Gambia: ಭಾರತ ಮೂಲದ ಸಿರಪ್ ಸೇವಿಸಿ ಗಾಂಬಿಯಾದಲ್ಲಿ 66 ಮಕ್ಕಳ ಸಾವು! ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
Oct 06, 2022 09:38 PM IST
ಭಾರತದಲ್ಲಿ ಉತ್ಪಾದಿಸಿದ ಸಿರಪ್ನಿಂದ ಮಕ್ಕಳ ಸಾವು!
- ಮುಂದೆ ಯಾವುದೇ ರೋಗಿಗಳಿಗೂ ಈ ಔಷಧಗಳಿಂದ ತೊಂದರೆಯಾಗದಂತೆ ತಡೆಯಲು ಎಲ್ಲಾ ದೇಶಗಳು ಈ ಉತ್ಪನ್ನಗಳನ್ನು ಪತ್ತೆಹಚ್ಚಲು ತಿಳಿಸಲಾಗಿದೆ. ಅಲ್ಲದೆ ಈಗಾಗಲೇ ಮಾರಾಟಕ್ಕೆ ಸಿದ್ಧವಾಗಿರುವ ಔಷಧಗಳನ್ನು ಮಾರಾಟವಾಗದಂತೆ ತಡೆಯಲು ವಿಶ್ವಸಂಸ್ಥೆ ಸಲಹೆ ನೀಡಿದೆ.
ಪಶ್ಚಿಮ ಆಫ್ರಿಕಾದ ಸಣ್ಣ ದೇಶವಾದ ಗಾಂಬಿಯಾದಲ್ಲಿ ಮೂತ್ರಪಿಂಡದ ಸಮಸ್ಯೆಯಿಂದ 60ಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣ ಎನ್ನಲಾದ ಕೆಮ್ಮು ಮತ್ತು ಶೀತದ ಸಿರಪ್ಗಳ ಸೇವನೆಯನ್ನು ತಡೆಯಲು ತುರ್ತು ಮನೆ ಮನೆ ಪ್ರಚಾರ ಆರಂಭವಾಗಿದೆ. ಈ ಸಿರಪ್ ಭಾರತ ಮೂಲದ್ದು ಎಂಬುದೇ ಇಲ್ಲಿರುವ ವಿಚಾರ.
ಈ ಬಗ್ಗೆ ಸುದ್ದಿಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ನೊಂದಿಗೆ ಮಾತನಾಡಿದ ಇಲ್ಲಿನ ಆರೋಗ್ಯ ನಿರ್ದೇಶಕ ಡಾ.ಮುಸ್ತಫಾ ಬಿಟ್ಟಾಯೆ, ತೀವ್ರವಾದ ಮೂತ್ರಪಿಂಡದ ಗಾಯದಿಂದ ಮಕ್ಕಳ ಸಾವಿನ ಸರಮಾಲೆ ದೃಢಪಟ್ಟಿದೆ. ಇದರಿಂದಾಗಿ ದೇಶದ 2.4 ಮಿಲಿಯನ್ ಜನರು ಮತ್ತು ಪ್ರಪಂಚದಾದ್ಯಂತ ಮತ್ತಷ್ಟು ಸಾವಿನ ಭೀತಿ ಎದುರಾಗಿದೆ ಎಂದಿದ್ದಾರೆ.
ಇನ್ನೊಂದೆಡೆ ಸಾವಿನ ಬಗ್ಗೆ ಮಾಹಿತಿ ಪಡೆದ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಎಚ್ಚರಿಕೆ ನೀಡಿದೆ.
“ಗಾಂಬಿಯಾದಲ್ಲಿ ತೀವ್ರವಾದ ಮೂತ್ರಪಿಂಡದ ಗಾಯಗಳಿಂದ 66 ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಕಲುಷಿತ ಔಷಧಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ವೈದ್ಯಕೀಯ ಉತ್ಪನ್ನದ ಎಚ್ಚರಿಕೆಯನ್ನು ನೀಡಿದೆ” ಎಂದು WHO ಡೈರೆಕ್ಟರ್ ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಬುಧವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಬಾಳಿ ಬದುಕಬೇಕಾಗಿದ್ದ ಮಕ್ಕಳು ಸಾವನ್ನಪ್ಪಿರುವುದು ಅವರ ಕುಟುಂಬಗಳಿಗೆ ಹೃದಯ ವಿದ್ರಾವಕ ಸನ್ನಿವೇಶವಾಗಿದೆ” ಎಂದು ಅವರು ಹೇಳಿದ್ದಾರೆ.
ನಾಲ್ಕು ಔಷಧಗಳು ಕೆಮ್ಮು ಮತ್ತು ಶೀತದ ಸಿರಪ್ಗಳಾಗಿದ್ದು, ಅವುಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ ಎಂದು ವಿಶವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ. ಕಲುಷಿತ ಔಷಧ ಉತ್ಪನ್ನಗಳು ಇಲ್ಲಿಯವರೆಗೆ ಗ್ಯಾಂಬಿಯಾದಲ್ಲಿ ಮಾತ್ರ ಪತ್ತೆಯಾಗಿವೆ. ಅವುಗಳನ್ನು ಇತರ ದೇಶಗಳಿಗೂ ವಿತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ. WHO ಭಾರತದಲ್ಲಿನ ಕಂಪನಿ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ತನಿಖೆ ನಡೆಸುತ್ತಿದೆ ಎಂದು ಅದು ಹೇಳಿದೆ.
