Crime News: ಮನೆ ಕಟ್ಟಿಸುವ ಹಣಕ್ಕಾಗಿ ಬಾಲಕನ ಕಿಡ್ನಾಪ್ ಮಾಡಿ ಕೊಲೆ, ಮಹಾರಾಷ್ಟ್ರದಲ್ಲಿ ಆರೋಪಿ ಮೌಲ್ವಿ ಸೆರೆ
Mar 26, 2024 08:58 AM IST
ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಕೊಲೆ ಮಾಡಲಾಗಿದೆ.
- ಹಣಕ್ಕಾಗಿ ತನ್ನೂರಿನ ಬಾಲಕನನ್ನೇ ಅಪಹರಿಸಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ.
ಥಾಣೆ: ತಾನು ಮನೆ ಕಟ್ಟಿಸಬೇಕು. ಇದಕ್ಕಾಗಿ ಹಣ ಹೊಂದಿಸಬೇಕು ಎಂದು ಪ್ರಯತ್ನಿಸುತ್ತಲೇ ಇದ್ದ ಯುವಕನೊಬ್ಬ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಅಮಾನವೀಯ ಘಟನೆ ಇದು. ಚಲನಚಿತ್ರಗಳ ಶೈಲಿಯಲ್ಲೇ ಮಗುವನ್ನು ಅಪಹರಿಸಿಕೊಂಡು ಹೋಗಿ ತನ್ನ ಮನೆಯಲ್ಲಿ ಇರಿಸಿಕೊಂಡ ಯುವಕ ಕೊನೆಗೆ ತನ್ನನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಾಲಕನನ್ನು ಕೊಂದು ಹಾಕಿದ್ದಾನೆ. ಬಾಲಕನ ಶವ ಆತನ ಮನೆಯಲ್ಲಿಯೇ ಪತ್ತೆಯಾದರೆ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಇಂತಹ ಘಟನೆ ನಡೆದಿರುವುದು ಮಹಾರಾಷ್ಟ್ರದ ಮುಂಬೈ ನಗರಕ್ಕೆ ಹೊಂದಿರುವ ಥಾಣೆ ಜಿಲ್ಲೆಯಲ್ಲಿ. ಘಟನೆ ಸಂಬಂಧ ಆರೋಪಿ ಜತೆಗೆ ಆತನ ಸಹೋದರನನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಇತರರ ಪಾತ್ರ ಇರುವ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಥಾಣೆ ಸಮೀಪದ ಗೋರೇಗಾಂವ್ ಎನ್ನುವ ಗ್ರಾಮದಲ್ಲಿ 9 ವರ್ಷದ ಇಬಾದ್ ಎನ್ನುವ ಬಾಲಕ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ವಾಪಾಸಾಗುತ್ತಿದ್ದ. ಈ ವೇಳೆ ಅದೇ ಗ್ರಾಮದಲ್ಲಿ ದರ್ಜಿಯಾಗಿರುವ ಸಲ್ಮಾನ್ ಮೌಲ್ವಿ ಎಂಬಾತ ಬಾಲಕನನ್ನು ಅಪಹರಿಸಿ ತನ್ನ ಮನೆಯ ಹಿಂದಿನ ಜಾಗದಲ್ಲಿ ಅವಿತು ಇಟ್ಟಿದ್ದ. ಸಂಜೆಯಾದರೂ ಮಗ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಮಸೀದಿಯಿಂದಲೂ ಆತ ಹೋದ ಮಾಹಿತಿ ದೊರೆತಿತ್ತು. ಸ್ನೇಹಿತರ ಮನೆಯಲ್ಲೂ ಇರಲಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಇದೇ ವೇಳೆ ಬಾಲಕನ ತಂದೆ ಮುದಾಸಿರ್ಗೆ ಕರೆ ಮಾಡಿದ್ದ ಸಲ್ಮಾನ್ ನಿಮ್ಮ ಮಗನನ್ನು ಅಪರಿಸಲಾಗದೆ. 23 ಲಕ್ಷ ರೂ. ನೀಡಿದರೆ ನಿಮ್ಮ ಮಗನನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ. ಆನಂತರ ಆತನ ಸಂಪರ್ಕ ಸಿಕ್ಕಿರಲಿಲ್ಲ. ಮಗ ಎಲ್ಲಿದ್ದಾನೆ. ಹಣ ಎಲ್ಲಿಗೆ ತರಬೇಕು ಎನ್ನುವ ಮಾಹಿತಿಯನ್ನು ನೀಡಿರಲಿಲ್ಲ. ಸಿಮ್ ಬದಲಿಸಿ ಕರೆ ಮಾಡಿದ್ದ ಆರೋಪಿ ಹಣ ಹೊಂದಿಸುವಂತೆ ಬೇಡಿಕೆ ಇಟ್ಟಿದ್ದ ಎಂದು ಎನ್ಡಿಟಿವಿ ವರದಿ ಮಾಡಿದೆ.
