logo
ಕನ್ನಡ ಸುದ್ದಿ  /  ಕರ್ನಾಟಕ  /  World Hearing Day: ನಾಳೆ ವಿಶ್ವ ಶ್ರವಣ ದಿನ: ಶ್ರವಣ ದೋಷ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ ಜಾರಿ

World Hearing Day: ನಾಳೆ ವಿಶ್ವ ಶ್ರವಣ ದಿನ: ಶ್ರವಣ ದೋಷ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ ಜಾರಿ

HT Kannada Desk HT Kannada

Mar 02, 2023 04:05 PM IST

ಮಾರ್ಚ್ 3 ವಿಶ್ವ ಶ್ರವಣ ದಿನ (ಫೋಟೋ-ವಿಶ್ವ ಆರೋಗ್ಯ ಸಂಸ್ಥೆ)

  • 20 ಡಿಎಲ್ ಗಳಿಗಿಂತ ಕಡಿಮೆ ಶಬ್ದ ಯಾರಿಗೆ ಕೇಳಲಾಗುವುದಿಲ್ಲವೋ ಅವರಿಗೆ ಶ್ರವಣ ದೋಷದ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಶ್ರವಣ ದೋಷವು ವಿವಿಧ ಕಾರಣಗಳಿಂದ ಸಂಭವಿಸಬಹುದು. ಇದನ್ನು ತಡೆಯುವ ಮಾರ್ಗಗಳೂ ಇವೆ.

ಮಾರ್ಚ್ 3 ವಿಶ್ವ ಶ್ರವಣ ದಿನ (ಫೋಟೋ-ವಿಶ್ವ ಆರೋಗ್ಯ ಸಂಸ್ಥೆ)
ಮಾರ್ಚ್ 3 ವಿಶ್ವ ಶ್ರವಣ ದಿನ (ಫೋಟೋ-ವಿಶ್ವ ಆರೋಗ್ಯ ಸಂಸ್ಥೆ)

ಬೆಂಗಳೂರು: ನಾಳೆ (ಮಾರ್ಚ್ 3, ಶುಕ್ರವಾರ) ವಿಶ್ವ ಶ್ರವಣ ದಿನ. ಪ್ರತಿ ವರ್ಷ ಮಾ.3 ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ. ‘ಕಿವಿ ಮತ್ತು ಶ್ರವಣ ಆರೈಕೆ ಎಲ್ಲರಿಗಾಗಿ ಬನ್ನಿ ವಾಸ್ತವವಾಗಿಸೋಣ’ ಈ ವರ್ಷದ ಧ್ಯೇಯ ವಾಕ್ಯವಾಗಿದೆ.

ಟ್ರೆಂಡಿಂಗ್​ ಸುದ್ದಿ

KRS Dam: ಕೊಡಗಲ್ಲಿ ಉತ್ತಮ ಮಳೆ, ಕೆಆರ್‌ಎಸ್ ಜಲಾಶಯಕ್ಕೆ ಬಂತು 2 ಅಡಿ ನೀರು

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಶೇ 30- 40 ಹೆಚ್ಚಳ, ಶುಲ್ಕ ನಿಯಂತ್ರಣ ಬೇಕೆನ್ನುತ್ತಿರುವ ಪಾಲಕರು, ಕೈಕಟ್ಟಿ ಕುಳಿತ ಸರ್ಕಾರ- 10 ಮುಖ್ಯ ಅಂಶ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಇನ್ನ ವಿಶ್ವ ಶ್ರವಣ ದಿನದ ಬಗ್ಗೆ ಮಾತನಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯ ಸರ್ಕಾರದ ಕಾಕ್ಲಿಯಾರ್‌ ಇಂಪ್ಲಾಂಟ್‌ ಯೋಜನೆಯಡಿ, ಇದೇ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇಂತಹ ಕ್ರಮಗಳ ಮೂಲಕ ಕಿವಿಯ ಆರೋಗ್ಯ ರಕ್ಷಣೆಗೆ ಒತ್ತು ನೀಡಲಾಗಿದೆಎಂದು ತಿಳಿಸಿದ್ದಾರೆ.

