S Jaishankar:ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ ಪ್ರಧಾನಿ ಮೋದಿ "ವಿಶ್ವ ಧ್ವನಿ": ಜಾಗತಿಕ ಅನಿಸಿಕೆ ಪ್ರತಿನಿಧಿಸಿದ ಜೈಶಂಕರ್ ವಾಣಿ?
Dec 10, 2022 10:47 AM IST
ಡಾ.ಎಸ್. ಜೈಶಂಕರ್ (ಸಂಗ್ರಹ ಚಿತ್ರ)
- ಭಾರತ ಮತ್ತು ಪ್ರಧಾನಿ ಮೋದಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ "ವಿಶ್ವ ಧ್ವನಿ"ಯಾಗಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತವನ್ನು ತಮ್ಮ ನಾಯಕನ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತವೆ. ಇದು ನಮ್ಮ ಸರ್ಕಾರದ ವಿದೇಶಾಂಗ ನೀತಿಗೆ ಸಂದ ಜಯ ಎಂದು ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ರಷ್ಯಾ-ಉಕ್ರೇನ್ ಕುರಿತ ಯುದ್ಧದ ಬಗ್ಗೆಯೂ ಜೈಶಂಕರ್ ಮಾತನಾಡಿದ್ದಾರೆ.
ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ನಿಲುವು ಏನು ಎಂಬ ಜಾಗತಿಕ ಕುತೂಹಲಕ್ಕೆ ಸ್ಪಷ್ಟ ಉತ್ತರ ನೀಡಿರುವ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಸಂಘರ್ಷದ ನೆಲದಲ್ಲಿ ಸಿಲುಕಿದ್ದ ಭಾರತೀಯರ ಯೋಗಕ್ಷೇಮದ ಪರವಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಸಂಘರ್ಷದ ನೆಲದಲ್ಲಿ ಸಿಲುಕಿದ್ದ ಭಾರತೀಯರ ರಕ್ಷಣೆ ನಮ್ಮ ಪ್ರಥಮ ಆದ್ಯತೆಯಾಗಿತ್ತು. ಭಾರತೀಯರ ರಕ್ಷಣೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ಜಾಗತಿಕವಾಗಿ ಶ್ಲಾಘಿಸಲಾಗಿದೆ. ಜಗತ್ತಿನ ಯಾವುದೇ ಭಾಗದಲ್ಲಿ ಏನೇ ಸಂಭವಿಸಲಿ, ನಮ್ಮ ಮೊದಲ ಆದ್ಯತೆ ಭಾರತೀಯರ ಯೋಗಕ್ಷೇಮವೇ ಆಗಿರುತ್ತದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಜೈಶಂಕರ್, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಉಕ್ರೇನ್ ಸಂಘರ್ಷ ಆದಷ್ಟು ಬೇಗ ಅಂತ್ಯಗೊಳ್ಳಬೇಕು ಎಂಬುದು ಭಾರತದ ನಿಲುವು. ಇದೇ ಕಾರಣಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು "ಇದು ಯುದ್ಧದ ಸಮಯವಲ್ಲ" ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೇರವಾಗಿ ಹೇಳಿದ್ದರು. ರಷ್ಯಾ-ಉಕ್ರೇನ್ ಯುದ್ಧ ಕುರಿತಂತೆ ಭಾರತ ತೆಗೆದುಕೊಂಡ ನಿಲುವನ್ನು ಇಡೀ ವಿಶ್ವವೇ ಕೊಂಡಾಡಿದೆ ಎಂದು ನುಡಿದರು.
ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಆಹಾರ, ಇಂಧನ ಮತ್ತು ರಸಗೊಬ್ಬರಗಳ ಬೆಲೆಗಳ ಮೇಲೆ ಪರಿಣಾಮ ಬೀರುತ್ತಿದೆ. ಇದೇ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ದೇಶಗಳು, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಾಧ್ಯವಾದಷ್ಟು ಬೇಗ ಸಂಘರ್ಷವನ್ನು ಕೊನೆಗೊಳಿಸಲು ಒತ್ತಾಯಿಸುತ್ತಿವೆ ಎಂದು ಜೈಶಂಕರ್ ಹೇಳಿದರು.
