Lord Ram is everyone's god: ಶ್ರೀರಾಮ ಎಲ್ಲರ ದೇವರು, ಜನರಿಗೆ ದಾರಿ ತೋರಿಸಲು ಆತನನ್ನು ಅಲ್ಲಾಹ್ ಕಳುಹಿಸಿದನು: ಫಾರೂಕ್ ಅಬ್ದುಲ್ಲಾ
Mar 24, 2023 10:38 AM IST
ಶ್ರೀರಾಮ ಎಲ್ಲರ ದೇವರು, ಜನರಿಗೆ ದಾರಿ ತೋರಿಸಲು ಆತನನ್ನು ಅಲ್ಲಾಹ್ ಕಳುಹಿಸಿದನು: ಫಾರೂಕ್ ಅಬ್ದುಲ್ಲಾ(ANI File Photo)
ಭಗವಂತ ರಾಮನನ್ನು ಭಾರತೀಯ ಜನತಾ ಪಕ್ಷವು ಮತಕ್ಕಾಗಿ ಬಳಸುತ್ತಿದೆ ಎಂದು ಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಆರೋಪಿಸಿದ್ದಾರೆ. ಭಗವಾನ್ ರಾಮನು ಎಲ್ಲರ ದೇವರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರ: ಭಗವಂತ ರಾಮನನ್ನು ಭಾರತೀಯ ಜನತಾ ಪಕ್ಷವು ಮತಕ್ಕಾಗಿ ಬಳಸುತ್ತಿದೆ ಎಂದು ಮ್ಮು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರುಖ್ ಅಬ್ದುಲ್ಲಾ ಆರೋಪಿಸಿದ್ದಾರೆ. ಭಗವಾನ್ ರಾಮನು ಎಲ್ಲರ ದೇವರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಪ್ಯಾಂಥರ್ಸ್ ಪಾರ್ಟಿ (ಜೆಕೆಎನ್ಎನ್ಪಿ) ಸಂಸ್ಥಾಪನಾ ದಿನದ ನಿಮಿತ್ತ ಉಧಮ್ಪುರ ಜಿಲ್ಲೆಯ ಗರ್ನೈನಲ್ಲಿ ನಡೆದ ರಾಲಿಯನ್ನು ಉದ್ದೇಶಿಸಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚುನಾವಣೆಯನ್ನು ಉಲ್ಲೇಖಿಸಿ ಫಾರೂಕ್ ಅಬ್ದುಲ್ಲಾ ಹೀಗೆ ಹೇಳಿದರು. "ಪರೀಕ್ಷೆಗಳು (ಚುನಾವಣೆ) ಶೀಘ್ರದಲ್ಲಿ ಬರಲಿವೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಹರಿಯಲಿದೆ. ನಮ್ಮ ತಾಯಂದಿರು ಮತ್ತು ಹೆಣ್ಣು ಮಕ್ಕಳಿಗೆ ದೇವಸ್ಥಾನಗಳ ಬಗ್ಗೆ ಪದೇಪದೇ ಹೇಳಲಾಗುತ್ತದೆ. ಅವರು (ಬಿಜೆಪಿ) ಆ ದಿನ ಮಾತ್ರ ರಾಮಮಂದಿರ ಉದ್ಘಾಟಿಸಲಿದ್ದಾರೆ" ಎಂದು ಅವರು ಹೇಳಿದ್ದಾರೆ.
"ಜನರು ಹೆಚ್ಚುತ್ತಿರುವ ಹಣದುಬ್ಬರ ಮತ್ತು ನಿರುದ್ಯೋಗವನ್ನು ಮರೆತುಬಿಡುತ್ತಾರೆ. ಜನರು ತಮ್ಮನ್ನು ತಾವು ರಾಮಭಕ್ತರು ಎಂದು ಭಾವಿಸುವಂತೆ ಮಾಡಲಾಗುತ್ತದೆ" ಎಂದು ಅವರು ಹೇಳಿದ್ದಾರೆ. ಭಗವಾನ್ ರಾಮ ಪ್ರತಿಯೊಬ್ಬರ ದೇವರು ಎಂದು ಹೇಳಿದ ಅವರು, ಬಿಜೆಪಿಯು ರಾಮನನ್ನು "ಮಾರಾಟ" ಮಾಡುತ್ತಿದೆ" ಎಂದು ಆರೋಪಿಸಿದ್ದಾರೆ.
