Kashi millets Laddu Prasadam: ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಇನ್ಮುಂದೆ ಆರೋಗ್ಯಸ್ನೇಹಿ ಸಿರಿಧಾನ್ಯಗಳ ಲಡ್ಡು ಪ್ರಸಾದ
Mar 05, 2023 10:19 PM IST
Kashi millets Laddu Prasadam: ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಇನ್ಮುಂದೆ ಆರೋಗ್ಯಸ್ನೇಹಿ ಸಿರಿಧಾನ್ಯಗಳ ಲಡ್ಡು ಪ್ರಸಾದ
- ಯೋಗಿ ಸರ್ಕಾರದ ಸೂಚನೆ ಮೇರೆಗೆ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಶ್ರೀ ಅನ್ನದಿಂದ ತಯಾರಿಸಿದ ಪ್ರಸಾದ ಮಾರಾಟಕ್ಕೆ ಚಾಲನೆ ನೀಡಲಾಗಿದೆ.
ವಾರಣಾಸಿ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರಕಾರದ ಉಪಕ್ರಮಗಳ ಭಾಗವಾಗಿ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಸಿರಿಧಾನ್ಯಗಳಿಂದ ಸಿದ್ದಪಡಿಸಿದ ಲಡ್ಡುಗಳನ್ನು ಪ್ರಸಾದವಾಗಿ ಮಾರಾಟ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯು 2023 ವರ್ಷವನ್ನು ಸಿರಿಧಾನ್ಯಗಳ ದಿನವಾಗಿ ಘೋಷಿಸಿದ್ದು, ಈ ಸಮಯದಲ್ಲಿ ಕಾಶಿ ವಿಶ್ವನಾಥ ಧಾಮದಲ್ಲಿ ರಾಗಿ ಸೇರಿದಂತೆ ಸಿರಿಧಾನ್ಯಗಳ ಲಡ್ಡು ಭಕ್ತರನ್ನು ಸೆಳೆಯುತ್ತಿದೆ.
ಅತ್ಯುತ್ತಮ ಪೌಷ್ಟಿಕಾಂಶಗಳಿರುವ ಕಾರಣಗಳಿಂದ ಸಿರಿಧಾನ್ಯವನ್ನು ತಮ್ಮ ಊಟದ ತಟ್ಟೆಯಲ್ಲಿ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದ್ದಾರೆ. ಅದಕ್ಕೆ ಶ್ರೀ ಅನ್ನ ಎಂದು ಹೆಸರಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯಕ್ಕೆ ತಕ್ಕಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಿರಿಧಾನ್ಯಗಳ ಉತ್ತೇಜನಕ್ಕೆ ಬಜೆಟ್ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಯೋಗಿ ಸರ್ಕಾರದ ಸೂಚನೆ ಮೇರೆಗೆ ಶ್ರೀ ಕಾಶಿ ವಿಶ್ವನಾಥ ಧಾಮದಲ್ಲಿ ಶ್ರೀ ಅನ್ನದಿಂದ ತಯಾರಿಸಿದ ಪ್ರಸಾದ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಸ್ವಯಂ ಸೇವಾ ಬಳಗದ ಮಹಿಳೆಯರು ಶ್ರೀ ಕಾಶಿ ವಿಶ್ವನಾಥ ಧಾಮಕ್ಕೆ ಸಿರಿಧಾನ್ಯಗಳ ಪ್ರಸಾದ ನೀಡಿದ್ದು, ಅದಕ್ಕೆ ಶ್ರೀ ಅನ್ನ ಪ್ರಸಾದ ಎಂದು ಹೆಸರಿಡಲಾಗಿದೆ ಎಂದು ಮುಖ್ಯ ಅಭಿವೃದ್ದಿ ಅಧಿಕಾರಿ ಹಿಮಾಂಶು ನಾಗಪಾಲ್ ಹೇಳಿದ್ದಾರೆ.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ಗೆ ಸಂಬಂಧಿಸಿದ ಸ್ವಸಹಾಯ ಗುಂಪುಗಳ ಮಹಿಳೆಯರು ಈಗಾಗಲೇ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಪ್ರಸಾದವನ್ನು ಸಿದ್ಧಪಡಿಸುತ್ತಿದ್ದಾರೆ. ಸ್ವಸಹಾಯ ಸಂಘದ ಮಹಿಳೆಯರೇ ಇದೀಗ ಶ್ರೀ ಅನ್ನ ಪ್ರಸಾದವನ್ನೂ ತಯಾರಿಸುತ್ತಿದ್ದಾರೆ. ಇದರ ಬೆಲೆ ಈಗಾಗಲೇ ಮಾರಾಟವಾಗುತ್ತಿರುವ ಪ್ರಸಾದಕ್ಕೆ ಸಮ. ಶ್ರೀ ಅನ್ನ ಪ್ರಸಾದದ ಪರಿಶುದ್ಧತೆಗೆ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಸ್ವಯಂ ಉದ್ಯೋಗ ಇಲಾಖೆಯ ಉಪ ಆಯುಕ್ತರಾದ ದಿಲೀಪ್ ಸೋಂಕರ್ ಹೇಳಿದ್ದಾರೆ.
