Shahid Afridi: ಇದು ಸ್ವಲ್ಪ ಅತಿಯಾಯ್ತು, ನಿಷೇಧ ವಿಧಿಸಿ ಎಚ್ಚರಿಕೆ ನೀಡಿದಂತಾಗಿದೆ; ಕೌರ್ ನಡೆ ಕುರಿತು ಅಫ್ರಿದಿ ಹೀಗಂದ್ರು
Jul 26, 2023 02:26 PM IST
ಹರ್ಮನ್ಪ್ರೀತ್ ಕೌರ್, ಶಾಹಿದ್ ಅಫ್ರಿದಿ
- Harmanpreet kaur: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ, ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಅವರ ವರ್ತನೆ ಕುರಿತು ಪ್ರತಿಕ್ರಿಯಿಸಿದ್ದಾರೆ.
ಬಾಂಗ್ಲಾದೇಶ ವನಿತೆಯರ ತಂಡದ ವಿರುದ್ಧ ಕಳೆದ ವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಅವರ ನಡೆ ವ್ಯಾಪಕ ಖಂಡನೆಗೆ ಕಾರಣವಾಯ್ತು. ಔಟಾದ ಹಿನ್ನೆಲೆಯಲ್ಲಿ ಆಕ್ರೋಶದಿಂದ ವಿಕೆಟ್ಗೆ ಹೊಡೆದು, ಅಂಪೈರ್ ವಿರುದ್ಧ ತಾಳ್ಮೆ ಕಳೆದುಕೊಂಡು ಆಕ್ರೋಶ ಹೊರಹಾಕಿದ್ದು ಭಾರಿ ವಿವಾದಕ್ಕೆ ಕಾರಣವಾಯ್ತು. ಅವರ ಅನುಚಿತ ವರ್ತನೆಯನ್ನು ಭಾರತದ ಹಿರಿಯ ಕ್ರಿಕೆಟಿಗರು ಸೇರಿದಂತೆ ಹಲವರು ವ್ಯಾಪಕವಾಗಿ ಖಂಡಿಸಿದ್ದಾರೆ. ಅದರ ಬೆನ್ನಲ್ಲೇ ಐಸಿಸಿಯು ಹರ್ಮನ್ ವಿರುದ್ಧ ಕಠಿಣ ಕ್ರಮವನ್ನೂ ಕೈಗೊಂಡಿದೆ.
ಅಂಪೈರ್ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿ ಸಭ್ಯತೆ ಮರೆತು ತೀವ್ರ ಟೀಕೆಗೆ ಗುರಿಯಾಗಿದ್ದ ಕೌರ್ಗೆ, ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಂಡ ವಿಧಿಸಿದೆ. ಭಾರತ ತಂಡದ ನಾಯಕಿಯನ್ನು ಮುಂದಿನ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಳಿಸಲಾಗಿದೆ. ಕೌರ್ ಪಡೆಯು ಮುಂದಿನ ಎರಡು ಪಂದ್ಯಗಳನ್ನು ಏಷ್ಯನ್ ಗೇಮ್ಸ್ನಲ್ಲಿ ಆಡಲಿದೆ. ಹೀಗಾಗಿ ತಂಡವು ಮೊದಲೆರಡು ಪಂದ್ಯಗಳನ್ನು ಕಾಯಂ ನಾಯಕಿಯ ಅನುಪಸ್ಥಿತಿಯಲ್ಲಿ ಆಡಬೇಕಿದೆ.
ಶಾಹಿದ್ ಅಫ್ರಿದಿ ಖಂಡನೆ
ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹರ್ಮನ್ಪ್ರೀತ್ ಅವರ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಟಗಾರರು ಆಟದ ಸಂದರ್ಭದಲ್ಲಿ ಆಕ್ರೋಶಕ್ಕೊಳಗಾಗುವುದು ಸಹಜ. ಆದರೆ, ಮಹಿಳಾ ಕ್ರಿಕೆಟ್ನಲ್ಲಿ ಇಂತಹ ನಡೆ ತೀರಾ ಅಪರೂಪ ಎಂದು ಆಫ್ರಿದಿ ಹೇಳಿದ್ದಾರೆ.
“ಇದು ಭಾರತ ತಂಡದಲ್ಲಿ ಮಾತ್ರವಲ್ಲ. ನಾವು ಈ ಹಿಂದೆಯೂ ಇಂತಹ ನಡೆಯನ್ನು ನೋಡಿದ್ದೇವೆ. ಆದರೆ, ವನಿತೆಯರ ಕ್ರಿಕೆಟ್ನಲ್ಲಿ ಈ ರೀತಿ ಆಗಿರುವುದು ಭಾರಿ ಕಡಿಮೆ. ಇದು ಐಸಿಸಿ ನಡೆಸುವ ದೊಡ್ಡ ಮಟ್ಟದ ಸರಣಿಯಾಗಿದೆ. ಸದ್ಯ ಈ ಪ್ರಕರಣದಲ್ಲಿ ಶಿಕ್ಷೆ ವಿಧಿಸುವ ಮೂಲಕ ಭವಿಷ್ಯದಲ್ಲಿ ಕ್ರಿಕೆಟಿಗರು ತಮ್ಮನ್ನು ತಾವು ಹತೋಟಿಯಲ್ಲಿಡುವಂತೆ ಎಚ್ಚರಿಕೆ ನೀಡಲಾಗಿದೆ. ಕ್ರಿಕೆಟ್ನಲ್ಲಿ ಆಕ್ರಮಣಕಾರಿಯಾಗಬಹುದು; ಆದರೆ ಅದರಲ್ಲಿ ನಿಯಂತ್ರಣವಿದ್ದರೆ ಒಳ್ಳೆಯದು. ಆದರೆ ಇದು ಸ್ವಲ್ಪ ಅತಿಯಾಯಿತು” ಎಂದು ಅಫ್ರಿದಿ ಸಾಮಾ ಟಿವಿ ಜೊತೆಗೆ ಮಾತನಾಡಿದ್ದಾರೆ.
