ಹಿಮಾಚಲದಲ್ಲಿ ಮಳೆಯ ಆರ್ಭಟ; ಕುಲು ಜಿಲ್ಲೆಯಲ್ಲಿ ಭಾರಿ ಭೂಕುಸಿತ, ಹಲವು ಮನೆಗಳು ನೆಲಸಮ; ಕಟ್ಟಡಗಳು ಧರೆಗುರುಳುತ್ತಿರುವ ವಿಡಿಯೊ ವೈರಲ್
Aug 24, 2023 12:32 PM IST
ಹಿಮಾಚಲದ ಕುಲು ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದಾಗಿ ಧರೆಗುರುಳುತ್ತಿರುವ ಮನೆಗಳು
- ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇಂದು ಕುಲು ಜಿಲ್ಲೆಯಲ್ಲಿ ಭಾರಿ ಗುಡ್ಡ ಕುಸಿತ ಉಂಟಾಗಿದೆ, ಅಲ್ಲದೆ ಹಲವು ಮನೆಗಳು ಧರೆಗುರುಳಿವೆ. ಇನ್ನೂ ಎರಡು ದಿನ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಹಲವು ಅನಾಹುತಗಳು ಸಂಭವಿಸಿವೆ. ನಿರಂತರ ಮಳೆಯಿಂದಾಗಿ ಇಂದು ಭಾರಿ ಗುಡ್ಡ ಕುಸಿತ ಉಂಟಾಗಿ ಹಲವು ಮನೆಗಳು ನೆಲಸಮವಾಗಿವೆ.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಹಲವು ಮನೆಗಳು ಕುಸಿದಿವೆ.
ಭೂಕುಸಿತದ ವಿಡಿಯೊ ಕ್ಲಿಪಿಂಗ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿಡಾಡುತ್ತಿವೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಈ ವಿಡಿಯೊ ಕ್ಲಿಪಿಂಗ್ನಲ್ಲಿ ಮನೆಗಳು ನೋಡ ನೋಡುತ್ತಿದಂತೆ ಧರೆಗುರುಳುತ್ತಿರುವುದನ್ನು ಕಾಣಬಹುದಾಗಿದೆ.
ಈ ಘಟನೆಗೆ ಸಂಬಂಧಿಸಿದ ಸಾವು ನೋವುಗಳ ಕುರಿತು ಇದುವರೆಗೆ ಯಾವುದೇ ವರದಿಯಾಗಿಲ್ಲ. ಕುಲು ಜಿಲ್ಲೆಯ ಅನ್ನಿ ಪಟ್ಟಣದಲ್ಲಿ ಭೂಕುಸಿತದಿಂದಾಗಿ ಹಲವು ಮನೆಗಳು ನೆಲಕ್ಕುರುಳಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.
ಘಟನೆ ಸಂಬಂಧ ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.
ನಿರಂತರ ಮಳೆ ಹಾಗೂ ಪ್ರವಾಹದ ಕಾರಣದಿಂದ ಹಿಮಾಲಯ ರಾಜ್ಯದಾದ್ಯಂತ ಸಾಕಷ್ಟು ಹಾನಿಯಾಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮೇಘಸ್ಫೋಟವು ಭೂಕುಸಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಗುರುವಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕುಲು-ಮಂಡಿ ಹೆದ್ದಾರಿಗೆ ಹಾನಿಯಾಗಿದ್ದು, ಹಲವರು ವಾಹನಗಳು ಸಾಲಾಗಿ ರಸ್ತೆ ಮೇಲೆ ನಿಂತಿವೆ.
ʼಸುಮಾರು 5-10 ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಮಗೆ ತಿನ್ನಲು ಏನೂ ಸಿಗುತ್ತಿಲ್ಲ, ಕುಡಿಯಲು ನೀರಿಲ್ಲ. ಜನರು ಹಸಿವಿನಿಂದ ಕಂಗಾಲಾಗಿದ್ದಾರೆ. ಶೀಘ್ರದಲ್ಲಿ ರಸ್ತೆ ತೆರವುಗೊಳಿಸುವಂತೆ ಪ್ರಯಾಣಿಕರೊಬ್ಬರು ವಿನಂತಿಸಿದ್ದಾರೆ ಎಎನ್ಐ ತಿಳಿಸಿದೆ.
ಕುಲು ಹಾಗೂ ಮಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಪಾಂಡೋ ಮೂಲಕ ಸಾಗುವ ಪರ್ಯಾಯ ರಸ್ತೆಯೂ ಮಳೆಯಿಂದಾಗಿ ಹದಗೆಟ್ಟಿದೆ. ಹೀಗಾಗಿ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಾಕ್ಷಿ ವರ್ಮಾ ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಹಿಮಾಚಲದಲ್ಲಿ ಇನ್ನೂ ಎರಡು ದಿನ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಫೋಷಿಸಿದೆ. ಈ ಬಾರಿ ಮುಂಗಾರಿನಲ್ಲಿ ರಾಜ್ಯದಲ್ಲಿ ಒಟ್ಟು 113 ಭೂಕುಸಿತಗಳು ವರದಿಯಾಗಿದೆ ಎಂದು ಎಎನ್ಐ ಉಲ್ಲೇಖಿಸಿದೆ.
ಮೇಘಸ್ಫೋಟದಿಂದಾಗಿ ಇಲ್ಲಿಯವರೆಗೆ ಸುಮಾರು 224 ಜನರು ಬಲಿಯಾಗಿದ್ದಾರೆ. 117 ಮಂದಿ ಮಳೆ ಸಂಬಂಧಿತ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಬುಲೆಟಿನ್ ತಿಳಿಸಿತ್ತು.
ಹಿಮಾಚಲ ರಾಜ್ಯ ಸರ್ಕಾರವು ಇತ್ತೀಚೆಗೆ ಹಂಚಿಕೊಂಡಿರುವ ಅಂಕಿ-ಅಂಶಗಳ ಪ್ರಕಾರ, ಜೂನ್ 24 ರಿಂದ ಇಲ್ಲಿಯವರೆಗೆ ಸುಮಾರು 8041.61 ಕೋಟಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.