಯ, ಬೇಡಿಕೆ.
ಅವರ ಈ ಪೋಸ್ಟ್ಗೆ ಹಲವರು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಕಾಮೆಂಟ್ನಲ್ಲಿ ಹಲವರು ಬ್ಯಾಂಕ್ಗಳಲ್ಲಿ ಕನ್ನಡ ಮಾತಾನಾಡದೇ ಇರುವ ಅಧಿಕಾರಿಗಳ ಬಗ್ಗೆ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಧು ಅವರ ಪೋಸ್ಟ್ಗೆ ಬಂದ ಕಾಮೆಂಟ್ಗಳು
ವೆಂಕಟರಾಜು ಕೃಷ್ಣಮೂರ್ತಿ ಅವರ ಕಾಮೆಂಟ್ ಹೀಗಿದೆ: ʼನಮ್ಮೂರಿನ ಮುಖ್ಯ ಅಂಚೆ ಕಚೇರಿಗೂ ಬಿಹಾರದಿಂದ ಒಬ್ಬರು ಬಂದಿದ್ದಾರೆ. ಕೇಂದ್ರ ಸರಕಾರದ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಅಧಿಕಾರಿಗಳು ಈ ಕುಚೇಷ್ಟೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕೊಳ್ಳೇಗಾಲದ ಎಸ್. ಬಿ.ಐ. ನಲ್ಲಿ ಹಿರಿಯ ಅಧಿಕಾರಿ ತನಗೆ ಹಿಂದೀ ಬಿಟ್ಟು ಬೇರೆ ಏನೂ ಬರುವುದಿಲ್ಲ ಅಂತ ಗ್ರಾಹಕನಿಗೆ ಧಮಕಿ ಹಾಕಿ ಫಜೀತಿ ಆಗಿತ್ತು. ಒಂದು ವೇಳೆ ಉತ್ತರದ ಹಿಂದೀ ಬೆಲ್ಟ್ ನವರು ಆಯ್ಕೆ ಆಗಿ ಇಲ್ಲಿಗೆ ಪೋಸ್ಟ್ ಮಾಡಿದರೆ ಅವರನ್ನು ಸಾಧ್ಯವಾದಷ್ಟು ಕಲ್ಯಾಣ ಕರ್ನಾಟಕ ,ಕಿತ್ತೂರು ಕರ್ನಾಟಕ ಮತ್ತು ಸ್ವಲ್ಪ ಜನರನ್ನು ಹುಬಳಿ ಧಾರವಡ ಹಾವೇರಿ ಇತಗಯಾದಿಕಡೆ ಹಾಕಬಹುದು. ಇಲ್ಲಿ ನಮ್ಮ ಭಾಗಗಳಿಗಿಂತ ಹೆಚ್ಚು ಜನ ಹೆಚ್ಚು ಹಿಂದೀ ಗೊತ್ತು. ಆ ನಂತರ ಕನ್ನಡ ಕಲಿಯಲು ಒತ್ತಡ ಹಾಕಬೇಕು. ಹಿರಿಯ ಅಧಿಕಾರಿಗಳು ಅಷ್ಟೂ ಜವಾಬ್ದಾರಿ ವಹಿಸದಿದ್ದರೆ ಹೇಗೇ ? ಎಂದು ಅವರು ಪ್ರಶ್ನಿಸಿದ್ದಾರೆ.
