Haryana Nuh Violence: ಹರಿಯಾಣದ ನುಹ್ ಹಿಂಸಾಚಾರದಲ್ಲಿ 5 ಮಂದಿ ಸಾವು; ದೆಹಲಿ, ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್, ಇಂದು ಮಹಾಪಂಚಾಯತ್
Aug 02, 2023 09:54 AM IST
ಸೋಮವಾರ ಹರಿಯಾಣದ ನುಹ್ ಜಿಲ್ಲೆಯಲ್ಲಿ ನಡೆದ ಕೋಮು ಸಂಘರ್ಷದಲ್ಲಿ ಇಬ್ಬರು ಹೋಮ್ ಗಾರ್ಡ್ಗಳು ಮೃತಪಟ್ಟು, 200 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಖೇಡ್ಲಾ ಮೋಡ್ ಬಳಿ ಯುವಕರ ಗುಂಪೊಂದು ವಿಎಚ್ಪಿಯ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ತಡೆದ ನಂತರ ಹಿಂಸಾಚಾರ ಆರಂಭವಾಗಿದೆ. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡಿದಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ನುಹ್ (ಹರಿಯಾಣ): ಗುರುಗ್ರಾಮ (Gurugram Violence) ಸಮೀಪದ ನುಹ್ (Nuh Violence) ಜಿಲ್ಲೆಯಲ್ಲಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವಿನ ಹಿಂಸಾತ್ಮಕ ಘರ್ಷಣೆಯಲ್ಲಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಸೋಮವಾರ (ಜುಲೈ 31) ನಡೆದಿದೆ.
ವಿಶ್ವ ಹಿಂದೂ ಪರಿಷತ್ನ (Vishwa Hindu Parishad) ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ನುಹ್ನ ಖೇಡ್ಲಾ ಮೋಡ್ ಎಂಬಲ್ಲಿ ಯುವಕರ ಗುಂಪುವೊಂದು ತಡೆದ ಆರೋಪ ಕೇಳಿಬಂದಿದೆ. ಈ ವೇಳೆ ಎರಡು ಗುಂಪುಗಳ ನಡುವೆ ಹಿಂಸಾಚಾರ ನಡೆದಿದೆ. ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಹರಿಯಾಣದ ನುಹ್ನಲ್ಲಿ ಆರಂಭವಾದ ಹಿಂಸಾಚಾರ ನೆರೆಯ ಗುರುಗ್ರಾಮ್ ವರೆಗೆ ಹರಿಡಿಕೊಂಡಿದೆ. ಸೋಮವಾರ ನಡೆದಿರುವ ಘರ್ಷಣೆ ವೇಳೆ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಾಟ, ಕಾರುಗಳಿಗೆ ಬೆಂಚಿ ಹಚ್ಚಿದ್ದಾರೆ. ಗೃಹ ರಕ್ಷಕ ದಳದ ಇಬ್ಬರು ಸಿಬ್ಬಂದಿ ಸೇರಿ ಐವರು ಮೃತಪಟ್ಟಿದ್ದಾರೆ. ಸುಮಾರು 12 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.
ಹಿಂಸಾಚಾರ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗುರುಗ್ರಾಮ ಜಿಲ್ಲಾಡಳಿತವು ಇಂದು (ಆಗಸ್ಟ್ 2, ಬುಧವಾರ) ಎಲ್ಲಾ ಶಾಲಾ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ನಿಶಾಂತ್ ಕುಮಾರ್ ಯಾದವ್ ಆದೇಶ ಹೊರಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಪಕ್ಕದ ಹರಿಯಾಣದಲ್ಲಿ ಹಿಂಸಾಚಾರ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸಹಾಯ ಅಗತ್ಯ ಇದ್ದರೆ 112ಕ್ಕೆ ಕರೆ ಮಾಡಿ ಎಂದು ಗುರುಗ್ರಾಮದ ಪೊಲೀಸರು ಹೇಳಿದ್ದಾರೆ.
ಕೋಮುಗಲಭೆಗೆ ಪ್ರಚೋದಿಸುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ಬಲಪಂಥೀಯರಾದ ಜೈ ಭಾರತ್ ಮಾತಾ ವಾಹಿನಿಯ ಮುಖ್ಯಸ್ಥ ದಿನೇಶ್ ಭಾರ್ತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಎಚ್ಪಿ ನಡೆಸುತ್ತಿದ್ದ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯಲ್ಲಿ ಗೋರಕ್ಷಕ ಮೋನು ಮಾನೇಸರ್ ಭಾಗವಹಿಸಿದ್ದಾರೆ ಎಂಬ ವದಂತಿಗಳನ್ನು ಹಬ್ಬಿಸಿದ್ದೇ ಹಿಂಸಾಚಾರಕ್ಕೆ ಕಾರಣ ಅಂತ ಹೇಳಲಾಗಿದೆ. ಆದರೆ ಮೋನು ಮಾನೇಸರ್ ಹಿಂದೂ ಪರಿಷತ್ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ.
ನುಹ್ ಮತ್ತು ಗುರುಗ್ರಾಮ ಜಿಲ್ಲೆಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ನುಹ್, ಫರಿದಾಬಾದ್ನಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘಟನೆಯನ್ನು ಖಂಡಿಸಿದ್ದು, ಸಮಾಜ ವಿರೋಧಿಗಳು ಸಂಚು ರೂಪಿಸಿ ಈ ಕೃತ್ಯವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನುಹ್ನಲ್ಲಿ ಆರಂಭವಾದ ಗುರುಗ್ರಾಮದ ಸೋಹ್ನಾ ರಸ್ತೆಯಲ್ಲಿರುವ ಬಾದ್ಶಹಾಪುರ, ಪಟೌಡಿ ಚೌಕ್, ಸೆಕ್ಟರ್ 68, ಸೆಕ್ಟರ್ 70 ಹಾಗೂ ಸೆಕ್ಟರ್ 57ರಲ್ಲಿ ಹಿಂಸಾಚಾರ ನಡೆದಿದೆ. ಇಂದು ಮಹಾ ಪಂಚಾಯತ್ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ವಿಭಾಗ