IPL 2023: ಸಿಎಸ್ಕೆ ಕಪ್ ಗೆಲ್ಲಲ್ಲ, RCBನೇ ಟ್ರೋಫಿ ಗೆಲ್ಲಬೇಕು; ಹೊಸ ತಂಡ ಗೆದ್ದರೆ ಮಜಾನೆ ಬೇರೆ ಅಂದ ಶ್ರೀಶಾಂತ್
Mar 18, 2023 09:45 PM IST
ಎಸ್ ಶ್ರೀಶಾಂತ್
- IPL 2023: ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಎಸ್ ಶ್ರೀಶಾಂತ್, ಟ್ರೋಫಿ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದಾರೆ. ಖಾಸಗಿ ಚಾನೆಲ್ನಲ್ಲಿ ಮಾತನಾಡಿದ ಶ್ರೀಶಾಂತ್, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಕಾರಣಕ್ಕೂ ಟ್ರೋಫಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಟ್ರೋಫಿ ಗೆಲ್ಲದಿದ್ದರೂ ಅತ್ಯಂತ ಜನಪ್ರಿಯ ಟಿ20 ಲೀಗ್ಗಳ ತಂಡಗಳಲ್ಲಿ ಒಂದಾಗಿದೆ. 2008 ರಿಂದ ಈವರೆಗೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದ್ದು, ಭರ್ಜರಿ ಸಿದ್ಧತೆ ಆರಂಭಿಸಿದೆ.
ಟೂರ್ನಿ ಆರಂಭಕ್ಕೆ ಎರಡು ವಾರಗಳಿಗಿಂತ ಕಡಿಮೆ ಸಮಯವಿದ್ದು, ಎಲ್ಲಾ ತಂಡಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿವೆ. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings), ಎಲ್ಲಾ ತಂಡಗಳಿಗಿಂತ ಮೊದಲೇ ಪ್ರಾಕ್ಟೀಸ್ ಆರಂಭಿಸಿ 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಅತ್ತ ಆರ್ಸಿಬಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, ಟ್ರೋಫಿ ಬರ ನೀಗಿಸಲು ಮುಂದಾಗಿದೆ.
ಇದರ ಬೆನ್ನಲ್ಲೇ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಎಸ್ ಶ್ರೀಶಾಂತ್ (S Sreesanth), ಟ್ರೋಫಿ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ್ದಾರೆ. ಖಾಸಗಿ ಚಾನೆಲ್ನಲ್ಲಿ ಮಾತನಾಡಿದ ಶ್ರೀಶಾಂತ್, ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಯಾವುದೇ ಕಾರಣಕ್ಕೂ ಟ್ರೋಫಿ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಚೆನ್ನೈ ಬದಲಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಆಗಿ ಟ್ರೋಫಿ ಗೆಲ್ಲಲಿದೆ. ಸಿಎಸ್ಕೆ ಚಾಂಪಿಯನ್ ಆಗುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇರಳದ ಹುಡುಗ ಐಪಿಎಲ್ನಲ್ಲಿ ಒಬ್ಬನೇ ಇದ್ದು, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ಗೆ (Sanju Samson) ಬೆಂಬಲ ನೀಡುತ್ತೇನೆ ಎಂದಿದ್ದಾರೆ.
ಹೊಸ ತಂಡ ಗೆದ್ದರೆ ಮಜಾನೇ ಬೇರೆ.!
ಈ ಬಾರಿಯ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಈವರೆಗೂ ಟ್ರೋಫಿ ಗೆಲ್ಲದ ತಂಡವೊಂದು ಚಾಂಪಿಯನ್ ಆದರೆ ಉತ್ತಮ. ಗೆದ್ದ ತಂಡಗಳೇ ಮತ್ತೆ ಮತ್ತೆ ಟ್ರೋಫಿ ಗೆದ್ದರೆ ಅದರ ಮಜಾ ಇರುವುದಿಲ್ಲ. ಹೊಸ ತಂಡಗಳು ಗೆದ್ದರೆ ಖುಷಿಯಾಗುತ್ತದೆ. ಅದರಲ್ಲೂ RCB ಪ್ರಶಸ್ತಿ ಗೆದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಕೊಹ್ಲಿಗಾಗಿ ಗೆಲ್ಲಬೇಕು!
ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿರಾಟ್ ಕೊಹ್ಲಿಗಾಗಿ ಕಪ್ ಗೆಲ್ಲಬೇಕು. ವಿರಾಟ್ ಭಾರತೀಯ ಕ್ರಿಕೆಟ್ಗಾಗಿ ತುಂಬಾ ಕೊಡುಗೆ ನೀಡಿದ್ದಾರೆ. ಅವರಿಗಾಗಿ RCB ಪ್ರಶಸ್ತಿ ಗೆದ್ದರೆ ಉತ್ತಮವಾಗಿರುತ್ತದೆ ಎಂದು ಹೇಳಿದ್ದಾರೆ. ಶ್ರೀಶಾಂತ್ ಈ ಹೇಳಿಕೆ ನೀಡುತ್ತಿದ್ದಂತೆ ಅಭಿಮಾನಿಗಳು ನೀವು ಹೇಳಿದಂತೆ, ಆರ್ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
CSK ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ತಂಡ. ಒಟ್ಟು 11 ಬಾರಿಗೆ ಪ್ಲೇ ಆಫ್ ಗೇರಿದ ದಾಖಲೆ ಬರೆದಿದೆ. ಕೊನೆ ಬಾರಿಗೆ 2021ರಲ್ಲಿ ಚಾಂಪಿಯನ್ ಆಗಿದ್ದ ಯಲ್ಲೋ ಆರ್ಮಿ, 2022ರಲ್ಲಿ ಲೀಗ್ ಹಂತದಲ್ಲೇ ಹೊರ ಬಿದ್ದಿತ್ತು. ಇನ್ನು ಆರ್ಸಿಬಿ, ಒಂದು ಬಾರಿಯೂ ಪ್ರಶಸ್ತಿ ಗೆದ್ದಿಲ್ಲ. ಮೂರು ಬಾರಿ ಫೈನಲ್ಗೇರಿದ ಸಾಧನೆ ಮಾಡಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದಲ್ಲಿ RCB 2022ರಲ್ಲಿ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋತು ಹೊರ ಬಿದ್ದಿತ್ತು.
ನ್ಯೂಜಿಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಮೈಕೆಲ್ ಬ್ರೇಸ್ವೆಲ್ ಅವರನ್ನು ನಿರೀಕ್ಷೆಯಂತೆಯೇ ಆರ್ಸಿಬಿ ತಂಡವು ತನ್ನ ಬಳಗ ಸೇರಿಸಿಕೊಂಡಿದೆ. ಆರ್ಸಿಬಿಯು ಹರಾಜಿನಲ್ಲಿ ಖರೀದಿಸಿದ್ದ ವಿಲ್ ಜಾಕ್ಸ್ ಗಾಯಾಳುವಾಗಿ ತಂಡದಿಂದ ಹೊರಬಿದ್ದಿದ್ದರು. ಹೀಗಾಗಿ ಐಪಿಎಲ್ನ 2023ರ ಆವೃತ್ತಿಗೆ ಬ್ರೇಸ್ವೆಲ್ ಅವರನ್ನು ಬದಲಿ ಆಟಗಾರನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಆ ಮೂಲಕ ಬೆಂಗಳೂರು ತಂಡವು ಮತ್ತಷ್ಟು ಬಲಿಷ್ಠವಾಗಿದೆ.