ವಸಂತ ಶೆಟ್ಟಿ ಅವರು ʼನಾನು ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಜಿ.ಪಿ.ಒ ದ ರಾಜ್ಯೋತ್ಸವಕ್ಕೆ ಅತಿಥಿಯಾಗಿ ಹೋಗಿದ್ದೆ. ಆಗ ಅಲ್ಲಿನ ಕೆಲ ಹಿರಿಯ ಸಿಬ್ಬಂದಿಗಳು ಪರೀಕ್ಷೆಯಲ್ಲಿ ಕನ್ನಡವಿಲ್ಲದ ಕಾರಣ, ಹಿಂದಿ ಇರುವ ಕಾರಣ ಹಿಂದಿಯೊಂದೇ ಬಲ್ಲ, ಇಂಗ್ಲಿಶ್ ಕೂಡ ಓದಲು ಬಾರದವರು ಬಹುತೇಕ ಕೆಲಸಗಳನ್ನು ಪಡೆದುಕೊಂಡ ಬಗ್ಗೆ ಮತ್ತು ಅವರಿಗೆ ಕೆಲಸ ಕೊಟ್ಟು ಅವರ ಕೈಯಲ್ಲಿ ಕನ್ನಡ ಓದಲು, ಬರೆಯಲು ಬಾರದ ಕಾರಣ ಆಗುತ್ತಿರುವ ತೊಂದರೆಗಳ ಬಗ್ಗೆ ಅವಲತ್ತುಕೊಂಡಿದ್ದರು. ಆದರೆ ನಮ್ಮ ಜನರಿಗೆ ಬದುಕಿನ ವಿಷಯಗಳ ಬಗ್ಗೆ ಬಿಟ್ಟು ಇಮೋಶನಲ್ ವಿಷಯಗಳ ಹೆಂಡ ಚೆನ್ನಾಗಿ ಕುಡಿಸಿದ್ದಾರೆ. ಅವರೆಲ್ಲ ವಾಟ್ಸಾಪ್ ಬಾರಿನಲ್ಲಿ ಕುಡಿತಾ ಕೂತಿದ್ದಾರೆ. ಹೀಗಾಗಿ ಉದ್ಯೋಗಗಳು ಕೈ ಬಿಟ್ಟು ಹೋಗುತ್ತಿವೆ. ಎಲ್ಲ ಮಾಯಾ, ನಾಳೆ ನಾವೂ ಮಾಯ..ʼ ಎಂದು ಕಾಮೆಂಟ್ ಮಾಡಿದ್ದಾರೆ.
ʼಅಂಚೆಕಛೇರಿಯಲ್ಲಿ ಸ್ವತಃ ನಾನೇ ಕೆಲಸ ಮಾಡುತ್ತಿರುವದರಿಂದ ಈ ಅನುಭವ ಕಳೆದ ೩ ವರ್ಷಗಳಿಂದ ನನಗೂ ಆಗಿದೆ, 2014ರ ವರೆಗೂ ಅಂಚೆ ನೇಮಕಾತಿ ರಾಜ್ಯಮಟ್ಟದ ಸ್ಥಳೀಯ ಅಂಚೆ ಪ್ರಾಧಿಕಾರದಿಂದ ನಡೆಯುತ್ತಿತ್ತು, ಆಗ ಬಹುತೇಕ ರಾಜ್ಯದ ಅಭ್ಯರ್ಥಿಗಳೆ ಆಯ್ಕೆಯಾಗುತ್ತಿದ್ದರು 2015ರಿಂದ ಇದನ್ನು SSC CHSL ಗೂ, 2021ರಿಂದ SSC CGL ಗೂ ನೇಮಕಾತಿ ಪ್ರಾರಂಭವಾಗಿ ರಾಷ್ಟ್ರಮಟ್ಟದ ನೇಮಕಾತಿಯಾದಾಗಿನಿಂದ ಕನ್ನಡಿಗರೇ ಇಲ್ಲವಂತಾಗಿದೆ, ಬರುವ ಹೊರರಾಜ್ಯದ ಅಭ್ಯರ್ಥಿಗಳೋ ಕನ್ನಡ ಕಲಿಯೋದು ಬಿಡಿ ಕನ್ನಡಕ್ಕೆ ಕನಿಷ್ಟ ಗೌರವವೂ ನೀಡುವುದಿಲ್ಲ, ಒಂದು ವರ್ಷ ಹೆಂಗೋ ಕಳೆದು ಮತ್ತೆ ತಮ್ಮ ತವರು ರಾಜ್ಯಕ್ಕೆ ವರ್ಗಾವಣೆ ತೆಗೆದುಕೊಳ್ಳುತ್ತಾರೆ ಇಲ್ಲಿ ಮತ್ತೆ ಖಾಲಿ ಖಾಲಿ, ಮತ್ತೆ ಹೊಸ ನೇಮಕಾತಿಯಲ್ಲಿ ಹೊರ ರಾಜ್ಯದವರು ಇದೇ ಆಗಿದೆʼ ಎಂದು ಅನಂತ ಯಲಿಗಾರ ಕಾಮೆಂಟ್ ಮಾಡಿದ್ದಾರೆ.
