Online Job Scam: ಟೆಲಿಗ್ರಾಂ ಗ್ರೂಪ್ ಸೇರಿ ಬೆಂಗಳೂರು ಕಂಪನಿ ಉದ್ಯೋಗಕ್ಕಾಗಿ 20 ಲಕ್ಷ ರೂಪಾಯಿ ಕಳಕೊಂಡ ವ್ಯಕ್ತಿ, ಸೇಫ್ ಆಗಿರಲು 5 ಟಿಪ್ಸ್
Sep 10, 2023 07:07 AM IST
ಟೆಲಿಗ್ರಾಂ ಗ್ರೂಪ್ ಸೇರಿ ಬೆಂಗಳೂರು ಕಂಪನಿ ಉದ್ಯೋಗಕ್ಕಾಗಿ 20 ಲಕ್ಷ ರೂಪಾಯಿ ಕಳಕೊಂಡ ವ್ಯಕ್ತಿ, ಸೇಫ್ ಆಗಿರಲು 5 ಟಿಪ್ಸ್ ಇಲ್ಲಿವೆ. (ಸಾಂಕೇತಿಕ ಚಿತ್ರ)
ಡಿಜಿಟಲ್ ಜಗತ್ತಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉದ್ಯೋಗಾವಕಾಶ ಹುಡುಕುತ್ತಿರುವವರು ಬಹಳಷ್ಟು ಜನ ಇದರ ಬಲೆಗೆ ಬೀಳುತ್ತಿದ್ದಾರೆ. ಆಂಧ್ರಪ್ರದೇಶದ ಯುವ ಇಂಜಿನಿಯರ್ ಇತ್ತೀಚೆಗೆ 20 ಲಕ್ಷರೂಪಾಯಿ ಕಳೆದುಕೊಂಡರು. ಸೈಬರ್ ವಂಚಕರ ಬಲೆಗೆ ಬೀಳದಿರಲು ಹೀಗೆ ಮಾಡಿ.
ಉದ್ಯೋಗ ಅರಸುತ್ತಿರುವ ಇಂಜಿನಿಯರಿಂಗ್ ಪದವೀಧರರೊಬ್ಬರು ಟೆಲಿಗ್ರಾಂ ಗ್ರೂಪ್ ಸೇರಿ, ಬೆಂಗಳೂರಿನ ಕಂಪನಿಯೊಂದರ ಉದ್ಯೋಗ ಸೇರುವ ಆಸೆಯಿಂದ 20 ಲಕ್ಷ ರೂಪಾಯಿ ಕಳೆದುಕೊಂಡರು.
ಸಂತ್ರಸ್ತ ಯುವ ಇಂಜಿನಿಯರ್ ಹೆಸರು ಕೆ. ಹರ್ಷವರ್ಧನ್. ಆಂಧ್ರಪ್ರದೇಶದ ವಿಜಯವಾಡದವರು. ಇಂಜಿನಿಯರಿಂಗ್ ಪದವಿ ಮುಗಿಸಿ ಕೆಲಸ ಹುಡುಕುತ್ತಿದ್ದ ಅವರು ಇಂಟರ್ನೆಟ್ನಲ್ಲಿ ಈ ಕುರಿತು ಹುಡುಕಾಡಿದ್ದರು. ಬಳಿಕ ಸ್ನೇಹಿತ ಕೃಷ್ಣ ಚೈತನ್ಯ ರೆಡ್ಡಿ ಸಲಹೆ ಮೇರೆಗೆ ಡೆವಲಪರ್ ಪ್ರೊಫೆಷನಲ್ಸ್ ಎಂಬ ಟೆಲಿಗ್ರಾಂ ಗ್ರೂಪ್ ಒಂದಕ್ಕೆ ಸೇರಿದ್ದರು. ಇದನ್ನು ಸಾಫ್ಟ್ವೇರ್ ಉದ್ಯೋಗ ಹುಡುಕುವ ಯುವಜನರಿಗೆ ನೆರವಾಗುವ ಗುಂಪು ಎಂದು ಹೇಳಲಾಗುತ್ತಿದೆ.
ಅದೊಂದು ದಿನ ಹರ್ಷವರ್ಧನ್ ಅವರು ಆ ಗ್ರೂಪ್ನಲ್ಲಿದ್ದ ಮೆಸೇಜ್ಗಳನ್ನು ಓದುತ್ತ ಹೋದಾಗ, ಬೆಂಗಳೂರಿನ ಎಲ್ಟಿಐ ಮೈಂಡ್ಟ್ರೀ ಲಿಮಿಟೆಡ್ನಲ್ಲಿ ಉದ್ಯೋಗ ಅವಕಾಶ ಇರುವ ಸಂದೇಶ ಕಾಣಿಸಿತ್ತು. ಆದರೆ ಈ ಉದ್ಯೋಗ ಬೇಕಾದರೆ 20 ಲಕ್ಷ ರೂಪಾಯಿ ಕೊಡಬೇಕು ಎಂಬ ಷರತ್ತು ವಿಧಿಸಿದ್ದರು ಆ ಅವಕಾಶದ ಪೋಸ್ಟ್ ಹಾಕಿದ್ದವರು. ಅವಕಾಶಕ್ಕೆ ಕಾಯುತ್ತಿದ್ದ ಹರ್ಷವರ್ಧನ್ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕಂತು ಕಂತಾಗಿ ಹಣವನ್ನು ಟ್ರಾನ್ಸ್ಫರ್ ಮಾಡಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಇಷ್ಟಾದ ಬಳಿಕ ಎಲ್ಟಿಐ ಮೈಂಡ್ಟ್ರೀ ಲಿಮಿಟೆಡ್ನ ಬೆಂಗಳೂರು ಕಚೇರಿಯನ್ನು ಸಂಪರ್ಕಿಸಿ ಅಪಾಯಿಂಟ್ಮೆಂಟ್ ಲೆಟರ್ ಕೇಳಿದಾಗ, ಅವರು ಏನು ಎಂದು ಪ್ರಶ್ನಿಸಿದ್ದರು. ವಿಷಯ ವಿವರಿಸಿದಾಗ ಅಂಥ ಯಾವುದೇ ಉದ್ಯೋಗಾವಕಾಶ ಇಲ್ಲ ಎಂದು ಹೇಳಿದ್ದರು. ತಾನು ಫೇಕ್ ಜಾಬ್ ಆಫರ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡೆ ಎಂಬುದು ಅರಿವಾಗಿ ಹರ್ಷವರ್ಧನ್ ಆಘಾತಕ್ಕೆ ಒಳಗಾದರು. ಬಳಿಕ ಪೊಲೀಸ್ ದೂರು ದಾಖಲಿಸಿದರು.
