AAP on MLA Raghu: ತಮಗೆ ಹಾಕಿದ ಹಾರವನ್ನೇ ಅಂಬೇಡ್ಕರ್ ಪ್ರತಿಮೆಗೆ ಹಾಕಿ ಅವಮಾನ: ಬಿಜೆಪಿ ಶಾಸಕನ ವಿರುದ್ಧ ಎಎಪಿ ಆರೋಪ
Apr 16, 2023 08:03 PM IST
ಬಿಜೆಪಿ ಶಾಸಕ ರಘು - ಎಎಪಿ ಮುಖಂಡ ಮೋಹನ್ ದಾಸರಿ
- ಅಂಬೇಡ್ಕರ್ ಜಯಂತಿಯಂದು ಬಿಜೆಪಿ ಶಾಸಕ ಎಸ್.ರಘುರವರು ತಮಗೆ ಹಾಕಿದ ಹಾರವನ್ನೇ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಪ್ರತಿಮೆಗೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಸಿ.ವಿ.ರಾಮನ್ ನಗರ ಅಭ್ಯರ್ಥಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಆರೋಪ ಮಾಡಿದ್ದಾರೆ.
ಬೆಂಗಳೂರು: ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಬಿಜೆಪಿ ಶಾಸಕ ಎಸ್.ರಘುರವರು ತಮಗೆ ಹಾಕಿದ ಹಾರವನ್ನೇ ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಪ್ರತಿಮೆಗೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ಸಿ.ವಿ.ರಾಮನ್ ನಗರ ಅಭ್ಯರ್ಥಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಆರೋಪ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ, “ಏಪ್ರಿಲ್ 14ರ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ರಘು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಬಲಿಗರು ಎಸ್.ರಘುರವರಿಗೆ ಹೂವಿನ ಹಾರ ಹಾಕಿದ್ದರು. ನಂತರ ಆ ಹಾರವನ್ನು ತಮ್ಮ ಕೊರಳಿಂದ ತೆಗೆದು ಬಾಬಾ ಸಾಹೇಬರ ಕೊರಳಿಗೆ ಹಾಕಿದ್ದಾರೆ. ಉಪಯೋಗಿಸಿದ ಹಾರವನ್ನು ಹಾಕುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ. ಇದು ಶಾಸಕ ಎಸ್.ರಘುರವರ ದುರಹಂಕಾರದ ಪರಮಾವಧಿ. ಬಾಬಾ ಸಾಹೇಬರನ್ನು ಬಿಜೆಪಿ ಎಷ್ಟು ಕೇವಲವಾಗಿ ನೋಡುತ್ತದೆ ಎಂಬುದು ಇದರಿಂದ ತಿಳಿಯುತ್ತದೆ” ಎಂದು ಹೇಳಿದರು.
“ರಘುರವರು ಮಾಡಿರುವ ಈ ದುಷ್ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ತಿಳಿದ ಕೂಡಲೇ ನಾನು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಜೊತೆಗೂಡಿ ಎಸ್.ರಘು ಹಾಕಿದ್ದ ಸೆಕೆಂಡ್ ಹ್ಯಾಂಡ್ ಹಾರವನ್ನು ತೆಗೆದು, ಪ್ರತಿಮೆಯನ್ನು ತೊಳೆದು, ಹೊಸ ಹಾರವನ್ನು ಹಾಕಿದ್ದೇವೆ. ಬಾಬಾ ಸಾಹೇಬ್ರವರ ಬಗ್ಗೆ ಎಸ್.ರಘುರವರಿಗೆ ಸ್ವಲ್ಪವಾದರೂ ಗೌರವವಿದ್ದರೆ ಪ್ರತಿಮೆಯ ಬಳಿ ನಿಂತು ಕ್ಷಮೆ ಕೇಳಲಿ” ಎಂದು ಮೋಹನ್ ದಾಸರಿ ಆಗ್ರಹಿಸಿದರು.
ಬಿಜೆಪಿ ಶಾಸಕ ರಘು ಬೆಂಬಲಿಗರಿಂದ ಎಎಪಿ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ
ಬೆಂಗಳೂರಿನ ಸರ್ ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರೂ ಆಗಿರುವ ಬಿಜೆಪಿ ಅಭ್ಯರ್ಥಿ ರಘು ಬೆಂಬಲಿಗರಿಂದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೋವಿಡ್ ಸಮಯದಲ್ಲಿ ನಿಮ್ಮ ಪಕ್ಷದಿಂದ ಏನು ಮಾಡಿದ್ದೀರಿ? ನಮಗೆ ನಮ್ಮ ಶಾಸಕರೇ ಸಾಕು. ನೀವು ಇಲ್ಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಶಾಸಕ ರಘು ಬೆಂಬಲಿಗರು ಹೇಳಿ ಪ್ರಚಾರದ ವೇಳೆ ಬಂದು ಅಡ್ಡಿ ಪಡಿಸಿದ್ದಾರೆ. ಅಲ್ಲದೇ ಮೊಬೈಲ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ಮುಖಂಡರು ಮೊನ್ನೆಯಷ್ಟೇ ಆರೋಪಿಸಿದ್ದರು.
ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರಿಗೆ ದೂರು ನೀಡಿರುವ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರು ಆರೋಪಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. "ಬಿಜೆಪಿಯ ಶಾಸಕ ರಘು ಅವರ ಬಾಡಿಗೆ ಗೂಂಡಾಗಳಿಂದ ಆಮ್ ಆದ್ಮಿಪಾರ್ಟಿಯ ಅಭ್ಯರ್ಥಿಪರ ಪ್ರಚಾರಕ್ಕೆಅಡ್ಡಿ. ಭ್ರಷ್ಟ ಬಿಜೆಪಿ ನಾಯಕರು,ನಾಲಾಯಕರು ಇರುವ ಕಡೆ ಉತ್ತಮರು ಸಮಾಜದ ಬಗ್ಗೆ ಚಿಂತನೆ ಮಾಡುವವರು ಮತವನ್ನು ಕೇಳಬಾರದೇ? ಬಿಜೆಪಿಗರೇ ಬೀದಿಯಲಲ್ಲ,ಮತ ಪೆಟ್ಟಿಗೆಯಲ್ಲಿ ತೋರಿಸಿ ಪೌರುಷ" ಎಂದು ಎಎಪಿ ಕರ್ನಾಟಕ ಟ್ವೀಟ್ ಮಾಡಿದೆ.