ಅಕ್ಷತಾ ಕೀರ್ತಿ ಎನ್ನುವವರು ʼಪೋಸ್ಟ್ ಆಫೀಸ್ ಬ್ಯಾಂಕ್ ಎಲ್ಲಾ ಕಡೆಯು ಇದೆ ಹಣೆಬರಹ.. ಗ್ರಾಮೀಣ ಬ್ಯಾಂಕ್ ಅಲ್ಲಿ ಹಿಂದಿ ವಾಲಾಗಳೇ ಇದ್ದಾರೆ.. ಅದು ಗ್ರಾಮೀಣ ಬ್ಯಾಂಕ್ ರೈತಾಪಿ ವರ್ಗಕ್ಕಾಗಿ ಆರಂಭಿಸಿರುವ ಉದ್ದೇಶ.. ಅಲ್ಲಿ ವ್ಯವಹಾರ ಮಾಡುವವರು ಬಹುತೇಕ ಕನ್ನಡ ಒಂದೇ ತಿಳಿದಿರುವವರು ಆದರೆ ಅಲ್ಲಿ ಕೆಲಸ ಮಾಡುವವರು ಎಲ್ಲರೂ ಹಿಂದಿ ಅಥವಾ ತೆಲಗು ಭಾಷೆಯವರು.. ಅವರಿಗೆ ಕನ್ನಡ ಬರಲ್ಲ ನಮಗೆ ಇಂಗ್ಲೀಷ್ ಬರಲ್ಲ.. ಈ ಕಾರಣಕೆ ಎಷ್ಟೋ ಜನ ಬ್ಯಾಂಕ್ ವ್ಯವಹಾರಕ್ಕೆ ಹೋಗೋದೇ ಇಲ್ಲ.. ಅವರಿಗೆ ಒಬ್ಬರ ನೆರವು ಬೇಕೇ ಬೇಕು.. ಕರ್ನಾಟಕಕ್ಕೆ ಹೋಗಿ ಎಂದು ಕಳುಹಿಸುವ ಒಂದಿಷ್ಟು ಕೋಚಿಂಗ್ ಸೆಂಟರ್ ಇದೆ ಆಂಧ್ರಪ್ರದೇಶದಲ್ಲಿ, ನಂದ್ಯಳ್ಳ ಇಲ್ಲಿ ಮಕ್ಕಳಿಗೆ ಕರ್ನಾಟಕಕ್ಕೆ ಹೋಗುವುದಕ್ಕಾಗಿಯೇ ರೆಡಿ ಮಾಡುತ್ತಾರೆ.. ನನಗೆ ತಿಳಿದಿರುವುದು ಇದೊಂದೇ ಇಂತಹ ಅದೆಷ್ಟೋ ಕೋಚಿಂಗ್ ಸೆಂಟರ್ಗಳು ಇದ್ದಾವೆ.. ನಮ್ಮ ರಾಜ್ಯಕ್ಕೆ ಯಾಕೆ ಬರುತ್ತಾರೆ ಬೇರೆ ರಾಜ್ಯಕ್ಕೆ ಯಾಕೆ ಹೋಗಲ್ಲ ಎಂದರೆ ಇಲ್ಲಿರುವ ನಾವು ಹಾಗಿದ್ದೇವೆ.. ಕರ್ನಾಟಕದಲ್ಲಿ ಇಂಟರ್ವ್ಯೂ ತೆಗೆದುಕೊಳ್ಳಲು ಕನ್ನಡ ಬರುವ ಒಬ್ಬನಿದ್ದರೆ ಇನ್ನೂ 5 ಜನ ಆಂಧ್ರದವ್ರೆ ಇರುತ್ತಾರೆ ಇದು ನಾವು.. ಇಲ್ಲಿರುವವರು ಅವಿಧ್ಯಾವಂತರೋ ಅಥವಾ ಅಲ್ಲಿರುವವರು ಅತಿ ಹೆಚ್ಚು ವಿದ್ಯಾವಂತರೋ ಗೊತ್ತಿಲ್ಲʼ ಎಂದು ಕಾಮೆಂಟ್ ಮಾಡಿದ್ದಾರೆ.