ಶ್ರವಣ ದೋಷದ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ

ಎಲ್ಲಾ ಆರೋಗ್ಯ ಕಾರ್ಯಕರ್ತೆಯರಿಗೆ, ಕಿವಿಯ ಆರೈಕೆ, ಪ್ರಥಮ ಚಿಕಿತ್ಸೆ ಹಾಗೂ ತಪಾಸಣೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಮೂಲಕ ಕಿವಿಯ ಆರೈಕೆ ಹಾಗೂ ಶ್ರವಣ ಆರೈಕೆಯನ್ನು ಪ್ರಾಥಮಿಕ ಆರೋಗ್ಯ ಸೇವೆಗಳಲ್ಲಿ ವಿಲೀನಗೊಳಿಸಲಾಗುತ್ತಿದೆ. 6 ವರ್ಷದೊಳಗಿನ ಮಕ್ಕಳಲ್ಲಿನ ಗಂಭೀರ ಸ್ವರೂಪದ ಶ್ರವಣ ದೋಷದ ನಿವಾರಣೆಗೆ ಕಾಕ್ಲಿಯರ್‌ ಇಂಪ್ಲಾಂಟ್‌ ಯೋಜನೆ ತರಲಾಗಿದೆ. ಇದರಲ್ಲಿ, ಈ ವರ್ಷ 115 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಉಳಿದ 577 ಫಲಾನುಭವಿಗಳಿಗೆ ವಿವಿಧ ಹಂತದಲ್ಲಿ ಕಾಕ್ಲಿಯಾರ್‌ ಶಸ್ತ್ರಚಿಕಿತ್ಸೆಗಾಗಿ ತಯಾರಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2 ಲಕ್ಷ ಮಂದಿಗೆ ಶ್ರವಣ ದೋಷ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಾದ್ಯಂತ 430 ದಶ ಲಕ್ಷ ಜನರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. 2050 ರ ವೇಳೆಗೆ ಈ ಸಂಖ್ಯೆ 700 ದಶಲಕ್ಷ ದಾಟುವ ಆತಂಕವಿದೆ. ರಾಜ್ಯದಲ್ಲಿ 2008-09 ರಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣಾ ಕಾರ್ಯಕ್ರಮ ಜಾರಿಯಾಗಿದ್ದು, ಉಪಕರಣ ಮತ್ತು ಶಸ್ತ್ರಚಿಕಿತ್ಸೆಗಾಗಿ ಎಲ್ಲಾ ಜಿಲ್ಲೆಗಳಲ್ಲಿ ತರಬೇತಿ ನೀಡಲಾಗುತ್ತಿದೆ.

ಕಳೆದ 5 ವರ್ಷಗಳಲ್ಲಿ ಎನ್.ಪಿ.ಪಿ.ಸಿ.ಡಿ ಕಾರ್ಯಕ್ರಮ ವಿಭಾಗದಿಂದ, 2,00,305 ಶ್ರವಣ ದೋಷವುಳ್ಳವರನ್ನು ಹಾಗೂ 35,418 ಗಂಭೀರ ಶ್ರವಣ ದೋಷವುಳ್ಳವರನ್ನು ಗುರುತಿಸಲಾಗಿದೆ. 5 ವರ್ಷದೊಳಗಿನ 2,381 ಮಕ್ಕಳಲ್ಲಿ ಗಂಭೀರ ಶ್ರವಣ ದೋಷವಿದೆ. ರಾಜ್ಯದ ಎಲ್ಲಾ ಇ.ಎನ್.ಟಿ ತಜ್ಞರ ಸಹಾಯದಿಂದ ಕಿವಿಯ ಸಮಸ್ಯೆಗಳಿಗೆ 10,213 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 11,857 ಫಲಾನುಭವಿಗಳಿಗೆ ಶ್ರವಣ ಸಾಧನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಶ್ವ ಶ್ರವಣ ದಿನದಂದು, ಎಲ್ಲಾ ಜಿಲ್ಲೆಗಳಲ್ಲಿ ಶ್ರವಣ ತಪಾಸಣಾ ಶಿಬಿರ ನಡೆಸಿ ಚಿಕಿತ್ಸೆ ಒದಗಿಸಲಾಗುವುದು. 6 ವರ್ಷದೊಳಗಿನ ಮಕ್ಕಳಲ್ಲಿ ಎರಡು ಕಿವಿಗಳಲ್ಲಿ ಗಂಭೀರ ಸ್ವರೂಪದ ಶ್ರವಣ ದೋಷಗಳನ್ನು ಗುರುತಿಸಿ ಕಾಕ್ಲಿಯಾರ್‌ ಇಂಪ್ಲಾಂಟ್‌ ಅವಶ್ಯಕತೆಯಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ವಿಕಲಾಂಗ ವ್ಯಕ್ತಿಗಳ ಸಬಲೀಕರಣ ಇಲಾಖೆಯಿಂದ ಮತ್ತು ಸಂಘ ಸಂಸ್ಥೆಗಳಿಂದ ಶ್ರವಣ ಸಾಧನಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸುಧಾಕರ್ ವಿವರಿಸಿದ್ದಾರೆ.

ಶ್ರವಣ ದೋಷದ ಬಗ್ಗೆ

20 ಡಿಎಲ್ ಗಳಿಗಿಂತ ಕಡಿಮೆ ಶಬ್ದವನ್ನು ಯಾರಿಗೆ ಕೇಳಲಾಗುವುದಿಲ್ಲವೋ ಅವರಿಗೆ ಶ್ರವಣ ದೋಷದ ಸಾಧ್ಯತೆ ಇರುತ್ತದೆ. ಯಾವುದೇ ವಯಸ್ಸಿನಲ್ಲಿ ಶ್ರವಣ ದೋಷವು ವಿವಿಧ ಕಾರಣಗಳಿಂದ ಸಂಭವಿಸಬಹುದು.

