Karnataka Weather: ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಕಡೆ ಚದುರಿದ ಮಳೆ, ಉಳಿದೆಡೆ ಚಳಿ, ಒಣಹವೆ
Jan 10, 2024 06:30 AM IST
ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಕಡೆ ಚದುರಿದ ಮಳೆ, ಉಳಿದೆಡೆ ಚಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ವರದಿ ಹೇಳಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಇಂದು (ಜ.10) ವ್ಯಾಪಕವಾಗಿ ರಾತ್ರಿ ಮತ್ತು ಬೆಳಗ್ಗಿನ ಹೊತ್ತು ಚಳಿ ಮತ್ತು ಹಗಲು ಒಣಹವೆ ಮುಂದುವರಿಯಲಿದೆ. ಕೆಲವೆಡೆ ಬಾಗಶಃ ಮೋಡಕವಿದ ವಾತಾವರಣ ಇರಲಿದೆ. ನಾಲ್ಕು ಜಿಲ್ಲೆಗಳಲ್ಲಿ ಒಂದೆರಡು ಕಡೆ ಚದುರಿದ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಬಹುಪಾಲು ಜಿಲ್ಲೆಗಳ ಕೆಲವೆಡೆ ಕಳೆದ ಕೆಲವು ದಿನಗಳಿಂದ ಸಾಧಾರಣ ಅಥವಾ ಚದುರಿದ ಮಳೆಯಾಗಿತ್ತು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೂರು-ನಾಲ್ಕು ದಿನಗಳಿಂದ ಅಲ್ಲಲ್ಲಿ ಮಳೆಯಾಗಿತ್ತು. ಮೋಡ ಕವಿದ ವಾತಾವರಣವೇ ಇತ್ತು. ಇದೇ ರೀತಿ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಕೆಲವು ಕಡೆ ಇಂಥದ್ದೇ ಸಾಧಾರಣ ಅಥವಾ ಚದುರಿದ ಮಳೆಯ ವಾತಾವರಣ ಇತ್ತು. ಇಂದಿನಿಂದ (ಜ.10) ಮಳೆಯ ತೀವ್ರತೆ ಕಡಿಮೆಯಾಗಿದ್ದು, ಬಹುಪಾಲು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಚಳಿ ಮತ್ತು ಒಣ ಹವೆ ಮುಂದುವರಿಯಲಿದೆ ಎಂದು ಭಾರತದ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ವಿವರಿಸಿದೆ.
ಕರ್ನಾಟಕದ ಬಹುತೇಕ ಕಡೆ ಮುಂಜಾನೆ, ಬೆಳಗ್ಗಿನ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ಸಹಜವಾಗಿಯೇ ಕೆಲವು ಕಡೆಗೆ ಸಂಜೆಯಾಗುತ್ತಿದ್ದಂತೆ ಚಳಿ ಕೂಡ ಇರಲಿದೆ. ಚಳಿಯ ತೀವ್ರತೆ ತಡರಾತ್ರಿಯಾಗುತ್ತ ಹೆಚ್ಚಾಗಬಹುದು. ಮುಂಜಾನೆ ಮಂಜು ಮುಸುಕಿದ ವಾತಾವರಣ ಮತ್ತು ತೀವ್ರ ಚಳಿ ಕಾಣಬಹುದು. ಮಳೆ ಬಿದ್ದ ಕೆಲವೆಡೆ ವಾತಾವರಣದ ಉಷ್ಣಾಂಶವು 2 ರಿಂದ 3 ಡಿಗ್ರಿ ಸೆಲ್ಶಿಯಸ್ನಷ್ಟು ಹೆಚ್ಚಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಬುಧವಾರ (ಜ.10) ಬೆಳಗ್ಗೆ 8.30ರಿಂದ ಜನವರಿ 11 ರ ಬೆಳಗ್ಗೆ 8.30ರ ತನಕದ ಅವಧಿಯಲ್ಲಿ ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಕಡೆ ಚದುರಿದ ಮಳೆಯಾಗಬಹುದು. ಉಳಿದಂತೆ ಚಳಿ ಮತ್ತು ಒಣ ಹವೆ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದು ಎಂದು ವರದಿ ಹೇಳಿದೆ.
ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಮೂರು-ನಾಲ್ಕು ದಿನಗಳ ಅವಧಿಯಲ್ಲಿ ಕೆಲವು ಕಡೆಗೆ ಸಾಧಾರಣದಿಂದ ಭಾರಿ ಮಳೆಯಾಗಿದೆ. ಮಳೆಗಾಲದ ನೆನಪನ್ನೂ ತಂದುಕೊಟ್ಟಿದೆ. ಮಳೆಯ ಜತೆಗೆ ವಾತಾವರಣದ ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್ನಷ್ಟು ಹೆಚ್ಚಾಗಿತ್ತು.ಆದರೆ ಇಂದು ಉತ್ತರ ಕನ್ನಡದ ಒಂದೆರಡು ಕಡೆ ಮಾತ್ರ ಚದುರಿದ ಮಳೆಯಾಗಲಿದೆ. ಉಳಿದೆರಡು ಜಿಲ್ಲೆಗಳಲ್ಲಿ ರಾತ್ರಿ ವೇಳೆ ಚಳಿ ಮತ್ತು ಮುಂಜಾನೆ ಮಂಜು ಕವಿದ ವಾತಾವರಣ, ಹಗಲು ಒಣ ಹವೆ ಇರಲಿದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.
ಇನ್ನು ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ ಗದಗ, ಬಾಗಲಕೋಟೆ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಗಳಲ್ಲಿ ಒಣಹವೆ ಇರಲಿದೆ. ಇದೇ ರೀತಿ, ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಚಾಮರಾಜನಗರ, ಕೋಲಾರ, ರಾಮನಗರಗಳಲ್ಲಿ ಒಂದೆರಡು ಕಡೆ ಚದುರಿದ ಮಳೆಯಾಗಲಿದೆ. ಉಳಿದಂತೆ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರು, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ವಿಜಯನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರುಗಳಲ್ಲಿ ಚಳಿಯ ವಾತಾವರಣ ಇರಲಿದೆ. ಬಹುತೇಕ ಜಿಲ್ಲೆಗಳ ಹಲವು ಕಡೆ ಉಷ್ಣಾಂಶವು ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಶಿಯಸ್ನಷ್ಟು ಹೆಚ್ಚಾಗಿರಲಿದೆ ಎಂದು ವರದಿ ಹೇಳಿದೆ.
ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರಗಳಲ್ಲಿ ಹವಾಮಾನ ಇಂದು (ಜ.10)
ಕರ್ನಾಟಕದ ರಾಜಧಾನಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬಹುತೇಕ ಕಡೆಗಳಲ್ಲಿ ಇಂದು (ಜ.10) ಮಳೆ ಇರಲ್ಲ. ಆದರೆ ಕೆಲವು ಕಡೆ ಮೋಡ ಕವಿದ ವಾತಾವರಣ ಇರಲಿದೆ. ಚಳಿ ಮತ್ತು ಒಣಹವೆ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಮುಂಜಾನೆ ಹೊತ್ತು ಮಂಜುಕವಿದ ವಾತಾವರಣ ಇರಲಿದೆ. ಈ ಎರಡೂ ಜಿಲ್ಲೆಗಳಲ್ಲಿ ವಾತಾವರಣದ ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ ಎಂದು ಬೆಂಗಳೂರ ಹವಾಮಾನ ಕೇಂದ್ರದ ವಿಜ್ಞಾನಿ ಡಾ.ರಾಜವೇಲ್ ಮಣಿಕ್ಕಮ್ ತಿಳಿಸಿದ್ದಾರೆ.