ʼಇದೆಲ್ಲಕ್ಕಿಂತ ಹೊಟ್ಟೆ ಉರಿಸುವ ವಿಷಯ ಅಂದರೆ ಕನ್ನಡ ನೆಲದಲ್ಲಿ ಹುಟ್ಟಿ, ಇಲ್ಲಿನ ಅನ್ನ ನೀರು ಸೇವಿಸಿ, ಹಿಂದಿಯ ಪರ ವಹಿಸಿಕೊಂಡು ಬರುವ ಮೀರ್ ಸಾದಿಕ್ ಗಳ ಕನ್ನಡ ವಿರೋಧಿ ನೀತಿ. ಪಾಪ ಯಾರೋ ಗೆಳೆಯರು ಬೆಂಗಳೂರಿನ ತಮದಮ ಏರಿಯಾದಲ್ಲಿ ಹೇರ್ ಕಟಿಂಗ್ ಗೆ ಹೋದರೆ ಅಲ್ಲೂ ಹಿಂದಿಯವರಿದ್ದಾರೆ. ಕನ್ನಡ ಕಲಿಯಲ್ಲ. ನಾವು ಹೇಳಿದ್ದು ಅವರಿಗೆ ಅರ್ಥವಾಗಲ್ಲ ಅಂತ ಫೇಸ್ ಬುಕ್ ನಲ್ಲಿ ಅಲವತ್ತುಕೊಂಡಿದ್ದರು. ಅದಕ್ಕೆ ಇನ್ನೊಬ್ಬ ಕನ್ನಡಿಗ ಮಹಾಶಯರು, ನೀವೇ ಹಿಂದಿ ಕಲಿಯಿರಿ..ಒಂದು ಭಾಷೆ ಹೆಚ್ಚು ಕಲಿತಂತಾಗಲ್ಲವೇ ? ಅಂತ ಅಮೂಲ್ಯ ಸಲಹೆ ನೀಡಿದ್ದರುʼ ಎಂದು ಬನಶಂಕರ್ ಆರಾಧ್ಯ ಕಾಮೆಂಟ್ ಮಾಡಿದ್ದಾರೆ.
ಮಾಲತಿ ಭಟ್ ಅವರು ʼನಮ್ಮ ಕರ್ನಾಟಕದ ಜನ ಮಕ್ಕಳು ಸಿಇಟಿ, ನೀಟ್ ಬರೆಯಲಿ ಎಂದಷ್ಟೇ ಹಾರೈಸುತ್ತಾರೆ. ಇಲ್ಲದಿದ್ದಲ್ಲಿ ಎಂಬಿಎ, ಸಿಎ ಅಷ್ಟೇ....ಕೇಂದ್ರ ಸರ್ಕಾರದ ಉದ್ಯೋಗಗಳಿಗೆ ಅಪ್ಲೈ ಮಾಡೋದು ಗೊತ್ತಿಲ್ಲ. ಬ್ಯಾಂಕ್ ಉದ್ಯೋಗಿಯಾಗಿದ್ದ ನನ್ನ ಸಂಬಂಧಿ ಹೇಳಿದ ಪ್ರಕಾರ ಈಗ ಕನ್ನಡದ ಯಾವ ಹುಡುಗ/ ಹುಡುಗಿಯರು ಬ್ಯಾಂಕ್ ಜಾಬ್ ಗೆ ಹೋಗುತ್ತಿಲ್ಲ. ಬೆಂಗಳೂರಿನಲ್ಲಿರುವ ಬ್ಯಾಂಕ್ ಕೋಚಿಂಗ್ ಸೆಂಟರ್ ಗಳಿಗೆ ಉತ್ತರ ಭಾರತದವರು ಬಂದು ಕೋಚಿಂಗ್ ಪಡೆಯುತ್ತಾರಂತೆ. ಕೋಚಿಂಗ್ ಸೆಂಟರ್ ನವರು ಅವರಿಗೆಲ್ಲ ಇಲ್ಲಿಯ ಆಧಾರ್ ಕಾರ್ಡ್ ಮಾಡಿಸಿಕೊಟ್ಟು ಕರ್ನಾಟಕ ಕೋಟಾದಲ್ಲಿ ಪರೀಕ್ಷೆಗೆ ಕೂರಿಸುತ್ತಾರಂತೆ....