Mallikarjun kharge: 'ಕೈ' ಹೈಕಮಾಂಡ್, ಜಿ-23 ಬೆಂಬಲ; ಕನ್ನಡಿಗ ಖರ್ಗೆ ಎಐಸಿಸಿ ಅಧ್ಯಕ್ಷ ಹುದ್ದೆಗೇರೋದು ಬಹುತೇಕ ಖಚಿತ
Oct 01, 2022 01:15 PM IST
ಮಲ್ಲಿಕಾರ್ಜುನ ಖರ್ಗೆ (ಪೋಟೋ-ಎಂ.ಬಿ.ಪಾಟೀಲ್ ಟ್ವಿಟರ್)
ಮಲ್ಲಿಕಾರ್ಜುನ ಖರ್ಗೆ ಅವರನ್ನು ದಿಢೀರ್ ಬೆಳವಣಿಗೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಒಂದು ವೇಳೆ ಖರ್ಗೆ ಅವರು ಗೆದ್ದರೆ ಈ ಹುದ್ದೆಗೇರಿದ ಎರಡನೇ ಕನ್ನಡಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ನವದೆಹಲಿ: ಕಾಂಗ್ರೆಸ್ ನ ಕಟ್ಟಾಳು, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ-ಎಐಸಿಸಿ ಚುನಾವಣೆಯಲ್ಲಿ ಗೆಲ್ಲೋದು ಬಹುತೇಕ ಖಚಿತವಾಗಿದೆ.
ಗಾಂಧಿ ಕುಟುಂಬದ ನಿಷ್ಠಾಂತರಾಗಿರುವ ಖರ್ಗೆ ಅವರನ್ನು ದಿಢೀರ್ ಬೆಳವಣಿಗೆಯಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಪಕ್ಷದ ಹೈಕಮಾಂಡ್ ಸೂಚಿಸಿತ್ತು. ಒಂದು ವೇಳೆ ಖರ್ಗೆ ಅವರು ಗೆದ್ದರೆ ಈ ಹುದ್ದೆಗೇರಿದ ಎರಡನೇ ಕನ್ನಡಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
1968-69ರಲ್ಲಿ ಎಸ್.ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾಗಿದ್ದರು. ಜೊತೆಗೆ ಬಾಬು ಜಗಜೀವನ್ ರಾಮ್ ನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರುತ್ತಿರುವ ಎರಡನೇ ದಲಿತ ವ್ಯಕ್ತಿ ಎನಿಸಿಕೊಳ್ಳುತ್ತಿದ್ದಾರೆ.
ಎಐಸಿಸಿ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಾಜಕೀಯದಲ್ಲಿ ಸುದೀರ್ಘ 50 ವರ್ಷಗಳ ಅನುಭವ ಹೊಂದಿರುವ ಇವರು, ಎಲ್ಲಾ ಪಕ್ಷಗಳ ನಾಯಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಯಾವುದೇ ರೀತಿಯ ವಿವಾದಗಳನ್ನು ಎಂದೂ ಮೈಮೇಲೆ ಎಳೆದುಕೊಂಡವರಲ್ಲ.
2009ರ ವರೆಗೆ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಪಡೆಯುವ ಮುನ್ನ ಗುರುಮಿಟಕಲ್ ವಿಧಾನಸಭಾ ಕ್ಷೇತ್ರದಲ್ಲಿ 9 ಬಾರಿ ಶಾಸಕರಾಗಿ ಆಯ್ಕೆ ಆಗಿರುವ 80 ವರ್ಷದ ಖರ್ಗೆ ಅವರು ತಮ್ಮ ತವರು ಜಿಲ್ಲೆ ಕಲಬುರ್ಗಿಯಲ್ಲಿ ಪ್ರಭಾವಿ ನಾಯಕರಾಗಿ ಬೆಳೆದರು. 1969ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸೇರುತ್ತಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರಿ ಹವಾ ಉಂಟು ಮಾಡಿದ್ದರು. ಕರ್ನಾಟಕದಲ್ಲಿ ಬಹುತೇಕ ಕೈ ಅಭ್ಯರ್ಥಿಗಳನ್ನು ಆ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.
