Putin praises PM Modi: 'ಮೋದಿ ನಿಜವಾದ ದೇಶಭಕ್ತ', ಸ್ವತಂತ್ರ ವಿದೇಶಾಂಗ ನೀತಿಗೆ ಭಾರತವನ್ನು ಹೊಗಳಿದ ಪುಟಿನ್
Oct 28, 2022 10:05 AM IST
ಮೋದಿ ಮತ್ತು ಪುಟಿನ್
- “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶ ಮತ್ತು ಜನರ ಹಿತಾಸಕ್ತಿಯನ್ನು ಬೆಂಬಲಿಸಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಮುಂದುವರಿಸಲು ಸಮರ್ಥರಾಗಿರುವ ವಿಶ್ವದ ಪ್ರಮುಖ ನಾಯಕರಲ್ಲಿ ಅಗ್ರಗಣ್ಯರು. ಹಲವಾರು ಒತ್ತಡಗಳ ನಡುವೆಯೂ ಅವರು ತನ್ನ ಗುರಿಗಳ ಕಡೆಗೆ ಮುಂದುವರಿಯುತ್ತಿದ್ದಾರೆ,” ಎಂದು ಪುಟಿನ್ ಹೇಳಿದ್ದಾರೆ.
ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನಿಜವಾದ ದೇಶಭಕ್ತ' ಎಂದು ಕರೆದಿದ್ದಾರೆ. ಮಾಸ್ಕೋದಲ್ಲಿ ವಾರ್ಷಿಕ ವಾಲ್ಡೈ ಚರ್ಚೆಯಲ್ಲಿ ಮಾತನಾಡುತ್ತಾ ಭಾರತದ ಸ್ವತಂತ್ರ ವಿದೇಶಾಂಗ ನೀತಿಗಳು ಮತ್ತು 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಸಂಬಂಧದ ಕುರಿತು ಪ್ರತಿಕ್ರಿಯಿಸಿದ ಪುಟಿನ್, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ದೇಶ ಮತ್ತು ಜನರ ಹಿತಾಸಕ್ತಿಯನ್ನು ಬೆಂಬಲಿಸಿ ಸ್ವತಂತ್ರ ವಿದೇಶಾಂಗ ನೀತಿಯನ್ನು ಮುಂದುವರಿಸಲು ಸಮರ್ಥರಾಗಿರುವ ವಿಶ್ವದ ಪ್ರಮುಖ ನಾಯಕರಲ್ಲಿ ಅಗ್ರಗಣ್ಯರು. ಹಲವಾರು ಒತ್ತಡಗಳ ನಡುವೆಯೂ ಅವರು ತನ್ನ ಗುರಿಗಳ ಕಡೆಗೆ ಮುಂದುವರಿಯುತ್ತಿದ್ದಾರೆ. ನಾನು ಅವರನ್ನು ಐಸ್ ಬ್ರೇಕರ್ ಎಂದು ಕರೆಯುತ್ತೇನೆ” ಎಂದು ಪುಟಿನ್ ಹೇಳಿದ್ದಾರೆ.
“ಭಾರತದಂತಹ ದೇಶಗಳು ಮುಂದೆ ಉತ್ತಮ ಭವಿಷ್ಯವನ್ನು ಹೊಂದಿವೆ ಎಂದಷ್ಟೇ ನಾನು ಹೇಳುವುದಿಲ್ಲ. ಅದರೊಂದಿಗೆ ಜಾಗತಿಕ ರಾಜಕೀಯದಲ್ಲೂ ಪ್ರಮುಖ ಪಾತ್ರ ವಹಿಸಲಿದೆ” ಎಂದು ಪುಟಿನ್ ಕೊಂಡಾಡಿದ್ದಾರೆ.
“ರಷ್ಯಾ ಮತ್ತು ಭಾರತದ ಸಂಬಂಧವು ದಶಕಗಳ ಕಾಲ ನಿಕಟ ಸ್ನೇಹದ ಅಡಿಪಾಯದ ಮೇಲೆ ನಿರ್ಮಿಸಲಾಗಿದೆ. ನಾವು ಎಂದಿಗೂ ಭಾರತದೊಂದಿಗೆ ಯಾವುದೇ ಸಮಸ್ಯೆ ಅನುಭವಿಸಿಲ್ಲ. ನಾವು ಎಂದಿಗೂ ಒಬ್ಬರನ್ನೊಬ್ಬರು ಬಿಟ್ಟುಕೊಡದೆ, ಪರಸ್ಪರ ಬೆಂಬಲಿಸುತ್ತೇವೆ. ಅದು ಈಗಲೂ ನಡೆಯುತ್ತಿದೆ. ಭವಿಷ್ಯದಲ್ಲಿಯೂ ನಮ್ಮ ನಡುವಿನ ಸ್ನೇಹ ಸಂಬಂಧ ಹೀಗೆಯೇ ಮುಂದುವರೆಯುತ್ತದೆ ಎಂಬ ಸಕಾರಾತ್ಮಕ ನಂಬಿಕೆ ನನಗಿದೆ” ಎಂದು ಪುಟಿನ್ ಹೇಳಿದ್ದಾರೆ.
