Recruitment exam: 30 ಸಾವಿರ ಹುದ್ದೆಗಳ ನೇಮಕಾತಿ ಪರೀಕ್ಷೆಗೆ 25 ಜಿಲ್ಲೆಗಳ ಮೊಬೈಲ್ ಇಂಟರ್ನೆಟ್ ಬಂದ್
Aug 21, 2022 11:16 AM IST
Recruitment exam: 30 ಸಾವಿರ ಹುದ್ದೆಗಳ ನೇಮಕಾತಿ ಪರೀಕ್ಷೆಗೆ 25 ಜಿಲ್ಲೆಗಳ ಮೊಬೈಲ್ ಇಂಟರ್ನೆಟ್ ಬಂದ್
- ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಅಸ್ಸಾಂ ಸರಕಾರವು ಅಲ್ಲಿನ ಸುಮಾರು 25 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನೇ ಸ್ಥಗಿತಗೊಳಿಸಿದೆ.
ಗುವಾಹಟಿ: ಇಂದು ಅಸ್ಸಾಂ ಸರಕಾರವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 30 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಉದ್ಯೋಗ ನೇಮಕಾತಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಅಸ್ಸಾಂ ಸರಕಾರವು ಅಲ್ಲಿನ ಸುಮಾರು 25 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನೇ ಸ್ಥಗಿತಗೊಳಿಸಿದೆ.
ಪರೀಕ್ಷೆ ನಡೆಯುವ ಅವಧಿಯಲ್ಲಿ ಅಲ್ಲಿನ 25 ಜಿಲ್ಲೆಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಯಾವುದೇ ಮೊಬೈಲ್ ಇಂಟರ್ನೆಟ್ ಸಂಪರ್ಕವಿರುವುದಿಲ್ಲ. ಹೀಗಾಗಿ, ಪರೀಕ್ಷೆ ಬರೆಯದ ಪರೀಕ್ಷಾ ಕೇಂದ್ರದ ಸುತ್ತಮುತ್ತ ಇರುವ ಇತರರೂ ಇಂಟರ್ನೆಟ್ ಇಲ್ಲದೆ ಕಾಲ ಕಳೆಯಬೇಕಿದೆ. ಈ ಬೃಹತ್ ನೇಮಕಾತಿ ಪರೀಕ್ಷೆಯನ್ನು ಸುಮಾರು 14 ಲಕ್ಷ ಅಭ್ಯರ್ಥಿಗಳು ಬರೆಯುತ್ತಿದ್ದಾರೆ.
ಪರೀಕ್ಷೆ ನಡೆಯುವ ಕೇಂದ್ರದಿಂದ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಅಸ್ಸಾಂ ಸರಕಾರದ ಉದ್ಯೋಗ ನೇಮಕಾತಿ ಪರೀಕ್ಷೆ ಇದಾಗಿದ್ದು, ಈ ಹಿಂದೆ ಸಾಕಷ್ಟು ಅಕ್ರಮಗಳಿಂದ ಸುದ್ದಿಯಾಗಿತ್ತು. ಈ ನೇಮಕಾತಿ ಪರೀಕ್ಷೆಯ ಮೊದಲ ಹಂತ ಇಂದು ನಡೆಯಲಿದೆ. ಆಗಸ್ಟ್28 ಮತ್ತು ಸೆಪ್ಟೆಂಬರ್ 21ರಂದು ಮುಂದಿನ ಪರೀಕ್ಷೆಗಳು ನಡೆಯಲಿವೆ. ಗ್ರೇಡ್-೨ ಮತ್ತು ಗ್ರೇಡ್-೪ ಹುದ್ದೆಗಳ ನೇಮಕಕ್ಕಾಗಿ ಈ ಪರೀಕ್ಷೆ ನಡೆಯುತ್ತಿದೆ.
ಇಂಟರ್ನೆಟ್ ಬಂದ್ ಮಾತ್ರವಲ್ಲದೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಬಿಗಿಭದ್ರತೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ 69 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಭಾರಿ ಅಕ್ರಮ ಬಯಲಾಗಿತ್ತು. ಇದೊಂದು ಮತ್ತೊಂದು ವ್ಯಾಪಂ ಅಕ್ರಮ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರ ಆರೋಪಿಸಿದ್ದರು.
ಇತ್ತೀಚೆಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಪ್ರವೇಶ ಅರ್ಹತೆಗಾಗಿ ನಡೆಸಿದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯಲ್ಲಿಯೂ ಉತ್ತರ ಪ್ರದೇಶದಲ್ಲಿ ಅಕ್ರಮ ಬಯಲಾಗಿತ್ತು. ನೀಟ್ ಪರೀಕ್ಷೆ ಬರೆಯುವಲ್ಲಿ ಪರಿಣತಿ ಪಡೆದಿರುವವರು ವಿದ್ಯಾರ್ಥಿಗಳ ಹೆಸರಿನಲ್ಲಿ ಪರೀಕ್ಷೆ ಬರೆದಿದ್ದರು.
ಪಿಎಸ್ಐ ಅಕ್ರಮ, ಮರು ಪರೀಕ್ಷೆ ಶೀಘ್ರ?
ಪಿಎಸ್ಐ ನೇಮಕ ಹಗರಣದಿಂದಾಗಿ ರದ್ದುಗೊಳಿಸಿರುವ ಪಿಎಸ್ಐ ಪರೀಕ್ಷೆಯ (PSI Exam) ಮರುಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇತ್ತೀಚೆಗೆ ತಿಳಿಸಿದ್ದಾರೆ. ಗೃಹಸಚಿವರ ನಿವಾಸಕ್ಕೆ ಪಿಎಸ್ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ "ಪಿಎಸ್ಐ ಪರೀಕ್ಷೆ ಮರುಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸಲಾಗುವುದುʼʼ ಎಂದು ಅವರು ಹೇಳಿದ್ದರು.
ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ನಡೆದ ಅಕ್ರಮದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ಮರು ಪರೀಕ್ಷೆ ನಡೆಸುವ ಕುರಿತು ಪ್ರಕಟಣೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ರದ್ದಾದ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿದ್ದ ಎಲ್ಲಾ 56000 ಅಭ್ಯರ್ಥಿ ಗಳು ಮರು ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಹೊಂದಿದ್ದು, ಯಾವುದೇ ಆತಂಕ ಬೇಡ ಎಂದು ಸಚಿವರು ಭರವಸೆ ನೀಡಿದ್ದಾರೆ.
ಪಿಎಸ್ಐ ನೇಮಕಕ್ಕೆ ಮರು ಪರೀಕ್ಷೆ ನಡೆಸುವುದು ತಡವಾದರೆ, ವಯೋಮಿತಿ ಅರ್ಹತೆ ಕಳೆದುಕೊಳ್ಳುವ ಭಯ ಬೇಡ, ಪರೀಕ್ಷೆ ತಯಾರಿ ಮುಂದುವರೆಸಿ, ಎಂದು ಸಚಿವರು, ಕಿವಿಮಾತು ಹೇಳಿದರು. ಹೀಗಾಗಿ, ಈ ಹಿಂದೆ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಹೆಚ್ಚುವರಿ ಮೀಸಲಾತಿ ದೊರಕುವ ಸೂಚನೆಯನ್ನು ಗೃಹ ಸಚಿವರು ನೀಡಿದ್ದಾರೆ.