Gaganyaan mission: ಗಗನಯಾನ ಯೋಜನೆಗೆ ಪ್ಯಾರಾಚೂಟ್ ಟೆಸ್ಟ್ ಮಾಡಿದ ಇಸ್ರೊ, ಮುಂದಿನ ವರ್ಷವೇ ಮಿಷನ್ ಆರಂಭ
Mar 07, 2023 04:46 PM IST
Gaganyaan mission: ಗಗನಯಾನ ಯೋಜನೆಗೆ ಪ್ಯಾರಾಚೂಟ್ ಟೆಸ್ಟ್ ಮಾಡಿದ ಇಸ್ರೊ, ಮುಂದಿನ ವರ್ಷವೇ ಮಿಷನ್ ಆರಂಭ
ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ಎಸ್ಸಿ) ಮತ್ತು ಆಗ್ರಾದ ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಎಡಿಆರ್ಡಿಇ) ಜಂಟಿಯಾಗಿ ಈ ಗಗನಯಾನ ಪ್ಯಾರಾಚೂಟ್ ವ್ಯವಸ್ಥೆ ಅಭಿವೃದ್ಧಿಪಡಿಸಿವೆ.
ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಬಹುನಿರೀಕ್ಷಿತ ಗಗನಯಾನ ಇನ್ನು ಒಂದೆರಡು ವರ್ಷಗಳಲ್ಲಿಯೇ ಲಾಂಚ್ ಆಗಲಿದೆ. ಈ ಮಿಷನ್ ಸಾಕಾರಗೊಳ್ಳಲು ಇಸ್ರೊ ವಿಜ್ಞಾನಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದೀಗ ಮಾನವಸಹಿತ ಗಗನಯಾನ ಕೈಗೊಳ್ಳುವ ಸಲುವಾಗಿ ಇಸ್ರೊ ಗಗನಯಾನಕ್ಕಾಗಿ ಪ್ಯಾರಾಚೂಟ್ಗಳ ಕಸ್ಟರ್ಡ್ ಡಿಪ್ಲಾಯ್ಮೆಂಟ್ ಪರೀಕ್ಷೆ ನಡೆಸಿದೆ.
ಮಾನವಸಹಿತ ಗಗನಯಾನದಲ್ಲಿ ಅಂತರಿಕ್ಷಕ್ಕೆ ಹೋದ ನೌಕೆಯನ್ನು ಮತ್ತೆ ಭೂಮಿಗೆ ಇಳಿಸಲು ಈ ಪ್ಯಾರಾಚೂಟ್ಗಳು ಅತ್ಯಂತ ಅಗತ್ಯ.
ಚಂಡೀಗಢದ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ಸಂಶೋಧನಾ ಪ್ರಯೋಗಾಲಯದಲ್ಲಿ (TBRL) ಕ್ಲಸ್ಟರ್ ಕಾನ್ಫಿಗರೇಶನ್ಗಳಲ್ಲಿ ಗಗನಯಾನ್ ಪೈಲಟ್ ಆಂಡ್ ಅಪೆಕ್ಸ್ ಕವರ್ ಸೆಪರೇಶನ್ (ACS) ಪ್ಯಾರಾಚೂಟ್ಗಳ 'ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್' ನಿಯೋಜನೆ ಪರೀಕ್ಷೆಗಳನ್ನು ಇಸ್ರೊ ನಡೆಸಿದೆ.
ಮೊದಲ ಪರೀಕ್ಷೆಯಲ್ಲಿ ಎರಡು ಪ್ಯಾರಾಚೂಟ್ಗಳ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿದೆ. ಒಂದು ಪ್ಯಾರಾಚೂಟ್ ಅನ್ನು ಕನಿಷ್ಠ ಕೋನದಲ್ಲಿ ಮತ್ತೊಂದನ್ನು ಗರಿಷ್ಠ ಕೋನದಲ್ಲಿ ಟೆಸ್ಟ್ ಮಾಡಲಾಯಿತು ಎಂದು ಇಸ್ರೊ ತಿಳಿಸಿದೆ. ಎರಡನೇ ಪರೀಕ್ಷೆಯನ್ನು ಗರಿಷ್ಠ ಒತ್ತಡದ ಪರಿಸ್ಥಿತಿಗಳಲ್ಲಿ ಪರೀಕ್ಷಿಸಲಾಗಿದೆ. ಒಟ್ಟಾರೆ, ಗಗನಯಾನದ ಸಂದರ್ಭದಲ್ಲಿ ಸಾಮಾನ್ಯ ಸನ್ನಿವೇಶ ಮತ್ತು ಅಸಾಮಾನ್ಯ ಸನ್ನಿವೇಶಗಳಲ್ಲಿ ಈ ಪ್ಯಾರಾಚೂಟ್ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದನ್ನು ಪರೀಕ್ಷಿಸಲಾಗಿದೆ.
