Viral Video: PFI ತರಬೇತಿಯನ್ನು RSS ಶಾಖೆಗೆ ಹೋಲಿಸಿದ ಪಟನಾ ಎಸ್ಎಸ್ಪಿ!
Jul 15, 2022 07:25 AM IST
ಪಟನಾದ ಎಸ್ಎಸ್ಪಿ ಮಾನವಜಿತ್ ಸಿಂಗ್ ಧಿಲ್ಲೋನ್
- ದೇಶ ವಿರೋಧಿ ಕೃತ್ಯವೆಸಗುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿಗೆ ದಾಳಿ ನಡೆಸಿ ವಶಪಡಿಸಿದ ದಾಖಲೆಗಳ ಕುರಿತು ಸುದ್ದಿಗೋಷ್ಠಿ ನಡೆಸಿದ ಪಟನಾದ ಎಸ್ಎಸ್ಪಿ ಮಾನವಜಿತ್ ಸಿಂಗ್ ಧಿಲ್ಲೋನ್ PFI ತರಬೇತಿಯನ್ನು RSS ಶಾಖೆಗೆ ಹೋಲಿಸಿದ ವಿಡಿಯೋ ವೈರಲ್ ಆಗಿದೆ.
ಪಟನಾ: ಬಿಹಾರದ ರಾಜಧಾನಿ ಪಟನಾದ ಫುಲ್ವಾರಿಶರೀಫ್ನಲ್ಲಿರುವ ಪಿಎಫ್ಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ ಅಲ್ಲಿಂದ ದೇಶವಿರೋಧಿ ಕೃತ್ಯಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದರು. ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ನಡುವೆ, ಈ ಘಟನೆ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಪಟನಾದ ಎಸ್ಎಸ್ಪಿ ಮಾನವಜಿತ್ ಸಿಂಗ್ ಧಿಲ್ಲೋನ್ PFI ತರಬೇತಿಯನ್ನು RSS ಶಾಖೆಗೆ ಹೋಲಿಸಿ ಮಾತನಾಡಿದರು. ಈ ವಿಡಿಯೋ ವೈರಲ್ ಆಗಿದೆ
ಪಿಎಫ್ಐ ತರಬೇತಿಯನ್ನು ಆರ್ಎಸ್ಎಸ್ ಶಾಖೆಯೊಂದಿಗೆ ಹೋಲಿಸಿದ ಎಸ್ಎಸ್ಪಿ ಮಾನವಜಿತ್ ಸಿಂಗ್ ಧಿಲ್ಲೋನ್ಗೆ ಪೊಲೀಸ್ ಪ್ರಧಾನ ಕಚೇರಿಯಿಂದ ಶೋಕಾಸ್ ನೋಟಿಸ್ ಜಾರಿಯಾಗಿದೆ. ಹೇಳಿಕೆ ಬಗ್ಗೆ 48 ಗಂಟೆ ಒಳಗೆ ವಿವರಣೆ ನೀಡುವಂತೆ ನೋಟಿಸ್ ಹೇಳಿದೆ.
ಪಟನಾ ಎಸ್ಎಸ್ಪಿ ಮಾನವಜಿತ್ ಸಿಂಗ್ ಧಿಲ್ಲೋನ್ ಅವರು ಪಟನಾ ಪೊಲೀಸರ ದಾಳಿ ಮತ್ತು ಈ ಸಂದರ್ಭದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದ್ದು ಹೀಗೆ - “ಇದರ ವಿಧಾನವೆಂದರೆ ಈ ಜನರು, ಒಂದು ಶಾಖೆಯಂತೆ ಕೆಲಸ ಮಾಡುತ್ತಾರೆ. ಹೇಗೆ ಆರ್ಎಸ್ಎಸ್ ತನ್ನ ಶಾಖೆಯನ್ನು ನಿರ್ವಹಿಸುತ್ತದೆಯೋ ಅದೇ ರೀತಿ. ಅದಕ್ಕೆ ಅವರು ಆಕರ್ಷಿತರಾಗುತ್ತಾರೆ. ತರಬೇತಿ ಕೊಡುತ್ತಾರೆ. ಅದೇ ರೀತಿ ಈ ಜನ ಯುವಕರಿಗೆ ದೈಹಿಕ ಶಿಕ್ಷಣದ ಹೆಸರಲ್ಲಿ ತರಬೇತಿ ನೀಡುತ್ತಿದ್ದರು. ಅದೇ ಸಮಯದಲ್ಲಿ ತಮ್ಮ ಅಜೆಂಡಾ ಮತ್ತು ಪ್ರಚಾರದ ಮೂಲಕ ಯುವಕರನ್ನು ಬ್ರೈನ್ ವಾಶ್ ಮಾಡುತ್ತಿದ್ದರು”
ಎಸ್ಎಸ್ಪಿ ವಿರುದ್ಧ ತೀವ್ರ ಆಕ್ರೋಶ
ಎಸ್ಎಸ್ಪಿ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್, ಎಸ್ಎಸ್ಪಿ ಮಾನಸಿಕವಾಗಿ ದಿವಾಳಿಯಾಗಿದ್ದಾರೆ ಎಂದು ಟೀಕಿಸಿದರು.
