Namma Bengaluru Habba: ಇಂದು ನಾಳೆ ನಮ್ಮ ಬೆಂಗಳೂರು ಹಬ್ಬ, ಈ ಬಾರಿ ಸರಳ, ಮುಂದಿನ ವರ್ಷ ಮೈಸೂರು ದಸರಾದಂತೆ ಆಯೋಜಿಸಲು ನಿರ್ಧಾರ
Mar 25, 2023 09:56 AM IST
ಕರ್ನಾಟಕ ವಿಧಾನ ಸೌಧ
ಈ ಬಾರಿ ಸರಳವಾಗಿ ನಮ್ಮ ಬೆಂಗಳೂರು ಹಬ್ಬ ಆಚರಿಸಲಾಗುತ್ತದೆ. ಮುಂದಿನ ವರ್ಷ ಮೈಸೂರು ದಸರಾದಂತೆ ವೈಭವವಾಗಿ ಬೆಂಗಳೂರು ಹಬ್ಬ ಆಚರಿಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಮ್ಮ ಬೆಂಗಳೂರು ಹಬ್ಬ ನಡೆಯಲಿದೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಮ್ಮ ಬೆಂಗಳೂರು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಈ ಬಾರಿ ಸರಳವಾಗಿ ನಮ್ಮ ಬೆಂಗಳೂರು ಹಬ್ಬ ಆಚರಿಸಲಾಗುತ್ತದೆ. ಮುಂದಿನ ವರ್ಷ ಮೈಸೂರು ದಸರಾದಂತೆ ವೈಭವವಾಗಿ ಬೆಂಗಳೂರು ಹಬ್ಬ ಆಚರಿಸಲಾಗುವುದು ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಏನೆಲ್ಲ ಕಾರ್ಯಕ್ರಮಗಳಿವೆ?
ಇಂದು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ವೇದಿಕೆಯಲ್ಲಿ ಸಂಜೆ 06.00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಅನನ್ಯ ಭಟ್, ನವೀನ್ ಸಜ್ಜು, ಜನಾರ್ಧನ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮಗಳು ಜರುಗಲಿವೆ.
ನಮ್ಮ ಬೆಂಗಳೂರು ಹಬ್ಬದ ಪ್ರಯುಕ್ತ ಬಾಲಭವನ ಆವರಣದ ಆಂಪಿಕ್ ಥಿಯೇಟರ್ನಲ್ಲಿ ವಿವಿಧ ಅಕಾಡೆಮಿಗಳು, ರಂಗಶಂಕರ ಮತ್ತು ನೀನಾಸಂ ಸಂಸ್ಥೆಗಳ ಸಹಯೋಗದಲ್ಲಿ ನಾಟಕ, ಬೀದಿ ನಾಟಕಗಳು, ಗೊಂಬೆ ಪ್ರದರ್ಶನ ನಡೆಯಲಿದೆ. ಇದರೊಂದಿಗೆ ಯಕ್ಷಗಾನ, ಗಾಯನ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಬ್ಬನ್ ಪಾರ್ಕ್ನ ಬ್ಯಾಂಡ್ ಸ್ಟಾಂಡ್ ವೇದಿಕೆಯಲ್ಲಿ ಪೋಲಿಸ್ ಬ್ಯಾಂಡ್ ವಾದನ, ನೃತ್ಯ ಜನಪದ ಗಾಯನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಹಬ್ಬದಲ್ಲಿ ರಾಜ್ಯದ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಕಲಾವಿದರು, ಚಲನಚಿತ್ರಗಳು ಮತ್ತು ಆಹಾರದ ಮೂಲಕ ಬೆಂಗಳೂರು ನಗರದ ಭವ್ಯತೆ ಮತ್ತು ಸಂಸ್ಕೃತಿಯನ್ನು ಪ್ರಸ್ತುತಪಡಿಸುವ ಹಬ್ಬವಾಗಿದೆ. ಬೆಂಗಳೂರಿನ ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜಯನಗರ ಸಾಮ್ರಾಜ್ಯದ ದೊರೆ ನಾಡಪ್ರಭು ಕೆಂಪೇಗೌಡರಿಗೆ ಈ ಬೆಂಗಳೂರು ಹಬ್ಬದ ಮೂಲಕ ಗೌರವ ನೀಡಲಾಗುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್ 26 ರಂದು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
"ಬೆಂಗಳೂರಿನ ಸಂಸ್ಕೃತಿ ಮತ್ತು ವಿಕಸನವನ್ನು ನಗರದಲ್ಲಿ ನೆಲೆಸಿರುವ ಪರ ಭಾಷಿಕರಿಗೆ ಮತ್ತು ನಾಡಿನ ಜನರಿಗೆ ಪರಿಚಯಿಸುವ ಸಲುವಾಗಿ ನಮ್ಮ ಬೆಂಗಳೂರು ಹಬ್ಬ ಆಯೋಜಿಸಲಾಗುತ್ತದೆ" ಎಂದು ಕಂದಾಯ ಸಚಿವ ಆರ್ ಅಶೋಕ್ ನಿನ್ನೆ ಹೇಳಿದ್ದರು.
ಈ ವರ್ಷ ಬೆಂಗಳೂರು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಮಯದ ಕೊರತೆಯಿದೆ. ಹೀಗಾಗಿ ಸಣ್ಣ ಪ್ರಮಾಣದಲ್ಲಿ ಆಯೋಜಿಸಲಾಗಿದೆ. ಮುಂದಿನ ವರ್ಷ ಮೈಸೂರು ದಸರಾ ರೀತಿ ಅದ್ಧೂರಿಯಾಗಿ ನಮ್ಮ ಬೆಂಗಳೂರು ಹಬ್ಬವನ್ನು ಆಚರಿಸಲಾಗುವುದು ಎಂದು ಆರ್ ಅಶೋಕ್ ಹೇಳಿದ್ದರು.
ನಾಳೆ ಸಂಜೆ 05.00 ಗಂಟೆಗೆ ವಿಧಾನಸೌಧದ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಲಾಗುವುದು. ನಂತರ ನಾಡಿನ ಪ್ರಸಿದ್ಧ ಸಂಗೀತಗಾರರಿಂದ ಗಾಯನ ಕಾರ್ಯಕ್ರಮ ಹಾಗೂ ಪ್ರಭಾತ್ ಕಲಾವಿದರಿಂದ ನೃತ್ಯ ಪ್ರದರ್ಶನ ಆಯೋಜಿಸಲಾಗಿದೆ.
"ನಮ್ಮ ಬೆಂಗಳೂರು ಹಬ್ಬ ಬರಿಯ ಬೆಂಗಳೂರು ಉತ್ಸವ ಮಾತ್ರವಲ್ಲ ಇದು ಬೆಂಗಳೂರು ನಗರದ ಬೆಳವಣಿಗೆ ಹಾಗೂ ಉದ್ಯಾನನಗರಿಯ ಸಂಸ್ಕೃತಿಯ ಶ್ರೀಮಂತಿಕೆಯ ಮೇಲೆ ಬೆಳಕು ಚೆಲ್ಲಲಿದೆ. ಎರಡು ದಿನಗಳ ಕಾಲ ವಿಜೃಂಭಣೆಯಿಂದಲೇ ಉತ್ಸವವನ್ನು ಆಯೋಜಿಸಲಾಗುತ್ತದೆ. ನೃತ್ಯ, ನಾಟಕ, ಕಲೆ, ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ" ಎಂದು ಆರ್ ಅಶೋಕ್ ಹೇಳಿದ್ದಾರೆ.