Mysore Crime News: ಮೈಸೂರಿನಲ್ಲಿ 25 ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ ವಶ; ಮೂವರು ಅರೆಸ್ಟ್
May 23, 2023 10:50 PM IST
ಮೈಸೂರಿನಲ್ಲಿ 25 ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ.
ಹೆಚ್ ಡಿ ಕೋಟೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಅಂಬರ್ ಗ್ರೀನ್ (ತಿಮಿಂಗಿಲ ವಾಂತಿ) ಅನ್ನು ವಶಕ್ಕೆ ಪಡೆದಿದ್ದು, ಮೂವರನ್ನ ಬಂಧಿಸಿದ್ದಾರೆ.
ಮೈಸೂರು: ಜಿಲ್ಲೆಯ ಹೆಚ್ಡಿ ಕೋಟೆ (HD Kote) ಮತ್ತು ಜಿಲ್ಲಾ ಸೆನ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೇರಳ (Kerala) ಮೂಲದ ಮೂವರಿಂದ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಅಪರೂಪದ ಅಂಬರ್ ಗ್ರೀಸ್ (Whale Ambergris) (ತಿಮಿಂಗಿಲ ವಾಂತಿ) ಅನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 9.5 ಕೆಜಿ ಅಂಬರ್ ಗ್ರೀಸ್ ಅನ್ನು ಮಾರಾಟ ಮಾಡಲು ಯತ್ನಿಸಿದಾಗ ಹೆಚ್ಡಿ ಕೋಟೆ ಹ್ಯಾಂಡ್ ಪೋಸ್ಟ್ನಲ್ಲಿ ಪೊಲೀಸರು ದಾಳಿ ನಡೆಸಿ ಸರಕನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್, ಅಡಿಷನಲ್ ಎಸ್ಪಿ ನಂದಿನಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದ್ದು, ಬಂಧಿತ ಆರೋಪಿಗಳು ಕೇರಳದ ಕೊಚ್ಚಿನ್ ಸಮುದ್ರದಿಂದ ತಿಮಿಂಗಿಲದ ಅಂಬರ್ ಗ್ರೀಸ್ ತಂದಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕೇರಳ ಮೂಲದ ಮೂವರು ಆರೋಪಿಗಳ ಪೈಕಿ ಇಬ್ಬರು ಹಡಗು ನಡೆಸುವ ನಾವಿಕರು ಎನ್ನಲಾಗಿದೆ.
ಆರೋಪಿಗಳು ಮಾರಲು ಯತ್ನಿಸಿದ್ದು ಅಂಬರ್ ಗ್ರೀಸ್ ಎಂದು ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಖಚಿತ ಪಡಿಸಿದೆ. ಅಂಬರ್ ಗ್ರೀಸ್ಗೆ ವಿದೇಶದಲ್ಲಿ ಅಪಾರವಾದ ಬೇಡಿಕೆ ಇದೆ. ಇದನ್ನು ತಿಳಿದ ಆರೋಪಿಗಳು ದುಡ್ಡ ಮಾಡಲು ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆರೋಪಿಗಳ ವಿರುದ್ದ ಹೆಚ್ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ
ಮೈಸೂರು ಜಿಲ್ಲೆಯ ಕೇಂದ್ರ ಕಾರಾಗೃಹದ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಸನ್ನಡತೆ ಆಧಾರದ ಮೇಲೆ ಅರ್ಹ ಜೀವಾವಧಿ ಬಂಧಿಗಳನ್ನು ಅವಧಿಗೂ ಮುನ್ನ ಬಿಡುಗಡೆ ಮಾಡಲಾಗಿದೆ.
ಮಾಫಿ ಸೇರಿದಂತೆ 14 ವರ್ಷ ಶಿಕ್ಷೆ ಪೂರೈಸಿದ 23 ಪುರುಷ, ಮಹಿಳೆ ಸೇರಿ ಒಟ್ಟು 24 ಕೈದಿಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹಾಗೂ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿ ಸುಮಾರು 14 ವರ್ಷದಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಮಂದಿ ಕೈದಿಗಳನ್ನು ಸನ್ನಢತೆ ಆಧಾರದ ಮೇಲೆ ಸೋಮವಾರ (ಮೇ 22) ರಿಲೀಸ್ ಮಾಡಲಾಗಿದೆ. ಕಾರಾಗೃಹದ ಆವರಣದಲ್ಲಿ ಸೋಮವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ದಿನೇಶ್ ಸಮ್ಮುಖದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೈದಿಗಳಿಗೆ ದಿನೇಶ್ ಅವರು, ಬಿಡುಗಡೆ ಪತ್ರ ನೀಡಿ ಮುಂದಿನ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸಿದರು.