20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್ನಲ್ಲಿ 26 ಸಾವು, ಆರ್ಟಿಐನಿಂದ ಮಾಹಿತಿ ಬಹಿರಂಗ
May 02, 2024 12:22 PM IST
20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರ್ಟಿಐನಿಂದ ಮಾಹಿತಿ ಬಹಿರಂಗವಾಗಿದೆ. ಐಐಟಿ ಮದ್ರಾಸ್ ಒಂದರಲ್ಲೇ 26 ವಿದ್ಯಾರ್ಥಿಗಳು ಸಾವಿಗೆ ಶರಣಾಗಿದ್ದಾರೆ.
2005 ಮತ್ತು 2024 ರ ನಡುವಿನ ಅವಧಿಯಲ್ಲಿ ಐಐಟಿ ಮದ್ರಾಸ್ನಲ್ಲಿ 26 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಐಟಿ ಕಾನ್ಪುರ್ 18, ಐಐಟಿ ಖರಗ್ಪುರ 13 ಹಾಗೂ ಐಐಟಿ ಬಾಂಬೆಯಲ್ಲಿ 10 ವಿದ್ಯಾರ್ಥಿಗಳು ನೇಣಿಗೆ ಶರಣಾಗಿದ್ದಾರೆ.
ದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯ 2005 ರಿಂದ ಈವರೆಗೆ ಕನಿಷ್ಠ 115 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಐಐಟಿ ಕಾನ್ಪುರದ ಹಳೆಯ ವಿದ್ಯಾರ್ಥಿ ಮತ್ತು ಗ್ಲೋಬಲ್ ಐಐಟಿ ಅಲುಮ್ನಿ ಸಪೋರ್ಟ್ ಗ್ರೂಪ್ನ ಸಂಸ್ಥಾಪಕ ಧೀರಜ್ ಸಿಂಗ್ ಸಲ್ಲಿಸಿದ ಮಾಹಿತಿ ಹಕ್ಕು (ಆರ್ಟಿಐ) ಅರ್ಜಿಯ ಮೂಲಕ ಪಡೆದ ಅಂಕಿ ಅಂಶಗಳು ಬಹಿರಂಗಪಡಿಸಿವೆ. ಈ ಪೈಕಿ 98 ಸಾವುಗಳು ಕ್ಯಾಂಪಸ್ನಲ್ಲಿ ಸಂಭವಿಸಿವೆ. ಇದರಲ್ಲಿ 56 ವಿದ್ಯಾರ್ಥಿಗಳು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರೆ, 17 ಸಾವುಗಳು ಕ್ಯಾಂಪಸ್ನಿಂದ ಹೊರಗೆ ಸಂಭವಿಸಿದ ಪ್ರಕರಣಗಳಾಗಿವೆ.
ಅಂಕಿಅಂಶಗಳ ಪ್ರಕಾರ, 2005 ಮತ್ತು 2024 ರ ನಡುವೆ, ಐಐಟಿ ಮದ್ರಾಸ್ನಲ್ಲಿ (Madras IIT) 26, ಐಐಟಿ ಕಾನ್ಪುರದಲ್ಲಿ (IIT Kanpur) 18, ಐಐಟಿ ಖರಗ್ಪುರದಲ್ಲಿ (Kharagpur IIT) 13 ಹಾಗೂ ಐಐಟಿ ಬಾಂಬೆಯಲ್ಲಿ (IIT Bombay) 10 ಸಾವುಗಳು ದಾಖಲಾಗಿವೆ. 2024ರ ಏಪ್ರಿಲ್ ವರೆಗೆ ನಾಲ್ಕೇ ತಿಂಗಳಲ್ಲಿ ಐದು ಸಾವುಗಳು ದಾಖಲಾಗಿವೆ. 2023ರ ಫೆಬ್ರವರಿ 12 ರಂದು ಐಐಟಿ ಬಾಂಬೆ ವಿದ್ಯಾರ್ಥಿ ದರ್ಶನ್ ಸೋಲಂಕಿ ಅವರ ಸಾವಿನ ಬಳಿಕ ಕಳೆದ 20 ವರ್ಷಗಳಲ್ಲಿ ದೇಶಾದ್ಯಂತ ಐಐಟಿಗಳ ಸಾವಿನ ಡೇಟಾವನ್ನು ಕೋರಿ ಆರ್ಟಿಐ ಅರ್ಜಿ ಸಲ್ಲಿಸಲಾಗಿತ್ತು. "ಕೇಂದ್ರ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಬರುವ ಉನ್ನತ ಶಿಕ್ಷಣ ಇಲಾಖೆ ಆರಂಭದಲ್ಲಿ ನನ್ನ ಅರ್ಜಿಯನ್ನು ತಿರಸ್ಕರಿಸಿತು ಮತ್ತು ವೈಯಕ್ತಿಕ ಸಂಸ್ಥೆಗಳಿಗೆ ಪ್ರತ್ಯೇಕ ಆರ್ಟಿಐ ಸಲ್ಲಿಸುವಂತೆ ಕೇಳಿತು" ಎಂದು ಆರ್ಟಿಐ ಅಡಿಯಲ್ಲಿ ಮಾಹಿತಿ ಪಡೆದಿರುವ ಧೀರಜ್ ಸಿಂಗ್ ಹೇಳಿದ್ದಾರೆ.
