Rahul Gandhi: 'ಸರ್ಕಾರ ನಾಟಕ ಮಾಡುತ್ತಿದೆ, ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ಹೇಳಲಾರೆ'
Mar 16, 2023 09:11 PM IST
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ
- ಲಂಡನ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ನೀಡಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟುಹಿಡಿದಿದ್ದು, ಸದನದಲ್ಲಿ ಇದೇ ವಿಚಾರಕ್ಕೆ ಗದ್ದಲ ಉಂಟಾಗುತ್ತಿದೆ. ಇತ್ತ ರಾಹುಲ್ ಗಾಂಧಿ ಸಂಸತ್ತಿನಲ್ಲಿ "ನನಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಹೇಳಿದ್ದಾರೆ.
ನವದೆಹಲಿ: ಲಂಡನ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆಗೆ ಕ್ಷಮೆಯಾಚಿಸುವಂತೆ ಬಿಜೆಪಿ ಪಟ್ಟುಹಿಡಿದಿದ್ದು, ಸದನದಲ್ಲಿ ಇದೇ ವಿಚಾರಕ್ಕೆ ಗದ್ದಲ ಉಂಟಾಗುತ್ತಿದೆ. ಇತ್ತ ರಾಹುಲ್ ಗಾಂಧಿ ಸಂಸತ್ತಿನಲ್ಲಿ "ನನಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಹೇಳಿದ್ದಾರೆ.
ಬ್ರಿಟನ್ನಿಂದ ಭಾರತಕ್ಕೆ ಮರಳಿದ ನಂತರ ರಾಹುಲ್ ಗಾಂಧಿ ಇಂದು ಮೊದಲ ಬಾರಿಗೆ ಸಂಸತ್ತಿಗೆ ಬಂದರು. ಸಂಸತ್ತಿನ ಕಲಾಪವನ್ನು ಮುಂದೂಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಅದಾನಿ ವಿಚಾರಕ್ಕೆ ಕೇಂದ್ರ ಸರ್ಕಾರ ಹೆದರಿದ್ದು, ನನ್ನ ವಿಚಾರದಲ್ಲಿ ನಾಟಕ ಮಾಡುತ್ತಿದೆ" ಎಂದರು.
"ಸದನದಲ್ಲಿ ಮಾತನಾಡುವ ಕುರಿತು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಂದೇಶ ನೀಡಿದ್ದೇನೆ. ಸರ್ಕಾರದ ನಾಲ್ವರು ಸಚಿವರು ಸದನದಲ್ಲಿ ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ನನ್ನ ವಿರುದ್ಧ ಆರೋಪಗಳು ಬಂದಿರುವ ಸಂಸತ್ತಿನಲ್ಲಿ ಮಾತನಾಡುವುದು ನನ್ನ ಹಕ್ಕು. ಆದರೆ ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ಸಿಗುತ್ತದೆ ಎಂದು ನಾನು ಭಾವಿಸಲಾರೆ. ಇಂದು ನಾನು ಆಗಮಿಸಿದ ಒಂದು ನಿಮಿಷದಲ್ಲಿ ಅವರು ಸದನವನ್ನು ಮುಂದೂಡಿದರು. ನಾನು ನನ್ನ ನಿಲುವನ್ನು ಹೇಳಲು ಬಯಸುತ್ತೇನೆ" ಎಂದು ರಾಹುಲ್ ಗಾಂಧಿ ತಿಳಿಸಿದರು.
"ಅದಾನಿ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ಸಂಬಂಧದ ಕುರಿತು ಕೆಲವು ದಿನಗಳ ಹಿಂದೆ ಸಂಸತ್ ಭವನದಲ್ಲಿ ನಾನು ಪ್ರಶ್ನೆಗಳನ್ನು ಕೇಳಿದ್ದೆ. ಮುಖ್ಯ ಪ್ರಶ್ನೆ ಇನ್ನೂ ಇರುವುದರಿಂದ ಅವರು ಸಂಸತ್ತಿನಲ್ಲಿ ಮಾತನಾಡಲು ಬಿಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸಂಬಂಧವೇನು ಮತ್ತು ಅವರಿಗೆ ರಕ್ಷಣಾ ಒಪ್ಪಂದಗಳನ್ನು ಏಕೆ ನೀಡಲಾಗುತ್ತಿದೆ?" ಎಂದು ಗಾಂಧಿ ಕೇಳಿದರು.
