Karnataka News: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ, ಕರ್ನಾಟಕ ಮಸೂದೆ ಮಂಡನೆಯಾಗಿ 50 ವರ್ಷ ಪೂರ್ಣ
Jul 29, 2023 03:27 PM IST
ವಿಧಾನಸೌಧ
- Mysore state Renamed Karnataka: ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 1, 1973ರಂದು ನಾಮಕರಣ ಮಾಡಲಾಯಿತು. ಈ ನಾಮಕರಣಕ್ಕೆ ಪೂರ್ವಭಾವಿಯಾಗಿ ಜುಲೈ 27ರಂದು ಕರ್ನಾಟಕ ಮಸೂದೆ ಮಂಡಿಸಲಾಯಿತು. ಈ ಮಂಡನೆ ಮಸೂದೆಯಾಗಿ 50 ವರ್ಷ ಪೂರ್ಣಗೊಂಡಿದೆ.
ಬೆಂಗಳೂರು: ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನವೆಂಬರ್ 1, 1973ರಂದು ನಾಮಕರಣ ಮಾಡಲಾಗಿದ್ದು, ಇದಕ್ಕೂ ಮೊದಲು ಜುಲೈ ತಿಂಗಳಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡುವ ಮಸೂದೆಯನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ ಮಂಡಿಸಿದ ಈ ಮಸೂದೆಯನ್ನು ಎಲ್ಲಾ ವರ್ಗದವರು ಸ್ವಾಗತಿಸಿದರು ಎಂದು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ವರದಿಯಾಗಿತ್ತು. ಮಸೂದೆಯ ಬಗ್ಗೆ ನಡೆದ ಚರ್ಚೆಯಲ್ಲಿ ಎಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಮೂರು ಕೋಟಿ ಜನರ ಕನ್ನಡಿಗರ ಬಹುಕಾಲದ ಕನಸು ನನಸಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದರು ಎಂದು ಪ್ರಜಾವಾಣಿ ಪತ್ರಿಕೆಯ 50 ವರ್ಷಗಳ ಹಿಂದಿನ ವರದಿಯಲ್ಲಿ ತಿಳಿಸಲಾಗಿದೆ.
ಗೃಹ ಖಾತೆ ರಾಜ್ಯ ಸಚಿವ ಕೆಸಿ ಪಂತ್ ಅವರು ಮೈಸೂರು ರಾಜ್ಯವನ್ನು ಕರ್ನಾಟಕವೆಂದು ಪುನರ್ನಾಮಕರಣ ಮಾಡುವ ಮಸೂದೆ ಮಂಡಿಸಿದರು. ಮೈಸೂರು ರಾಜ್ಯ ಪುನರ್ನಾಮಕರಣ ಮಸೂದೆಯು ಕಳೆದ ವರ್ಷ ಮೈಸೂರು ರಾಜ್ಯ ವಿಧಾನಮಂಡಲ ಸರ್ವಾನುಮತದಿಂದ ಅನುಮೋದಿಸಿದ ನಿರ್ಣಯದ ಆಧಾರದ ಮೇಲೆ ಮಂಡಿಸಲ್ಪಟ್ಟಿದೆ. ಮೈಸೂರು ರಾಜ್ಯದ ಹೆಸರು ಬದಲಾಯಿಸಲು ಭಾಷಾವಾರು ರಾಜ್ಯಗಳ ರಚನೆಯಾದ ನಂತರ 17 ವರ್ಷ ಕಾಲ ಬೇಕಾಯಿತು ಎಂದು 50 ವರ್ಷಗಳ ಹಿಂದಿನ ವರದಿ ತಿಳಿಸಿದೆ.
ಮೈಸೂರು ರಾಜ್ಯಕ್ಕೆ ಕರ್ನಾಟಕ ಹೆಸರು
ಕನ್ನಡ ನಾಡು ಏಕೀಕೃತಗೊಂಡ ಬಳಿಕವೂ ಕನ್ನಡ ನಾಡಿನ ಮೂಲ ಹೆಸರು ಮೈಸೂರು ರಾಜ್ಯ ಎಂದೇ ಇತ್ತು. ಹೆಸರು ಬದಲಾವಣೆ ಕುರಿತು ಗಂಭೀರ ಚರ್ಚೆಗಳು ಆ ಸಂದರ್ಭದಲ್ಲಿ ನಡೆಯಿತು. ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಪುನರ್ನಾಮಕರಣದ ಕುರಿತು ಚರ್ಚೆ ಆರಂಭವಾಗಿತ್ತು. ಇದು ವೀರೇಂದ್ರ ಪಾಟೀಲರ ಅವಧಿಯಲ್ಲೂ ಮುಂದುವರೆಯಿತು. ಶ್ರೀ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪುನರ್ನಾಮಕರಣ ಮಾಡಲಾಯಿತು.
ಕರ್ನಾಟಕಕ್ಕೆ ಮೈಸೂರು ಹೆಸರು ಬಂದದ್ದು ಯಾವಾಗ?