ಶ್ರೀ ಅನ್ನ ಪ್ರಸಾದವನ್ನು ರಾಗಿ, ಬೆಲ್ಲ, ಎಳ್ಳು, ಗೋಡಂಬಿ, ಬಾದಾಮಿ, ಶುದ್ಧ ತುಪ್ಪ ಮತ್ತು ಖೋವಾದಿಂದ ತಯಾರಿಸಲಾಗುತ್ತದೆ. ಇದೀಗ 100 ಮತ್ತು 200 ಗ್ರಾಂ ಲಡ್ಡುಗಳ ಪ್ಯಾಕೆಟ್ಗಳನ್ನು ಪ್ರಸಾದ ರೂಪದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಸ್ವಸಹಾಯ ಸಂಘದ ಅಧ್ಯಕ್ಷೆ ಸುನೀತಾ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಜನವರಿ ಅಂತ್ಯದಲ್ಲಿ ನಡೆಸಿದ ಮನ್ ಕೀ ಬಾತ್ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿಯವರು ಮಿಲ್ಲೆಟ್ಸ್ ಗುಣಗಾನ ಮಾಡಿದ್ದರು. ಧಾನಿ ನರೇಂದ್ರ ಮೋದಿಯವರು ಮಾಸಿಕ ಬಾನುಲಿ ಕಾರ್ಯಕ್ರಮ "ಮನ್ ಕೀ ಬಾತ್"ನಲ್ಲಿ ಸಿರಿಧಾನ್ಯದ ಕುರಿತು ಪ್ರಮುಖವಾಗಿ ಮಾತನಾಡಿದ್ದು, ಕರ್ನಾಟಕದ ರೈತರ ಆಳಂದ ಭೂತಾಯಿ ಕಂಪನಿಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಭಾರತದಲ್ಲಿ ನಡೆಯುವ ಜಿ20 ಸಭೆಗಳಲ್ಲಿ, ಶೃಂಗದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರಗಳು ಇರುವುದಾಗಿಯೂ ಈ ಸಂದರ್ಭದಲ್ಲಿ ಹೇಳಿದ್ದರು.
ಇದೇ ವರ್ಷ ಜನವರಿ 20ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ ಮೇಳ- 2023 ನಡೆದಿತ್ತು. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದರು. ಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕಗಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಘೋಷಣೆ ಮಾಡಿದ್ದರು.
ಕಾಲ ಬದಲಾಗಿದೆ. ಅಕ್ಕಿ ಬೆಳೆಯುತ್ತಿದ್ದೇವೆ. ಅದೇ ನಮಗೆ ಆಹಾರವಾಗಿದೆ. ಆದರೆ ಆರೋಗ್ಯ ಗಮನಿಸಿದಾಗ ಕನಿಷ್ಠವಾಗಿಯಾದರೂ ಸಿರಿಧಾನ್ಯಗಳನ್ನು ಆಹಾರವಾಗಿ ಸೇವಿಸಬೇಕು. ರೈತರು ಸಿರಿಧಾನ್ಯಗಳನ್ನು ಮುಖ್ಯ ಆಹಾರವಾಗಿ ಬಳಸುತ್ತಿದ್ದರು.ಈಗ ಸರ್ಕಾರ ಕಾರ್ಯಕ್ರಮವನ್ನು ಮಾಡಿ ಬೆಳೆಸಲು ಉತ್ತೇಜನ ನೀಡುವ ಸ್ಥಿತಿಗೆ ನಾವು ಬಂದಿದ್ದೇವೆ. ಮಿಲೆಟ್ ಗಳ ಬಗ್ಗೆ ಅತಿ ದೊಡ್ಡ ರಾಯಭಾರಿಗಳು ನಾವು. ಕಳೆದ 30 ವರ್ಷಗಳಿಂದ ಸಿರಿಧಾನ್ಯಗಳನ್ನು ಬಳಕೆ ಮಾಡುತ್ತಿದ್ದೇನೆ.ಅನ್ನವನ್ನು ಊಟ ಮಾಡುವುದಿಲ್ಲ. ಹೀಗಾಗಿ ಸಿರಿಧಾನ್ಯಗಳನ್ನು ಅತ್ಯಂತ ಯಶಸ್ವಿ ಮಾಡಲು ನಾನು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತೇನೆ ಎಂದು ಆ ಸಂದರ್ಭದಲ್ಲಿ ಸಿಎಂ ಹೇಳಿದ್ದರು.