Davanagere: ಮೋಜು, ಮಸ್ತಿಗಾಗಿ ನಾಲ್ವರನ್ನು ಮದುವೆಯಾದ ಯುವತಿ; ಚೆಲುವೆಯ ಸುಳ್ಳು ಮಾತು ನಂಬಿದ್ದಕ್ಕೆ ಹಾಕಿದಳು ಟೋಪಿ
Dec 28, 2023 06:47 PM IST
ಯುವತಿಯೊರ್ವಳು ನಾಲ್ಕು ಮದುವೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ
ಯುವತಿಯೊರ್ವಳು ಒಂದಲ್ಲ, ಎರಡಲ್ಲ ಬರೋಬ್ಬರಿ 4 ಮದುವೆಯಾಗಿದ್ದಾಳೆ. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.
ದಾವಣಗೆರೆ: ಮೋಜು, ಮಸ್ತಿ, ಹಣದಾಸೆಗೆ ಈ ಚೆಲುವೆಯರು ಎಂತಹ ಹೀನ ಕೃತ್ಯಗಳಿಗೆ ಬೇಕಾದರೂ ಇಳಿಯುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾದಂತೆ ಇದೆ. ಕಾರಣ, ಇಲ್ಲೊಬ್ಬಳು ಚೆಲುವೆ ತಾನು ಮೋಜು ಮಸ್ತಿ ಮಾಡಲು ಹಣ ಮಾಡಬೇಕು ಎಂಬ ಉದ್ದೇಶದಿಂದ ಬರೋಬ್ಬರಿ ನಾಲ್ಕು ಮದುವೆ ಮಾಡಿಕೊಂಡು ಮದುವೆಯಾದ ವ್ಯಕ್ತಿಗಳನ್ನ ಯಾಮಾರಿಸಿದ್ದಾಳೆ. ಇದೀಗ ದಾವಣಗೆರೆಯ ಕೆಟಿಜೆ ನಗರ ಪೊಲೀಸರ ಕೈಗೆ ಈ ವಂಚಕ ಚೆಲುವೆ ಸಿಕ್ಕಿ ಹಾಕಿಕೊಂಡಿದ್ದು, ಆಕೆಯ ಬಣ್ಣ ಬಯಲಾಗಿದೆ.
ಹೌದು, ಈ ಚೆಲುವೆ ದಾವಣಗೆರೆಯ ವ್ಯಕ್ತಿಯೊಬ್ಬನನ್ನ ಪ್ರೀತಿಸಿ ಮದುವೆ ಮಾಡಿಕೊಂಡು ಆತನಿಗೂ ಯಾಮಾರಿಸಿ ಹೋಗಿದ್ದಾಳೆ. ದಾವಣಗೆರೆ ನಗರದ ಡಿಸಿಎಂ ಟೌನ್ ಶಿಪ್ನ ನಿವಾಸಿ ಪ್ರಶಾಂತ್ ಎಂಬಾತನಿಗೂ ಕೂಡ ಈ ಚೆಂದುಳ್ಳ ಚೆಲುವೆ ಕೈ ಕೊಟ್ಟು ಪರಾರಿಯಾಗಿದ್ದಾಳೆ. ಈಕೆ ಹೆಸರು ಸ್ನೇಹ ವಯಸ್ಸು 25 ವರ್ಷ ಇರಬಹುದು. ಮಂಡ್ಯ ಜಿಲ್ಲೆಯ ಪಾಂಡವಪುರದವಳು.
ರೈಲಿನಲ್ಲಿ ಪರಿಚಯದೊಂದಿಗೆ ಶುರುವಾದ ಸ್ನೇಹ, ಪ್ರೀತಿ ಕೊನೆಗೆ ಬೈ ಬೈ
ಎರಡು ವರ್ಷಗಳ ಹಿಂದೆ ದಾವಣಗೆರೆಯ ಪ್ರಶಾಂತ್ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಅದೇ ರೈಲಿನಲ್ಲಿ ಸ್ನೇಹ ಕೂಡ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದಳು. ಹಾಗೆ ರೈಲಿನಲ್ಲಿ ಇಬ್ಬರಿಗೂ ಪರಿಚಯವಾಗಿದ್ದು, ಮೊಬೈಲ್ ನಂಬರ್ ಪಡೆದುಕೊಂಡಿದ್ದಾರೆ. ನಂತರ, ಸ್ನೇಹ ಪ್ರಶಾಂತ್ಗೆ ಕರೆ ಮಾಡಿ ಮಾತುಕತೆ ಶುರು ಮಾಡಿದ್ದಾಳೆ. ನಂತರ ಇಬ್ಬರು ಸ್ನೇಹಿತರಾಗಿ ಅದು ಪ್ರೀತಿಯಲ್ಲಿ ಬಿದ್ದಿದ್ದಾರೆ.
ಹಾಗೆ ಇಬ್ಬರ ಮನೆಯಲ್ಲೂ ವಿಷಯ ತಿಳಿಸಿ ಮದುವೆಯನ್ನ ಕೂಡ ಮಾಡಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದ ಹಿಂದೆ ಪ್ರಶಾಂತ್ ಆಕೆಯನ್ನ ಕರೆದುಕೊಂಡು ಬಂದು ದಾವಣಗೆರೆಯಲ್ಲಿ ಸಣ್ಣದಾಗಿ ಮದುವೆಯನ್ನ ಮಾಡಿಕೊಂಡಿದ್ದಾನೆ. ಅಂದಿನಿಂದ ಸುಮಾರು ಒಂದೂವರೆ ವರ್ಷಗಳ ಕಾಲ ಪ್ರಶಾಂತ್ ಜೊತೆ ಸಂಸಾರ ನಡೆಸಿದ್ದ ಸ್ನೇಹ, ಎರಡು ತಿಂಗಳ ಹಿಂದೆ ನಾನು ಪ್ರೆಗ್ನೆಂಟ್ ಆಗಿದ್ದು, ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದಾಳೆ. ಸ್ನೇಹ ತವರು ಮನೆಗೆ ಹೋಗಿ ವಾಪಸ್ ಬರಲು ನಿರಾಕರಿಸಿದ್ದಾಳೆ.
ಹೀಗಾಗಿ, ಕಳೆದ ಒಂದು ತಿಂಗಳ ಹಿಂದೆ ಪ್ರಶಾಂತ್ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಸ್ನೇಹ ಕಾಣೆಯಾಗಿರುವ ಬಗ್ಗೆ ದೂರನ್ನ ದಾಖಲು ಮಾಡಿದ್ದ. ನಂತರ ಆಕೆಯ ಸೋಷಿಯಲ್ ಮೀಡಿಯಾ ಖಾತೆಗಳನ್ನ ಪರಿಶೀಲಿಸಿದ್ದು, ಅಲ್ಲದೇ, ಆಕೆಯ ಸಂಬಂಧಿಯೊಬ್ಬರು ಕೂಡ ಆಕೆ ಸರಿಯಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಆಗ ಆಕೆಯ ಬಗ್ಗೆ ವಿಚಾರಿಸಿದಾಗ ಸ್ನೇಹ ಈಗಾಗಲೇ ಮೂರು ಮದುವೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೂರನೇ ವ್ಯಕ್ತಿಗೆ ಯಮಾರಿಸಿ 4ನೇ ಮದುವೆಯಾಗಿ ಲೇಡಿ
ಮನೆಯಲ್ಲಿ ಹಿರಿಯರು ಮೊದಲು ಮೇಲುಕೋಟೆಯ ಮಹೇಶ್ ಎಂಬಾತನೊಂದಿಗೆ ಸ್ನೇಹಳ ಮದುವೆ ಮಾಡಿದ್ದರು. ಆದರೆ, ಅದೇನಾಯ್ತೋ ಏನೋ ಏಕಾಏಕಿ ಆತನನ್ನ ಬಿಟ್ಟು ಬಂದು ಬೆಂಗಳೂರಿನ ವೆಂಕಟೇಶ್ ಎಂಬುವರನ್ನ ಮದುವೆ ಮದುವೆಯಾಗಿದ್ದಳು. ನಂತರ ಆತನನ್ನ ಬಿಟ್ಟು ದಾವಣಗೆರೆಯ ಪ್ರಶಾಂತ್ ಜೊತೆ ಜೀವನ ಶುರು ಮಾಡಿದ್ದಳು. ಆದರೆ, ಇದೀಗ ಆತನನ್ನು ಬಿಟ್ಟಿದ್ದಾಳೆ. ಅಲ್ಲದೇ, ಪ್ರಶಾಂತ್ ನನ್ನ ಬಿಟ್ಟು ಹೋಗಿ ಮತ್ತೆ ಬೆಂಗಳೂರಿನಲ್ಲಿ ರಘು ಎಂಬಾತನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ.
ಹೀಗೆ, ಸ್ನೇಹ ಸುಳ್ಳುಗಳನ್ನ ಹೇಳಿ ತನ್ನ ಮಾತಿನ ಮೂಲಕ ಮರಳು ಮಾಡಿ ನಾಲ್ವರು ವ್ಯಕ್ತಿಗಳ ಬಾಳಲ್ಲಿ ಆಟವಾಡಿದ್ದಾಳೆ. ಇದೀಗ ಪ್ರಶಾಂತ್ ನೀಡಿರುವ ದೂರಿನ ಮೇರೆಗೆ ದಾವಣಗೆರೆ ಪೊಲೀಸರು ಆಕೆಯನ್ನ ವಶಕ್ಕೆ ಪಡೆದಿದ್ದು, ವಿಚಾರಣೆಯನ್ನ ನಡೆಸಿದ್ದಾರೆ. ಈಗಲೂ ಆಕೆ ಜೊತೆ ಬಂದರೆ ಬಾಳುವುದಾಗಿ ಪ್ರಶಾಂತ್ ಹೇಳುತ್ತಿದ್ಧಾನೆ. ಆದರೆ, ಆಕೆ ನನಗೆ ಬೇಡ ನಾನು ಬೇರೊಬ್ಬನ ಮದುವೆಯಾಗಿದ್ದು, ಆತನೊಂದಿಗೆ ಇರುವುದಾಗಿ ಹೇಳುತ್ತಿದ್ದಾಳೆ. ಆಕೆಯ ಚಲ್ಲಾಟದಿಂದ ಕೋಪಗೊಂಡಿರು ಪ್ರಶಾಂತ್ ಆಕೆಯ ವಿರುದ್ಧ ತಾನು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಈಗ ನಮಗೆ ನಾಲ್ವರಿಗೆ ವಂಚನೆ ಮಾಡಿದ್ದಾಳೆ. ಮುಂದೆ ಯಾರಿಗೂ ಈ ರೀತಿ ಮಾಡದಂತೆ ಬುದ್ದಿ ಕಲಿಸುವುದಾಗಿ ಹೇಳುತ್ತಿದ್ಧಾರೆ.