ಕಾಂಗ್ರೆಸ್ ಸೇರಿದ ತೆಲಂಗಾಣ ನಾಯಕಿ ವೈಎಸ್ ಶರ್ಮಿಳಾ: ಆಂಧ್ರದಲ್ಲೂ ಹೊಸ ರಾಜಕೀಯ ಲೆಕ್ಕಾಚಾರದ ನಿರೀಕ್ಷೆ
Jan 04, 2024 07:05 PM IST
ದೆಹಲಿಯಲ್ಲಿ ಕಾಂಗ್ರೆಸ್ ಅನ್ನು ಅಧಿಕೃತವಾಗಿ ಸೇರಿದ ವೈ.ಎಸ್.ಶರ್ಮಿಳಾ
- Andhra politics ತೆಲಂಗಾಣ ವೈಎಸ್ಆರ್ ಪಕ್ಷದ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿಸಿದ್ದ ಆಂಧ್ರಪ್ರದೇಶ ಸಿಎಂ ಜಗನ್ಮೋಹನ್ ರೆಡ್ಡಿ ಸಹೋದರಿ ವೈ.ಎಸ್.ಶರ್ಮಿಳಾ ಕಾಂಗ್ರೆಸ್ ಅನ್ನು ಸೇರಿದ್ದಾರೆ. ತೆಲಂಗಾಣ ವೈಎಸ್ಆರ್ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದ್ದಾರೆ.
ದೆಹಲಿ: ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಇರುವಾಗಲೇ ಅಲ್ಲಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕಿ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಹೋದರಿ ವೈ.ಎಸ್.ಶರ್ಮಿಳಾ ಅವರು ಗುರುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಗೊಂಡರು. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ತೆಲಂಗಾಣ ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದ ಶರ್ಮಿಳಾ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ಹಿರಿಯ ನಾಯಕ ರಾಹುಲ್ಗಾಂಧಿ ಬರ ಮಾಡಿಕೊಂಡರು. ಇದರೊಂದಿಗೆ ಆಂಧ್ರಪ್ರದೇಶ ಚುನಾವಣೆ ವೇಳೆ ಕಾಂಗ್ರೆಸ್ ಹಾಗೂ ವೈಎಸ್ಆರ್ ಕಾಂಗ್ರೆಸ್ ಮೈತ್ರಿ ಆಗಲಿದೆಯಾ, ಅಥವಾ ಹೊಸ ರಾಜಕೀಯ ಬೆಳವಣಿಗಗೆ ದಾರಿಯಾಗಲಿದೆಯಾ ಎನ್ನುವ ಚರ್ಚೆಗಳೂ ಶುರುವಾಗಿವೆ.
ಇದನ್ನೂ ಓದಿರಿ:Kannada Serial: ಪುಟ್ಟಕ್ಕನ ಮಗಳು ಸ್ನೇಹ, ಭೂಮಿಗೆ ಬಂದ ಭಗವಂತ ನಟಿ ಗಿರಿಜಾ, ಅಮೃತಧಾರೆಯ ಭೂಮಿಕಾ, ಈ ಮೂವರಲ್ಲಿ ಯಾರು ನಿಮಗಿಷ್ಟ?
ಆಂಧ್ರದಲ್ಲಿ ಐದು ವರ್ಷದ ಹಿಂದೆ ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ಸರ್ಕಾರ ರಚನೆಗೊಂಡ ನಂತರ ವೈ.ಎಸ್.ಶರ್ಮಿಳಾ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕಿಯಾಗಿಯೇ ಗುರುತಿಸಿಕೊಂಡಿದ್ದರು. ಆನಂತರ ವೈಎಸ್ಆರ್ ಪಕ್ಷವನ್ನು ತೆಲಂಗಾಣದಲ್ಲಿ ಸಂಘಟಿಸಬೇಕು ಎನ್ನುವ ಉದ್ದೇಶದಿಂದ ಅವರನ್ನು ತೆಲಂಗಾಣದ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಅಲ್ಲಿ ಸಂಘಟನೆ ಕೂಡ ಮಾಡುತ್ತಿದ್ದರು.
ಎರಡು ತಿಂಗಳ ಹಿಂದೆ ನಡೆದಿದ್ದ ಚುನಾವಣೆ ವೇಳೆ ತೆಲಂಗಾಣ ವೈಎಸ್ಆರ್ ಪಕ್ಷವು ಕಾಂಗ್ರೆಸ್ಗೆ ಬೆಂಬಲ ಸೂಚಿಸಿತ್ತು. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿಯೂ ಶರ್ಮಿಳಾ ಘೋಷಿಸಿದ್ದರು.
ಇದಾದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು. ಇದಾದ ಒಂದು ತಿಂಗಳಲ್ಲಿಯೇ ಶರ್ಮಿಳಾ ಕಾಂಗ್ರೆಸ್ ಸೇರಿಕೊಂಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶರ್ಮಿಳಾ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳಲಾಯಿತು. ಈ ವೇಳೆ ಕಾಂಗ್ರೆಸ್ನೊಂದಿಗೆ ವೈಎಸ್ಆರ್ ತೆಲಂಗಾಣ ಕಾಂಗ್ರೆಸ್ ಅನ್ನು ವಿಲೀನಗೊಳಿಸುತ್ತಿರುವುದಾಗಿಯೂ ಇದೇ ವೇಳೆ ಅವರು ಘೋಷಿಸಿದರು.
ಭಾರತದಲ್ಲಿ ಜಾತ್ಯತೀತ ಹಿನ್ನೆಲೆಯ ಅತಿ ದೊಡ್ಡ ಪಕ್ಷ. ಸಮಾಜದ ಎಲ್ಲಾ ವರ್ಗ, ಸಮುದಾಯಗಳ ಪರವಾಗಿ ಕೆಲಸ ಮಾಡುವ ಪಕ್ಷ. ಈ ಪಕ್ಷಕ್ಕೆ ಮತ್ತೆ ಸೇರ್ಪಡೆಯಾಗಿರುವುದು ಖುಷಿ ತಂದಿದೆ ಎಂದು ಹೇಳಿದರು.
ಈಗಾಗಲೇ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಲ್ಲಿ ಜನರ ಆಶೋತ್ತರಗಳನ್ನು ಈಡೇರಿಸುವುದು ನಮ್ಮ ಮೊದಲ ಆದ್ಯತೆ. ಇದಕ್ಕೆ ಸಂಪೂರ್ಣವಾಗಿ ಕೈ ಜೋಡಿಸುವೆ ಎಂದು ಶರ್ಮಿಳಾ ತಿಳಿಸಿದರು.
ನಮ್ಮ ತಂದೆ ರಾಜಶೇಖರ ರೆಡ್ಡಿ ಅವರು ರಾಹುಲ್ಗಾಂಧಿ ಈ ದೇಶದ ಪ್ರಧಾನಿಯಾಗಬೇಕು ಎಂದು ಕನಸು ಕಂಡಿದ್ದವರು. ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ ಇರಲಿದೆ ಎಂದು ಹೇಳಿದರು.
ರಾಜಕೀಯ ಲೆಕ್ಕಾಚಾರ ಏನಾಗಬಹುದು
ತೆಲಂಗಾಣದಲ್ಲಿಯೇ ಹೆಚ್ಚು ಸಕ್ರಿಯವಾಗಿರುವ ಶರ್ಮಿಳಾ ಅವರನ್ನು ಬೆಂಬಲಿಸಿ ಆಂಧ್ರಪ್ರದೇಶದ ವೈಎಸ್ಆರ್ ಶಾಸಕರೊಬ್ಬರು ಕಾಂಗ್ರೆಸ್ ಸೇರುವುವಾಗಿ ಹೇಳಿದ್ದಾರೆ.
- ಈ ನಡುವೆ ಕರ್ನಾಟಕ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶರ್ಮಿಳಾ ಅವರನ್ನು ಕಾಂಗ್ರೆಸ್ಗೆ ಕರೆ ತರಲು ಪ್ರಯತ್ನಿಸಿದ್ದರು.
- ಈಗ ಆಂಧ್ರದಲ್ಲೂ ಹೊಸ ರಾಜಕೀಯ ಬೆಳವಣಿಗೆ ಆಗಲಿದೆಯಾ, ಕಾಂಗ್ರೆಸ್ ಹಾಗೂ ವೈಎಸ್ಆರ್ ಕಾಂಗ್ರೆಸ್ ರಾಜಕೀಯ ಹೊಸ ಲೆಕ್ಕಾಚಾರದ ಸಾಧ್ಯತೆಗಳೂ ಇವೆ.
- ವೈಎಸ್ಆರ್ ಕಾಂಗ್ರೆಸ್ ಕೂಡ ಆಂಧ್ರದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಬಹುದು
- ವೈಎಸ್ಆರ್ ಕಾಂಗ್ರೆಸ್ ಮತ ವಿಭಜನೆ ತಪ್ಪಿಸಲು ಕಾಂಗ್ರೆಸ್ನೊಂದಿಗೆ ವಿಲೀನವೂ ಆಗಬಹುದು.