ಗ್ರಾಮಸೃರಿಗೆ ಮಾಹಿತಿ ತಿಳಿದು ಅವರೂ ಹುಡುಕಾಟ ನಡೆಸಿದ್ದರು. ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಕೊನೆಗೆ ಪೊಲೀಸರು ಆತನ ಮೊಬೈಲ್ ಲೊಕೇಷನ್ ಪತ್ತೆ ಮಾಡಿದಾಗ ಅದೇ ಗ್ರಾಮವನ್ನು ತೋರಿಸಿತ್ತು. ಕೂಡಲೇ ತೆರಳಿದಾಗ ಅಲ್ಲಿ ಆರೋಪಿ ಸಲ್ಮಾನ್ ಪತ್ತೆಯಾಗಿದ್ದ. ಆದರೆ ಬಾಲಕ ಇರಲಿಲ್ಲ. ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಬಾಲಕನನ್ನು ಕೊಲೆ ಮಾಡಿ ಅಲ್ಲಿಯೇ ಶವವನ್ನು ಇರಿಸಿರುವುದಾಗಿ ಮಾಹಿತಿ ನೀಡಿದ್ದ. ಬಾಲಕನ ಮೃತ ದೇಹವನ್ನು ಪೊಲೀಸರು ಪಡೆದುಕೊಂಡಿದ್ದರು.
ಆತ ಹಣಕ್ಕಾಗಿ ಬಾಲನನ್ನು ಅಪಹರಿಸಿದ್ದ. ತಾನು ಮನೆ ಕಟ್ಟಿಸಬೇಕು ಎನ್ನುವ ಉದ್ದೇಶದಿಂದ ಹಣಕ್ಕಾಗಿ ಈ ಕೃತ್ಯ ಎಸಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ಆದರೆ ಆತ ಬಾಲಕನನ್ನು ಕೊಲೆ ಮಾಡಿದ್ದಾನೆ. ಆರೋಪಿ ಸಲ್ಮಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಥಾಣೆ ಎಸ್ಪಿ ಡಾ.ಡಿ.ಎಸ್.ಸ್ವಾಮಿ ಖಚಿತಪಡಿಸಿದ್ದಾರೆ.
ಸಲ್ಮಾನ್ ಜತೆಗೆ ಆತನ ಸಹೋದರ ಸಫೌನ್ ಮೌಲ್ವಿಯನ್ನು ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಇಡೀ ಪ್ರಕರಣದಲ್ಲಿ ಸಲ್ಮಾನ್ ಕುಟುಂಬದವರ ಪಾತ್ರ ಇರುವ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಹಣದ ಜತೆಗೆ ಬೇರೆ ಕಾರಣಗಳಿಗೂ ಈ ಕೃತ್ಯ ನಡೆದಿದೆಯೇ ಎನ್ನುವ ಮಾಹಿತಿಯನ್ನೂ ಕಲೆ ಹಾಕಲಾಗುತ್ತಿದೆ ಎನ್ನುವುದು ಪೊಲೀಸರ ವಿವರಣೆ.