ಹಾಗೆ ನಮ್ಮ ಬ್ಯಾಂಕ್ ಗಳಲ್ಲಿ ಉತ್ತರ ಭಾರತೀಯರು ತುಂಬಿಕೊಂಡಿದ್ದಾರೆ. ಮೊದಲೆಲ್ಲ ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಗಳಲ್ಲಿ ಮಂಗಳೂರು, ಉಡುಪಿಯವರು ಹೆಚ್ಚಿರುತ್ತಿದ್ದರು. ಈಗ ಎಲ್ಲ ಬ್ಯಾಂಕ್ ಗಳು ವಿಲೀನವಾಗಿ ಕೂತಿವೆ...ʼ ಎಂದು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಮೆಂಟ್ ಆಧಾರದ ಮೇಲೆ ಮಧು ಅವರ ಇನ್ನೊಂದು ಪೋಸ್ಟ್ ಹೀಗಿದೆ
ಇಲ್ಲಿನ ಇಷ್ಟೂ ಕಮೆಂಟುಗಳನ್ನು ಗಮನಿಸಿದಾಗ ಬೇಸರವಷ್ಟೇ ಅಲ್ಲ, ಹೊಟ್ಟೆ ಉರಿಯುತ್ತದೆ. ಸಿಟ್ಟು ಬರುತ್ತದೆ. ಒಂದು ಕಡೆ ನಮ್ಮದೇ ಜನರಿಗೆ ಸರ್ಕಾರಿ ಉದ್ಯೋಗಗಳ ನಷ್ಟ. ಅದರೊಂದಿಗೆ ಹೊರಗಿಂದ ಬಂದವರಿಗೆ ನಮ್ಮ ಕೆಲಸ ಕಳೆದುಕೊಂಡು ನಾವೇ ಅವರಿಗೆ ಕೆಲಸ ಕಲಿಸಬೇಕಾದ ದರ್ದು. ಅವರಿಂದ ಸೇವೆ ಪಡೆಯಲು ನಾವೇ ಅವರ ಭಾಷೆ ಕಲಿಯಬೇಕಾದ ಒತ್ತಡ(ಅದೂ ಯಾರು? ಹಳ್ಳಿ ಜನ!) ಮತ್ತು ಭಾಷೆ ಹೊಂದಾಣಿಕೆಯಿಲ್ಲದ ಕಾರಣ ಸೇವೆಗಳಲ್ಲಿ ಲೋಪ, ಪರದಾಟ. ಕೊನೆಗೆ ಅವರು ಇಲ್ಲೇ ಝಂಡಾ ಊರಿದಾಗ ನಾವೇ ಅಂಡು ಸರಿಸಿ ನೆಲ ನೀರು ಹಂಚಿಕೊಳ್ಳಬೇಕಾದ ಪರಿಸ್ಥಿತಿ. ಕೊನೆಗೆ ಇವರೇ ಸೇರಿಕೊಂಡು 'ಪೋಷಕರೆನಿಸಿಕೊಂಡು' ಕನ್ನಡ ಕಲಿಕೆಯ ವಿರುದ್ಧ ಸರ್ಕಾರದ ವಿರುದ್ಧ ಕೋರ್ಟಲ್ಲಿ ಕಂಪ್ಲೇಂಟು ಕೊಡುವರು!
ತಮ್ಮದೇ ನೆಲದಲ್ಲಿ ಎರಡನೇ ದರ್ಜೆ ಪ್ರಜೆಗಳಾಗಿ ಬದಲಾಗುವ ಬಗೆ ಇದು. ಇಷ್ಟು ಅನ್ಯಾಯವನ್ನು ನುಂಗಿಕೊಂಡಿರುವ ಕನ್ನಡಿಗರ ಬಗ್ಗೆ ಏನನ್ನಬೇಕೋ, ಇಷ್ಟೂ ಅರಿಯದೆ ತಮ್ಮ ಸುತ್ತಮುತ್ತಲಿನ ಜನರ ವಿರುದ್ಧವೇ ಸಮರ ಸಾರುವ 'ಕನ್ನಡಿಗರಿಗೆ' ಏನನ್ನಬೇಕೋ ತಿಳಿಯದು.