ಟೀಮ್ ಇಂಡಿಯಾ ನಾಯಕಿಯು ನಾಲ್ಕು ಡಿಮೆರಿಟ್ ಪಾಯಿಂಟ್ಗಳೊಂದಿಗೆ ಮುಂದಿನ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತುಗೊಂಡಿದ್ದಾರೆ. ಪ್ರಸ್ತುತ, ಸೆಪ್ಟೆಂಬರ್ನಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದ್ದು ಅದಕ್ಕೂ ಮುನ್ನ ಭಾರತ ವನಿತೆಯರಿಗೆ ಯಾವುದೇ ಸರಣಿಯನ್ನು ನಿಗದಿಪಡಿಸಲಾಗಿಲ್ಲ. ಹೀಗಾಗಿ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ ಏಷ್ಯಾನ್ ಗೇಮ್ಸ್ನ ಮೊದಲ ಎರಡು ಪಂದ್ಯಗಳಿಂದ ಹರ್ಮನ್ಪ್ರೀತ್ ಹೊರಬೀಳಲಿದ್ದಾರೆ.
ಹರ್ಮನ್ ಮಾಡಿದ್ದೇನು?
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಚೇಸಿಂಗ್ ವೇಳೆ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹರ್ಮನ್, 21 ಎಸೆತಗಳಲ್ಲಿ 14 ರನ್ ಗಳಿಸಿ ಆಡುತ್ತಿದ್ದರು. 34ನೇ ಓವರ್ನಲ್ಲಿ ಸ್ಪಿನ್ನರ್ ನಹೀದಾ ಅಖ್ತರ್ ಎಸೆತಕ್ಕೆ ಸ್ವೀಪ್ ಶಾಟ್ ಹೊಡೆಯಲು ಪ್ರಯತ್ನಿಸಿದಾಗ ಚೆಂಡು ಪ್ಯಾಡ್ಗೆ ಬಡಿದು ಸ್ಲಿಪ್ನಲ್ಲಿದ್ದ ಕೀಪರ್ ಕೈಸೇರಿತು. ಆನ್ಫೀಲ್ಡ್ ಅಂಪೈರ್ ಔಟೆಂದು ತೀರ್ಪು ನೀಡಿದರು. ಈ ವೇಳೆ ಅಂಪೈರ್ ತೀರ್ಪಿಗೆ ಅಸಮಾಧಾನ ಹೊರಹಾಕಿದ ಹರ್ಮನ್ ಆಕ್ರೋಶ ಹೊರಹಾಕಿದರು. ನಿರ್ಧಾರ ಸರಿ ಇಲ್ಲ ಎಂದು ಕೋಪದಲ್ಲಿ ಸ್ಟಂಪ್ಸ್ಗೆ ಬ್ಯಾಟ್ನಿಂದ ಹೊಡೆದರು. ಅಲ್ಲದೆ ಪೆವಿಲಿಯನ್ಗೆ ಮರಳುವಾಗ ಆವೇಶದಿಂದ ಅಂಪೈರ್ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದರು.
ಪಂದ್ಯದ ಬಳಿಕ ಮಾತನಾಡಿದ ಕೌರ್, ಈ ಪಂದ್ಯದಿಂದ ಸಾಕಷ್ಟು ಪಾಠ ಕಲಿತಿದ್ದೇವೆ. ಅಂಪೈರಿಂಗ್ ನಮಗೆ ಅಚ್ಚರಿ ಮೂಡಿಸಿದೆ. ನಾವು ಮುಂದಿನ ಬಾರಿ ಬಾಂಗ್ಲಾ ಪ್ರವಾಸ ಕೈಗೊಳ್ಳುವುದಕ್ಕೂ ಮುನ್ನ, ಇಂತಹ ಕಳಪೆ ಅಂಪೈರಿಂಗ್ ಎದುರು ಆಡಬೇಕು. ಅದಕ್ಕಾಗಿ ಉತ್ತಮ ತಯಾರಿ ನಡೆಸುತ್ತೇವೆ. ಕಳಪೆ ಅಂಪೈರಿಂಗ್ನಿಂದಾಗಿ ನಮಗೆ ದಕ್ಕಬೇಕಿದ್ದ ಗೆಲುವು ಸಿಗಲಿಲ್ಲ. ಈ ನಿರ್ಧಾರಗಳಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದ್ದರು.