"ಆದರೆ, ನಾನು ಒಂದು ವಿಷಯ ಹೇಳಲು ಬಯಸುವೆ. ಭಗವಂತ ರಾಮನು ಕೇವಲ ಹಿಂದೂಗಳ ದೇವರಲ್ಲ. ಇದನ್ನು ಮೊದಲು ಮನಸ್ಸಿನಿಂದ ತೆಗೆದುಹಾಕಿ. ಭಗವಂತ ರಾಮನು ಎಲ್ಲರ ದೇವರು. ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರ ಎಲ್ಲರ ದೇವರು. ಇದೇ ರೀತಿ, ಅಲ್ಲಾಹ್ ಕೂಡ ಎಲ್ಲರ ದೇವರು. ಅಲ್ಹಾಹ್ ಕೇವಲ ಮುಸ್ಲಿಂಮರ ದೇವರಲ್ಲ. ಇತ್ತೀಚೆಗೆ ನಿಧನರಾದ ಪಾಕಿಸ್ತಾನದ ಪ್ರಮುಖ ಬರಹಗಾರರೊಬ್ಬರ ಪ್ರಕಾರ, "ಜನರಿಗೆ ಸರಿಯಾದ ದಾರಿ ತೋರಿಸಲು ಅಲ್ಲಾಹ್ನು ಭಗವಂತ ರಾಮನನ್ನು ಈ ಭೂಮಿಗೆ ಕಳುಹಿಸಿದನು". ಹೀಗಾಗಿ, ನಾವು ರಾಮಭಕ್ತರು ಮಾತ್ರ ಎನ್ನುವವರು ಮೂರ್ಖರು. ಅವರು ರಾಮನನ್ನು ಮಾರಾಟ ಮಾಡುತ್ತಾರೆ. ಅವರಿಗೆ ರಾಮನ ಮೇಲೆ ಮೋಹವಿಲ್ಲ. ಅವರಿಗೆ ಅಧಿಕಾರದ ಮೋಹ ಮಾತ್ರ" ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
"ಇದೇ ಕಾರಣಕ್ಕೆ ಇಲ್ಲಿ ನೆರೆದಿರುವ ಮಾತೆಯರಿಗೆ, ಹೆಣ್ಣು ಮಕ್ಕಳಿಗೆ ಹೇಳಲು ಬಯಸುತ್ತೇನೆ. ಈ ದ್ವೇಷದ ಬೀಜ ಬಿತ್ತುವುದನ್ನು ನಾವು ಕೊನೆಗೊಳಿಸಬೇಕು. ವಾರಣಾಸಿಯಲ್ಲಿ ಬೃಹತ್ ದೀಪಾಲಂಕರ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಬಡ ಮಹಿಳೆಯರು ಆ ಹಣತೆಗಳಿಂದ ಎಣ್ಣೆ ಸಂಗ್ರಹಿಸುತ್ತಿದ್ದರು. ಇದು ನೈಜ ಪರಿಸ್ಥಿತಿ" ಎಂದು ಅವರು ಹೇಳಿದರು.
"ಜನರು ಮತ ಚಲಾವಣೆ ಮಾಡುವ ಸಂದರ್ಭದಲ್ಲಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕು" ಎಂದು ಅವರು ಮನವಿ ಮಾಡಿದರು.
“ನಿಮ್ಮ ಮತದ ಶಕ್ತಿಯನ್ನು ಸದಾ ನೆನಪಿಟ್ಟುಕೊಳ್ಳಿ. ನೆನಪಿರಲಿ, ಬ್ರಿಟಿಷರನ್ನು ಹೊರದಬ್ಬಲು ಎಲ್ಲ ಸ್ವಾತಂತ್ರ್ಯ ಹೋರಾಟಗಾರರು ಒಗ್ಗೂಡಿದ್ದು ಹೇಗೆ? ಅವರು ಜಾತಿ ಅಥವಾ ಧರ್ಮದ ತಾರತಮ್ಯ ಮಾಡಲಿಲ್ಲ, ಅವರು ಬ್ರಿಟಿಷರನ್ನು ಹೊರಹಾಕಲು ಬಯಸಿದ್ದರು. ನಿಮಗೆ ಮತ ಚಲಾಯಿಸುವ ಮತ್ತು ಅಧಿಕಾರವನ್ನು ಬದಲಾಯಿಸುವ ಅಧಿಕಾರವನ್ನು ನೀಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಯಾವಾಗಲೂ ನೆನಪಿನಲ್ಲಿಡಿ, ”ಎಂದು ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ "ಇವಿಎಂನ ಮತಗಳನ್ನು ತಿರುಚಬಹುದು. ಜನರು ತಮ್ಮ ಹಕ್ಕುಗಳ ಹೋರಾಟಕ್ಕೆ ಸದಾ ಸಿದ್ಧರಿರಬೇಕು" ಎಂದರು.