Kalburgi News: ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ: ಕರ್ನಾಟಕ ಮಾಜಿ ಗೃಹ ಸಚಿವರ ವಿರುದ್ಧ ಕಲಬುರಗಿಯಲ್ಲಿ ಎಫ್ಐಆರ್
Aug 04, 2023 12:08 PM IST
ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಕಲಬುರಗಿಯಲ್ಲಿ ಆರಗ ಜ್ಞಾನೇಂದ್ರ ವಿರುದ್ದ ಎಫ್ಐಆರ್ ದಾಖಲಾಗಿದೆ.
- Kalburgi Police ಎಐಸಿಸಿ ಅಧ್ಯಕ್ಷ ( AICC) ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ವಿಚಾರವಾಗಿ ಹೇಳಿಕೆ ನೀಡಿದ್ದ ಕರ್ನಾಟಕದ ಮಾಜಿ ಗೃಹ ಸಚಿವ( Home Minister) ಆರಗ ಜ್ಞಾನೇಂದ್ರ ವಿರುದ್ದ ಕಲಬುರಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರವಾಗಿ ಮಾಜಿ ಗೃಹ ಸಚಿವ, ಬಿಜೆಪಿ ನಾಯಕ ಆರಗ ಜ್ಞಾನೇಂದ್ರ ವಿರುದ್ಧ ಕಲಬುರಗಿ ನಗರದ ಅಶೋಕ್ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಖರ್ಗೆ ಅವರ ಬೆಂಬಲಿಗ ರಾಜೀವ್ ಜಾನೆ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಆರಗ ಜ್ಞಾನೇಂದ್ರ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಕೂಡ ಆಕ್ಷೇಪ ವ್ಯಕ್ತಪಡಿಸಿತ್ತು. ಆರಗ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸ್ಪೀಕರ್ ಯುಟಿ ಖಾದರಗೆ ಪತ್ರ ಬರೆಯಲಾಗಿತ್ತು. ಈ ಮಧ್ಯೆ, ದಲಿತ ಮುಖಂಡ ಹರ್ಷೇಂದ್ರ ಕುಮಾರ್ ಎನ್ನುವರು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಆರಗ ಜ್ಞಾನೇಂದ್ರ ವಿರುದ್ಧ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ.
ಖಂಡ್ರೆ, ಖರ್ಗೆ ವಿರುದ್ಧ ಆರಗ ಜ್ಞಾನೇಂದ್ರ ಹೇಳಿದ್ದೇನು?
ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಆಗಸ್ಟ್ 2ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ್ದ ಅವರು, ಅರಣ್ಯವೇ ಇಲ್ಲದ ಪ್ರದೇಶದಿಂದ ಬಂದವರು ಅರಣ್ಯ ಸಚಿವರಾಗಿದ್ದಾರೆ. ಇದು ಕರ್ನಾಟಕದ ದುರಂತ. ಪಶ್ಚಿಮ ಘಟ್ಟದವರ ಸಮಸ್ಯೆ ಬಗ್ಗೆ ಸಚಿವರಿಗೆ ಅರಿವಿಲ್ಲ. ಉತ್ತರ ಕರ್ನಾಟಕ ಭಾಗದವರು ಸುಟ್ಟು ಕರಕಲಾಗಿರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿದರೆ ಅಲ್ಲಿನವರ ಸ್ಥಿತಿ ಗೊತ್ತಾಗುತ್ತದೆ. ಖಂಡ್ರೆ ಅವರ ತಲೆ ಕೂದಲಿನಿಂದ ಮುಚ್ಚಿಕೊಂಡಿದ್ದರಿಂದ ಉಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದರು.
ಜ್ಞಾನೇಂದ್ರಗೆ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು
ಹಿರಿಯ ಮುತ್ಸದ್ಧಿ ರಾಜಕಾರಣಿ ಹಾಗೂ ರಾಜ್ಯಸಭೆ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ನೀಡಿರುವ ಅವಹೇಳನಕಾರಿ ಹೇಳಿಕೆಗೆ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ತಿರುಗೇಟು ನೀಡಿದ್ದು, ' ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈಬಿಸಿಲಲ್ಲಿ ಸುಟ್ಟಿರುತ್ತದೆ ಎಂದು ಮಾರುತ್ತರ ನೀಡಿದ್ದಾರೆ.
ಬಿಜೆಪಿ ಪ್ರತಿಭಟನೆ ವೇಳೆ ಖರ್ಗೆ ಅವರ ಬಣ್ಣದ ಬಗ್ಗೆ ವ್ಯಂಗ್ಯವಾಡಿದ್ದ ಜ್ಞಾನೇಂದ್ರ, ಕಲ್ಯಾಣ ಕರ್ನಾಟಕ ಭಾಗದವರು ಸುಟ್ಟು ಕರುಕಲಾಗಿರುತ್ತಾರೆ, ಖರ್ಗೆಯವರನ್ನು ನೋಡಿದರೆ ಗೊತ್ತಾಗುತ್ತದೆ ಎಂದು ಅವಹೇಳನ ಮಾಡಿದ್ದರು.
ಈ ಹೇಳಿಕೆ ವಿರುದ್ದ ಕೆರಳಿ ಕೆಂಡವಾದ ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರ ವಿರುದ್ದ ಕಟು ಮಾತುಗಳಿಂದ ಖಂಡಿಸಿದ್ದರು. ಜೊತೆಗೆ, ಕಾರ್ಯಕರ್ತರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಬಿಜೆಪಿ ಶಾಸಕನಿಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಸಚಿವ ಖರ್ಗೆ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆ ಮಾತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯಸಿದ್ದಾರೆ.
ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ. ಮನುಸ್ಮೃತಿ ಯ ವರ್ಣಾಶ್ರಮವನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿ ದಲಿತರ ರಾಜಕೀಯ ಏಳಿಗೆ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ ಖರ್ಗೆ ಹೇಳಿದ್ದಾರೆ.
ಕರ್ನಾಟಕ ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರುಕಲು ಮಾಡುತ್ತದೆ, ಏಕೆಂದರೆ ಇದು ಮನುಸ್ಮೃತಿ ಯ ಕಾಲವಲ್ಲ, ಬಾಬಾಸಾಹೇಬರ ಸಂವಿಧಾನದ ಕಾಲ ಎಂದು ಹೇಳಿದ್ದಾರೆ.