ಆದರೆ ಮಲ್ಲಿಕಾರ್ಜುನ ಖರ್ಗೆ , ಮೋದಿ ಅವರ ಅಲೆಯ ನಡುವೆಯೂ 74 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸತ್ ಗೆ ಆಯ್ಕೆ ಆಗಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಅಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದ ಉಮೇಶ್ ಜಾಧವ್ ವಿರುದ್ಧ ದೊಡ್ಡ ಅಂತರದಲ್ಲಿ ಸೋಲು ಕಂಡರು. ಸುಮಾರು 95,452 ಮತಗಳ ಅಂತರದಿಂದ ಪರಾಭವಗೊಂಡರು. ಇದು ರಾಜ್ಯ ರಾಜಕಾರಣದಲ್ಲೇ ಭಾರಿ ಅಚ್ಚರಿ ಉಂಟು ಮಾಡಿತ್ತು. ಖರ್ಗೆ ಅವರ ಸೋಲಿಗೆ ಕಾಂಗ್ರೆಸ್ ನ ವಿರೋಧ ಪಕ್ಷಗಳಲ್ಲೇ ಬೇಸರ ವ್ಯಕ್ತಪಡಿಸಿದ್ದವು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಯುಪಿಎ ಸರ್ಕಾರದಲ್ಲಿ ಹಲವು ಇಲಾಖೆಗಳ ಸಚಿವರಾಗಿ ಆಡಳಿತದಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ಸಂಸದೀಯ ವ್ಯವಹಾರಗಗಳು, ಕಾರ್ಮಿಕ ಮತ್ತು ಉದ್ಯೋಗ ಖಾತೆ, ರೈಲ್ವೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಮಾಡಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರಾಗಿ, 2008ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
2014 ರಿಂದ 2019ರ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಕೆಲಸ ಮಾಡಿದ್ದಾರೆ. ಆದರೆ ನಂತರದ ಚುನಾವಣೆಯಲ್ಲಿ ಲೋಕಸಭೆ ಸ್ಥಾನಗಳ ಪೈಕಿ 10 ರಷ್ಟು ಸ್ಥಾನಗಳನ್ನು ಗೆಲ್ಲಿಸಲು ಇವರಿಂದ ಸಾಧ್ಯವಾಗಲಿಲ್ಲ. 2020 ಜೂನ್ ನಲ್ಲಿ ನಡೆದ ರಾಜ್ಯವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸದ್ಯ ಅವರು 17ನೇ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ಇಷ್ಟೆಲ್ಲಾ ರಾಜಕೀಯ ಅನುಭವ ಹೊಂದಿದ್ದ ಖರ್ಗೆ ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಮಾತ್ರ ಕೂಡಿಬಂದಿಲ್ಲ. ಕರ್ನಾಟಕದಲ್ಲಿ ದಲಿತ ಸಿಎಂ ವಿಚಾರ ಬಂದಾಗ, ನೀವು ಯಾಕೆ ದಲಿತ, ದಲಿತ ಸಿಎಂ ಅಂತ ಹೇಳುತ್ತೀರಿ. ಆ ರೀತಿ ಹೇಳಬೇಡಿ. ನಾನು Congressman ಎಂದು ಹಲವು ಬಾರಿ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನೀಡಿದ ಯಾವುದೇ ಹುದ್ದೆಯನ್ನು ನಿಷ್ಠೆಯಿಂದ ಮಾಡಿದ ಅಗ್ರ ನಾಯಕರಲ್ಲಿ ಮಲ್ಲಿಕಾರ್ಜುನ ಖರ್ಗೆ ಒಬ್ಬರು ಎಂದರೆ ತಪ್ಪಾಗಲಾರದು.
ಬೀದರ್ ಜಿಲ್ಲೆಯ ವರವಟ್ಟಿ ಎಂಬಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಕಲಬುರ್ಗಿಯಲ್ಲಿ ಪದವಿ ಹಾಗೂ ಕಾನೂನು ಪದವಿ ಪಡೆದಿದ್ದಾರೆ. ರಾಜಕೀಯಕ್ಕೂ ಬರುವ ಮುನ್ನ ಲೀಗಲ್ ಪ್ರಾಕ್ಟೀಸ್ ಮಾಡಿದ್ದಾರೆ. ಬುದ್ದಿನ ಅನುಯಾಯಿ ಆಗಿರುವ ಖರ್ಗೆ ಅವರು ಸಿದ್ಧಾರ್ಥ್ ವಿಹಾರ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದಾರೆ. 1968ರ ಮೇ 13 ರಂದು ರಾಧಾಬಾಯಿ ಅವರನ್ನು ವರಿಸಿದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದಾರೆ. ಇವರಲ್ಲಿ ಓರ್ವ ಅಂದರೆ ಪ್ರಿಯಾಂಕ್ ಖರ್ಗೆ ಸದ್ಯ ಶಾಸಕರಾಗಿದ್ದಾರೆ.
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.