ರಷ್ಯಾ ಮತ್ತು ಭಾರತದ ನಡುವಣ ಆರ್ಥಿಕ ಸಹಕಾರ ಬೆಳೆಯುತ್ತಿದೆ ಎಂದು ಪುಟಿನ್ ಹೇಳಿದರು. “ಭಾರತದ ಕೃಷಿಗೆ ಬಹಳ ಅಗತ್ಯವಾದ ರಸಗೊಬ್ಬರಗಳ ಪೂರೈಕೆಯನ್ನು ಹೆಚ್ಚಿಸಲು ಪ್ರಧಾನಿ ಮೋದಿ ನನ್ನನ್ನು ಕೇಳಿದ್ದಾರೆ. ನಾವು ಈ ಪ್ರಮಾಣವನ್ನು 7.6 ಪಟ್ಟು ಹೆಚ್ಚಿಸಿದ್ದೇವೆ” ಎಂದು ಪುಟಿನ್ ಸ್ಪಷ್ಟಪಡಿಸಿದರು.
ಬ್ರಿಟಿಷರ ವಸಾಹತುಶಾಹಿ ಧೋರಣೆಯಿಂದ ಹೊರಬಂದ ಭಾರತವು ಆಧುನಿಕ ರಾಷ್ಟ್ರದ ಅಭಿವೃದ್ಧಿಯ ಪಥದಲ್ಲಿ ಸಾಗಿದೆ ಎಂದು ಪುಟಿನ್ ಹೇಳಿದರು. “ಭಾರತವು ಪ್ರಪಂಚದ ಪ್ರತಿಯೊಬ್ಬ ವ್ಯಕ್ತಿಯಿಂದ ಗೌರವವನ್ನು ಆಕರ್ಷಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದಲ್ಲಿ ಬಹಳಷ್ಟು ಕೆಲಸಗಳಾಗಿವೆ. ಅವರ ಡು ಇಟ್ ಇನ್ ಇಂಡಿಯಾ ಪರಿಕಲ್ಪನೆಯು ಮಹತ್ವದ್ದಾಗಿದೆ” ಎಂದು ರಷ್ಯಾ ಅಧ್ಯಕ್ಷ ಹೇಳಿದರು.
ಸೆಪ್ಟೆಂಬರ್ನಲ್ಲಿ ಶಾಂಘೈ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಉಜ್ಬೇಕಿಸ್ತಾನದಲ್ಲಿ ಪುಟಿನ್ ಅವರನ್ನು ಭೇಟಿಯಾಗಿದ್ದರು. ಅಲ್ಲಿ ಇಂದಿನ ಯುಗವು ಯುದ್ಧದ ಯುಗವಲ್ಲ ಎಂದು ಪುಟಿನ್ಗೆ ಪ್ರಧಾನಿ ಮೋದಿ ಹೇಳಿದ್ದರು. ಪ್ರಧಾನಿ ಮೋದಿಯವರ ಕಳವಳವನ್ನು ಪುಟಿನ್ ಒಪ್ಪಿಕೊಂಡಿದ್ದಾರೆ. “ಉಕ್ರೇನ್ನಲ್ಲಿನ ಸಂಘರ್ಷದ ಬಗ್ಗೆ ನಿಮ್ಮ ನಿಲುವಿನ ಬಗ್ಗೆ ನನಗೆ ತಿಳಿದಿದೆ ಮತ್ತು ನಿಮ್ಮ ಕಾಳಜಿಯ ಬಗ್ಗೆ ನನಗೆ ಅರಿವಿದೆ. ಇದೆಲ್ಲವೂ ಆದಷ್ಟು ಬೇಗ ಕೊನೆಗೊಳ್ಳಬೇಕೆಂದು ನಾವು ಬಯಸುತ್ತೇವೆ. ಅಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಾವು ನಿಮಗೆ ತಿಳಿಸುತ್ತೇವೆ” ಎಂದು ಪುಟಿನ್ ಸಭೆಯಲ್ಲಿ ಪ್ರಧಾನಿ ಮೋದಿಗೆ ತಿಳಿಸಿದ್ದರು.