ಭಾರತ ಮತ್ತು ಪ್ರಧಾನಿ ಮೋದಿ ಅಭಿವೃದ್ಧಿಶೀಲ ರಾಷ್ಟ್ರಗಳ ಪಾಲಿಗೆ "ವಿಶ್ವ ಧ್ವನಿ"ಯಾಗಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ಭಾರತವನ್ನು ತಮ್ಮ ನಾಯಕನ ಸ್ಥಾನದಲ್ಲಿ ನೋಡಲು ಇಷ್ಟಪಡುತ್ತವೆ. ಇದು ನಮ್ಮ ಸರ್ಕಾರದ ವಿದೇಶಾಂಗ ನೀತಿಗೆ ಸಂದ ಜಯ ಎಂದು ಜೈಶಂಕರ್ ಇದೇ ವೇಳೆ ಅಭಿಪ್ರಾಯಪಟ್ಟರು.
ಇಂದು ಭಾರತ ಮತ್ತು ಪ್ರಧಾನಿ ಮೋದಿ ಅವರು ಒಂದು ರೀತಿಯಲ್ಲಿ ಪ್ರಪಂಚದ ಧ್ವನಿಯಾಗಿದ್ದಾರೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳ ಧ್ವನಿಯಾಗಿ ಭಾರತ ಕೆಲಸ ಮಾಡುತ್ತಿದೆ. ರಷ್ಯಾ-ಉಕ್ರೇನ್ ನಡುವಿನ ಸಮಸ್ಯೆ ಪರಿಹಾರಕ್ಕೆ ಯಾವುದೇ ಮಿಲಿಟರಿ ಪರಿಹಾರ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದರು. ವಿಶ್ವದ ಇತರ ರಾಷ್ಟ್ರಗಳು ಮೋದಿ ಅವರ ಈ ನಿಲುವನ್ನು ಬೆಂಬಲಿಸಿದವು ಎಂದು ಜೈಶಂಕರ್ ಹೇಳಿದರು.
ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಭಾರತ ಮಧ್ಯಸ್ಥಿಕೆವಹಿಸುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ಈ ನಿಟ್ಟಿನಲ್ಲಿ ಭಾರತ ಇದುವರೆಗೂ ಚಿಂತಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಹಂತದಲ್ಲಿ ಏನನ್ನೂ ಹೇಳುವುದು ಕಷ್ಟ, ಆದರೆ ಅದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಜೈಶಂಕರ್ ನುಡಿದರು.
ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ದೊರೆತಿರುವುದು ಒಂದು ಐತಿಹಸಿಕ ಮೈಲಿಗಲ್ಲು. ನಾವು ಈ ಅವಕಾಶವನ್ನು ಜಗತ್ತಿನ ಒಳಿತಿಗಾಗಿ ಬಳಸಿಕೊಳ್ಳುತ್ತೇವೆ ಎಂದು ಜೈಶಂಕರ್ ಹೇಳಿದರು. ಇನ್ನು ಜಿ20 ಅಧ್ಯಕ್ಷ ಸ್ಥಾನ ಭಾರತಕ್ಕೆ ದೊರೆತಿರುವುದನ್ನೇ ಕೇಂದ್ರ ಸರ್ಕಾರ ಪ್ರಚಾರ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಲು ಜೈಶಂಕರ್ ನಿರಾಕರಿಸಿದರು.
ಈ ಸಂದರ್ಶನದಲ್ಲಿ ಜೈಶಂಕರ್ ಅವರು ಭಾರತ-ಚೀನಾ ಗಡಿ ವಿವಾದ, ಪಾಕಿಸ್ತಾನದೊಂದಿಗೆ ಸಂಬಂಧದ ಕುರಿತೂ ವಿಸ್ತೃತವಾಗಿ ಮಾತನಾಡಿದ್ದು, ಲಡಾಖ್ ಗಡಿ ವಿವಾದವನ್ನು ಶಾಂತಿಯುತ ರಾಜತಾಂತ್ರಿಕ ಮಾತುಕತೆಗಳ ಮೂಲಕ ಬಗೆಹರಿಸಲು ಭಾರತ ಬದ್ಧವಾಗಿದೆ ಎಂದು ಹೇಳಿದರು.
ಅಲ್ಲದೇ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಮಾತುಕತೆಯು ಅದರ ಭಯೋತ್ಪಾದನೆ ಕುರಿತ ನಿಲುವಿನ ಮೇಲೆ ಆಧರಿಸಿದೆ ಎಂದು ಜೈಶಂಕರ್ ಸ್ಪಷ್ಟಪಡಿಸಿದರು.
ವಿಭಾಗ