Kargil News: ಕಾರ್ಗಿಲ್ನಲ್ಲಿ ಮಾರ್ಟರ್ ಶೆಲ್ ಬಾಂಬ್ ಸ್ಪೋಟ, 13 ವರ್ಷದ ಬಾಲಕ ಸಾವು, ಇಬ್ಬರಿಗೆ ಗಾಯ
Apr 16, 2023 08:29 PM IST
ಮಾರ್ಟರ್ ಶೆಲ್ ಬಾಂಬ್ನ ಸಾಂದರ್ಭಿಕ ಚಿತ್ರ (ವಿಕಿಪೀಡಿಯಾ)
Kargil News: ಮೂವರು ಹದಿಹರೆಯದ ಹುಡುಗರು ಕುರ್ಬಥಾಂಗ್ನ ಆಸ್ಟ್ರೋ ಫುಟ್ಬಾಲ್ ಮೈದಾನದ ಬಳಿ ಆಟವಾಡುತ್ತಿದ್ದಾಗ ಸ್ಫೋಟಗೊಳ್ಳದ ಮಾರ್ಟರ್ ಶೆಲ್ ನೋಡಿದ್ದಾರೆ.
ಲಡಾಖ್: ಕಾರ್ಗಿಲ್ ಜಿಲ್ಲೆಯ ದೂರದ ಹಳ್ಳಿಯೊಂದರಲ್ಲಿ ಭಾನುವಾರ ಶೆಲ್ ಸ್ಪೋಟದಿಂದ 13 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಪೋಟಗೊಳ್ಳದೆ ಉಳಿದಿದ್ದ ಈ ಶೆಲ್ ಭಾನುವಾರ ಸ್ಪೋಟಗೊಂಡಿದ್ದು, ಈ ಅನಾಹುತ ಸಂಭವಿಸಿದೆ.
ಮೂವರು ಹದಿಹರೆಯದ ಹುಡುಗರು ಕುರ್ಬಥಾಂಗ್ನ ಆಸ್ಟ್ರೋ ಫುಟ್ಬಾಲ್ ಮೈದಾನದ ಬಳಿ ಆಟವಾಡುತ್ತಿದ್ದಾಗ ಸ್ಫೋಟಗೊಳ್ಳದ ಮಾರ್ಟರ್ ಶೆಲ್ ನೋಡಿದ್ದಾರೆ. ಇದನ್ನು ನೋಡಿದ ಬಾಲಕರು ಅದರಲ್ಲಿ ಆಟವಾಡಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಮಾರ್ಟರ್ ಶೆಲ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಮಾರ್ಟರ್ ಶೆಲ್ 1999 ರ ಕಾರ್ಗಿಲ್ ಯುದ್ಧದ ಸಂದರ್ಭದ್ದಾಗಿರಬಹುದು ಎನ್ನಲಾಗಿದೆ. ಗಾಯಗೊಂಡಿದ್ದ ಬಾಲಕ ಬಕೀರ್ನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ, ಮಾರ್ಗ ಮಧ್ಯೆ ಆತ ಮೃತಪಟ್ಟ. ಈತನ ವಯಸ್ಸಿನ ಇನ್ನಿಬ್ಬರು ಬಾಲಕರಾದ ಅಲಿ ನಾಕಿ ಮತ್ತು ಮುಂತಜೀರ್ ಮೆಹದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲಡಾಖ್ ಲೆಫ್ಟಿನೆಂಟ್ ಗವರ್ನರ್ ಬ್ರಿಗ್ (ನಿವೃತ್ತ) ಬಿ ಡಿ ಮಿಶ್ರಾ ಅವರು ಆಸ್ಪತ್ರೆಯಲ್ಲಿ ಗಾಯಗೊಂಡ ಬಾಲಕರನ್ನು ಭೇಟಿ ಮಾಡಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೇ ಮೃತ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜನರ ಸುರಕ್ಷತೆಗಾಗಿ ಈ ರೀತಿ ಸ್ಪೋಟಗೊಂಡಿರದ ಶೆಲ್ಗಳನ್ನು ಹುಡುಕಿ ತೆರವು ಮಾಡಲು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಕೌನ್ಸಿಲರ್ ಒತ್ತಾಯಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದ ಕೇಂದ್ರಬಿಂದುವಾದ ಕಾರ್ಗಿಲ್ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೆ. ಶ್ರೀನಗರದಿಂದ 205 ಕಿ.ಮೀ. ದೂರ. ಗಡಿ ನಿಯಂತ್ರಣ ರೇಖೆಯ ಉತ್ತರ ಭಾಗಕ್ಕೆ ಮುಖ ಮಾಡಿಕೊಂಡಿದೆ. ಹಿಮಾಲಯದ ಉಳಿದ ಪ್ರಾಂತ್ಯ ಗಳಂತೆ ಕಾರ್ಗಿಲ್ ಕೂಡಾ ಅತಿ ಶೀತ ಪ್ರದೇಶ. ಕಾರ್ಗಿಲ್ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲಿ ದ್ರಾಸ್, ಬಟಾಲಿಕ್, ಟೈಗರ್ಹಿಲ್ಸ್ ಪರ್ವತಗಳು ಬರುತ್ತವೆ.
