ದೇಶದ ವಿವಿಧೆಡೆ ಮಳೆರಾಯನ ಅಬ್ಬರ: ಅಸ್ಸಾಂನಲ್ಲಿ ಹದಗೆಟ್ಟ ಪ್ರವಾಹ ಪರಿಸ್ಥಿತಿ, ಹಿಮಾಚಲದಲ್ಲೂ ನಿಲ್ಲದ ಮಳೆ
Aug 28, 2023 06:32 AM IST
ದೇಶದ ವಿವಿಧೆಡೆ ಮಳೆರಾಯನ ಅಬ್ಬರ (ಸಾಂಕೇತಿಕ ಚಿತ್ರ)
- ದೇಶದ ವಿವಿಧ ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಉತ್ತರ ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಮಳೆ ಅತಿಯಾಗಿದ್ದು ಹಲವು ಅನಾಹುತಗಳು ಸೃಷ್ಟಿಯಾಗಿವೆ. ಹಿಮಾಚಲದಲ್ಲಿ 281 ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮುಂಬೈನಲ್ಲೂ ಮಳೆ ಅರ್ಭಟ ಜೋರಾಗಿದೆ.
ಗುವಾಹಟಿ: ದಕ್ಷಿಣ ಭಾರತದಲ್ಲಿ ವರುಣರಾಯ ಮುನಿಸಿಕೊಂಡಿದ್ದರೆ, ಉತ್ತರ ಭಾರತದಲ್ಲಿ ಮಳೆಯ ಅರ್ಭಟ ಜೋರಾಗಿದೆ. ಉತ್ತರದ ಹಿಮಾಚಲ, ಅಸ್ಸಾಂ, ಉತ್ತರಾಖಂಡ ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದಾಗಿ ಅನಾಹುತಗಳು ಸೃಷ್ಟಿಯಾಗಲಿವೆ. ಮುಂಬೈನಲ್ಲೂ ಮಳೆ ಪ್ರಮಾಣ ಜೋರಾಗಿದೆ.
ನಿರಂತರವಾಗಿ ಸುರಿದ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಇಲ್ಲಿನ ಆರು ಜಿಲ್ಲೆಯ ಸುಮಾರು 53,000 ಸಾವಿರದಷ್ಟು ಜನ ತೊಂದರೆಗೆ ಸಿಲುಕಿದ್ದಾರೆ.
ಧೇಮಾಜಿಯಲ್ಲಿ ಸುಮಾರು 24,000 ಸ್ಥಳೀಯರು ಬಾಧಿತರಾಗಿದ್ದಾರೆ. ಸೋನಿತ್ಪುರ, ಲಖಿಂಪುರ ಮತ್ತು ದಿಬ್ರುಗಢ ಜಿಲ್ಲೆಗಳಲ್ಲಿ ಕ್ರಮವಾಗಿ 12,000, 8,500 ಮತ್ತು 7,500 ಜನರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.
ಕೇಂದ್ರಿಯ ಜಲ ಆಯೋಗದ ಪ್ರಕಾರ ನಿರಂತರವಾಗಿ ಸುರಿದ ಮಳೆಯು ಬ್ರಹ್ಮಪುತ್ರ ಮತ್ತು ಅದರ ಉಪನದಿಗಳ ನೀರಿನ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಯಿತು, ಅಲ್ಲದೆ ಇದು ಸುತ್ತಲಿನ ಪ್ರದೇಶಗಳ ಮುಳುಗಡೆಗೆ ಕಾರಣವಾಯಿತು.
ರಾಜ್ಯದ ಹಲವು ಭಾಗಗಳಲ್ಲಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ಎಂದು ವರದಿಯಾಗಿದೆ.
ಮಳೆಯಿಂದಾಗಿ 281 ರಸ್ತೆಗಳು ಬ್ಲಾಕ್
ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ರಾಷ್ಟ್ರೀಯ ಹೆದಾರಿ 305 ಸೇರಿದಂತೆ 281 ರಸ್ತೆಗಳು ಅಸ್ತವ್ಯಸ್ಥವಾಗಿದ್ದು, ಸಂಚಾರ ನಿರ್ಬಂಧ ಹೇರಲಾಗಿದೆ ಎಂದು ಹಿಮಾಚಲ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಭಾನುವಾರ ತಿಳಿಸಿದೆ.
ಮುಂಗಾರು ಆರಂಭವಾದಾಗಿನಿಂದ ಇಲ್ಲಿಯವರೆಗೆ ಹಿಮಾಚಲ ಪ್ರದೇಶದಲ್ಲಿ ಮಳೆ ಅನಾಹುತಕ್ಕೆ ಕನಿಷ್ಠ 367 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.
ಸಾವು ನೋವುಗಳ ಹೊರತಾಗಿ, ಸುಮಾರು 12,000 ಕೋಟಿ ತಲುಪುವ ನಿರೀಕ್ಷೆಯಿದೆ ಎಂದು ವಿಪತ್ತು ನಿರ್ವಹಣೆ ತಿಳಿಸಿದೆ.
ಮುಂಬೈನಲ್ಲೂ ಮಳೆ
ಮುಂಬೈನ ಕೆಲವೆಡೆ ಭಾನುವಾರ ಭಾರಿ ಮಳೆಯಾಗಿದೆ. ಶನಿವಾರ ಇಲ್ಲಿ 17.70 ಮಿಲಿಮೀಟರ್ ಮಳೆಯಾಗಿದೆ ಎಂದು ವರದಿ ತಿಳಿಸಿದೆ. ಇಲ್ಲಿನ ಥಾಣೆ, ರಾಯ್ಗಡ್, ರತ್ನಗಿರಿ ಜಿಲ್ಲೆಗಳಲ್ಲಿ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿತ್ತು.