ಆರ್ಎಸ್ಎಸ್ ಅನ್ನು ಭಯೋತ್ಪಾದಕ ಸಂಘಟನೆಯಾದ ಪಿಎಫ್ಐಗೆ ಹೋಲಿಸಿದ್ದಕ್ಕಾಗಿ ಬಿಜೆಪಿ ಪಟನಾದ ಎಸ್ಎಸ್ಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದೆ. ಎಸ್ಎಸ್ಪಿ ಮಾನಸಿಕವಾಗಿ ದಿವಾಳಿಯಾಗಿದ್ದಾರೆ. ಸರಕಾರ ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಹೇಳಿದ್ದಾರೆ.
ಪಿಎಫ್ಐ ಒಂದು ಭಯೋತ್ಪಾದಕ ಸಂಘಟನೆ, ಆದರೆ ಆರ್ಎಸ್ಎಸ್ ಸಾಂಸ್ಕೃತಿಕ ಮತ್ತು ರಾಷ್ಟ್ರ ನಿರ್ಮಾಣ ಸಂಸ್ಥೆಯಾಗಿದೆ ಎಂದು ಹೇಳಿದರು. ಸರಕಾರ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು, ಇದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಮತ್ತೊಂದೆಡೆ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ರಾಜಕೀಯ ಮತ್ತು ಸೈದ್ಧಾಂತಿಕ ಪ್ರಭಾವ ಮೀರಿದವರು ಎಂದು ಪರಿಗಣಿಸಲಾಗಿದೆ. ಆದರೆ, ಈ ಎಸ್ಎಸ್ಪಿ ಅದಕ್ಕೆ ಅಪವಾದವಾಗಿದ್ದಾರೆ. ಪಿಎಫ್ಐ ಅನ್ನು ಆರ್ಎಸ್ಎಸ್ನೊಂದಿಗೆ ಹೋಲಿಸಿದ ಪಟನಾ ಎಸ್ಎಸ್ಪಿ ಹೇಳಿಕೆ ನಾಚಿಕೆಗೇಡಿನ ಮತ್ತು ಅತ್ಯಂತ ಖಂಡನೀಯ. ಈ ಅಧಿಕಾರಿಗಳು ಯಾವುದೇ ಪೂರ್ವಾಗ್ರಹ ಮತ್ತು ಪೂರ್ವಾಗ್ರಹವನ್ನು ಹೊಂದಿರಬಾರದು. ಅವರು ಕ್ಷಮೆಯಾಚಿಸಬೇಕು ಮತ್ತು ರಾಜಕೀಯ ಮಾಡಲು ಬಯಸಿದರೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಡಾ.ನಿಖಿಲ್ ಆನಂದ್ ಹೇಳಿದ್ದಾರೆ.
ರಾಜ್ಯ ವಕ್ತಾರ ಅರವಿಂದ್ ಕುಮಾರ್ ಸಿಂಗ್ ಹೇಳಿಕೆಯನ್ನು ಖಂಡಿಸಿದ್ದು, ಪಾಟ್ನಾ ಎಸ್ಎಸ್ಪಿ ಪಿಎಫ್ಐ ವಕ್ತಾರರಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಿಎಫ್ಐ ಕಚೇರಿಗೆ ಪೊಲೀಸರು ದಾಳಿ ನಡೆಸಿದ್ದೇಕೆ?
ಬಿಹಾರದ ಪಟನಾದ ಪಿಎಫ್ಐ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದಾಗ ಹಲವು ಅನುಮಾನಾಸ್ಪದ ದಾಖಲೆಗಳು ಪತ್ತೆಯಾಗಿವೆ. ಇದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ʻಮಿಷನ್ 2047ʼ ಕೂಡ ಬಹಿರಂಗವಾಗಿದೆ. ಇದರ ಪ್ರಕಾರ, ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಷಡ್ಯಂತ್ರ ನಡೆಯುತ್ತಿದೆ.
ಬಿಹಾರದ ರಾಜಧಾನಿ ಪಟನಾದಲ್ಲಿ ಪಿಎಫ್ಐ ಹೆಸರಿನಲ್ಲಿ ದೊಡ್ಡ ಭಯೋತ್ಪಾದಕ ತರಬೇತಿ ಕೇಂದ್ರ ಒಂದು ಕಾರ್ಯಾಚರಿಸುತ್ತಿರುವುದು ಬಯಲಾಗಿದೆ. ದಾಳಿಯಲ್ಲಿ ಇಬ್ಬರು ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಶದಿಂದ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.