ನಾನು ಮನವಿ ಮಾಡಿದ ನಂತರ ಸಚಿವಾಲಯವು ಎಲ್ಲಾ ಐಐಟಿಗಳಿಗೆ ಡೇಟಾವನ್ನು ಹಂಚಿಕೊಳ್ಳಲು ಸೂಚನೆ ನೀಡಿತು. ಆದರೂ ಎಂಟು ತಿಂಗಳಲ್ಲಿ 23 ಐಐಟಿಗಳಲ್ಲಿ ಕೇವಲ 13 ಮಂದಿ ಸಾವಿನ ಬಗ್ಗೆ ಡೇಟಾವನ್ನು ಹಂಚಿಕೊಂಡಿವೆ. ಆರ್ಟಿಐ ಅಡಿಯಲ್ಲಿ ನಾನು ಕೆಲವು ಡೇಟಾವನ್ನು ಸ್ವೀಕರಿಸಿದ್ದೇನೆ". "ಸಾರ್ವಜನಿಕ ಡೊಮೇನ್ನಲ್ಲಿರುವ ಅಧಿಕೃತ ಮೂಲಗಳಿಂದ ಡೇಟಾವನ್ನು ಸಂಗ್ರಹಿಸಿದ್ದೇನೆ, ಇದರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ಅಂಕಿಅಂಶಗಳು ಮತ್ತು ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಗಳು ಸೇರಿವೆ.
ಕಳೆದ ಒಂದು ವರ್ಷದಲ್ಲಿ ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಸುದ್ದಿಗಳು ಹೆಚ್ಚಿನ ಕಳವಳವನ್ನು ಸೃಷ್ಟಿಸಿವೆ. "ದೇಶದ ಪ್ರಮುಖ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಭಾರಿ ಒತ್ತಡವನ್ನು ಎತ್ತಿ ತೋರಿಸಲು ನಾನು ಬಯಸುತ್ತೇನೆ". ಐಐಟಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಮತ್ತು ಸಾಮಾಜಿಕ ಒತ್ತಡವನ್ನು ನಿಭಾಯಿಸಲು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಂಗ್ ಕರೆ ನೀಡಿದ್ದಾರೆ. ಐಐಟಿ ಶಿಕ್ಷಣವನ್ನು ವಿದ್ಯಾರ್ಥಿಗಳು, ಬೋಧಕರು ಹಾಗೂ ಪೋಷಕರಿಗೆ ಕಡಿಮೆ ಒತ್ತಡವನ್ನುಂಟು ಮಾಡಲು ಸುಧಾರಿಸುವ ತುರ್ತು ಅವಶ್ಯಕತೆಯಿದೆ ಅಂತಲೂ ಹೇಳಿದ್ದಾರೆ.
ಸೋಲಂಕಿ ಅವರ ಸಾವಿನ ನಂತರ ವಿವಿಧ ಐಐಟಿ ವಿದ್ಯಾರ್ಥಿ ಸಂಘಟನೆಗಳು ನಡೆಸಿದ ಆಂತರಿಕ ಸಮೀಕ್ಷೆಗಳಲ್ಲಿ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 61 ರಷ್ಟು ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ನಂತರ ಉದ್ಯೋಗ ಅಭದ್ರತೆ ಎಂದು ಶೇ 12 ರಷ್ಟು, ಕುಟುಂಬ ಸಮಸ್ಯೆಗಳು ಎಂದು ಶೇ 10 ರಷ್ಟು ಹಾಗೂ ಕಿರುಕುಳ ಎಂದು ಶೇಕಡಾ 6 ರಷ್ಟು ಜನರು ಹೇಳಿದ್ದಾರೆ. ಹನ್ನೊಂದು ಪ್ರತಿಶತದಷ್ಟು ವಿದ್ಯಾರ್ಥಿಗಳು 'ಇತರ ಕಾರಣಗಳು' ಎಂದಿದ್ದಾರೆ.
ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.