ಮುಂದೆ ಯಾವುದೇ ರೋಗಿಗಳಿಗೂ ಈ ಔಷಧಗಳಿಂದ ತೊಂದರೆಯಾಗದಂತೆ ತಡೆಯಲು ಎಲ್ಲಾ ದೇಶಗಳು ಈ ಉತ್ಪನ್ನಗಳನ್ನು ಪತ್ತೆಹಚ್ಚಲು ತಿಳಿಸಲಾಗಿದೆ. ಅಲ್ಲದೆ ಈಗಾಗಲೇ ಮಾರಾಟಕ್ಕೆ ಸಿದ್ಧವಾಗಿರುವ ಔಷಧಗಳನ್ನು ಮಾರಾಟವಾಗದಂತೆ ತಡೆಯಲು ವಿಶ್ವಸಂಸ್ಥೆ ಸಲಹೆ ನೀಡಿದೆ.
ಮಕ್ಕಳು ಸಾವನ್ನಪ್ಪಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗ್ಯಾಂಬಿಯಾ ದೇಶವು, ರೆಡ್ ಕ್ರಾಸ್ ಸೊಸೈಟಿಯೊಂದಿಗೆ ಕೈಜೋಡಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಿದೆ. ಇಲ್ಲಿನ ಆರೋಗ್ಯ ಸಚಿವಾಲಯವು ನೂರಾರು ಯುವಕರನ್ನು ಮನೆ ಮನೆ ಪ್ರಚಾರದ ಮೂಲಕ ಈ ಸಿರಪ್ಗಳನ್ನು ಸಂಗ್ರಹಿಸಲು ಕಳುಹಿಸಿದೆ. ಗ್ಯಾಂಬಿಯಾದ ವೈದ್ಯಕೀಯ ಸಂಶೋಧನಾ ಮಂಡಳಿಯೂ ಎಚ್ಚರಿಕೆಯನ್ನು ನೀಡಿದೆ.
“ಕಳೆದ ವಾರದಲ್ಲಿ, ತೀವ್ರವಾದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದ ಮಗು ದುರದೃಷ್ಟವಶಾತ್ ಸಾವನ್ನಪ್ಪಿದೆ. ನಮ್ಮ ಆಸ್ಪತ್ರೆಗೆ ದಾಖಲಾಗುವ ಮುನ್ನ ಮಗುವಿಗೆ ಈ ನಾಲ್ಕು ಔಷಧಿಗಳಲ್ಲಿ ಒಂದನ್ನು ನೀಡಲಾಗಿದೆ. ಹೀಗಾಗಿ ಇದೇ ಔಷಧಿಯಿಂದ ಸಾವು ಸಂಭವಿಸಿದೆ ಎಂಬುದನ್ನು ನಾವು ಖಚಿತಪಡಿಸಲು ಸಾಧ್ಯವಾಯಿತು. ಇದನ್ನು ಗ್ಯಾಂಬಿಯಾದಲ್ಲಿನ ಔಷಧಾಲಯದಲ್ಲಿ ಖರೀದಿಸಲಾಗಿದೆ” ಎಂದು ಇಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
“ಔಷಧವು ಗಮನಾರ್ಹ ಪ್ರಮಾಣದ ವಿಷವನ್ನು ಹೊಂದಿದೆ ಎಂದು ಪತ್ತೆ ಹಚ್ಚಲಾಗಿದೆ. ಇದು ಮೂತ್ರಪಿಂಡಗಳನ್ನು ಬದಲಾಯಿಸಲಾಗದಷ್ಟು ಹಾನಿಗೊಳಿಸುತ್ತದೆ” ಎಂದು ಹೇಳಲಾಗಿದೆ.
ಭಾರತದಲ್ಲಿ, ಫೆಡರಲ್ ರೆಗ್ಯುಲೇಟರ್ ಮತ್ತು ಹರಿಯಾಣ ರಾಜ್ಯದ ಅಧಿಕಾರಿಗಳು ಈ ಔಷಧಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಪರೀಕ್ಷಿಸಿದ 23 ಔಷಧಿ ಮಾದರಿಗಳಲ್ಲಿ, ನಾಲ್ಕು ಕಲುಷಿತಗೊಂಡಿವೆ ಎಂದು ತಿಳಿದುಬಂದಿದೆ. ಇದರ ವಿಶ್ಲೇಷಣ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯ ಈ ಔಷಧಗಳ ಬಗ್ಗೆ ಮಾಧ್ಯಮಗಳೊಂದಿಗೆ ಯಾವುದೆ ವಿಚಾರಗಳನ್ನು ಬಾಹ್ಯವಾಗಿ ಹಂಚಿಕೊಂಡಿಲ್ಲ.