ಉದ್ಯೋಗಾವಕಾಶ ಹುಡುಕುತ್ತಿರುವವರು ಈ ರೀತಿ ವಂಚಕರ ಬಲೆಗೆ ಬೀಳುವುದು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಈ ರೀತಿ ವಂಚಕರ ಬಲೆಗೆ ಬೀಳದೇ ಇರಲು ಅನುಸರಿಸಬೇಕಾದ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅರಿತಿರುವುದು ಒಳಿತು.
ಆನ್ಲೈನ್ನಲ್ಲಿ ಉದ್ಯೋಗಾವಕಾಶ ಹುಡುಕುವಾಗ ಅನುಸರಿಸಬೇಕಾದ 5 ಟಾಪ್ ಟಿಪ್ಸ್ ಹೀಗಿವೆ
- ಅಸಹಜ ಆಫರ್ಗಳ ಬಗ್ಗೆ ಎಚ್ಚರಿಕೆ ವಹಿಸಿ: ಕೆಲವು ಆಫರ್ಗಳು ಅಸಹಜವೆನಿಸಬಹುದು. ಅಂತಹ ಆಫರ್ಗಳು ಮೇಲ್ನೋಟಕ್ಕೆ ಬೆಸ್ಟ್ ಆಫರ್ಗಳಂತೆ ಕಾಣಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ವಂಚಕರು ಬೀಸಿರುವ ಬಲೆಯೂ ಆಗಿರಬಹುದು ಎಂಬುದನ್ನು ಮರೆಯಬೇಡಿ. ಬೇಗ ಪ್ರಮೋಷನ್ ಸಿಗುತ್ತೆ, ಉತ್ತಮ ವೇತನ, ಸವಲತ್ತುಗಳ ಆಸೆ ತೋರಿಸಬಹುದು. ಅಥವಾ ಕಂಪನಿಗೆ ನಿಮ್ಮನ್ನು ರೆಫರ್ ಮಾಡಬೇಕಾದರೆ ಇಂತಿಷ್ಟು ಹಣ ಕೊಡಿ ಎಂದು ಕೇಳಬಹುದು.
- ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ: ಅಪರಿಚಿತರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಬೇಡಿ. ಅದು ನಿಮ್ಮನ್ನು ಸುರಕ್ಷಿತವಲ್ಲದ ವೆಬ್ಸೈಟ್ಗೆ ಕರೆದೊಯ್ಯಬಹುದು ಅಥವಾ ಇನ್ನೇನಾದರೂ ಡೌನ್ಲೋಡ್ ಆಗಿ ಸಿಸ್ಟಮ್, ಲ್ಯಾಪ್ಟಾಪ್, ಮೊಬೈಲ್ ಹ್ಯಾಕ್ ಆಗಬಹುದು.
- ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರಲಿ: ಗುರುತುಪರಿಚಯ ಇಲ್ಲದವರು ಫೋನ್ ಕರೆ ಮಾಡಿ, ಟೆಕ್ಸ್ಟ್ ಮೆಸೇಜ್ ಕಳುಹಿಸಿ ನಿಮ್ಮ ಬ್ಯಾಂಕ್ ಖಾತೆ, ಒಟಿಪಿ ಮುಂತಾದ ಮಾಹಿತಿ ಕೇಳಿದರೆ ಶೇರ್ ಮಾಡಬೇಡಿ.
- ಎಚ್ಚರಿಕೆಯ ಕ್ರಮ ಇರಲಿ: ಹಗರಣ ಅಥವಾ ಪಿಷಿಂಗ್ ಜಾಲ ಎಂದು ಸಂದೇಹ ಉಂಟಾದರೆ ಅವುಗಳಿಗೆ ಸ್ಪಂದಿಸಬೇಡಿ. ಅಂತಹ ಸಂದೇಶಗಳನ್ನು ಡಿಲೀಟ್ ಮಾಡಿ. ಕರೆ ಬಂದರೆ ಸ್ವೀಕರಿಸಬೇಡಿ.
- ಹಣಕಾಸು ಮಾಹಿತಿ ಗೌಪ್ಯವಾಗಿಡಿ: ಬ್ಯಾಂಕ್ ವಿವರ ಸೇರಿ ಯಾವುದೇ ಹಣಕಾಸು ಮಾಹಿತಿ ಬಹಿರಂಗಪಡಿಸಬೇಡಿ. ಆಧಾರ್ ನಂಬರ್, ಪ್ಯಾನ್ ಸೇರಿ ಯಾವುದೇ ಮಾಹಿತಿ ಶೇರ್ ಮಾಡಬೇಡಿ.