Sabarimala Temple : ಶಬರಿಮಲೆಯ ಚಿನ್ನ ಲೇಪಿತ ಗರ್ಭಗುಡಿ ಮೇಲ್ಛಾವಣಿಯಲ್ಲಿ ಸೋರಿಕೆ!
Jul 26, 2022 07:30 PM IST
ಶಬರಿಮಲೆ ಅಯ್ಯಪ್ಪ ದೇವಾಲಯದ ಗರ್ಭಗುಡಿಯ ಚಿನ್ನ ಲೇಪಿತ ಮೇಲ್ಛಾವಣಿ ಸೋರಿಕೆಯಾಗುತ್ತಿದೆ (ಫೋಟೋ-ಸಂಗ್ರಹ)
Ayyappa temple water leakage: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಗರ್ಭಗುಡಿಯ ಚಿನ್ನ ಲೇಪಿತ ಛಾವಣಿ ಸೋರುತ್ತಿದೆ. ಸೋರಿಕೆಯನ್ನು ಪತ್ತೆ ಹಚ್ಚಿರುವ ತಿರುವಾಂಕೂರು ದೇವಸ್ಥಾನದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ತಿರುವನಂತಪುರಂ: ವಿಶ್ವ ಪ್ರಸಿದ್ಧ ಹಾಗೂ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಸಮಸ್ಯೆಯೊಂದು ಎದುರಾಗಿದೆ. ಗರ್ಭಗುಡಿಯ ಚಿನ್ನಲೇಪಿತ ಛಾವಣಿ ಸೋರುತ್ತಿದೆ. ಈ ಸೋರಿಕೆಯನ್ನು ಪತ್ತೆ ಹಚ್ಚಿದ ತಿರುವಾಂಕೂರು ದೇವಸ್ಥಾನದ ಅಧಿಕಾರಿಗಳು ದುರಸ್ತಿ ಕಾರ್ಯ ಆರಂಭಿಸಿದ್ದಾರೆ.
ಇದು ಚಿಕ್ಕ ಸಮಸ್ಯೆಯಾಗಿದೆ ಎಂದು ದೇವಸ್ಥಾನದ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಗರ್ಭಗುಡಿಯ ಎಡಭಾಗದಲ್ಲಿರುವ ದ್ವಾರಪಾಲಕ ವಿಗ್ರಹಗಳ ಬಳಿ ಸೋರಿಕೆಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ.
ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ಕಂದರಾರು ರಾಜೀವ ಅವರಿಗೆ ಮಾಹಿತಿ ನೀಡಲಾಗಿದೆ. ದುರಸ್ತಿಗೆ ಅನುಮತಿ ನೀಡಿರುವುದಾಗಿ ದೇವಸ್ಥಾನ ಮಂಡಳಿಯ ಸದಸ್ಯರೊಬ್ಬರು ತಿಳಿಸಿದ್ದಾರೆ. ಆಗಸ್ಟ್ 3 ರಂದು ಚಿನ್ನ ಲೇಪಿತ ಮೇಲ್ಛಾವಣಿಯನ್ನು ತೆರೆದು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಆ ಬಳಿಕವಷ್ಟೇ ಸೋರಿಕೆಯ ತೀವ್ರತೆ ತಿಳಿಯಲಿದೆ ಎಂದಿದ್ದಾರೆ. ಈ ದುರಸ್ತಿಯ ಸಂಪೂರ್ಣ ವೆಚ್ಚವನ್ನು ತಿರುವಾಂಕೂರು ದೇವಸ್ಥಾನವು ಭರಿಸಲಿದೆ ಎಂದು ತಿಳಿದುಬಂದಿದೆ.
ಶಬರಿಮಲೆ ಕೇರಳದಲ್ಲಿರುವ ಒಂದು ಹಿಂದೂ ಧಾರ್ಮಿಕ ಪುಣ್ಯ ಕ್ಷೇತ್ರವಾಗಿದೆ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತಿನಂತಿಟ್ಟ ಜಿಲ್ಲೆಯಲ್ಲಿದೆ. ಶಬರಿಮಲೆಯಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯ ಇದೆ.
ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ನೂರಾರು ಕೋಟಿ ಇಲ್ಲಿಗೆ ಭೇಟಿ ನೀಡುತ್ತಾರೆ. ಪರ್ವತಗಳು ಮತ್ತು ದಟ್ಟವಾದ ಅರಣ್ಯದಿಂದ ಸುತ್ತುವರೆದಿದ್ದು, ತೀರ್ಥಯಾತ್ರೆ ನವೆಂಬರ್ ಕಾರ್ತಿಕ ಮಾಸ ತಿಂಗಳಲ್ಲಿ ಪ್ರಾರಂಭವಾಗುತ್ತದೆ. ಜನವರಿಯಲ್ಲಿ ಚಳಿಗಾಲದ ಮಾಸದಲ್ಲಿ ಕೊನೆಯಾಗುತ್ತದೆ . ದೇವಾಲಯವು ಭಾರತದ ದಕ್ಷಿಣ ರಾಜ್ಯಗಳು ,ದೇಶದ ಮತ್ತು ವಿದೇಶದಲ್ಲಿ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.
ಮಹಿಳೆಯರಿಗೆ ಪ್ರವೇಶದ ವಿವಾದ: 2018ರಲ್ಲಿ ಅಂದಿನ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ಪಂಚ ಪೀಠ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡಬೇಕು ಎಂದು ಸಾಂವಿಧಾನಿಕ ಪೀಠ ತೀರ್ಪು ನೀಡಿತ್ತು. ಇದಾದ ಬಳಿಕ ತೀರ್ಪಿನ ಕುರಿತಂತೆ ಮರುಪರಿಶೀಲನಾ ಅರ್ಜಿಗಳು ದಾಖಲಾಗಿದ್ದವು. ಸುಪ್ರೀಂ ಕೋರ್ಟ್ ನ ಈ ತೀರ್ಪಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು.
ಪೂಜಾ ಸ್ಥಳಗಳಿಗೆ ಮಹಿಳೆಯರ ಪ್ರವೇಶ ಕೇವಲ ಹಿಂದೂಗಳ ದೇವಾಲಯಕ್ಕಷ್ಟೇ ಸೀಮಿತವಾಗಿಲ್ಲ. ಇದು ಎಲ್ಲಾ ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೂ ಅನ್ವಯಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಜ.13ರಂದು ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನ 9 ನ್ಯಾಯಮೂರ್ತಿಗಳನ್ನೊಗೊಂಡ ಪೀಠವು ವಿಚಾರಣೆ ನಡೆಯಲಿದೆ.
ಮಕರ ಜ್ಯೋತಿ ರಹಸ್ಯ: ಈ ದೇವಾಲಯದಲ್ಲಿ ಒಂದು ವಿಸ್ಮಯ ನಡೆಯುವುದು ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವ ಸಂಗತಿಯೇ ಆಗಿದೆ. ಅದೇನೆಂದರೆ "ಮಕರ ಜ್ಯೋತಿ". ಈ ವಿಸ್ಮಯವನ್ನು ಕಾಣಲು ದೇಶ-ವಿದೇಶಗಳಿಂದ ಭಕ್ತರು ಭೇಟಿ ನೀಡಿ ದರ್ಶನ ಮಾಡಿ ಪುನೀತರಾಗುತ್ತಾರೆ. ಈ ಮಕರ ಜ್ಯೋತಿಯ ಬಗ್ಗೆ ವಿಭಿನ್ನವಾದ ಅಭಿಪ್ರಾಯಗಳಿವೆ. ಒಬ್ಬರು ಇದು ವಿಸ್ಮಯ ಎಂದರೆ ಮತ್ತೆ ಕೆಲವರು ಇದೆಲ್ಲಾ ಮಾನವ ನಿರ್ಮಿತ ಜ್ಯೋತಿ ಎಂದೂ ವಾದಿಸುತ್ತಾರೆ.
ಈ ದೇವಾಲಯವು ಮಂಡಲ ಪೂಜಾ (ನವೆಂಬರ್ 15 ರಿಂದ 26 ಡಿಸೆಂಬರ್) ಮಕರ ಸಂಕ್ರಾಂತಿ (14 ಜನವರಿ) ಮತ್ತು ಮಹಾ ವಿಷ್ವಾ ಸಂಕ್ರಾತಿ (14 ಏಪ್ರಿಲ್) ನಲ್ಲಿ ತೆರೆದಿರುತ್ತದೆ. ಹಾಗೆಯೇ ಮಲಯಾಳಂ ತಿಂಗಳ ಮೊದಲ 5 ದಿನಗಳ ಪೂಜೆಗೆ ತೆರೆದಿರುತ್ತಾರೆ. ಮಕರ ಸಂಕ್ರಾತಿಯನ್ನು ಕೇರಳದಲ್ಲಿ ಮಕರವಿಲಕ್ಕು ಎಂದು ಕೂಡ ಕರೆಯುತ್ತಾರೆ.