1999 ಮೇ ಕಾರ್ಗಿಲ್ ಭಾಗದಲ್ಲಿ ಪಾಕ್ ಪಡೆಗಳು ಒಳನುಸುಳಿವೆ ಎಂಬ ಸುದ್ದಿ ಭಾರತೀಯ ಸೇನೆಗೆ ಸಿಕ್ಕಿತ್ತು. ಪಾಕ್ ಸೈನಿಕರು ಕಾರ್ಗಿಲ್ ಭಾಗದಲ್ಲಿ ಗೋಚರವಾಗುತ್ತಿದ್ದಂತೆ ಭೂಸೇನೆ ಆಪರೇಷನ್ ವಿಜಯ್’ ಕಾರ್ಯಾಚರಣೆ ಶುರು ಮಾಡಿತ್ತು. 60 ದಿನಗಳಲ್ಲಿ ಸಂಪೂರ್ಣ ಕಾರ್ಗಿಲ್ ಶ್ರೇಣಿ ಭಾರತದ ಕೈವಶವಾಗಿತ್ತು.
ಕಾರ್ಗಿಲ್ ಯುದ್ಧದಿಂದಾಗಿ ಎರಡೂ ಕಡೆಗಳಲ್ಲಿ ಅಪಾರ ಹಾನಿಯಾಗಿತ್ತು. ಭಾರತದ ಸುಮಾರು 500 ಮಂದಿ ಸೈನಿಕರು ಪ್ರಾಣ ತೆತ್ತಿದ್ದರೆ, ಪಾಕ್ನ ಸುಮಾರು 700 ಮಂದಿ ಮಡಿದಿದ್ದರು. ಪಾಕ್ ಭಾರತದ ಯುದ್ಧ ವಿಮಾನ, ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿತ್ತು. ಭಾರತ ಕೂಡ ದೊಡ್ಡ ಸಂಖ್ಯೆಯಲ್ಲಿ ಪಾಕ್ ಸೈನಿಕರನ್ನು ಸೆರೆಹಿಡಿದಿತ್ತು
ಕಾರ್ಗಿಲ್ ಯುದ್ಧ ತೀವ್ರಗೊಳ್ಳುತ್ತಿದ್ದಂತೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮೇಲೆ ತೀವ್ರ ಒತ್ತಡ ಬಿದ್ದಿತ್ತು. ಆಗಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ದೂರವಾಣಿ ಕರೆ ಮಾಡಿ ಸೇನೆ ಹಿಂದಕ್ಕೆ ಕರೆಸುವಂತೆ ಪಾಕ್ಗೆ ತಾಕೀತು ಮಾಡಿದ್ದರು. ಇದರೊಂದಿಗೆ ವಿವಿಧ ದೇಶಗಳು ಪಾಕ್ಗೆ ಒತ್ತಡ ಹೇರಿದ್ದವು. ರಷ್ಯಾ, ಇಸ್ರೇಲ್ ನೇರವಾಗಿ ಭಾರತದ ಪರ ನಿಂತಿದ್ದವು.
ವಿಭಾಗ