ಶ್ರವಣ ದೋಷಕ್ಕೆ ಕಾರಣ

ಜೆನೆಟಿಕ್ಸ್, ಜೋರಾದ ಶಬ್ದ, ಸೋಂಕು, ದೀರ್ಘಕಾಲದ ಕಾಯಿಲೆಗಳು ( ಟಿ.ಬಿ, ಕ್ಯಾನ್ಸರ್‌), ಗರ್ಭಿಣಿಯರಲ್ಲಿ ಉಂಟಾಗುವ ಸೋಂಕುಗಳು (TORCH) ದೀರ್ಘ ಕಾಲ ತೆಗೆದುಕೊಳ್ಳುವ ಔಷಧಿಗಳಿಂದ, ರಕ್ತ ಸಂಬಂಧದಲ್ಲಿ ಮದುವೆ, ಹೆರಿಗೆ ವೇಳೆ ಸಮಸ್ಯೆ, ಅವಧಿಪೂರ್ವ ಜನನ, ವಯಸ್ಸಿಗೆ ತಕ್ಕಂತೆ ಆಗದ ಬೆಳವಣಿಗೆ, ಜೋರಾದ ಪೆಟ್ಟು ಬೀಳುವುದರಿಂದ, ಕಿವಿಯೊಳಗೆ ಅನವಶ್ಯಕವಾಗಿ ಕಡ್ಡಿ, ಪೆನ್ಸಿಲ್‌ ಅಥವಾ ಇನ್ಯಾವುದೇ ವಸ್ತುಗಳನ್ನು ಹಾಕುವುದರಿಂದ ಶ್ರವಣ ದೋಷವಾಗುತ್ತದೆ.

ಶ್ರವಣ ದೋಷ ತಡೆಗಟ್ಟುವ ಕ್ರಮ

ನಿಯಮಿತ ಶ್ರವಣ ಪರೀಕ್ಷೆ, ನವಜಾತ ಶಿಶುಗಳಿಗೆ ಶ್ರವಣ ಪರೀಕ್ಷೆ, ಗರ್ಭಿಣಿಯರಿಗೆ ಶ್ರವಣ ಪರೀಕ್ಷೆ, ವಯಸ್ಕರು ಹೆಚ್ಚು ಶಬ್ದವನ್ನು ನಿರಂತರವಾಗಿ ಕೇಳುವುದನ್ನು ಕಡಿಮೆ ಮಾಡುವುದರಿಂದ, ಹೆಚ್ಚು ಶಬ್ದ ಇರುವಲ್ಲಿ (ಕಾರ್ಖಾನೆ] ಕಿವಿಗಳಿಗೆ ಹಿಯರ್‌ ಪ್ಯಾಡ್ಸ್ ಅಳವಡಿಕೆ, ರಕ್ತ ಸಂಬಂಧದಲ್ಲಿ ಮದುವೆಯಾಗಬಾರದು, ಪ್ರಾಥಮಿಕ ಹಂತದಲ್ಲಿ ಕಿವಿಯ ತೊಂದರೆಗಳನ್ನು ಗುರುತಿಸಿ ಚಿಕಿತ್ಸೆ, ಯಾವುದೇ ಔಷಧಿಗಳನ್ನು ವೈದ್ಯರ ಸಲಹೆಯಿಂದಲೇ ಪಡೆಯುವುದು, ಧೀರ್ಘ ಕಾಲದ ಚಿಕಿತ್ಸಾವಧಿಯಲ್ಲಿ ನಿಯಮಿತವಾಗಿ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳುವುದು,

ಶ್ರವಣ ದೋಷಕ್ಕೆ ಸರಿಯಾದ ಚಿಕಿತ್ಸೆ

ಪ್ರಾರಂಭಿಕ ಹಂತದಲ್ಲೇ ಶ್ರವಣ ದೋಷ ಪರೀಕ್ಷೆ, ಗುಗ್ಗೆ ಮತ್ತು ಇತರೆ ಸೋರಿಕೆಯಿದ್ದಲ್ಲಿ ಕಿವಿಯನ್ನು ಸ್ವಚ್ಛಗೊಳಿಸುವುದು ಮತ್ತು ಚಿಕಿತ್ಸೆ ನೀಡುವುದು, ಗಂಟಿನ ತೊಂದರೆ, ಕಿವಿಯ ತಮಟೆಗೆ ಪೆಟ್ಟಾಗಿದ್ದಲ್ಲಿ ಚಿಕಿತ್ಸೆ ನೀಡುವುದು, ಸೋಂಕು ಅಥವಾ ಉರಿಯೂತ ಇದ್ದಲ್ಲಿ ಚಿಕಿತ್ಸೆ ನೀಡುವುದರಿಂದ ಶ್ರವಣ ದೋಷಕ್ಕೆ ಚಿಕಿತ್ಸೆ ಪಡೆಯಬೇಕಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