ವಿಶಾಲ ಮೈಸೂರು ರಾಜ್ಯಕ್ಕೆ ನವೆಂಬರ್ 1, 1973ರಂದು ಕರ್ನಾಟಕವೆಂದು ಪುನರ್ನಾಮಕರಣ ಮಾಡಲಾಯಿತು. ಕರ್ನಾಟಕ ಎಂಬ ಹೆಸರು ಹಳೆ ಮೈಸೂರು ಮಾತ್ರವಲ್ಲದೆ ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಸೂಚಿಸುತ್ತದೆ. ರಾಜ್ಯ ಏಕೀಕರಣ ಚಳವಳಿಯ ಸಂದರ್ಭದಲ್ಲಿ, ಆಲೂರು ವೆಂಕಟರಾಯರು ಇದಕ್ಕೆ ಚಾಲನೆ ನೀಡಿದರು. ಬಳಿಕ ಈ ಚಳವಳಿ ವರ್ಧನೆಯಾಯಿತು. ಅಂತಿಮವಾಗಿ ಕನ್ನಡ ನಾಡು ಉದಯವಾಯಿತು. ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಕನ್ನಡ ಪ್ರದೇಶ ಮಾತ್ರವಲ್ಲ, ಮಹಾರಾಷ್ಟ್ರವನ್ನು ಕರ್ನಾಟಕ ಅಥವಾ ಕನ್ನಡ ಪ್ರದೇಶ ಎಂದು ಕರೆಯಲಾಗುತ್ತಿತ್ತು.
ಕರ್ನಾಟಕ ಹೆಸರು ಸೂಚಿಸಿದ್ದು ಯಾರು?
ಸಾಹಿತಿ ಚದುರಂಗ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರು ಸೂಚಿಸಿದ್ದರು. ಆಲೂರು ವೆಂಕಟರಾಯರು ಬರೆದ ಕರ್ನಾಟಕ ಗಥ ವೈಭವ ಪುಸ್ತಕದ ಆಧಾರದಲ್ಲಿ ಕರ್ನಾಟಕ ಪದವನ್ನು ಆಯ್ಕೆ ಮಾಡಲಾಯಿತು. "ಕರ್ನಾಟಕದ ಬಗ್ಗೆ ತಮಿಳು ಗ್ರಂಥಗಳಲ್ಲಿ ಲಭ್ಯವಿರುವ ಕರುನಾಡ ಕರುನಾಡ ಕಮ್ಮಿತ್ತು ನಾಡ ಮುಂತಾದವುಗಳನ್ನು ಇತಿಹಾಸಕಾರರು ವಿವಿಧ ರೀತಿಯಲ್ಲಿ ಅರ್ಥೈಸಿದ್ದಾರೆ ಅವರ ಪ್ರಕಾರ ಕರ್ನಾಟಕ ಎಂಬ ಸಂಸ್ಕೃತರೂಪ ಕಣ್ಣ + ಕನ್ನಡ ಎಂಬ ಪದದಿಂದ ಬಂದಿದ್ದು ಕಣ್ಣ ಎಂಬ ಜನಾಂಗ ದ ನಾಡು ಅಥವಾ ಭೂಮಿಯೇ ಕನ್ನಾಡು ದಾರಾ ಬೇಂದ್ರೆ ಅವರ ಪ್ರಕಾರ ಕಣ್ಣರು ಮತ್ತು ನಾಟರುಕರಿ ಕ ಎಂಬ ಎರಡು ಜನಾಂಗಗಳ ಹೆಸರು ಕೂಡಿ ಕರ್ನಾಟಕ ಎಂದಾಗಿ ಅದರ ಸಂಸ್ಕೃತ ರೂಪವೇ ಕರ್ನಾಟಕವಾಯಿತು ಕರುನಾಡು=ಕರಿ+ನಾಡು ಎಂದರೆ ಕಪ್ಪು ಮಣ್ಣಿನ ನಾಡು ಎಂದು ಅರ್ಥವಾಗುತ್ತದೆ ಕರುನಾಡು ಎಂದರೆ ಕರು ನಾಡು ಕರು ಎಂದರೆ ಎತ್ತರದ ನಾಡು ಅಥವಾ ಭೂಮಿ ಕೆಲವು ವಿದ್ವಾಂಸರು ಕಮ್ಮಿತ್ತು ನಾಡು ಎಂದು ಕರೆದಿದ್ದಾರೆ ಅಂದರೆ ಸುವಾಸನೆಯುಕ್ತವಾದ ನಾಡು ಶ್ರೀಗಂಧದ ನಾಡು ಎಂದು ನಂಬಿದ್ದಾರೆ" ಎಂದು ಕೋರಾ ತಾಣದಲ್ಲಿ ಶಿಕ್ಷಕರೊಬ್ಬರು ಬರೆದಿದ್ದಾರೆ.