ಇಂದು ಸದನಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, "ವಿದೇಶಿ ನೆಲದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ. ಲೋಕಸಭೆಯಲ್ಲಿ ನನಗೆ ಅವಕಾಶ ನೀಡಿದರೆ ಖಂಡಿತ ಈ ಕುರಿತು ಮಾತನಾಡುತ್ತೇನೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದು ಸತ್ಯ. ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದ್ದು, ವಿಪಕ್ಷಗಳ ಅಸ್ತಿತ್ವವನ್ನೇ ನಾಶ ಮಾಡಲು ಹೊರಟಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಗುರಿ ಮಾಡಲಾಗುತ್ತಿದೆ. ಈ ಸತ್ಯವನ್ನೇ ನಾನು ಲಂಡನ್ನ ನನ್ನ ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಭಾರತದ ಇಂದಿನ ಸ್ಥಿತಿ ಜಗತ್ತಿನ ಪ್ರಜಾತಂತ್ರವಾದಿಗಳಿಗೆ ಆತಂಕ ತರಿಸಿರುವುದು ಸುಳ್ಳಲ್ಲ" ಎಂದು ಹೇಳಿದ್ದರು.
ಲೋಕಸಭೆ ಮತ್ತು ರಾಜ್ಯಸಭೆಯು ಸತತ ಮೂರನೇ ದಿನವೂ ಅಡೆತಡೆಗಳನ್ನು ಎದುರಿಸಿತು, ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಅದಾನಿ-ಹಿಂಡೆನ್ಬರ್ಗ್ ವಿವಾದದ ಬಗ್ಗೆ ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒತ್ತಾಯಿಸಿದವು ಮತ್ತು ಬಿಜೆಪಿ ಸದಸ್ಯರು ರಾಹುಲ್ ಗಾಂಧಿಯವರ ಹೇಳಿಕೆಗಳಿಗೆ ಕ್ಷಮೆಯಾಚಿಸಲು ಒತ್ತಾಯಿಸಿದರು.
ಅನುರಾಗ್ ಠಾಕೂರ್, ಸ್ಮೃತಿ ಇರಾನಿ, ಕಿರಣ್ ರಿಜಿಜು ಸೇರಿದಂತೆ ಕೇಂದ್ರ ಸಚಿವರು ಬ್ರಿಟನ್ನಲ್ಲಿ ಕಾಂಗ್ರೆಸ್ ನಾಯಕನ ಹೇಳಿಕೆಗೆ ತರಾಟೆಗೆ ತೆಗೆದುಕೊಂಡರು. ಇಂದು ಕೇಂದ್ರ ಸಚಿವ ಕಿರಣ್ ರಿಜಿಜು, ದೇಶದ "ಮಾನನಷ್ಟ" ಕುರಿತು ನಾಗರಿಕರು ಮೌನವಾಗಿರಲು ಸಾಧ್ಯವಿಲ್ಲ. ನಮ್ಮನ್ನು ಎಷ್ಟು ಬೇಕಾದರೂ ನಿಂದಿಸಿ ಆದರೆ ರಾಷ್ಟ್ರವನ್ನು ಅವಮಾನಿಸಲು ನಾವು ಬಿಡಲಾರೆವು, ರಾಹುಲ್ ಅವರು ನ್ಯಾಯಾಂಗವನ್ನು ಅವಮಾನಿಸಿದ್ದಾರೆ, ನಮ್ಮ ನ್ಯಾಯಾಂಗ ವ್ಯವಸ್ಥೆಯು ಸದೃಢವಾಗಿದೆ, ರಾಹುಲ್ ಅವರು ಅವಮಾನಿಸಿದ್ದಕ್ಕಾಗಿ ದೇಶದ ಕ್ಷಮೆಯಾಚಿಸಬೇಕು ಎಂಬುದು ಒಂದೇ ಬೇಡಿಕೆ. ಭಾರತವು ಇನ್ನು ಮುಂದೆ ಅವರ ದೇಶವಲ್ಲ, ಅವರು ಈ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ವಿಭಾಗ