ಗಗನಯಾನವು ಮೂವರು ಗಗನಯಾನಿಗಳನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿ.ಮೀ. ಕಕ್ಷೆಗೆ ಕಳುಹಿಸಿ, ಅವರನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ ತರುವ ಯೋಜನೆಯಾಗಿದೆ ಎಂದು ಇಸ್ರೊ ತಿಳಿಸಿದೆ. ಈ ಮೂಲಕ ಭಾರತವು ಮಾನವಸಹಿತ ಗಗನಯಾನ ಕೈಗೊಳ್ಳಲು ಉದ್ದೇಶಿಸಿದೆ.
ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶಯಾನವನ್ನು 2024 ರ ನಾಲ್ಕನೇ ತ್ರೈಮಾಸಿಕದಲ್ಲಿ ಕೈಗೊಳ್ಳುವ ನಿರೀಕ್ಷೆ ಇರುವುದಾಗಿ ಕಳೆದ ಡಿಸೆಂಬರ್ನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು. 2023 ರ ಕೊನೆಯ ತ್ರೈಮಾಸಿಕದಲ್ಲಿ ಮೊದಲ ಮತ್ತು 2024 ರ ಎರಡನೇ ತ್ರೈಮಾಸಿಕದಲ್ಲಿ ಎರಡನೇ ಮಾನವರಹಿತ ಯಾನ ಕೈಗೊಳ್ಳಲು ಉದ್ದೇಶಿಸಲಾಗಿದೆ. ಇವುಗಳ ಯಶಸ್ಸಿನ ಆಧಾರದಲ್ಲಿ ಬಳಿಕ ಮಾನವಸಹಿತ ಗಗನಯಾನ ಕೈಗೊಳ್ಳಲಾಗುತ್ತದೆ.
ಭಾರತದ ಬಹುನಿರೀಕ್ಷಿತ ಮಾನವಸಹಿತ ಬಾಹ್ಯಾಕಾಶ ಯಾನ ಕೈಗೊಳ್ಳುವ ಗಗನಯಾನ ಯೋಜನೆಯ ಕುರಿತು ಇತ್ತೀಚೆಗೆ ಇಸ್ರೊ ಚೇರ್ಮನ್ ಎಸ್. ಸೋಮನಾಥ್ ಒಂದಿಷ್ಟು ಮಾಹಿತಿ ನೀಡಿದ್ದಾರೆ. ಗಗನಯಾನವು ಮಾನವಸಹಿತವಾಗಿ ಕೈಗೊಳ್ಳುವುದರಿಂದ ಅತ್ಯಧಿಕ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಈ ಯೋಜನೆಯನ್ನು ಅವಸರದಲ್ಲಿ ಲಾಂಚ್ ಮಾಡಲಾಗದು ಎಂದು ಇಸ್ರೊ ಚೇರ್ಮನ್ ಎಸ್ ಸೋಮನಾಥ್ ಹೇಳಿದ್ದರು.
"ಇದು ಅತ್ಯಂತ ಪ್ರಮುಖವಾದ ಯೋಜನೆಯಾಗಿದೆ. ಮನುಷ್ಯರನ್ನು ಅಂತರಿಕ್ಷಕ್ಕೆ ಕಳುಹಿಸುವಾಗ ಹೆಚ್ಚುವರಿ ಎಚ್ಚರಿಕೆ ಹೊಂದಿರಬೇಕುʼʼ ಎಂದು ಸೋಮನಾಥ್ ಹೇಳಿದ್ದಾರೆ. "ಸುರಕ್ಷತೆಯನ್ನು ಖಾತ್ರಿಪಡಿಸಲು ನಾವು ಹಲವು ಹಂತದ ಪರೀಕ್ಷಾರ್ಥ ಉಡಾವಣೆ ಕೈಗೊಳ್ಳುತ್ತೇವೆʼʼ ಎಂದು ಅವರು ಈ ಸಮಯದಲ್ಲಿ ತಿಳಿಸಿದ್ದರು.
"ನಾವು ಗಗನಕ್ಕೆ ಯಾನಿಗಳನ್ನು ಕಳುಹಿಸಬೇಕಾದರೆ ಮೊದಲು ಸುರಕ್ಷತಾ ವ್ಯವಸ್ಥೆಯ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳಬೇಕು. ಇದಕ್ಕಾಗಿ ಹಲವು ಹಂತದ ಪರೀಕ್ಷೆಗಳನ್ನು ನಡೆಸಬೇಕಿದೆ. ಇಂತಹ ಪರೀಕ್ಷೆಯನ್ನು ಈ ವರ್ಷ ನಡೆಸಲು ಉದ್ದೇಶಿಸಿದ್ದೇವೆ. ಗಗನಯಾನವನ್ನು ಒಂದು ಅವಘಡವಾಗಿ ಮಾಡಲು ನಾವು ಬಯಸುವುದಿಲ್ಲ. ಹೀಗಾಗಿ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆʼʼ ಎಂದು ಅವರು ಹೇಳಿದ್ದರು.